ತೆಲುಗು ಚಿತ್ರರಂಗಕ್ಕೆ ಮತ್ತೊಂದು ಆಘಾತ: ಖ್ಯಾತ ನಟ ಕೈಕಾಲ ಸತ್ಯ ನಾರಾಯಣ ನಿಧನ
ಕೆಲ ದಿನಗಳಿಂದ ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಕಲಾವಿದರು ಬಾರದಲೋಕಕ್ಕೆ ಪಯಣ ಬೆಳೆಸುತ್ತಿದ್ದಾರೆ. ರೆಬಲ್ ಸ್ಟಾರ್ ಕೃಷ್ಣಂರಾಜು, ಸೂಪರ್ ಸ್ಟಾರ್ ಕೃಷ್ಣ ನಂತರ ಮತ್ತೊಬ್ಬ ಖ್ಯಾತ ನಟ ಕೈಕಾಲ ಸತ್ಯನಾರಾಯಣ(87) ಕಣ್ಮುಚ್ಚಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ಇಂದು ಬೆಳಗ್ಗೆ 4.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
770ಕ್ಕೂ ಅಧಿಕ ತೆಲುಗು ಸಿನಿಮಾಗಳಲ್ಲಿ ಸತ್ಯ ನಾರಾಯಣ ಬಣ್ಣ ಹಚ್ಚಿ ನಟಿಸಿದ್ದರು. ಖಳನಟನಾಗಿ ಪೋಷಕ ನಟರಾಗಿ ಪ್ರೇಕ್ಷಕರನ್ನು ರಂಜಿಸಿದ್ದರು. ಸತ್ಯನಾರಾಯಣ ಅಗಲಿಕೆಗೆ ತೆಲುಗು ಚಿತ್ರರಂಗ, ರಾಜಕೀಯರಂಗದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ನಾಳೆ(ಡಿಸೆಂಬರ್ 24) ಹೈದರಾಬಾದ್ನಲ್ಲಿರುವ ಮಹಾಪ್ರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. 60 ವರ್ಷಗಳ ಸಿನಿಕರಿಯರ್ನಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ಸತ್ಯನಾರಾಯಣ ನಟಿಸಿದ್ದು, ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ಸಿನಿಮಾಗಳಲ್ಲಿ ಮಿಂಚಿದ್ದರು.

1935ರಲ್ಲಿ ಆಂಧ್ರದ ಕೃಷ್ಣ ಜಿಲ್ಲೆಯ ಕವುತರಂ ಮಂಡಲದ ಗುಡ್ಲವಲ್ಲೆರು ಚಿತ್ರದಲ್ಲಿ ಸತ್ಯ ನಾರಾಯಣ ಜನಿಸಿದರು. 1959ರಲ್ಲಿ 'ಸಿಪಾಯಿ ಕೂತುರು' ಚಿತ್ರದಲ್ಲಿ ಮೊದಲ ಬಾರಿಗೆ ಸತ್ಯನಾರಾಯಣ ಬಣ್ಣ ಹಚ್ಚಿದ್ದರು. 3 ವರ್ಷಗಳ ಹಿಂದೆ ಮಹೇಶ್ ಬಾಬು ನಟನೆಯ 'ಮಹರ್ಷಿ' ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. ಹೀರೊ ಆಗಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ವಿಲನ್ ಆಗಿ ಕಾಮೆಡಿಯನ್ ಹೀಗೆ ನಾನಾ ಬಗೆಯ ಪಾತ್ರಗಳಲ್ಲಿ ಸತ್ಯ ನಾರಾಯಣ ನಟಿಸಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ನಟನೆಯ ಜೊತೆಗೆ ಸಿನಿಮಾ ನಿರ್ದೇಶನ, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದರು. ರಾಜಕೀಯರಂಗದಲ್ಲೂ ಗುರ್ತಿಸಿಕೊಂಡಿದ್ದರು.

ಸತ್ಯ ನಾರಾಯಣ ಅವರ ವೈವಿಧ್ಯಮಯ ಪಾತ್ರ ಪೋಷಣೆಗೆ 'ನವರಸ ನಟನಾ ಸಾರ್ವಭೌಮ' ಎಂಬ ಬಿರುದು ಸಿಕ್ಕಿತ್ತು. ತೆಲುಗು ಚಿತ್ರರಂಗದಲ್ಲಿ ಎಸ್. ವಿ ರಂಗಾರಾವು ನಂತರ ಆ ಮಟ್ಟಿಗೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ್ದವರು ಇವರೇ ಎನ್ನಲಾಗುತ್ತದೆ. ತೆಲುಗಿನ ಬಹುತೇಕ ಎಲ್ಲಾ ಸೂಪರ್ ಸ್ಟಾರ್ಗಳ ಸಿನಿಮಾಗಳಲ್ಲಿ ಸತ್ಯನಾರಾಯಣ ಮಿಂಚಿದ್ದರು.


Click it and Unblock the Notifications











