ಚಿರಂಜೀವಿ ನಿವಾಸದಲ್ಲಿ ಮಹತ್ವದ ಸಭೆ, ಬಾಲಕೃಷ್ಣಗೆ ಆಹ್ವಾನವೇ ಇಲ್ಲ!
ನಟ ಬಾಲಕೃಷ್ಣ ತೆಲುಗು ಸಿನಿಮಾ ರಂಗದ ಹಿರಿಯ ನಟ. ಮೆಗಾಸ್ಟಾರ್ ಚಿರಂಜೀವಿಗಿಂತಲೂ ನಾಲ್ಕು ವರ್ಷ ಮೊದಲೇ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಮಿಂಚಿದ್ದರು ಬಾಲಕೃಷ್ಣ. ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ನಂದಮೂರಿ ಕುಟುಂಬ ತೆಲುಗು ಸಿನಿಮಾರಂಗಕ್ಕೆ ದೊಡ್ಡ ಕೊಡುಗೆ ನೀಡಿದೆ. ಎನ್ಟಿಆರ್ ಇಂದ ಪ್ರಾರಂಭವಾಗಿ ಈಗಿನ ಜೂ.ಎನ್ಟಿಆರ್ ವರೆಗೆ ಹಲವು ಸ್ಟಾರ್ ನಟರು ನಂದಮೂರಿ ಕುಟುಂಬದಿಂದ ಬಂದಿದ್ದಾರೆ. ಆದರೆ ಇತ್ತೀಚೆಗೆ ತೆಲುಗು ಚಿತ್ರರಂಗದ ಗಣ್ಯರು ಬಾಲಕೃಷ್ಣ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಆ ಮೂಲಕ ನಂದಮೂರಿ ಕುಟುಂಬಕ್ಕೆ ಅಪಮಾನ ಮಾಡಿದ್ದಾರೆ ಎಂದು ಬಾಲಕೃಷ್ಣ ಅಭಿಮಾನಿಗಳು ಆರೋಪಿಸಿದ್ದಾರೆ.
ಕೋವಿಡ್ ಸಮಯದಲ್ಲಿ ನಟ ಚಿರಂಜೀವಿ ನೇತೃತ್ವದಲ್ಲಿ ತೆಲುಗು ಚಿತ್ರರಂಗದ ಹಿರಿಯ ನಟರು, ನಿರ್ಮಾಪಕರು, ನಿರ್ದೇಶಕರು ಒಟ್ಟಾಗಿ ಎರಡೂ ತೆಲುಗು ರಾಜ್ಯಗಳ ಸಿಎಂ ಅವರುಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದಕ್ಕೆ ಬಾಲಕೃಷ್ಣಗೆ ಆಹ್ವಾನ ನೀಡಿರಲಿಲ್ಲ. ಈಗ ಮತ್ತೆ ಚಿರಂಜೀವಿ ನೇತೃತ್ವದಲ್ಲಿ ನಿಯೋಗವೊಂದು ಆಂಧ್ರ ಸಿಎಂ ಜಗನ್ ಅನ್ನು ಭೇಟಿ ಮಾಡಲಿದ್ದು, ಇದರ ಪೂರ್ವಭಾವಿ ಸಭೆಗೆ ಬಾಲಕೃಷ್ಣಗೆ ಆಹ್ವಾನ ನೀಡಿಲ್ಲ.

ಚಿರಂಜೀವಿ ಮನೆಯಲ್ಲಿ ಪೂರ್ವಭಾವಿ ಸಭೆ
ಸಿಎಂ ಜಗನ್ ಭೇಟಿಗೆ ಮುನ್ನ ಚಿರಂಜೀವಿ ನಿವಾಸದಲ್ಲಿ ನಿನ್ನೆ (ಆಗಸ್ಟ್ 16) ಪೂರ್ವಭಾವಿ ಸಭೆ ನಡೆದಿದ್ದು, ಸಭೆಯಲ್ಲಿ ನಟ ಅಕ್ಕಿನೇನಿ ನಾಗಾರ್ಜುನ, ನಿರ್ಮಾಪಕ ಅಲ್ಲು ಅರವಿಂದ, ನಿರ್ದೇಶಕ ಕೊರಟಾಲ ಶಿವ, ವಿವಿ ವಿನಾಯಕ್, ನಿರ್ಮಾಪಕರಾದ ದಿಲ್ ರಾಜು, ಸುರೇಶ್ ಬಾಬು, ಕೆ.ಎಸ್.ರಾಮಾರಾವ್, ದಾಮೋದರ್ ಪ್ರಸಾದ್, ಏಷಿಯನ್ ಸಿನಿಮಾಸ್ನ ಸುನಿಲ್ ನಾರಂಗ್, ಶ್ರವಂತಿ ಮೂವೀಸ್ನ ರವಿ ಕಿಶೋರ್, ಯುವಿ ಕ್ರಿಯೇಶನ್ಸ್ನ ವಿಕ್ಕಿ, ಬಿವಿಎಸ್ಎನ್ ಪ್ರಸಾದ್, ಮೆಹರ್ ರಮೇಶ್, ಸುಪ್ರಿಯಾ, ಎನ್ವಿ ಪ್ರಸಾದ್, ಸಿ ಕಲ್ಯಾಣ್ ಇನ್ನೂ ಕೆಲವರು ಭಾಗವಹಿಸಿದ್ದರು. ಆದರೆ ನಂದಮೂರಿ ಕುಟುಂಬದಿಂದ ಯಾರೂ ಸಭೆಗೆ ಬಂದಿರಲಿಲ್ಲ.

