ಆಗಸ್ಟ್ 1 ರಿಂದ ತೆಲುಗು ಸಿನಿಮಾಗಳ ಶೂಟಿಂಗ್ ಸ್ಥಗಿತ
ನೆರೆಯ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಈ ಚಟುವಟಿಕೆಗಳು ಸಿನಿಮಾದ ಬಗ್ಗೆಯಲ್ಲ ಬದಲಿಗೆ ಸಿನಿಮಾ ಸುತ್ತಲ ರಾಜಕಾರಣದ ಬಗ್ಗೆಯಾಗಿವೆ.
ಆಂಧ್ರ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ಬೆಲೆ ಮೇಲೆ ಮಿತಿ ಹೇರಿ, ಟಿಕೆಟ್ ಮಾರಾಟಕ್ಕೂ ನಿಂತಿದ್ದನ್ನು ತೆಲುಗು ಚಿತ್ರರಂಗ ಒಕ್ಕೂರಲಿನಿಂದ ವಿರೋಧಿಸುತ್ತಲೇ ಬಂದಿದೆ. ಆಂಧ್ರದಲ್ಲಿಯಂತೂ ಹಲವು ಚಿತ್ರಮಂದಿಗಳು ಬಾಗಿಲು ಸಹ ಹಾಕಿದವು. ಕೆಲವನ್ನು ಸರ್ಕಾರವೇ ಬಾಗಿಲು ಹಾಕಿಸಿತು.
ಚಿರಂಜೀವಿ ಸೇರಿದಂತೆ ಉದ್ಯಮದ ದೊಡ್ಡವರು ಮಾಡಿದ ಸಂಧಾನ ಯತ್ನಗಳೆಲ್ಲವೂ ವಿಫಲವಾದ ಬಳಿಕ ಇದೀಗ ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕರೆಲ್ಲ ಸೇರಿ ಚಿತ್ರೋದ್ಯಮದ ಒಳಿತಿಗೆ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಿದ್ದು, ಇದರ ಭಾಗವಾಗಿ ಆಗಸ್ಟ್ 1 ರಿಂದ ತೆಲುಗು ಸಿನಿಮಾಗಳ ಚಿತ್ರೀಕರಣವನ್ನು ಬಂದ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಎಟಿಎಫ್ಪಿಜಿ (ಆಕ್ಟಿವ್ ತೆಲುಗು ಫಿಲ್ಮ್ ಪ್ರೊಡ್ಯೂಸರ್ಸ್ ಗಿಲ್ಡ್)ನ ನಿರ್ಮಾಪಕ ಸದಸ್ಯರು ಇಂದು ಸಭೆ ಸೇರಿ ತೆಲುಗು ಚಿತ್ರರಂಗದ ಪ್ರಗತಿಯ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರುವವರೆಗೆ ಯಾವುದೇ ತೆಲುಗು ಸಿನಿಮಾಗಳ ಚಿತ್ರೀಕರಣ ಮಾಡದಂತೆ ನಿರ್ಧಾರ ಮಾಡಿದ್ದು, ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ. ಈಗಾಗಲೇ ಚಿತ್ರೀಕರಣ ನಡೆಸುತ್ತಿರುವ ಸಿನಿಮಾಗಳು ಸಹ ಚಿತ್ರೀಕರಣ ಸ್ಥಗಿತಗೊಳಿಸಬೇಕಿದೆ ಹಾಗೂ ಯಾವುದೇ ಹೊಸ ಸಿನಿಮಾಗಳ ಚಿತ್ರೀಕರಣ ಪ್ರಾರಂಭವಾಗುವಂತಿಲ್ಲ.

ನಿರ್ಮಾಪಕರಿಗೆ ಸಂಕಷ್ಟ
''ಕೋವಿಡ್ ನಂತರ ಬದಲಾದ ಸನ್ನಿವೇಶದಲ್ಲಿ ನಿರ್ಮಾಪಕರಿಗೆ ಅನುಕೂಲಕರವಲ್ಲದ ವಾತಾವರಣ ಸೃಷ್ಟಿಯಾಗಿದೆ. ಸಿನಿಮಾದ ಬಜೆಟ್ಗಳು ಏರಿಕೆಯಾಗಿವೆ, ಬರುತ್ತಿರುವ ಆದಾಯ ತೀವ್ರವಾಗಿ ಕುಸಿದಿದೆ. ಸಿನಿಮಾರಂಗದ ಭಾಗವಾಗಿ ನಾವು ನಿರ್ಮಾಪಕರು ಈ ವಿಷಯವಾಗಿ ಚರ್ಚೆ ಮಾಡುವ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತುರ್ತು ಅಗತ್ಯ ಈಗಿದೆ. ನಾವುಗಳು ಸಿನಿಮಾ ನಿರ್ಮಾಣಕ್ಕೆ ಇನ್ನಷ್ಟು ಆರೋಗ್ಯಕರ ವಾತಾವರಣ ಸೃಷ್ಟಿಸಿಕೊಳ್ಳಬೇಕಿದೆ. ಆರೋಗ್ಯವಂತ ಸ್ಪರ್ಧೆಯ ನಡುವೆ ಸಿನಿಮಾಗಳ ಬಿಡುಗಡೆ ಮಾಡಬೇಕಿದೆ'' ಎಂದು ಪ್ರಕಟಣೆಯಲ್ಲಿ ನಿರ್ಮಾಪಕ ಸಂಘ ತಿಳಿಸಿದೆ.

