"ದೇಶದಲ್ಲಿ ಈಗ ಇರುವ ಕೋಮು ಉದ್ವಿಗ್ನತೆ ಸಾಕು"; ಪವನ್ ಕಿವಿ ಹಿಂಡಿದ ಪ್ರಕಾಶ್ ರಾಜ್
ತಿರುಪತಿ ಲಡ್ಡು ಪ್ರಸಾದ ವಿವಾದದ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡ್ತಿದೆ. ಜಗನ್ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಅದಕ್ಕೆ ಲ್ಯಾಬ್ ವರದಿಯ ಸಾಕ್ಷ್ಯವನ್ನು ಮುಂದಿಟ್ಟಿದ್ದಾರೆ.
ದೇವರ ಶ್ರೇಷ್ಠ ಪ್ರಸಾದ ಎಂದು ಭಾವಿಸಿದ್ದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಇದೆ ಎನ್ನುವ ವಿಚಾರ ಭಕ್ತರು ಆಕ್ರೋಶಕ್ಕೆ ಕಾರಣವಾಗಿದೆ. ಗೊತ್ತಿದ್ದು ಗೊತ್ತಿದ್ದು ಸರ್ಕಾರ ಇದಕ್ಕೆ ಹೇಗೆ ಅನುಮತಿ ಕೊಟ್ಟಿತ್ತು ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಭಾವನೆಗಳಿಗೆ ಧಕ್ಕೆ ತಂದಿರಉವ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ.

ದಶಕಗಳಿಂದ ಹಸುವಿನ ತುಪ್ಪ ಬಳಸಿ ತಿರುಪತಿ ಲಡ್ಡು ತಯಾರಿಸಲಾಗುತ್ತಿದೆ. ಕೆಲ ವರ್ಷಗಳ ಕಾಲ ಕರ್ನಾಟಕದ ನಂದಿನಿ ತುಪ್ಪವನ್ನು ಇದಕ್ಕೆ ಬಳಸಲಾಗುತ್ತಿದೆ. ಆದರೆ ಇತ್ತೀಚೆಗೆ ಅದನ್ನು ಕೈಬಿಡಲಾಗಿತ್ತು. ಬಳಿಕ ಬೇರೆ ಬ್ರ್ಯಾಂಡ್ ತುಪ್ಪ ಖರೀದಿಸಿ ಲಡ್ಡು ತಯಾರಿಸುತ್ತಿದ್ದರು. ಇದೇ ತುಪ್ಪದಲ್ಲಿ ದನದ ಕೊಬ್ಬು ಸೇರಿದಂತೆ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬೆರೆಸಲಾಗುತ್ತಿತ್ತು ಎನ್ನುವ ಆರೋಪ ಕೇಳಿಬಂದಿದೆ.
ಸದ್ಯ ತಿರುಪತಿ ಲಡ್ಡು ಪ್ರಸಾದ ವಿವಾದ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ತಪ್ಪಿನ ಬಗ್ಗೆ ತನಿಖೆ ನಡೆಸಿ ಶಿಕ್ಷೆ ಕೊಡುವುದು ಬಿಟ್ಟು ಚಂದ್ರಬಾಬು ನಾಯ್ಡು ಸರ್ಕಾರ ದಿನಕ್ಕೊಂದು ಹೇಳಿಕೆ ಕೊಡುತ್ತಾ ಜನರನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಆಂಧ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ನಟ ಪವನ್ ಕಲ್ಯಾಣ್ ಸೇವೆ ಸಲ್ಲಿಸುತ್ತಿದ್ದಾರೆ. ಪವನ್ ಕಲ್ಯಾಣ್ ಟ್ವೀಟ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ತಿರುಗೇಟು ನೀಡಿದ್ದಾರೆ.
