ಪ್ರವಾಹ ಸಂತ್ರಸ್ಥರ ನೆರವಿಗೆ ಧಾವಿಸಿದ ನಟರು: ಧಾರಾಳ ದೇಣಿಗೆ
ಸತತ ಮಳೆಯಿಂದಾಗಿ ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಂಧ್ರ ಪ್ರದೇಶದ ತಿರುಪತಿ, ನೆಲ್ಲೂರು, ಚಿತ್ತೂರು ಇನ್ನೂ ಕೆಲವು ಪ್ರದೇಶಗಳಲ್ಲಿಯಂತೂ ಪ್ರಕೃತಿ ವಿಕೋಪದಿಂದಾಗಿ ಸಾವಿರಾರು ಮಂದಿ ನೆಲೆ ಕಳೆದುಕೊಂಡಿದ್ದಾರೆ.
ಸಾವಿರಾರು ಮಂದಿ ಮನೆ, ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಮೂಲಭೂತ ಸೌಕರ್ಯಗಳು ಅಸ್ಥವ್ಯವಸ್ಥವಾಗಿವೆ. ರಸ್ತೆಗಳು ಕುಸಿದು ಹೋಗಿವೆ, ಸೇತುವೆಗಳು ಒಡೆದುಹೋಗಿವೆ, ಕಂಬಗಳು ಬಿದ್ದು ಹೋಗಿವೆ. ಜನರ ಜೀವನ ಅಸ್ಥವ್ಯಸ್ಥವಾಗಿದೆ. ಪ್ರವಾಹದಿಂದ ನಷ್ಟ ಹೊಂದಿರುವ ಜನರಿಗೆ ನೆರವು ನೀಡಲು ಸರ್ಕಾರವು ಪ್ರಯತ್ನಿಸುತ್ತಿದೆ. ಈ ನಡುವೆ ಕೆಲವು ಸ್ಟಾರ್ ನಟರು ಜನರ ಸಹಾಯಕ್ಕೆ ಧಾವಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಸರ್ಕಾರ ಹಾಗೂ ಚಿತ್ರರಂಗದ ನಡುವೆ ಚಿತ್ರಮಂದಿರ ಟಿಕೆಟ್ ದರ ಹೆಚ್ಚಳ ಕುರಿತಂತೆ ತೆರೆಮರೆ ಯುದ್ಧ ಚಾಲ್ತಿಯಲ್ಲಿದೆ. ಹಾಗಿದ್ದರೂ ಸಹ ಕೆಲವು ಮುಖ್ಯ ನಟರು ಈ ಕಷ್ಟದ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ನಿಂತು, ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

25 ಲಕ್ಷ ರು. ದೇಣಿಗೆ ನೀಡಿದ ನಟರು
ಚಿತ್ರರಂಗದ ಹಿರಿಯ, ಮುಂದಾಳು ನಟ ಚಿರಂಜೀವಿ ಸೇರಿದಂತೆ, ಆಂಧ್ರದ ವಿಪಕ್ಷವಾದ ಟಿಡಿಪಿಗೆ ಆಪ್ತವಾಗಿರುವ ಜೂ ಎನ್ಟಿಆರ್, ಚಿರಂಜೀವಿ ಪುತ್ರ ರಾಮ್ ಚರಣ್ ತೇಜ, ಮಹೇಶ್ ಬಾಬು, ಅಲ್ಲು ಅರ್ಜುನ್ ಅವರುಗಳು ತಲಾ 25 ಲಕ್ಷ ರುಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಐದು ನಟರಿಂದಲೇ 1.25 ಕೋಟಿ ಹಣ ಪ್ರವಾಹ ಪೀಡಿತರ ನೆರವಿಗೆ ಸಲ್ಲಿಕೆಯಾಗಿದೆ.

ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ
ನಟರುಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ದೇಣೀಗೆ ನೀಡಿದ್ದಾರೆ. ತಾವು ದೇಣಿಗೆ ನೀಡುವ ಜೊತೆಗೆ ತಮ್ಮ ಅಭಿಮಾನಿಗಳು ಸಹ ದೇಣಿಗೆ ನೀಡಿರೆಂದು ಮನವಿ ಮಾಡಿದ್ದಾರೆ. ದೇಣಿಗೆ ನೀಡಿರುವ ಬಗ್ಗೆ ಈ ನಟರುಗಳು ಟ್ವೀಟ್ ಮಾಡಿದ್ದು, ಪ್ರವಾಹ ಸಂತ್ರಸ್ತರ ಪರವಾಗಿ ನಾವಿದ್ದೇವೆ ಎಂದಿದ್ದಾರೆ. ಹಾಗೂ ಇನ್ನಷ್ಟು ಮಂದಿ ಪ್ರವಾಹ ಪೀಡಿತರ ನೆರವಿಗೆ ಧಾವಿಸಬೇಕು ಎಂದಿದ್ದಾರೆ.

ತಿರುಪತಿ, ನೆಲ್ಲೂರು, ಚಿತ್ತೂರುಗಳಲ್ಲಿ ಪ್ರವಾಹ
ಈ ನಟರುಗಳು ಮಾತ್ರವೇ ಅಲ್ಲದೆ ಇನ್ನೂ ಕೆಲವು ಚಿತ್ರರಂಗದ ಗಣ್ಯರು ಪ್ರವಾಹ ಸಂತ್ರಸ್ತರಿಗೆ ನೆರವಾಗಿದ್ದಾರೆ. ಸಿನಿಮಾ ನಟರು ಮಾತ್ರವೇ ಅಲ್ಲದೆ ಇನ್ನೂ ಹಲವು ಕ್ಷೇತ್ರಗಳ ಗಣ್ಯರು ಪ್ರವಾಹ ಪೀಡಿತರ ನೆರವಿಗೆ ಧಾವಿಸಿದ್ದಾರೆ. ಸಾರ್ವಜನಿಕರು ಸಹ ಸರ್ಕಾರದ ನೆರವಿಗೆ ನಿಂತಿದ್ದಾರೆ. ತಿರುಪತಿ, ಚಿತ್ತೂರು, ನೆಲ್ಲೂರು ಭಾಗಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು ಹಲವು ಮನೆಗಳು ಧರೆಗುರುಳಿವೆ, ಹಲವು ಜೀವಗಳು ಬಲಿಯಾಗಿವೆ.

ಅನುಭವ ಬಿಚ್ಚಿಟ್ಟ ತಾರಾ
ಕೆಲವು ದಿನಗಳ ಹಿಂದಷ್ಟೆ ನಟಿ ತಾರಾ ತಮ್ಮ ಕುಟುಂಬದೊಟ್ಟಿಗೆ ತಿರುಪತಿಗೆ ತೆರಳಿದ್ದರು. ಮಳೆಯಿಂದಾಗಿ ಅಲ್ಲಿ ನಿರ್ಮಾಣವಾಗಿರುವ ಭೀಕರ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾಹಿತಿ ಹಂಚಿಕೊಂಡಿದ್ದರು. ತಾರಾ ಹಾಗೂ ಕುಟುಂಬದವರು ಹೋಗಿದ್ದ ಕಾರು ಮಳೆಯ ಕಾರಣಕ್ಕೆ ರಸ್ತೆಯ ಮೇಲೆ ತೇಲತೊಡಗಿತ್ತಂತೆ. ಜೀವ ಕೈಯಲ್ಲಿ ಹಿಡಿದು ಹಾಗೋ ಹೀಗೋ ಮಾಡಿ ನೀರು ಇಲ್ಲದ ಸ್ಥಳಕ್ಕೆ ಬಂದಿದ್ದಾರೆ. ನೀರು ಕಡಿಮೆ ಇದ್ದ ಆ ಜಾಗವು ಬೆಂಗಳೂರು ಹೈವೆ ಆಗಿತ್ತಾದ್ದರಿಂದ ಕೂಡಲೇ ಹೈವೇ ಹಿಡಿದು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.


Click it and Unblock the Notifications











