ಗೆಳೆಯನ ಕಿರುಕುಳ: ಕಿರುತೆರೆ ನಟಿ ಶ್ರಾವಣಿ ಆತ್ಮಹತ್ಯೆಗೆ ಶರಣು
ತೆಲುಗು ಕಿರುತೆರೆಯ ಖ್ಯಾತ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳವಾರ ಹೈದರಾಬಾದ್ ನ ತನ್ನ ನಿವಾಸದಲ್ಲಿ ಶ್ರಾವಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾತ್ ರೂಮ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶ್ರಾವಣಿ ಮೃತದೇಹ ನೋಡಿ ಕುಟುಂಬಸ್ಥರು ಆಘಾತಗೊಂಡಿದ್ದಾರೆ.
26 ವರ್ಷದ ನಟಿ ಶ್ರಾವಣಿ ಆಂಧ್ರಪ್ರದೇಶ ಪಶ್ಚಿಮ ಗೋದಾವರಿ ಜಿಲ್ಲೆಯ ಮೂಲದವರು. ಶ್ರಾವಣಿ ಬಣ್ಣದ ಲೋಕಕ್ಕೆ ಕಾಲಿಟ್ಟು 8 ವರ್ಷಗಳಾಗಿದೆ. ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ತೆಲುಗು ಕಿರುತೆರೆ ಪ್ರಿಯರ ಮನೆ ಮಾತಾಗಿದ್ದರು. ಶ್ರಾವಣಿ ಸಾವಿಗೆ ಗೆಳೆಯ ದೇವರಾಜು ರೆಡ್ಡಿಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮುಂದೆ ಓದಿ...

ಶ್ರಾವಣಿ ಕುಟುಂಬದವರು ಹೇಳಿದ್ದೇನು?
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಶ್ರಾವಣಿ ಸಹೋದರ, "ದೇವರಾಜ್ ಹಣಕ್ಕಾಗಿ ಒತ್ತಡ ಹೇರುತ್ತಿದ್ದರು. ಶ್ರಾವಣಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರಿಂದ ಅವಳು ಒತ್ತಡದಲ್ಲಿದ್ದಾಳೆಂದು ನನ್ನ ಸಹೋದರಿ ಹೇಳಿದ್ದಳು. ಅವಳು ಶೂಟಿಂಗ್ ಇದೆ ಎಂದು ಹೇಳಿದ್ದಳು. ಆಗಲೇ ಅವಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ" ಎಂದು ಹೇಳಿದ್ದಾರೆ.

ಟಿಕ್ ಟಾಕ್ ಮೂಲಕ ಪರಿಚಯವಾಗಿದ್ದ ದೇವರಾಜು ರೆಡ್ಡಿ
ಟಿಕ್ ಟಾಕ್ ಮೂಲಕ ದೇವರಾಜು ರೆಡ್ಡಿ ಅಲಿಯಾಸ್ ಸನ್ನಿ ಎಂಬಾತನ ಪರಿಚಯ ಮಾಡಿಕೊಂಡಿದ್ದ ಶ್ರಾವಣಿ ಕಿರುಕುಳದಿಂದಲೇ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಎಂಬ ಆರೋಪವಿದೆ. ಕಾಕಿನಾಡದ ಗೊಲ್ಲಪ್ರೊಲು ಮೂಲದ ದೇವರಾಜು ರೆಡ್ಡಿ ಕೆಲ ವರ್ಷಗಳಿಂದ ಶ್ರಾವಣಿ ಜೊತೆ ಗೆಳೆತನ ಬೆಳೆಸಿಕೊಂಡಿದ್ದ. ನನಗೆ ಯಾರೂ ಇಲ್ಲ ನಾನು ಅನಾಥ ಎಂದು ಹೇಳಿ ಆಕೆಯನ್ನು ಮರಳು ಮಾಡಿದ್ದ ಎಂದು ಹೇಳಲಾಗುತ್ತಿದೆ.

ಗೆಳೆಯ ದೇವರಾಜು ರೆಡ್ಡಿ ನಾಪತ್ತೆ
ಕಳೆದ ಕೆಲ ತಿಂಗಳುಗಳಿಂದ ಶ್ರಾವಣಿಗೆ ಕಿರುಕುಳ ನೀಡತೊಡಗಿದ್ದ. ಈ ಬಗ್ಗೆ ಯಾರಲ್ಲೂ ಆಕೆ ಹೇಳಿಕೊಂಡಿಲ್ಲ, ನೋವು ತಡೆದುಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗೆಳೆಯ ದೇವರಾಜು ರೆಡ್ಡಿ ನಾಪತ್ತೆಯಾಗಿದ್ದು, ಪೊಲೀಸರು ಹುಡುಕುತ್ತಿದ್ದಾರೆ.
Recommended Video

ಶ್ರಾವಣಿ ನಟಿಸಿರುವ ಧಾರಾವಾಹಿಗಳು
ಶ್ರಾವಣಿ ನಟಿಸಿರುವ ಧಾರಾವಾಹಿಗಳಲ್ಲಿ ಮನಸು ಮಮತಾ, ಮೌನರಾಗಂ ಎರಡು ಸೀರಿಯಲ್ ತುಂಬಾ ಪ್ರಸಿದ್ಧಿ ಪಡೆದಿದೆ. ಶ್ರಾವಣಿ ನಿಧನದ ಸುದ್ದಿ ತೆಲುಗು ಕಿರುತೆರೆ ಲೋಕಕ್ಕೆ ಆಘಾತವುಂಟು ಮಾಡಿದೆ. ಶ್ರಾವಣಿ ನಿಧನಕ್ಕೆ ಸ್ನೇಹಿತರು, ಟಿವಿ ಕಲಾವಿದರು ಸಂತಾಪ ಸೂಚಿಸಿದ್ದಾರೆ.


Click it and Unblock the Notifications











