ಯಾವ್ದು ನಿಜ?, ಎಪಿ ಡಿಸಿಎಂ ಪವನ್ ಕಲ್ಯಾಣ್ಗೆ ಮತ್ತೆ ಪ್ರಕಾಶ್ ರಾಜ್ ಟಾಂಗ್?
ತಿರುಪತಿ ಲಡ್ಡು ಪ್ರಸಾದ ವಿವಾದದ ಸಂಬಂಧ ನಟ ಪ್ರಕಾಶ್ ರಾಜ್ ಹಾಗೂ ಎಪಿ ಡಿಸಿಎಂ ಪವನ್ ಕಲ್ಯಾಣ್ ನಡುವಿನ ವಾಕ್ಸಮರ ಮುಂದುವರೆದಿದೆ. ಇತ್ತೀಚೆಗೆ ಇಬ್ಬರ ನಡುವೆ ಈ ಬಗ್ಗೆ ಟ್ವೀಟ್ ವಾರ್ ನಡೆದಿತ್ತು. ಬಳಿಕ ಪ್ರಕಾಶ್ ರಾಜ್ ಹೇಳಿಕೆ ಬಗ್ಗೆ ಬಹಿರಂಗವಾಗಿಯೇ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದರು.
ಆಂಧ್ರದ ಮಾಜಿ ಸಿಎಂ ಜಗನ್ ಅಧಿಕಾರವಧಿಯಲ್ಲಿ ತಿರುಪತಿಯ ಲಡ್ಡೂ ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದರು. ಆಂಧ್ರ ಹಾಲಿ ಸಿಎಂ ಚಂದ್ರಬಾಬು ನಾಯ್ಡು ಸ್ವತಃ ಇಂತಹ ಆರೋಪ ಮಾಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಪವನ್ ಕಲ್ಯಾಣ್ ಡಿಸಿಎಂ ಆಗಿದ್ದಾರೆ. ಜಗನ್ ಸರ್ಕಾರದ ವಿರುದ್ಧ ಪವನ್ ಮೊದಲಿನಿಂದಲೂ ಸಾಕಷ್ಟು ಆರೋಪ ಮಾಡುತ್ತಾ ಬಂದಿದ್ದರು. ಇದೀಗ ಈ ಲಡ್ಡೂ ವಿವಾದದಲ್ಲೂ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಡ್ಡೂ ಪ್ರಸಾದ ವಿವಾದ ಸಂಬಂಧ ಇತ್ತೀಚೆಗೆ ಡಿಸಿಎಂ ಪವನ್ ಕಲ್ಯಾಣ್ ಟ್ವೀಟ್ ಮಾಡಿ ಅಸಮಾಧಾ ವ್ಯಕ್ತಪಡಿಸಿದ್ದರು. "ಇದು ದೇವಾಲಯಗಳ ಅಪವಿತ್ರತೆ, ಧಾರ್ವಿುಕ ಆಚರಣೆಗಳ ಸುತ್ತಲಿನ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ" ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಕಾಶ್ ರಾಜ್ ತಪ್ಪಿತಸ್ಥರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ದೇಶದಲ್ಲಿ ಯಾಕೆ ಅಶಾಂತಿ ಹಬ್ಬಿಸುತ್ತಿದ್ದೀರಾ? ಸದ್ಯ ಇರುವ ಕೋಮು ಉದ್ವಿಗ್ನತೆ ಸಾಕು" ಎಂದಿದ್ದರು.
ಟ್ವೀಟ್ ವಾರ್ ಬಳಿಕ ಪವನ್ ಕಲ್ಯಾಣ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ಪ್ರಕಾಶ್ ರಾಜ್ ಟ್ವೀಟ್ ಬಗ್ಗೆ ಪ್ರಸ್ತಾಪಿಸಿದ್ದರು. "ಪ್ರಕಾಶ್ ರಾಜ್ ಬಗ್ಗೆ ಗೌರವ ಇದೆ. ಸೂಕ್ಷ್ಮ ವಿಚಾರಗಳ ಬಗ್ಗೆ ತಿಳಿದುಕೊಂಡು ಮಾತನಾಡಿ ಎಂದಿದ್ದರು. ಪ್ರಕಾಶ್ ರಾಜ್ ಮಾತ್ರವಲ್ಲ ಎಲ್ಲರಿಗೂ ಹೇಳ್ತಿದ್ದೀನಿ. ವಿಮರ್ಶೆ ಮಾಡುವ ಮುನ್ನ ಯೋಚಿಸಿ, ಸನಾತನ ಧರ್ಮದದ ಬಗ್ಗೆ ಇಷ್ಟಬಂದಂತೆ ಮಾತನಾಡಬೇಡಿ" ಎಂದು ಪವನ್ ಎಚ್ಚರಿಕೆ ಕೊಟ್ಟಿದ್ದರು.
