ಮತ್ತೊಂದು ಚಿತ್ರಕ್ಕೆ ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಗ್ರೀನ್ ಸಿಗ್ನಲ್!
ಆಂಧ್ರ ಡಿಸಿಎಂ, ತೆಲುಗು ನಟ ಪವನ್ ಕಲ್ಯಾಣ್ ಮತ್ತೆ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಅನುಮಾನ ಇದೆ. ರಾಜಕೀಯರಂಗದಲ್ಲಿ ಸಕ್ರಿಯರಾಗಿರುವ ಪವರ್ ಸ್ಟಾರ್ ಮುಂದೆ ಸಿನಿಮಾಗಳಲ್ಲಿ ನಟಿಸುವುದು ಕಷ್ಟ ಎಂದು ಇತ್ತೀಚೆಗೆ ಮಾಧ್ಯಮಗಳ ಮುಂದೆ ಹೇಳಿದ್ದರು. ಇದು ಸಹಜವಾಗಿಯೇ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.
ಸದ್ಯ 'OG' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಸೆಪ್ಟೆಂಬರ್ 25ರಂದು ತೆರೆಗೆ ಬಂದಿದ್ದ ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. 'ಉಸ್ತಾದ್ ಭಗತ್ ಸಿಂಗ್' ಎಂಬ ಮತ್ತೊಂದು ಸಿನಿಮಾವನ್ನು ಪವನ್ ಒಪ್ಪಿಕೊಂಡಿದ್ದು ಅರ್ಧ ಚಿತ್ರೀಕರಣ ಮುಕ್ತಾಯವಾಗಿದೆ. ಆ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ತರುವ ಪ್ರಯತ್ನ ನಡೀತಿದೆ.

ಪವನ್ ಕಲ್ಯಾಣ್ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ನಿರ್ಮಾಪಕ ದಿಲ್ ರಾಜು ಘೋಷಿಸಿದ್ದಾರೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್ನಲ್ಲಿ ಬಂದಿದ್ದ 'ವಕೀಲ್ ಸಾಬ್' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. 'OG' ಚಿತ್ರದ ನೈಜಾಂ ವಿತರಣೆ ಹಕ್ಕುಗಳನ್ನು ದಿಲ್ ರಾಜು ಕೊಂಡುಕೊಂಡಿದ್ದರು. ಅಲ್ಲಿ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಪವನ್ ಕಲ್ಯಾಣ್ ಜೊತೆ ಮತ್ತೊಂದು ಸಿನಿಮಾ ಮಾತುಕತೆ ನಡೆಸಿದ್ದೀನಿ ಅವರು ಖಚಿತಪಡಿಸಬೇಕಿದೆ ಎಂದಿದ್ದಾರೆ.
ಅನಿಲ್ ರಾವಿಪುಡಿ ನಿರ್ದೇಶನದಲ್ಲಿ ಪವನ್ ಕಲ್ಯಾಣ್ ಹೀರೊ ಆಗಿ ದಿಲ್ ರಾಜು ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಒಂದೊಳ್ಳೆ ಸಂದೇಶದ ಜೊತೆಗೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಈ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. 'ವಕೀಲ್ ಸಾಬ್' ಬಳಿಕ ಪವನ್ ನಟಿಸಿದ್ದ ಯಾವುದೇ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಆದರೆ 'OG' ಬ್ಲಾಕ್ಬಸ್ಟರ್ ಹಿಟ್ ಆಗಿ ಸದ್ದು ಮಾಡ್ತಿದೆ.

ಸರಿಯಾಗಿ ಕಾಲ್ಶೀಟ್ ಕೊಡದೇ ಪವನ್ ಕಲ್ಯಾಣ್ ಸಿನಿಮಾಗಳಿಗೆ ಹಿನ್ನಡೆ ಆಗಿತ್ತು. 'ಹರಿಹರ ವೀರಮಲ್ಲು' ಸಿನಿಮಾ ಹೀನಾಯವಾಗಿ ಸೋತಿತ್ತು. ಆ ಸಿನಿಮಾ ನೋಡಿ ಪವನ್ ಮತ್ತೆ ಸಿನಿಮಾ ಮಾಡೋದು ಬೇಡ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಅಚ್ಚರಿ ಎನ್ನುವಂತೆ ಸುಜಿತ್ ನಿರ್ದೇಶನದ 'OG' ಸಿನಿಮಾ ಕಮಾಲ್ ಮಾಡಿದೆ. ಪವರ್ ಸ್ಟಾರ್ ಕ್ರೇಜ್ ಏನು ಎನ್ನುವುದನ್ನು ಸಾಬೀತು ಮಾಡಿದೆ. ಹಾಗಾಗಿ ಮತ್ತೆ ಪವನ್ ಸಿನಿಮಾ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ.
ಖ್ಯಾತ ನಿರ್ದೇಶಕ ದಿಲ್ ರಾಜು ಸಾಕಷ್ಟು ಸೋಲು ಗೆಲುವು ಕಂಡಿದ್ದಾರೆ. ರಾಮ್ಚರಣ್ ನಟನೆಯ 'ಗೇಮ್ ಚೇಂಜರ್' ಸಿನಿಮಾ ಮಾಡಿ ಕೈಸುಟ್ಟುಕೊಂಡಿದ್ದರು. ಭಾರೀ ನಷ್ಟ ಎದುರಿಸಿದ್ದರು. ಅದರ ಬೆನ್ನಲ್ಲೇ ಬಂದ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ದಾಖಲೆ ಬರೆದಿತ್ತು. ಹಾಗಾಗಿ ನಷ್ಟ ಸರಿದೂಗಿಸಿಕೊಂಡಿದ್ದರು.
ನಿರ್ಮಾಪಕರಾಗಿ ಮಾತ್ರವಲ್ಲದೇ ಚಿತ್ರ ವಿತರಕರಾಗಿ ಕೂಡ ದಿಲ್ ರಾಜು ಸಕ್ಸಸ್ ಕಂಡಿದ್ದಾರೆ. ಹಲವು ಸಿನಿಮಾಗಳನ್ನು ತಮ್ಮ ಬ್ಯಾನರ್ ಅಡಿಯಲ್ಲಿ ಪ್ರೇಕ್ಷಕರ ಮುಂದೆ ತಂದಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಆಂಧ್ರ ಡಿಸಿಎಂ ಆಗಿ ಪವನ್ ಕಲ್ಯಾಣ್ ಬ್ಯುಸಿಯಾಗಿದ್ದಾರೆ. ಮುಂದಿನ ಆಂಧ್ರ ವಿಧಾನಸಭೆ ಚುನಾವಣೆ ಕಣ್ಣಿಟ್ಟಿದ್ದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
ಒಟ್ಟಾರೆ ಪವನ್ ಕಲ್ಯಾಣ್ ಮತ್ತೆ ಸಿನಿಮಾ ಮಾಡುತ್ತಾರೆ ಎನ್ನುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ನಿರ್ದೇಶಕರು ಯಾರು? ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.


Click it and Unblock the Notifications











