ಸಿನಿಮಾಗಳಿಲ್ಲದೇ ಮೆಲೋಡಿ ಬ್ರಹ್ಮ ಕಂಗಾಲು: ಅವಕಾಶಕ್ಕಾಗಿ 'ಯಶ್ವಂತ್', 'ನಿನ್ನಿಂದಲೇ' ಸಂಗೀತ ನಿರ್ದೇಶಕ ಮನವಿ
ಚಿತ್ರರಂಗದಲ್ಲಿ ಗೆದ್ದವರು ಸೋಲುವುದು, ಸೋತವರು ಗೆಲ್ಲುವುದು ನಡೆಯುತ್ತಲೇ ಇರುತ್ತದೆ. ಸ್ಟಾರ್ ನಟ-ನಟಿಯರು, ತಂತ್ರಜ್ಞರು ಕೆಲವೊಮ್ಮೆ ಅವಕಾಶಗಳಿಲ್ಲದೇ ಖಾಲಿ ಕೂರುವಂತಾಗುತ್ತದೆ. ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಮಣಿಶರ್ಮಾ ನನಗೂ ಸ್ಟಾರ್ ನಟರು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.
ಸೌತ್ ಸಿನಿ ದುನಿಯಾದಲ್ಲಿ ಮೆಲೋಡಿ ಬ್ರಹ್ಮ ಅಂತ್ಲೇ ಜನಪ್ರಿಯರಾಗಿರುವ ಮಣಿಶರ್ಮಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಕನ್ನಡದ ಕೆಲ ಹಿಟ್ ಗೀತೆಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಣಿಶರ್ಮ ಇತ್ತೀಚೆಗೆ ನನಗೆ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

ಒಂದ್ಕಾಲದಕ್ಕಿ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಬಾಲಕೃಷ್ಣ, ಮಹೇಶ್ ಬಾಬು ರೀತಿಯ ಸ್ಟಾರ್ ನಟರ ಸಿನಿಮಾಗಳಿಗೆ ಮಣಿಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರೆಲ್ಲರ ಸಿನಿಮಾಗಳಲ್ಲಿ ಮಣಿ ಹಿಟ್ ಆಲ್ಬಮ್ಗಳಿವೆ. ಇವತ್ತಿಗೂ ಮೆಲೋಡಿ ಬ್ರಹ್ಮನ ಹಾಡುಗಳನ್ನು ಕೇಳುತ್ತಲೇ ಇರುತ್ತೇವೆ. 1998ರಿಂದ 2010ರ ವರೆಗೆ ಮಣಿ ಕ್ರೇಜ್ ಜೋರಾಗಿತ್ತು. ಆಮೇಲೆ ನಿಧಾನವಾಗಿ ಕಮ್ಮಿ ಆಗಿತ್ತು. ಸದ್ಯ ತಮನ್, ದೇವಿಶ್ರಿ ಪ್ರಸಾದ್ ಟ್ರೆಂಡ್ ನಡೀತಿದೆ.
ತಮಗೆ ಅವಕಾಶಗಳು ಕಮ್ಮಿ ಆಗಿರು ಬಗ್ಗೆ ಮಾತನಾಡಿರುವ ಮಣಿಶರ್ಮಾ, "ಒಂದು ವಿಚಾರ ನನಗೆ ಬೇಸರ ಎನಿಸುತ್ತದೆ. ಮಹೇಶ್ ಬಾಬು, ಪವನ್ ಕಲ್ಯಾಣ್ ಅವರಂತಹ ಸ್ಟಾರ್ ಹೀರೋಗಳು ಎಲ್ಲರಿಗೂ ಅವಕಾಶ ಕೊಡಬೇಕು. ಥಮನ್ಗೆ ಒಂದು ಸಿನಿಮಾ, ದೇವಿಗೆ ಒಂದು ಸಿನಿಮಾ ಕೊಟ್ಟರೆ ನನಗೆ ಒಂದು ಸಿನಿಮಾ ಕೊಡಬೇಕು. ಹೋಗಲಿ ಅವರಿಗೆ ಎರಡು ಕೊಟ್ಟು ನನಗೆ ಒಂದು ಕೊಟ್ಟರೂ ಪ್ರೇಕ್ಷಕರಿಗೆ ವಿಭಿನ್ನ ಬಗೆಯ ಸಂಗೀತ, ವೈವಿಧ್ಯ ಹಾಡುಗಳು ಸಿಗುತ್ತದೆ. ಹೀಗಂತ ನಾನು ಭಾವಿಸುತ್ತೇನೆ. ಯಾಕಂದರೆ ನಾನು ಹೋಗಿ ಯಾರನ್ನು ಕೇಳುವುದಿಲ್ಲ" ಎಂದಿದ್ದಾರೆ.
