ರಜಿನಿಕಾಂತ್ ಗೆ ಸೆಡ್ಡು ಹೊಡೆದ ರವಿತೇಜಾ ; ಗಲ್ಲಾ ಪೆಟ್ಟಿಗೆಯಲ್ಲಿ ಹದ್ದಿನ ಬೇಟೆ
ಮಾಸ್ ಮಹಾರಾಜ ರವಿತೇಜಾಗೆ ಅದೃಷ್ಟ ಕೈ ಕೊಟ್ಟಿತ್ತು. ಎದುರಾದ ಸಾಲು ಸಾಲು ಸೋಲು ಕಂಗೆಡಿಸಿತ್ತು. ಆದರೆ ಈಗ ರವಿತೇಜಾ ಗೆ ಶುಕ್ರದಸೆ ಆರಂಭವಾದಂತೆ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ಬಿಡುಗಡೆಯಾದ ಈಗಲ್ ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿ ಸಿಕ್ಕಿದೆ. ಒಂದು ಮಟ್ಟಿಗೆ ರವಿತೇಜಾಗೆ ಸಮಾಧಾನವನ್ನೂ ತಂದು ಕೊಟ್ಟಿದೆ.
ನಿಜಾ. ಮಾಸ್ ಮಹಾರಾಜ ಬಿರುದಿಗೆ ತಕ್ಕಂತೆ ಈಗಲ್, ಮೊದಲ ದಿನ ಆಹಾ ಓಹೋ ಎಂಬಂತೆ ಗಳಿಕೆಯನ್ನ ಮಾಡಿಲ್ಲ. ಆದರೆ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಎಂಬಂತೆ, ಈಗಲ್ ಸಿನಿಮಾ Decent Opening ಪಡೆದುಕೊಂಡಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ವಿಶೇಷ ಪಾತ್ರದಲ್ಲಿರುವ ಲಾಲ್ ಸಲಾಂ ಸಿನಿಮಾಗೆ ಈಗಲ್ ಸೆಡ್ಡು ಹೊಡೆದಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿರುವ ಲಾಲ್ ಸಲಾಂ, ಮೊದಲ ದಿನ ಕೇವಲ ನಾಲ್ಕೂವರೆ ಕೋಟಿಯನ್ನಷ್ಟೇ ಗಳಿಸಿದೆ. ಆದರೆ ತೆಲುಗಿನಲ್ಲಿ ಮಾತ್ರ ಬಿಡುಗಡೆಯಾದ ಈಗಲ್ ಆರು ಕೋಟಿಯನ್ನ ಗಳಿಸಿದೆ. ಮೊದಲ ದಿನಕ್ಕಿಂತ ಎರಡನೇ ದಿನ ಅಂದರೆ ಇಂದು ಚಿತ್ರದ ಬುಕ್ಕಿಂಗ್ ನಲ್ಲಿ ಪ್ರಗತಿಯೂ ಕಂಡು ಬಂದಿದೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಘಟ್ಟಮನೇನಿ ನಿರ್ದೇಶನದ 'ಈಗಲ್ 'ಚಿತ್ರದಲ್ಲಿ ರವಿತೇಜ ಜೊತೆ ಕಾವ್ಯಾ ಥಾಪರ್, ಅನುಪಮಾ ಪರಮೇಶ್ವರನ್, ವಿನಯ್ ರೈ, ನವದೀಪ್ ಮತ್ತು ಮಧು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಗುಂಟೂರು ಖಾರಂ ಜೊತೆ ಹಾರಬೇಕಿದ್ದ ಈಗಲ್
ಹಾಗೇ ನೋಡಿದರೆ ಈಗಲ್ ಕಳೆದ ತಿಂಗ್ಳಿನಲ್ಲಿಯೇ ತೆರೆಗೆ ಬರಬೇಕಿತ್ತು. ಮಹೇಶ್ ಬಾಬು ಅಭಿನಯದ ಗುಂಟೂರು ಖಾರಂಗೆ ಸ್ಪರ್ಧೆಯನ್ನೊಡ್ಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ರವಿತೇಜಾ ಹೆಜ್ಜೆಯನ್ನ ಮುಂದಡಿ ಇಟ್ಟರು. ಚಿತ್ರದ ಬಿಡುಗಡೆಯನ್ನ ಮುಂದೂಡಿದರು. ಒಂದ್ವೇಳೆ ಗುಂಟೂರು ಖಾರಂ ಮುಂದೆ, ಚಿತ್ರ ಅವತ್ತು ತೆರೆಗೆ ಬಂದಿದ್ದೇ ಆದಲ್ಲಿ ಈಗಲ್ ಗೆ ಹೆಚ್ಚಿನ ಜನ ಬೆಂಬಲ ಸಿಕ್ತಿತ್ತು ಅನ್ನುವ ಮಾತು ಈಗ ಹೈದ್ರಾಬಾದ್ ನಲ್ಲಿ ಕೇಳಿ ಬರುತ್ತಿದೆ.

ಸದ್ಯಕ್ಕೆ ಎಲ್ಲ ಲೆಕ್ಕಾಚಾರ ತಲೆ ಕೆಳಗಾಗಿಸಿ ಈಗಲ್ ಸಿನಿಮಾ, ಲಾಲ್ ಸಲಾಂ ಚಿತ್ರವನ್ನ ಸೆಡ್ಡು ಹೊಡೆದು ಮುನ್ನುಗ್ಗುತ್ತಿದೆ. ಸತತ ಸೋಲಿನಿಂದ ಹೈರಾಣಾಗಿದ್ದ ರವಿತೇಜಾ ಮೊಗದಲ್ಲಿ ಚಿತ್ರ ಮಂದಹಾಸ ಮೂಡಿಸಿದೆ. ಈಗಲ್ ಇನ್ನೂ ಎಷ್ಟು ಎತ್ತರಕ್ಕೆ ಹಾರುತ್ತೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ.


Click it and Unblock the Notifications











