'ಕಾಂತಾರ' ಆರ್ಭಟದ ಎಫೆಕ್ಟ್.. ಬುಡಕ್ಕೆ ಬೆಂಕಿ: ಇನ್ಮುಂದೆ ಸಂಕ್ರಾಂತಿ, ದಸರಾಗೆ ಟಾಲಿವುಡ್ನಲ್ಲಿ ಹೊಸ ನಿಯಮ!
ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಹೆಚ್ಚಾಗುತ್ತಿದೆ. ಆಯಾ ಭಾಷೆಯ ಸಿನಿಮಾಗಳು ಆಯಾ ರಾಜ್ಯಗಳಲ್ಲಿ ಸದ್ದು ಮಾಡುತ್ತದೆ ಎನ್ನುವುದು ಈಗ ಇಲ್ಲ. ಯಾವ ಸಿನಿಮಾ ಎಲ್ಲಿ ಬೇಕಾದರೂ ಥಿಯೇಟರ್ಗಳನ್ನು ಆಕ್ರಮಿಸಿಕೊಳ್ಳಬಹುದು. ಇದಕ್ಕೆ ತಾಜಾ ಉದಾಹರಣೆ 'KGF', 'ಪುಷ್ಪ', 'ಕಾಂತಾರ'. ಸದ್ಯ ತೆಲುಗು ಸಿನಿಮಾಗಳಿಗೆ ತೆಲುಗು ರಾಜ್ಯಗಳಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದಾರೆ.
ಆಂಧ್ರ ಹಾಗೂ ತೆಲಂಗಾಣದಲ್ಲಿ ತೆಲುಗು ಸಿನಿಮಾಗಳಿಗೆ ಮೊದಲ ಆದ್ಯತೆ ಸಿಗಬೇಕು ಎನ್ನುವ ಚರ್ಚೆ ಶುರುವಾಗಿದೆ. ಅದರಲ್ಲೂ ಸಂಕ್ರಾಂತಿ ಹಾಗೂ ದಸರಾ ಸಂಭ್ರಮದಲ್ಲಿ ಪರಭಾಷೆಯ ಸಿನಿಮಾಗಳಿಗೆ ಹೆಚ್ಚು ಸ್ಕ್ರೀನ್ ಕೊಡಬಾರದು ಎಂದು ನಿರ್ಮಾಪಕರ ಸಂಘ ನಿರ್ಧರಿಸಿದೆ. ಈ ಬಗ್ಗೆ ಪ್ರೆಸ್ನೋಟ್ ಕೂಡ ಬಿಡುಗಡೆಯಾಗಿದೆ. ಇತ್ತೀಚೆಗೆ ಬೇರೆ ಭಾಷೆಯ ಸಿನಿಮಾಗಳು ತೆಲುಗಿಗೆ ಡಬ್ ಆಗಿ ದೊಡ್ಟಮಟ್ಟದಲ್ಲಿ ತೆಲುಗು ರಾಜ್ಯಗಳಲ್ಲಿ ಬಿಡುಗಡೆಯಾಗುತ್ತಿವೆ. ಕೋಟಿ ಕೋಟಿ ಕೊಳ್ಳೆ ಹೊಡೀತಿವೆ. ಬೇರೆ ಭಾಷೆಯ ಸಿನಿಮಾಗಳ ಹಾವಳಿಯಿಂದ ತೆಲುಗು ಮೂಲ ಚಿತ್ರಗಳಿಗೆ ಹಿನ್ನಡೆಯಾಗುತ್ತಿದೆ. ಇದನ್ನು ಮನಗಂಡು ಇಂತಾದೊಂದು ನಿಮಯ ಜಾರಿಗೆ ತರಲು ಮನಸ್ಸು ಮಾಡಿದ್ದಾರೆ.
ಆಂಧ್ರ, ತೆಲಂಗಾಣದಲ್ಲಿ ಸಂಕ್ರಾಂತಿ ಹಾಗೂ ದೀಪಾವಳಿ ದೊಡ್ಡ ಹಬ್ಬಗಳು. ಮೂರ್ನಾಲ್ಕು ದಿನ ಸಂಭ್ರಮಾಚರಣೆ ಮನೆ ಮಾಡಿರುತ್ತೆ. ಹೆಚ್ಚು ರಜೆಗಳು ಸಿಗುವುದರಿಂದ ಪ್ರೇಕ್ಷಕರು ಹಬ್ಬ ಮುಗಿಸಿ ಥಿಯೇಟರ್ಗೆ ಬರುತ್ತಾರೆ. ಅದೇ ಕಾರಣಕ್ಕೆ ದೊಡ್ಡ ದೊಡ್ಡ ಸಿನಿಮಾಗಳನ್ನು ಈ ಎರಡು ಹಬ್ಬಗಳ ವೇಳೆ ರಿಲೀಸ್ ಮಾಡಲಾಗುತ್ತದೆ. ಆದರೆ ಇತ್ತೀಚೆಗೆ ಒರಿಜಿನಲ್ ಸಿನಿಮಾಗಳ ಜೊತೆಗೆ ಡಬ್ ಸಿನಿಮಾಗಳು ಪೈಪೋಟಿಗೆ ಇಳಿತಿವೆ.

