ದರ್ಶನ್ಗೆ ಕನ್ನಡದಲ್ಲೇ ವಿಶ್ ಮಾಡಿದ ತೆಲುಗು ನಿರ್ಮಾಪಕ; ಟಾಲಿವುಡ್ನಲ್ಲಿ ಹೀಗಿತ್ತು ದಚ್ಚು ಬರ್ತ್ಡೇ
ನಿನ್ನೆ ( ಫೆಬ್ರವರಿ 17 ) ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ಓರ್ವರಾದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅವರ 46ನೇ ಹುಟ್ಟುಹಬ್ಬ ನಡೆಯಿತು. ಕಳೆದ ಎರಡು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಅಭಿಮಾನಿಗಳ ಕೈಗೆ ಸಿಗದೇ ಇದ್ದ ದರ್ಶನ್ ಅವರು ಈ ಬಾರಿ ಮನೆಗೆ ಬಂದ ಅಭಿಮಾನಿಗಳ ಕೈಕುಲುಕಿ ಪ್ರೀತಿ ತೋರಿದ್ದಾರೆ.
ದರ್ಶನ್ ಮನೆ ಮುಂದೆ ಹುಟ್ಟುಹಬ್ಬದ ಹಿಂದಿನ ದಿನದ ರಾತ್ರಿಯೇ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ದರ್ಶನ್ ಅವರನ್ನು ಭೇಟಿಯಾಗಿ ಶುಭ ಕೋರಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಅಭಿಮಾನಿಗಳು ತಂದಂತಹ ವಿಶೇಷ ಉಡುಗೊರೆಗಳನ್ನು ಸ್ವೀಕರಿಸಿದ ದರ್ಶನ್ ಧನ್ಯವಾದ ತಿಳಿಸಿದರು.
ಹೀಗೆ ಮನೆ ಮುಂದೆ ದರ್ಶನ್ ತಮ್ಮ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಂಡರೆ ಅತ್ತ ತಾನು ಕಥೆ ಕೇಳಿ ಗ್ರೀನ್ ಸಿಗ್ನಲ್ ನೀಡಿರುವ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರಗಳ ವಿಶೇಷ ಪೋಸ್ಟರ್ಗಳನ್ನು ಹಂಚಿಕೊಂಡು ದರ್ಶನ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿ ತಾವು ದರ್ಶನ್ಗೆ ಚಿತ್ರ ಮಾಡುತ್ತಿರುವ ವಿಷಯವನ್ನು ಬಹಿರಂಗಪಡಿಸಿದರು. ಇನ್ನು ನಟ ದರ್ಶನ್ ತೆಲುಗಿನ ಯಾವ ಚಿತ್ರದಲ್ಲಿ ನಟಿಸದಿದ್ದರೂ ಸಹ ಅಲ್ಲಿನ ಹಲವರು ದರ್ಶನ್ಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ತೆಲುಗಿನ ಖ್ಯಾತ ನಿರ್ಮಾಪಕರಲ್ಲಿ ಓರ್ವರಾದ ಬಾಂಡ್ಲಾ ಗಣೇಶ್ ಕನ್ನಡದಲ್ಲಿಯೇ ದರ್ಶನ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಬಹಳ ವಿಶೇಷವಾಗಿತ್ತು.

ಬಾಂಡ್ಲಾ ಗಣೇಶ್ ಟ್ವೀಟ್
ಕನ್ನಡಿಗರ ಪ್ರೀತಿಯ 'ಡಿ ಬಾಸ್', ಅಭಿಮಾನಿಗಳ ನೆಚ್ಚಿನ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿರುವ ಬಾಂಡ್ಲಾ ಗಣೇಶ್ ದರ್ಶನ್ ಅವರ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಇನ್ನು ಬಾಂಡ್ಲಾ ಗಣೇಶ್ ಆಂಜನೇಯಲು, ತೀನ್ ಮಾರ್, ಗಬ್ಬರ್ ಸಿಂಗ್, ಬಾದ್ಶಾ, ಇದ್ದರಮ್ಮಾಯಲತೋ ಹಾಗೂ ಟೆಂಪರ್ ರೀತಿಯ ಹಿಟ್ ಚಿತ್ರಗಳಿಗೆ ನಿರ್ಮಾಪಕನಾಗಿ ಕೆಲಸ ನಿರ್ವಹಿಸಿದ್ದಾರೆ.

