'ವಿಕ್ರಮಾರ್ಕುಡು'-2 ಕಥೆ ಸಿದ್ಧ ಎಂದ ನಿರ್ಮಾಪಕ; ಸುದೀಪಿಯನ್ಸ್ಗೂ ಸಿಗುತ್ತಾ ಗುಡ್ ನ್ಯೂಸ್?
ರಾಜಮೌಳಿ ನಿರ್ದೇಶನದ ಸಿನಿಮಾಗಳಲ್ಲಿ 'ವಿಕ್ರಮಾರ್ಕುಡು' ಕೂಡ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ರವಿತೇಜಾ ಹೀರೋ ಆಗಿ ಡಬಲ್ ರೋಲ್ನಲ್ಲಿ ಅಬ್ಬರಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಮುಂದೆ ಈ ಸಿನಿಮಾ ಕನ್ನಡ, ತಮಿಳಿಗೂ ರೀಮೆಕ್ ಆಗಿತ್ತು. ಇದೀಗ ಸಿನಿಮಾ ಸೀಕ್ವೆಲ್ಗೆ ಬಗ್ಗೆ ಚರ್ಚೆ ಶುರುವಾಗಿದೆ.
ರವಿತೇಜಾ ಕರಿಯರ್ನಲ್ಲಿ 'ವಿಕ್ರಮಾರ್ಕುಡು' ರೀತಿಯ ಮತ್ತೊಂದು ಸಿನಿಮಾ ಬರಲಿಲ್ಲ. ಅಷ್ಟರಮಟ್ಟಿಗೆ ಈ ಸಿನಿಮಾ ಸದ್ದು ಮಾಡಿತ್ತು. 2006ರಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದರು. ಎಂ. ಎಂ ಕೀರವಾಣಿ ಸಂಗೀತದ ಆಲ್ಬಮ್ ಕೂಡ ಹಿಟ್ ಆಗಿತ್ತು. ಚಿತ್ರದಲ್ಲಿ ರವಿತೇಜಾ ಜೋಡಿಯಾಗಿ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಮಿಂಚಿದ್ದರು.

ಅವತ್ತಿನ ಕಾಲಕ್ಕೆ ಸುಮಾರು 11 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ 'ವಿಕ್ರಮಾರ್ಕುಡು' ಚಿತ್ರ 23 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿತ್ತು. 2006ರಲ್ಲಿ, ಇದು ಟಾಲಿವುಡ್ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತೆಲುಗು ಸಿನಿಮಾ ಎನಿಸಿಕೊಂಡಿತ್ತು. 'ವಿಕ್ರಮಾರ್ಕುಡು' ಚಿತ್ರದ ಸೀಕ್ವೆಲ್ ಬರಲಿದೆ ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿ ಬರುತ್ತಿವೆ. "ರಾಜಮೌಳಿ ನಿರ್ದೇಶನದಲ್ಲಿ 'ವಿಕ್ರಮಾರ್ಕುಡು -2' ಸಿನಿಮಾ ಮಾಡಬೇಕೆಂಬುದು ನನ್ನ ಆಸೆ" ಎಂದು ರವಿತೇಜ ಕೂಡ ಹೇಳಿಕೊಂಡಿದ್ದರು.
ತೆಲುಗು ನಿರ್ಮಾಪಕ ಕೆ. ಕೆ ರಾಧಾ ಮೋಹನ್ ಸದ್ಯ 'ವಿಕ್ರಮಾರ್ಕುಡು' ಸೀಕ್ವೆಲ್ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ವಿಜಯೇಂದ್ರ ಪ್ರಸಾದ್ ಚಿತ್ರದ ಕಥೆ ಸಿದ್ಧಪಡಿಸಿದ್ದಾರೆ. ಮೂರು ವರ್ಷಗಳ ಹಿಂದೆ ತಮ್ಮ ಬ್ಯಾನರ್ನಲ್ಲಿ 'ವಿಕ್ರಮಾರ್ಕುಡು- 2' ಎನ್ನುವ ಟೈಟಲ್ ಸಹ ರಿಜಿಸ್ಟರ್ ಆಗಿದೆ. 'ವಿಕ್ರಮಾರ್ಕುಡು- 2' ಚಿತ್ರದ ನಿರ್ದೇಶಕ ರಾಜಮೌಳಿ ಅಲ್ಲ. ಈ ಸೀಕ್ವೆಲ್ ಅನ್ನು ನಿರ್ದೇಶಖ ಸಂಪತ್ ಜೊತೆ ಮಾಡಲು ನಿರ್ಧರಿಸಿದ್ದೇವೆ. ಆದರೆ 'ವಿಕ್ರಮಾರ್ಕುಡು-2' ಚಿತ್ರದಲ್ಲಿ ನಟಿಸಲು ರವಿತೇಜಾ ಆಸಕ್ತಿ ತೋರಿಸುತ್ತಿಲ್ಲ" ಎಂದಿದ್ದಾರೆ.