ಅನಿರ್ದಿಷ್ಟಾವದಿ ಕಾಲ ಚಿತ್ರೀಕರಣ ಬಂದ್
ಸಿನಿಮಾಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸುವಂತೆ ಪ್ರಕಟಣೆಯನ್ನು ನಿರ್ಮಾಪಕರ ಸಂಘ ಹೊರಡಿಸಿದೆ ಆದರೆ ಎಂದಿನ ವರೆಗೆ ಈ ಬಂದ್ ಮುಂದುವರೆಯಲಿದೆ ಎಂಬುದನ್ನು ಹೇಳಿಲ್ಲ. ಈಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರೆಗೆ ಚಿತ್ರೀಕರಣ ಬಂದ್ ಮುಂದುವರೆಯಲಿದೆ ಎಂದಿದೆ. ಈಗಾಗಲೇ ಚಿತ್ರೀಕರಣ ನಡೆಸುತ್ತಿರುವ ಸಿನಿಮಾಗಳು ಚಿತ್ರೀಕರಣ ಮುಂದುವರೆಸಬಹುದು ಎನ್ನಲಾಗಿತ್ತು, ಆದರೆ ಅದಕ್ಕೂ ಅವಕಾಶ ನೀಡಿಲ್ಲ ನಿರ್ಮಾಪಕರ ಸಂಘ.

ಸ್ಟಾರ್ ನಟ ಸಂಭಾವನೆ ಇಳಿಕೆಗೆ ಒತ್ತಾಯ
ಟಿಕೆಟ್ ದರಗಳನ್ನು ಸರ್ಕಾರ ತೀವ್ರವಾಗಿ ಇಳಿಸಿರುವುದು, ಮನೊರಂಜನಾ ತೆರಿಗೆ ಏರಿಕೆ ಮತ್ತು ಸ್ಟಾರ್ ನಟರ ಭಾರಿ ದುಬಾರಿ ಸಂಭಾವನೆಯಿಂದಾಗಿ ನಿರ್ಮಾಪಕರಿಗೆ ನಷ್ಟವಾಗುತ್ತಿದೆ. ಒಂದೊಮ್ಮೆ ಸಿನಿಮಾ ಹಿಟ್ ಆದರೂ ಸಹ ಬರುವ ಆದಾಯ ಬಹಳ ಕಡಿಮೆಯಾಗಿದೆ ಎಂಬುದು ನಿರ್ಮಾಪಕ ಆಂಭೋಣವಾಗಿದೆ. ಸರ್ಕಾರದ ವಿರುದ್ಧ ಈಗಾಗಲೇ ನ್ಯಾಯಾಲಯದಲ್ಲಿ ಹೋರಾಟಕ್ಕೆ ನಿಂತಿರುವ ನಿರ್ಮಾಪಕರು, ಇದೀಗ ಸ್ಟಾರ್ ನಟರು ಸಂಭಾವನೆ ಇಳಿಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಅದರ ಭಾಗವಾಗಿಯೇ ಈಗ ಚಿತ್ರೀಕರಣಗಳನ್ನು ಬಂದ್ ಮಾಡಲಾಗಿದೆ.

ಸ್ಟಾರ್ ನಟರ ಸಿನಿಮಾಗಳ ಚಿತ್ರೀಕರಣ ಬಂದ್
ಅಲ್ಲು ಅರ್ಜುನ್ ನಟಿಸುತ್ತಿರುವ 'ಪುಷ್ಪ 2', ಪ್ರಭಾಸ್ ನಟಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾ, ಚಿರಂಜೀವಿ ನಟನೆಯ 'ಭೋಲಾ ಶಂಕರ್', ಜೂ ಎನ್ಟಿಆರ್ ನಟಿಸುತ್ತಿರುವ ಕೊರಟಾಲ ಶಿವ ನಿರ್ದೇಶನದ ಸಿನಿಮಾ, ಪ್ರಭಾಸ್ ನಟನೆಯ 'ಸಲಾರ್' ಇನ್ನೂ ಹಲವಾರು ಸಿನಿಮಾಗಳು ಪ್ರಸ್ತುತ ಚಿತ್ರೀಕರಣ ನಡೆಸುತ್ತಿದ್ದವು, ಆ ಎಲ್ಲ ಚಿತ್ರೀಕರಣಗಳು ಇದೀಗ ಬಂದ್ ಆಗಲಿವೆ. ಬೇರೆ ರಾಜ್ಯಗಳಿಂದಲೂ ನಟರು, ತಂತ್ರಜ್ಞರನ್ನು ಕರೆತಂದು ಚಿತ್ರೀಕರಣ ಮಾಡಲಾಗುತ್ತಿತ್ತು, ದೊಡ್ಡ ದೊಡ್ಡ ಸೆಟ್ಗಳ ನಿರ್ಮಾಣ ಆಗಿತ್ತು, ಈಗ ನಿರ್ಮಾಪಕರ ಈ ನಿರ್ಣಯದಿಂದ ಭಾರಿ ಮೊತ್ತ ನಷ್ಟವಾಗುವ ಜೊತೆಗೆ ಸ್ಟಾರ್ ನಟ-ನಟಿಯರ ಸಮಯವೂ ವ್ಯರ್ಥವಾಗಲಿದೆ.


Click it and Unblock the Notifications