ವಿಶ್ ಮಾಡಿದ ತೆಲುಗು ನಟರ ಅಭಿಮಾನಿಗಳು
ಇನ್ನು ತೆಲುಗು ನಟರ ಹಲವು ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬದಂದು ಶುಭ ಕೋರಿದ್ದಾರೆ. ತಮ್ಮ ನೆಚ್ಚಿನ ನಟನ ಫೋಟೊ ಜತೆಗೆ ದರ್ಶನ್ ಫೋಟೊವನ್ನು ಎಡಿಟ್ ಮಾಡಿ ಪೋಸ್ಟರ್ ರಚಿಸಿದ್ದಾರೆ. ಅದರಲ್ಲೂ ಜೂನಿಯರ್ ಎನ್ಟಿಆರ್ ಹಾಗೂ ಮಹೇಶ್ ಬಾಬು ಅವರ ಅಭಿಮಾನಿಗಳು ಎಡಿಟ್ ಮಾಡಿ ಅಪ್ಲೋಡ್ ಮಾಡಿದ ಪೋಸ್ಟರ್ಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಅತ್ತ ಕಾಲಿವುಡ್ನಲ್ಲೂ ಸಹ ಇದೇ ರೀತಿ ಅಜಿತ್ ಕುಮಾರ್ ಹಾಗೂ ವಿಜಯ್ ಅಭಿಮಾನಿಗಳು ದರ್ಶನ್ ಜತೆಗೆ ತಮ್ಮ ನಟರ ಫೋಟೊಗಳನ್ನು ಎಡಿಟ್ ಮಾಡಿ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ದರ್ಶನ್ ಚಿತ್ರಕ್ಕೆ ತೆಲುಗು ನಿರ್ಮಾಪಕನ ಬಂಡವಾಳ
ಇದೇ ಹುಟ್ಟುಹಬ್ಬದ ದಿನದಂದು ದರ್ಶನ್ಗೆ ಶುಭ ಕೋರಿ ಟ್ವೀಟ್ ಮಾಡಿರುವ ತೆಲುಗಿನ ಖ್ಯಾತ ನಿರ್ಮಾಪಕ ಅನಿಲ್ ಸುಂಕರ ಇದೇ ವರ್ಷ ದರ್ಶನ್ ಜತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಆಹಾ ನಾ ಪೆಲ್ಲಂಟ, ಮಹೇಶ್ ಬಾಬು ಸಿನಿಮಾಗಳಾದ ದೂಕುಡು, ಆಗಡು, ನೇನೊಕ್ಕಡಿನೆ, ಸರಿಲೇರು ನೀಕೆವ್ವರು, ನಾನಿ ನಟನೆಯ ಕೃಷ್ಣ ಗಾಡಿ ವೀರ ಪ್ರೇಮ ಗಾಥ ಚಿತ್ರಗಳು ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚಿನ ತೆಲುಗು ಸಿನಿಮಾಗಳಿಗೆ ಬಂಡವಾಳ ಹೂಡಿರುವ ಅನಿಲ್ ಸುಂಕರ ಎಕೆ ಎಂಟರ್ಟೈನ್ಮೆಂಟ್ಸ್ ಅಡಿಯಲ್ಲಿ ದರ್ಶನ್ಗೆ ಸಿನಿಮಾವೊಂದನ್ನು ನಿರ್ಮಿಸಲಿದ್ದಾರೆ. ಇದರ ಜತೆಗೆ ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಪ್ರೊಡಕ್ಷನ್ ಹೌಸ್ ಕೂಡ ನಮ್ಮ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿ ಶುಭ ಕೋರಿದ್ದು, ಇವರೂ ಸಹ ದರ್ಶನ್ಗೆ ಸಿನಿಮಾ ಮಾಡಲಿದ್ದಾರೆ.


Click it and Unblock the Notifications