"ನಾವು ರವಿತೇಜಾ ಅವರನ್ನು ಒಪ್ಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ರವಿತೇಜ ಒಪ್ಪಿದರೆ ಮಾತ್ರ ಸೀಕ್ವೆಲ್ ಶುರು ಮಾಡುತ್ತೇವೆ. ಸರಿಯಾದ ಕಾಂಬಿನೇಷನ್ ಸೆಟ್ ಆಗದ ಹೊರತು 'ವಿಕ್ರಮಾರ್ಕುಡು-2' ಸಿನಿಮಾ ಮಾಡಲ್ಲ ಎಂದಿದ್ದಾರೆ.

ರಾಜಮೌಳಿ ಸದ್ಯ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ಕಾಂಬಿನೇಷನ್ನಲ್ಲಿ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಅದು ಎಷ್ಟು ವರ್ಷ ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ಗೊತ್ತಿಲ್ಲ. ಬಳಿಕ ತಮ್ಮ ಕನಸಿನ 'ಮಹಾಭಾರತ' ಸಿನಿಮಾ ಕೈಗೆತ್ತಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಜಕ್ಕಣ್ಣ. 'RRR' ಸಿನಿಮಾ ಸೀಕ್ವೆಲ್ ಕೂಡ ಬರುತ್ತದೆ ಎನ್ನಲಾಗ್ತಿದ್ದು ಆ ಚಿತ್ರಕ್ಕೂ ಬೇರೆ ನಿರ್ದೇಶಕರು ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗುತ್ತಿದೆ.
ಅಂದಹಾಗೆ 2009ರಲ್ಲಿ ಕಿಚ್ಚ ಸುದೀಪ್ ಕನ್ನಡದಲ್ಲಿ 'ವಿಕ್ರಮಾರ್ಕುಡು' ಸಿನಿಮಾ ರೀಮೆಕ್ ಮಾಡಿದ್ದರು. ತಾವೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಟಿಸಿದ್ದರು. 'ವೀರ ಮದಕರಿ' ಟೈಟಲ್ನಲ್ಲಿ ಸಿನಿಮಾ ಮೂಡಿ ಬಂದಿತ್ತು. ಚಿತ್ರದಲ್ಲಿ ಎಸಿಪಿ ವೀರ ಮದಕರಿ ಐಪಿಎಸ್ ಹಾಗೂ ಮುತ್ತತ್ತಿ ಸತ್ಯರಾಜು ಹೀಗೆ ಡಬಲ್ ರೋಲ್ನಲ್ಲಿ ಕಳ್ಳ, ಪೊಲೀಸ್ ಆಗಿ ಪ್ರೇಕ್ಷಕರನ್ನು ರಂಜಿಸಿದ್ದರು.
'ವೀರ ಮದಕರಿ' ಚಿತ್ರದಲ್ಲಿ ಸುದೀಪ್ ಅಭಿನಯ ಅಭಿಮಾನಿಗಳಿಗೆ ಇಷ್ಟವಾಗಿತ್ತು. ತೆಲುಗಿನಲ್ಲಿ 'ವಿಕ್ರಮಾರ್ಕುಡು' ಸೀಕ್ವೆಲ್ ಬಂದರೆ ಕನ್ನಡದಲ್ಲೂ ರೀಮೆಕ್ ಆಗುವ ಸಾಧ್ಯತೆಯಿದೆ. ಅದೇ ನಿಜವಾದರೆ ಸುದೀಪಿಯನ್ಸ್ಗೆ ಹಬ್ಬವೇ ಸರಿ. ಆದರೆ ಇದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











