ತೆಲುಗು ನಿರ್ಮಾಪಕರ ಮಧ್ಯೆ ಭಿನ್ನಾಭಿಪ್ರಾಯ, ಕೆಂಪು ಬಾವುಟ ಎತ್ತಿದ ಅಶ್ವಿನಿ ದತ್
ತೆಲುಗು ಚಿತ್ರರಂಗ ಈಗ ಸಂಕಷ್ಟದಲ್ಲಿದೆ. ಚಿತ್ರಮಂದಿರಗಳ ಟಿಕೆಟ್ ದರ ಇಳಿಸಿ ಸರ್ಕಾರ ನೀಡಿದ ಒಂದೇ ಒಂದು ಹೊಡೆತಕ್ಕೆ ಚಿತ್ರರಂಗದ ಮೂರು ನಾಲ್ಕು ಬಣಗಳಾಗಿ ಮಾರ್ಪಟ್ಟು ಪರಸ್ಪರ ಕಚ್ಚಾಟಕ್ಕೆ, ವಾಗ್ದಾಳಿ-ಪ್ರತಿದಾಳಿಗಳಲ್ಲಿ ತೊಡಗಿದೆ.
ಇದೀಗ ತೆಲುಗು ಚಿತ್ರರಂಗದ ಕೆಲವು ನಿರ್ಮಾಪಕರೆಲ್ಲ ಸೇರಿ ನಿರ್ಮಾಪಕರ ಗಿಲ್ಡ್ ಒಂದನ್ನು ಮಾಡಿಕೊಂಡಿದ್ದು, 'ಚಿತ್ರರಂಗವನ್ನು ಮತ್ತೆ ಮೇಲುತ್ತುವ' ಕಾರ್ಯದಲ್ಲಿ ನಿರತರಾಗಿದ್ದೇವೆ ಎಂದು ಹೇಳಿ, ತಮ್ಮ ಕಾರ್ಯಸೂಚಿಯ ಮೊದಲ ಭಾಗವಾಗಿ ಸಿನಿಮಾಗಳ ಚಿತ್ರೀಕರಣ ರದ್ದು ಮಾಡುವಂತೆ ಪ್ರಕಟಣೆ ಹೊರಡಿಸಿದ್ದಾರೆ.
ಆದರೆ ಇದಕ್ಕೆ ಎಲ್ಲ ನಿರ್ಮಾಪಕರ ಒಪ್ಪಿಗೆ ಇಲ್ಲ. ಕೆಲವು ನಿರ್ಮಾಪಕರು ಈ ಹೊಸ ನಿರ್ಮಾಪಕ ಗಿಲ್ಡ್ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಕೆಲವರು ಬಹಿರಂಗವಾಗಿ ಅಸಮಾಧಾನ ವ್ಯ್ಕತಪಡಿಸಿದ್ದಾರೆ. ತೆಲುಗಿನ ಹಿರಿಯ ನಿರ್ಮಾಪಕ ಅಶ್ವಿನಿ ದತ್ ನಿರ್ಮಾಪಕರ ಗಿಲ್ಡ್ನ ಪ್ರಕಟಣೆಯ ವಿರುದ್ಧ ಹರಿಹಾಯ್ದಿದ್ದಾರೆ.

ನಿರ್ಮಾಪಕರ ಗಿಲ್ಡ್ ಏಕೆ ಮಾಡಲಾಗಿದೆ: ಅಶ್ವಿನಿ ದತ್
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಿರ್ಮಾಪಕ ಅಶ್ವಿನಿ ದತ್, ''ಈ ನಿರ್ಮಾಪಕರ ಗಿಲ್ಡ್ ಏಕೆ ಮಾಡಲಾಗಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ನಿರ್ಮಾಪಕರಿಗಾಗಿ ಈಗಾಗಲೇ ನಿರ್ಮಾಪಕರ ಕೌನ್ಸಿಲ್ ಇದೆ, ಹೀಗಿದ್ದಾಗಿಯೂ ನಿರ್ಮಾಪಕರ ಗಿಲಕ್ಡ್ ಮಾಡಿರುವ ಉದ್ದೇಶ ಅರ್ಥವಾಗುತ್ತಿಲ್ಲ ಎಂದಿರುವುದಲ್ಲದೆ ಚಿತ್ರರಂಗವನ್ನು ಸಂಕಷ್ಟದಿಂದ ಕಾಪಾಡಲು ಚಿತ್ರೀಕರಣವನ್ನು ಏಕೆ ಬಂದ್ ಮಾಡಬೇಕು ಎಂಬುದು ಸಹ ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಅಶ್ವಿನಿ ದತ್ ಹಲವು ದಶಕಗಳಿಂದಲೂ ತೆಲುಗು ಚಿತ್ರರಂಗದ ಪ್ರಮುಖ ಸಿನಿಮಾ ನಿರ್ಮಾಪಕರಾಗಿದ್ದಾರೆ.