ಒಂದ್ಕಾಲದಲ್ಲಿ ಸ್ಟಾರ್ ಸಂಗೀತ ನಿರ್ದೇಶಕ ಎನಿಸಿಕೊಂಡಿದ್ದವರು, ಸ್ಟಾರ್ ನಟರ ಸಿನಿಮಾಗಳಿಗೆ ಹಿಟ್ ಆಲ್ಬಮ್ ಕೊಟ್ಟ ಮಣಿಶರ್ಮಾ ಈ ರೀತಿ ಹೇಳಿರುವುದು ವೈರಲ್ ಆಗುತ್ತಿದೆ. ಸದ್ಯ ಅವರ ಕೈಯಲ್ಲಿ 'ಡಬಲ್ ಇಸ್ಮಾರ್ಟ್' ಹಾಗೂ 'ಕನ್ನಪ್ಪ' ಸಿನಿಮಾಗಳು ಮಾತ್ರ ಇವೆ. 'ಪ್ರೇಮಕ್ಕೆ ಸೈ' ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಮಣಿಶರ್ಮಾ ಶ್ರೀಮುರಳಿ ನಟನೆಯ 'ಯಶ್ವಂತ್' ಚಿತ್ರಕ್ಕೆ ಹಿಟ್ ಸಾಂಗ್ಸ್ ಕೊಟ್ಟಿದ್ದರು.

ಪುನೀತ್ ರಾಜ್ಕುಮಾರ್ ನಟನೆಯ 'ಅಜಯ್', 'ನಿನ್ನಿಂದಲೇ', ಉಪೇಂದ್ರ ನಟನೆಯ 'ಶಿವಂ' ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದರು. 'ನಿನ್ನಿಂದಲೇ' ಹಾಡುಗಳನ್ನು ಇವತ್ತಿಗೂ ಅಭಿಮಾನಿಗಳು ಗುನುಗುತ್ತಾರೆ. ಸದ್ಯ ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಮೆಲೋಡಿ ಬ್ರಹ್ಮ ಟ್ಯೂನ್ ಹಾಕಿದ್ದಾರೆ.
'ಬಾವಗಾರು ಬಾಗುನ್ನಾರಾ', 'ಚೂಡಾಲನಿವುಂದಿ', 'ಸಮರಸಿಂಹ ರೆಡ್ಡಿ', 'ರಾಜಕುಮಾರುಡು', 'ಅನ್ನಯ್ಯ', 'ಮೃಗರಾಜು', 'ನರಸಿಂಹ ನಾಯುಡು', 'ಖುಷಿ', 'ಆದಿ', 'ಇಂದ್ರ', 'ಒಕ್ಕಡು', 'ಠಾಗೂರ್', 'ಲಕ್ಷ್ಮಿ ನರಸಿಂಹ', 'ಅಂಜಿ', 'ಅರ್ಜುನ್', 'ಗುಡುಂಬಾ ಶಂಕರ್', 'ಅತಡು', 'ಬಾಲು', 'ಪೋಕಿರಿ', 'ಸ್ಟಾಲಿನ್', 'ಚಿರುತ', 'ಬಿಲ್ಲಾ' ಹೀಗೆ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಮಣಿಶರ್ಮಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
2010ರ ಬಳಿಕ ದೇವಿಶ್ರೀ ಪ್ರಸಾದ್, ತಮನ್ ಸೂಪರ್ ಹಿಟ್ ಆಲ್ಬಮ್ಗಳನ್ನು ಕೊಡಲು ಆರಂಭಿಸಿದರು. ಇದೇ ಸಮಯದಲ್ಲಿ ಹೊಸ ಟ್ರೆಂಡ್ಗೆ ಒಗ್ಗಿಕೊಳ್ಳಲು ಮಣಿಶರ್ಮಾ ಹಿಂದೆ ಉಳಿದರು. ಹಾಗಾಗಿ ಹೊಸಬರ ಹವಾ ಶುರುವಾಯಿತು. ಇದೇ ಕಾರಣಕ್ಕೆ ಈಗ ಸ್ಟಾರ್ ನಟರ ಸಿನಿಮಾ ಅವಕಾಶಗಳು ಮೆಲೋಡಿ ಬ್ರಹ್ಮನಿಗೆ ಸಿಗುತ್ತಿಲ್ಲ ಎನ್ನಲಾಗ್ತಿದೆ. ಮುಂದಿನ ಸ್ಟಾರ್ ನಟರು ಕರೆದು ಅವಕಾಶ ಕೊಡುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