ಬಾಲಕೃಷ್ಣ ಅಭಿಮಾನಿಗಳ ಆಕ್ರೋಶ
ಬಾಲಕೃಷ್ಣಗೆ ಈ ಬಾರಿಯೂ ಸಭೆಗೆ ಆಹ್ವಾನ ನೀಡದೇ ಇರುವ ಬಗ್ಗೆ ಬಾಲಕೃಷ್ಣ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಬಾಲಕೃಷ್ಣ ತೆಲುಗು ಚಿತ್ರರಂಗದ ದೊಡ್ಡ ನಟ ಅಲ್ಲದೆ ಹಾಲಿ ಶಾಸಕ ಸಹ ಹಾಗೂ ಅವರ ಕುಟುಂಬದಲ್ಲಿ ಸಾಕಷ್ಟು ಮಂದಿ ಸಿನಿಕರ್ಮಿಗಳಿದ್ದಾರೆ ಹಾಗಿದ್ದಾಗ್ಯೂ ಅವರಿಗೆ ಸಭೆಗೆ ಆಹ್ವಾನ ನೀಡದೇ ಇರುವುದು ಸರಿಯಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಯಲ್ ಎಸ್ಟೇಟ್ ದಂಧೆ ಮಾಡಲು ಹೋಗಿದ್ದರು ಎಂದಿದ್ದ ಬಾಲಕೃಷ್ಣ
ಈ ಹಿಂದೆ ಸಿನಿ ಗಣ್ಯರು ಎರಡು ರಾಜ್ಯಗಳ ಸಿಎಂಗಳನ್ನು ಭೇಟಿಯಾದಾಗ ತಮಗೆ ಆಹ್ವಾನ ನೀಡದೇ ಇರುವ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ಬಾಲಕೃಷ್ಣ, ''ಆ ಸಭೆಗೆ ನನಗೆ ಆಹ್ವಾನವಿರಲಿಲ್ಲ, ಆ ವಿಷಯವನ್ನು ನಾನು ಟಿವಿ ನೋಡಿ ತಿಳಿದುಕೊಂಡೆ. ಸಿಎಂ ಭೇಟಿಗೆ ಹೋಗಿದ್ದ ತಂಡದಲ್ಲಿ ಕೆಲವರು ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಲು ಅವರು ಹೋಗಿದ್ದರು. ಇನ್ನು ಕೆಲವರು ಸಿಎಂಗೆ ವಶೀಲಿಬಾಜಿ ಮಾಡಿ ಭೂಮಿ ಪಡೆದುಕೊಳ್ಳಲು ಹೋಗಿದ್ದರು'' ಎಂದು ವಿವಾದಾತ್ಮಕ ಹೇಳಿಕೆ ನೀಡಿದರು. ಇದರಿಂದ ಕೆರಳಿದ ಚಿರಂಜೀವಿ ಸಹೋದರ ನಾಗಬಾಬು, ಬಾಲಕೃಷ್ಣ ನಾಲಗೆ ಬಿಗಿ ಹಿಡಿದು ಮಾತನಾಡಬೇಕೆಂದು ಎಚ್ಚರಿಕೆ ನೀಡಿದ್ದರು.

ಹಲವು ವಿಷಯಗಳ ಬಗ್ಗೆ ಚರ್ಚೆ
ನಿನ್ನೆ ಚಿರಂಜೀವಿ ಮನೆಯಲ್ಲಿ ಸಭೆ ಸೇರಿದ್ದ ಪ್ರಮುಖರು ಆಂಧ್ರಪ್ರದೇಶದಲ್ಲಿ ಚಿತ್ರಮಂದಿರಗಳ ಟಿಕೆಟ್ ದರ ಬಹಳ ಕಡಿಮೆ ಇದ್ದು ಅವುಗಳನ್ನು ಹೆಚ್ಚಳ ಮಾಡಬೇಕು ಎಂದು ಸಿಎಂಗೆ ಮನವಿ ಸಲ್ಲಿಸುವ ವಿಚಾರವಾಗಿ ಪ್ರಧಾನವಾಗಿ ಚರ್ಚೆ ಮಾಡಿದ್ದಾರೆ. ಅದರ ನಂತರ ಕೋವಿಡ್ನಿಂದ ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ವಿಶೇಷ ಪ್ಯಾಕೇಜು. ಚಿತ್ರಮಂದಿರಗಳ ಮೇಲಿನ ತೆರಿಗೆ ವಿನಾಯಿತಿ ವಿಷಯಗಾಗಿ ಚರ್ಚೆ ನಡೆಸಿದ್ದಾರೆ. ಇದರ ಹೊರತಾಗಿ MAA (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆ ಕುರಿತು ಸಹ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











