Fact check: ಪ್ರಭುದೇವ ತಂದೆ ಸುಂದರಂ ಮಾಸ್ಟರ್ ಇನ್ನಿಲ್ಲ, ಛೇ ಇದೆಂತಾ ಸುದ್ದಿ?
ಕಳೆದ ಎರಡು ದಿನಗಳಿಂದ ಸಿನಿಮಾರಂಗದಲ್ಲಿ ಸುದ್ದಿ ಒಂದು ಸಂಚಲನವೇ ಸೃಷ್ಟಿ ಮಾಡಿದೆ. ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ತಂದೆ ಸುಂದರಂ ಮಾಸ್ಟರ್ ಇನ್ನಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ಚಿತ್ರರಂಗಕ್ಕೆ ಮತ್ತು ಅಭಿಮಾನಿ ಬಳಗಕ್ಕೆ ಶಾಕ್ ಕೊಟ್ಟಿದೆ. ಹಾಗಾಗಿ ಎಲ್ಲರೂ ಮಾಸ್ಟರ್ಗೆ ಏನಾಯ್ತು ಎನ್ನುವ ಬಗ್ಗೆ ಹೆಚ್ಚಾಗಿ ತಲೆ ಕಡೆಸಿಕೊಳ್ಳುತ್ತಾ ಇದ್ದಾರೆ.
ನೂರಾರು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಸುಂದರಂ ಮಾಸ್ಟರ್ ಕೆಲಸ ಮಾಡಿದ್ದಾರೆ. ಬಳಿಕ ಹಲವು ಚಿತ್ರಗಳಿಗೆ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. 1200 ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಬಹುತೇಕ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ಕೆಲಸ ಮಾಡಿದ್ದಾರೆ. ಅದೆಷ್ಟೋ ಸ್ಟಾರ್ ಹೀರೋಗಳನ್ನು ಡ್ಯಾನ್ಸ್ ಕಿಂಗ್ಗಳನ್ನಾಗಿ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಆದರೆ ಇದ್ದಕ್ಕಿದ್ದ ಹಾಗೆ ಸುಂದರಂ ಮಾಸ್ಟರ್ ಇನ್ನಿಲ್ಲ. ಅವರು ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಕೆಲವರಂತೂ ಅವರ ಫೋಟೊ ಹಾಕಿ ಓಂ ಶಾಂತಿ, ರಿಪ್ ಅಂತ ಬರೆದುಕೊಂಡು ಬಿಟ್ಟಿದ್ದಾರೆ. ಅಷ್ಟಕ್ಕೂ ಈ ಸುದ್ದಿಯ ಅಸಲಿ ಕಹಾನಿ ಏನು ಎನ್ನುವುದನ್ನು ಮುಂದೆ ಓದಿ.

ಪ್ರಭುದೇವ ತಂದೆ ಸುಂದರಂ ಮಾಸ್ಟರ್ ಹೇಗಿದ್ದಾರೆ?
ಪ್ರಭುದೇವ ತಂದೆ ಸುಂದರಂ ಮಾಸ್ಟರ್ ಚೆನ್ನಾಗಿ ಇದ್ದಾರೆ. ಅವರು ಆರಾಮಾಗಿ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರು ನಿಧನ ಹೊಂದಿದ್ದಾರೆ ಎನ್ನುವುದು ಅಪ್ಪಟ ಸುಳ್ಳು ಸುದ್ದಿ. ಈ ಸುದ್ದಿಯನ್ನು ಎಲ್ಲಾದರು ಕಂಡು ನೀವೂ ಗಾಬರಿಗೊಂಡಿದ್ದರೆ, ಇದು ನಿಜ ಎಂದು ನಂಬುವ ಮುನ್ನ ಈ ಸುದ್ದಿಯನ್ನು ಓದಿ. ಇದೇ ಹೆಸರಿನ ಮತ್ತೊಬ್ಬ ವ್ಯಕ್ತಿ ನಿಧನ ಹೊಂದಿರುವುದರಿಂದ್ದ ಈ ಗೊಂದಲಗಳು ಸೃಷ್ಟಿ ಆಗಿವೆ.