ಪವನ್ ಹೇಳಿಕೆ ಬಗ್ಗೆಯೂ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದರು. ಸದ್ಯ ವಿದೇಶದಲ್ಲಿ ಇದ್ದೀನಿ. ಭಾರತಕ್ಕೆ ಬಂದ ಮೇಲೆ ಪ್ರತಿಕ್ರಿಯಿಸುತ್ತೇನೆ. ಮತ್ತೊಮ್ಮೆ ನನ್ನ ಟ್ವೀಟ್ ಓದಿ ಅರ್ಥ ಮಾಡ್ಕೊಳಿ ಎಂದಿದ್ದರು. ಇನ್ನು ಕಾರ್ಯಕ್ರಮವೊಂದರಲ್ಲಿ ತಮಿಳು ನಟ ಕಾರ್ತಿ ಕೂಡ ಲಡ್ಡು ವಿವಾದದ ಬಗ್ಗೆ ವ್ಯಂಗ್ಯ ಮಾಡಲು ಹೋಗಿ ಎಡವಟ್ಟು ಮಾಡಿದ್ದರು. ಪವನ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಕಾರ್ತಿ ಕ್ಷಮೆ ಯಾಚಿಸಿ ವಿವಾದಕ್ಕೆ ತೆರೆ ಎಳೆದಿದ್ದರು.
ಪವನ್ ಹಾಗೂ ಕಾರ್ತಿ ತಿಕ್ಕಾಟದ ಬಗ್ಗೆ ಪ್ರಕಾಶ್ ರಾಜ್ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದರು. "ಮಾಡದ ತಪ್ಪಿಗೆ ಸ್ವಾರಿ ಕ್ಷಮೆ ಕೇಳಿಸಿಕೊಳ್ಳುವುದರಲ್ಲಿ ಏನು ಆನಂದ ಇದೆಯೋ, ಜಸ್ಟ್ ಆಸ್ಕಿಂಗ್" ಎಂದು ಟ್ವೀಟ್ ಮಾಡಿ ಪವನ್ ಕಲ್ಯಾಣ್ನ ಮೂದಲಿಸಿದ್ದರು. ಇದೀಗ ಮತ್ತೊಂದು ಟ್ವೀಟ್ ಮಾಡಿ ಪರೋಕ್ಷವಾಗಿ ಪವನ್ಗೆ ತಿವಿದಿದ್ದಾರೆ.
"ಗೆಲ್ಲುವ ಮುಂಚೆ ಒಂದು ಅವತಾರ.. ಗೆದ್ದ ಬಳಿಕ ಇನ್ನೊಂದು ಅವತಾರ.. ಏನಿದು ಅವತಾರ.. ಯಾಕೆ ನಮಗೆ ಈ ಅಯೋಮಯ.. ಯಾವುದು ನಿಜ? ಜಸ್ಟ್ ಆಸ್ಕಿಂಗ್" ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಚುನವಾಣೆಯಲ್ಲಿ ಗೆಲ್ಲುವ ಮುನ್ನ ಪವನ್ ನಡೆ-ನುಡಿಗೂ ಈಗ ನಡೆದುಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ ಎಂದು ಬಹುಭಾಷಾ ನಟ ವ್ಯಂಗ್ಯವಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಪ್ರಕಾಶ್ ರಾಜ್ ತಮ್ಮ ಟ್ವೀಟ್ನಲ್ಲಿ ಯಾರ ಹೆಸರನ್ನು ಕೂಡ ಪ್ರಸ್ತಾಪಿಸಿಲ್ಲ. ಇದಕ್ಕೆ ಎಪಿ ಡಿಸಿಎಂ ಪ್ರತಿಕ್ರಿಯಿಸುತ್ತಾರಾ ಕಾದು ನೋಡಬೇಕಿದೆ.


Click it and Unblock the Notifications