ಪ್ರೆಸ್ನೋಟ್ನಲ್ಲಿ ಏನಿದೆ?
5 ವರ್ಷಗಳ ಹಿಂದೆಯೇ ಸಂಕ್ರಾಂತಿ, ದಸರಾ ಸಂಭ್ರಮದಲ್ಲಿ ಆಂಧ್ರ, ತೆಲಂಗಾಣದಲ್ಲಿ ತೆಲುಗು ಚಿತ್ರಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ತೆಲುಗು ನಿರ್ಮಾಪಕರ ಮಂಡಳಿ ತೀರ್ಮಾನ ಕೈಗೊಂಡಿತ್ತು. ಖ್ಯಾತ ನಿರ್ಮಾಪಕ ದಿಲ್ ರಾಜು ಈ ನಿರ್ಧಾರದ ಬಗ್ಗೆ ಪದೇ ಪದೇ ಹೇಳುತ್ತಾ ಬರುತ್ತಿದ್ದರು. ಇದೀಗ ದಿಲ್ ರಾಜು ಹೇಳಿಕೆಯನ್ನೇ ಮುಂದಿಟ್ಟುಕೊಂಡು ಈ ಬಾರಿ 'ಸಂಕ್ರಾಂತಿ' ಈ ನಿಮಯ ಜಾರಿಗೆ ಬರಲೇಬೇಕು ಎಂದು ನಿರ್ಮಾಪಕರ ಮಂಡಳಿ ಪ್ರೆಸ್ನೋಟ್ ಬಿಡುಗಡೆ ಮಾಡಿದೆ. ಸ್ಟ್ರೈಟ್ ತೆಲುಗು ಸಿನಿಮಾಗಳಿಗೆ ಹೆಚ್ಚು ಸ್ಕ್ರೀನ್ ಕೊಡಬೇಕು ಆ ನಂತರವೇ ಡಬ್ ಸಿನಿಮಾಗಳಿಗೆ ಅವಕಾಶ ಎನ್ನುತ್ತಿದ್ದಾರೆ.

2 ಚಿತ್ರಗಳು ಡಬ್ ಆಗಿ ರಿಲೀಸ್
ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ ಒಂದಲ್ಲ ಎರಡಲ್ಲ ದಕ್ಷಿಣ ಭಾರತದ 4 ದೊಡ್ಡ ಸಿನಿಮಾಗಳು ತೆರೆಗೆ ಬರುತ್ತಿದೆ. ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ', ಬಾಲಕೃಷ್ಣ ನಟನೆಯ 'ವೀರಸಿಂಹ ರೆಡ್ಡಿ' ಸಿನಿಮಾಗಳು ಬಾಕ್ಸಾಫೀಸ್ ಕದನಕ್ಕೆ ಸಿದ್ಧತೆ ನಡೆಸಿವೆ. 'ಆದಿಪುರುಷ್' ಸಿನಿಮಾ ಕೂಡ ಸುಗ್ಗಿ ಹಬ್ಬದ ರೇಸ್ನಲ್ಲಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಡೇಟ್ ಪೋಸ್ಟ್ಪೋನ್ ಆಗಿದೆ. ಇನ್ನು ಅಖಿಲ್ ಅಕ್ಕಿನೇನಿ 'ಏಜೆಂಟ್' ಆಗಿ ಬರುತ್ತಿದ್ದಾರೆ. ಈ 3 ತೆಲುಗು ಸಿನಿಮಾಗಳ ಜೊತೆಗೆ ತಮಿಳಿನ 'ವಾರಿಸು' ಹಾಗೂ 'ತುನಿವು' ಸಿನಿಮಾಗಳನ್ನು ಹಬ್ಬಕ್ಕೆ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ವಿಜಯ್ ಮತ್ತು ಅಜಿತ್ಗೆ ತೆಲುಗು ರಾಜ್ಯಗಳಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಾಗಿ ತೆಲುಗಿಗೂ ಡಬ್ ಮಾಡಿ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ.