ಸುಂದರಂ ಮಾಸ್ಟರ್ ಹೆಸರಿನ ಮತ್ತೊಬ್ಬ ವ್ಯಕ್ತಿ ಯಾರು?
ಸುಂದರಂ ಎನ್ನುವ ಹೆಸರಿನ ವ್ಯಕ್ತಿ ನಿಧನ ಹೊಂದಿರುವುದು ನಿಜವೇ. ಅವರು ತೆಲುಗು ರಂಗಭೂಮಿಯ ಸುಂದರಂ ಮಾಸ್ಟರ್. ಇವರು ಕೂಡ ಹಲವು ವರ್ಷಗಳ ಕಾಲ ರಂಗ ಭೂಮಿಯಲ್ಲಿ ಕಲಾ ಸೇವೆಯನ್ನು ಮಾಡಿದ್ದಾರೆ. ಇದೀಗ ತಮ್ಮ 71ನೇ ವಯಸ್ಸಿಗೆ ಹೃದಯಾಘಾತದಿಂದ ಮಾರ್ಚ್ 22ರಂದು ಮುಂಜಾನೆ ನಿಧನ ಹೊಂದಿದ್ದಾರೆ. ಆದರೆ ಇವರು ಪ್ರಭುದೇವ ಅವರ ತಂದೆ ನೃತ್ಯ ನಿರ್ದೇಶಕ ಸುಂದರಂ ಮಾಸ್ಟರ್ ಅಲ್ಲ. ಹೆಸರು ಒಂದೇ ಇದ್ದ ಕಾರಣ ಅವರ ಜಾಗದಲ್ಲಿ ಪ್ರಭುದೇವ ತಂದೆಯ ಫೋಟೊಗಳು ಹರಿದಾಡುತ್ತಿವೆ.

ಸುಳ್ಳು ಸುದ್ದಿ ಹಬ್ಬಿದ್ದು ಹೇಗೆ!
ತೆಲುಗು ರಂಗಭೂಮಿಯ ಕಲಾವಿದ ಸುಂದರಂ ಮಾಸ್ಟರ್ ನಿಧನದ ಬಗ್ಗೆ ಸುದ್ದಿ ಹಬ್ಬುತ್ತಲೆ, ಕೆಲವರು ಅದು ಪ್ರಭುದೇವ ಅವರ ತಂದೆ ಎಂದು ಭಾವಿಸಿ, ಓಂ ಶಾಂತಿ ಎಂದು ಬರೆದು ಕೊಂಡಿದ್ದರು. ಹಾಗಾಗಿ ನಿಧನ ಹೊಂದಿರುವುದು ನೃತ್ಯ ನಿರ್ದೇಶಕ ಸುಂದರಂ ಮಾಸ್ಟರ್ ಎನ್ನುವ ಸುದ್ದಿ ವೈರಲ್ ಆಯ್ತು. ಅದಕ್ಕೆಲ್ಲಾ ಈಗ ತೆರೆ ಬಿದ್ದಿದ್ದು, ನೃತ್ಯ ನಿರ್ದೇಶಕ ಸುಂದರಂ ಮಾಸ್ಟರ್ ಆರಾಮಾಗಿ ಇದ್ದಾರೆ.

ಮೈಸೂರಿನಲ್ಲಿದ್ದಾರೆ ಸುಂದರಂ ಮಾಸ್ಟರ್!
ನೃತ್ಯ ನಿರ್ದೇಶಕ ಸುಂದರಂ ಮಾಸ್ಟರ್ ದಶಕಗಳ ಕಾಲ ಚಿತ್ರರಂಗದಲ್ಲಿ ಇದ್ದು ಸಾಧನೆ ಮಾಡಿ ಈಗ ನಿವೃತ್ತಿ ಹೊಂದಿದ್ದಾರೆ. ಭಾರತೀಯ ಎಲ್ಲಾ ಚಿತ್ರರಂಗಗಳಲ್ಲೂ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಚಿರಂಜೀವಿ, ರಜನಿಕಾಂತ್ ಅಂತಹ ಮೇರು ನಟರಿಗೆ ನೃತ್ಯ ಕಲಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಈಗ ಎಲ್ಲವನ್ನೂ ಬಿಟ್ಟು ಮೈಸೂರಿನ ತೋಟದ ಮನೆಯಲ್ಲಿ, ಮಡದಿ ಜೊತೆಗೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ.


Click it and Unblock the Notifications