ನಟರು ಸಂಧಾನಕ್ಕೆ ಹೋಗಿದ್ದು ತಪ್ಪು: ಅಶ್ವಿನಿ ದತ್
ನಾಯಕ ನಟರ ಬಗ್ಗೆಯೂ ಮಾತನಾಡಿರುವ ಅಶ್ವಿನಿ ದತ್, ''ಸರ್ಕಾರ ಚಿತ್ರಮಂದಿರಗಳ ಟಿಕೆಟ್ ದರ ಕಡಿಮೆ ಮಾಡಿದಾಗ ಸರ್ಕಾರದೊಟ್ಟಿಗೆ ಚರ್ಚಿಸಲು ನಾಯಕ ನಟರು ಹೋಗಿದ್ದು ದೊಡ್ಡ ತಪ್ಪು. ಚಿತ್ರಮಂದಿರಗಳ ಟಿಕೆಟ್ ಎಷ್ಟಾಗಿರಬೇಕು ಎಂಬುದು ನಿರ್ಮಾಪಕ, ಚಿತ್ರಮಂದಿರಗಳ ಮಾಲೀಕರು, ವಿತರಕರಿಗೆ ಬಿಟ್ಟ ವಿಷಯ. ಆದರೆ ಸಿನಿಮಾ ನಾಯಕ ನಟರು ಈ ಬಗ್ಗೆ ಚರ್ಚೆ ಮಾಡಿದ್ದು ಜನರಿಗೆ ತಪ್ಪು ಸಂದೇಶ ರವಾನಿಸಿತು. ಇದರಿಂದ ಅವರಿಗೆ ಉದ್ಯಮದ ಮೇಲೆ ಅನುಮಾನಗಳು ಮೂಡಿತು'' ಎಂದಿದ್ದಾರೆ.

ಚಿತ್ರಮಂದಿರಕ್ಕೆ ಬರುವವರನ್ನು ದೂರ ತಳ್ಳಿದ್ದಾರೆ
ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಅವರನ್ನು ಮತ್ತೆ ಚಿತ್ರಮಂದಿರದತ್ತ ಕರೆತರುವುದು ಹೇಗೆ ಎಂಬ ಬಗ್ಗೆ ಚರ್ಚೆ ಆಗಬೇಕಿದೆ. ಇದಕ್ಕೂ ನಟರ ಸಂಭಾವನೆಗೂ, ಚಿತ್ರೀಕರಣಕ್ಕೂ, ಬಜೆಟ್ಗೂ ಸಂಬಧವಿಲ್ಲ. ಕೆಲವು ವ್ಯಕ್ತಿಗಳು ಹೆಚ್ಚು ಸಂಖ್ಯೆಯ ಚಿತ್ರಮಂದಿರಗಳನ್ನು ಹೊಂದಿದ್ದವರು ಕೂಲ್ ಡ್ರಿಂಕ್ಸ್, ಪಾಪ್ಕಾರ್ನ್ ರೇಟುಗಳನ್ನು ಭಾರಿ ಮೊತ್ತದಲ್ಲಿ ಹೆಚ್ಚಿಸಿ ಕುಟುಂಬದವರು ಒಟ್ಟಾಗಿ ಚಿತ್ರಮಂದಿರಗಳಿಗೆ ಬರಲಾರದಂತೆ ಮಾಡಿದ್ದಾರೆ. ಆದರೆ ಈಗ ಇದಕ್ಕೆ ಬೇರೆಯವರನ್ನು ಹೊಣೆ ಮಾಡಲಾಗುತ್ತಿದೆ. ಈಗಿರುವ ನಿರ್ಮಾಪಕರಿಗೆ ಸ್ಥಿರತ್ವ ಇಲ್ಲ, ಶೂಟಿಂಗ್ ಬಂದ್ ಮಾಡುವ ಅವಶ್ಯಕತೆಯಾದರೂ ಏನಿತ್ತು'' ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಹೇಳಿಕೆ ಬದಲಿಸಿದ ಅಶ್ವಿನಿ ದತ್
ಆದರೆ ಅಶ್ವಿನಿ ದತ್ ಅವರ ಹೇಳಿಕೆಗೆ ನಿರ್ಮಾಪಕರು ತೀವ್ರ ವಿರೋಧ ವ್ಯಕ್ತಪಡಿಸಿದ ಬಳಿಕ, ಹೇಳಿಕೆ ಬದಲಾಯಿಸಿರುವ ಅಶ್ವಿನಿ ದತ್, ''ನನಗೆ ತೆಲುಗಿನ ಎಲ್ಲ ನಿರ್ಮಾಪಕರೊಟ್ಟಿಗೆ ಬಾಂಧವ್ಯ ಇದೆ. ನಿರ್ಮಾಪಕರ ಏಳಿಗೆಯ ಬಗ್ಗೆ ಚಿಂತಿಸುವ ವ್ಯಕ್ತಿ ನಾನು. ನಿರ್ಮಾಪಕರ ಗಿಲ್ಡ್, ನಿರ್ಮಾಪಕರ ಕೌನ್ಸಿಲ್ ಎರಡರ ಬಗ್ಗೆಯೂ ನನಗೆ ಗೌರವ ಇದೆ. ಎಲ್ಲರೂ ಒಟ್ಟಿಗೆ ಸೇರಿ ಒಂದೇ ನಿರ್ಣಯ ತೆಗೆದುಕೊಂಡರೆ ಒಳ್ಳೆಯದೆಂಬುದು ನನ್ನ ಅಭಿಪ್ರಾಯ. ನಿರ್ಮಾಪಕರೆಲ್ಲರೂ ಸೇರಿ ಚಿತ್ರರಂಗದ ಬಗ್ಗೆ ಒಳ್ಳೆಯ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ನನ್ನ ಸಹಮತ ಇದೆ'' ಎಂದಿದ್ದಾರೆ.


Click it and Unblock the Notifications