"ಆತ್ಮೀಯ ಪವನ್ ಕಲ್ಯಾಣ್. ನೀವು ಉಪಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿ ಈ ಘಟನೆ ನಡೆದಿದೆ. ದಯವಿಟ್ಟು ಈ ಘಟನೆಯನ್ನು ತನಿಖೆ ಮಾಡಿ. ತಪ್ಪಿತಸ್ಥರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ದೇಶದಲ್ಲಿ ಯಾಕೆ ಅಶಾಂತಿ ಹಬ್ಬಿಸುತ್ತಿದ್ದೀರಾ? ಈ ವಿಚಾರವನ್ನು ದೇಶಾದ್ಯಂತ ಏಕೆ ಹೈಲೈಟ್ ಮಾಡಲಾಗುತ್ತಿದೆ? ನಮ್ಮ ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮು ಉದ್ವಿಗ್ನತೆ ಇದೆ. ಕೇಂದ್ರದ ನಿಮ್ಮ ಸ್ನೇಹಿತರಿಗೆ ಧನ್ಯವಾದಗಳು" ಎಂದು ಪ್ರಕಾಶ್ ರಾಜ್ ಕೌಂಟರ್ ಕೊಟ್ಟಿದ್ದಾರೆ.
ಇದಕ್ಕೂ ಮುನ್ ಟ್ವೀಟ್ ಮಾಡಿದ್ದ ಪವನ್ ಕಲ್ಯಾಣ್, "ತಿರುಪತಿ ತಿಮ್ಮಪ್ಪನ ಪ್ರಸಾದದಲ್ಲಿ ಅವರಲ್ಲಿ ಪ್ರಾಣಿಗಳ ಕೊಬ್ಬು (ಮೀನಿನ ಎಣ್ಣೆ, ಹಂದಿ ಕೊಬ್ಬು, ಎತ್ತಿನ ಕೊಬ್ಬು) ಇರುವುದು ಪತ್ತೆಯಾಗಿದೆ. ಈ ವಿಚಾರದಲ್ಲಿ ನಾವೆಲ್ಲರೂ ತೀವ್ರ ಅಸಮಾಧಾನಗೊಂಡಿದ್ದೇವೆ. ಈ ಕುರಿತು ಹಲವು ಪ್ರಶ್ನೆಗಳಿಗೆ ವೈಸಿಪಿ ಸರಕಾರ ಸ್ಥಾಪಿಸಿರುವ ಟಿಟಿಡಿ ಮಂಡಳಿಯೇ ಉತ್ತರ ನೀಡಬೇಕಿದೆ. ಈ ಬಗ್ಗೆ ಅಗತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಾಗಿದೆ. ಆದರೆ, ಇದು ದೇವಾಲಯಗಳ ಅಪವಿತ್ರತೆ, ಅದರ ಭೂಮಿ ಸಮಸ್ಯೆಗಳು ಮತ್ತು ಇತರ ಧಾರ್ವಿುಕ ಆಚರಣೆಗಳ ಸುತ್ತಲಿನ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದೆ" ಎಂದು ಬರೆದುಕೊಂಡಿದ್ದರು.
"ಇಡೀ ಭಾರತದಲ್ಲಿರುವ ದೇವಾಲಯಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಲು ರಾಷ್ಟ್ರೀಯ ಮಟ್ಟದಲ್ಲಿ 'ಸನಾತನ ಧರ್ಮ ರಕ್ಷಣಾ ಮಂಡಳಿ'ಯನ್ನು ಸ್ಥಾಪಿಸುವ ಸಮಯ ಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ನೀತಿ ನಿರೂಪಕರು, ಧಾರ್ಮಿಕ ಮುಖ್ಯಸ್ಥರು, ನ್ಯಾಯಾಂಗ, ನಾಗರಿಕರು, ಮಾಧ್ಯಮಗಳು ಮತ್ತು ಅವರವರ ಕ್ಷೇತ್ರಗಳಲ್ಲಿ ಚರ್ಚೆ ನಡೆಯಬೇಕು. 'ಸನಾತನ ಧರ್ಮ'ವನ್ನು ಯಾವುದೇ ರೂಪದಲ್ಲಿ ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಪವನ್ ಟ್ವೀಟ್ ಮಾಡಿದ್ದರು.


Click it and Unblock the Notifications