ದಿಲ್ ರಾಜುಗೆ ಮುಳುವಾಗುತ್ತಾ ಹೇಳಿಕೆ?
'ವಾರಿಸು' ಚಿತ್ರವನ್ನು ಸ್ವತಃ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದು ಇದೀಗ ಅವರ ಹೇಳಿಕೆ ಅವರ ಚಿತ್ರಕ್ಕೆ ಮುಳುವಾಗುವ ಸುಳಿವು ಸಿಗುತ್ತಿದೆ. ದಿಲ್ ರಾಜುಗೆ ಟಕ್ಕರ್ ಕೊಡಬೇಕು ಎನ್ನುವ ಕಾರಣಕ್ಕೆ ನಿರ್ಮಾಪಕರ ಸಂಘ ಇಂತಾದೊಂದು ನಿಮಯ ಕೈಗೊಂಡಿದೆ ಎನ್ನಲಾಗುತ್ತಿದೆ. 'ವಾರಿಸು' ಚಿತ್ರವನ್ನು ಸ್ಟ್ರೈಟ್ ಸಿನಿಮಾ ಎನ್ನುವಂತೆ 'ವಾರಸುಡು' ಹೆಸರಿನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸ್ತಿದ್ದು, ತೆಲುಗಿನ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ತಂತ್ರಜ್ಞರು, ನಿರ್ಮಾಪಕರ ಆಗಿರುವುದರಿಂದ ದೊಡ್ಡಮಟ್ಟದಲ್ಲಿ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಇದರಿಂದ ಒರಿಜಿನಲ್ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಎದುರಾಗುವ ಆತಂಕ ಕಾಡುತ್ತಿದೆ.

'ಕಾಂತಾರ' ಸಕ್ಸಸ್ ಎಫೆಕ್ಟ್!
ಸಿನಿಮಾಗಳು ಈಗ ಭಾಷೆಯ ಗಡಿ ಮೀರಿ ಪ್ರಪಂಚದಾದ್ಯಂತ ರಿಲೀಸ್ ಆಗಿ ಸದ್ದು ಮಾಡುತ್ತಿವೆ. 'ಕಾಂತಾರ' ತೆಲುಗು ವರ್ಷನ್ನ ಟೊರೆಂಟೋದಲ್ಲಿ ಪ್ರೇಕ್ಷಕರು ಕ್ಯೂ ನಿಂತು ಟಿಕೆಟ್ ಖರೀದಿಸಿ ನೋಡಿದ್ದಾರೆ. ದಸರಾ ಸಂಭ್ರಮದಲ್ಲಿ ಬಿಡುಗಡೆಯಾದ ಚಿರಂಜೀವಿ ನಟನೆಯ 'ಗಾಡ್ ಫಾದರ್' ಹಾಗೂ ನಾಗಾರ್ಜುನ ನಟನೆಯ 'ದಿ ಘೋಸ್ಟ್' ಚಿತ್ರಗಳನ್ನು ಮೀರಿಸಿ ಡಬ್ ಸಿನಿಮಾ ಕಾಂತಾರ ಅಬ್ಬರಿಸುತ್ತಿದೆ. ಸಿನಿಮಾ ರಿಲೀಸ್ ಆಗಿ 4 ವಾರ ಕಳೆದರೂ ಇನ್ನು ಭರ್ಜರಿ ಪ್ರದರ್ಶನ ಕಾಣುತ್ತಿದೆ. 5ನೇ ವಾರ ತಮಿಳುನಾಡಿನ 100 ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ರಿಷಬ್ ಶೆಟ್ಟಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದನ್ನೆಲ್ಲಾ ನೋಡಿ ಡಬ್ ಸಿನಿಮಾಗಳಿಂದ ನಮ್ಮ ಸಿನಿಮಾಗಳಿಗೆ ಸಮಸ್ಯೆ ಎಂದು ನಿರ್ಧರಿಸಿ ತೆಲುಗು ನಿರ್ಮಾಪಕರ ಸಂಘ ಹೊಸ ನಿಮಯ ಜಾರಿ ತರಲು ಹೊರಟಿದೆ.


Click it and Unblock the Notifications











