ಹಾಸ್ಯನಟ ಅಂದ್ರೆ ಅಸಡ್ಡೆ.. ನನಗೆ ನಾಯಕಿ ಆಗಲು ಸ್ವೀಟಿ, ತ್ರಿಶಾ ಒಪ್ಪಲಿಲ್ಲ ಎಂದ ಕಾಮೆಡಿಯನ್
ಹಾಸ್ಯ ನಟರು ನಾಯಕ ನಟರಾಗಿ ಅದೃಷ್ಟ ಪರೀಕ್ಷೆ ನಡೆಸುವ ಪ್ರಯತ್ನ ದಶಕಗಳಿಂದ ನಡೆದು ಬರ್ತಿದೆ. ಈ ಪ್ರಯತ್ನದಲ್ಲಿ ಕೆಲವರು ಗೆದ್ದಿದ್ದರೆ ಮತ್ತೆ ಕೆಲವರು ಸೋತಿದ್ದಾರೆ. ಕನ್ನಡದಲ್ಲಿ ಶರಣ್, ಕೋಮಲ್, ಚಿಕ್ಕಣ್ಣ ಹೀಗೆ ಹಲವರು ಹಲವು ಸಿನಿಮಾಗಳಲ್ಲಿ ಹಾಸ್ಯ ಕಲಾವಿದರಾಗಿ ನಟಿಸಿ ನಂತರ ಹೀರೊ ಆಗಿದ್ದಾರೆ.
ಹೀಗೆ ಹಾಸ್ಯ ನಟರು ಹೀರೊ ಆಗುವುದು ಅಷ್ಟು ಸುಲಭದ ಕೆಲಸ ಅಲ್ಲ. ಈ ರೀತಿ ಸಾಹಸ ಮಾಡಲು ಹಲವು ಬಾರಿ ಯೋಚಿಸಬೇಕಾಗುತ್ತದೆ. ಹಾಸ್ಯ ನಟರಾಗಿ ಒಂದೆರಡು ಸನ್ನಿವೇಶಗಳಲ್ಲಿ ನಗಿಸುವವರು ಹೀರೋ ಆಗಿ ಇಡೀ ಸಿನಿಮಾ ತಮ್ಮ ಹೆಗಲ ಮೇಲೆ ಹೊತ್ತು ಸಾಗುವುದು ಕಷ್ಟವೇ ಸರಿ. ಆದರೆ ಒಮ್ಮೆ ಹೀರೊ ಆಗಿಬಿಟ್ಟರೆ ಮತ್ತೆ ಹಾಸ್ಯ ಕಲಾವಿದರಾಗಿ ಅವಕಾಶ ಸಿಗುತ್ತಾ? ಇಲ್ವಾ? ಮೊದಲಿಗೆ ಹೀರೊ ಆಗಿ ಗೆಲ್ತೀವಾ? ಎನ್ನುವದೇ ದೊಡ್ಡ ಪ್ರಶ್ನೆ ಆಗುತ್ತದೆ.

ಹಾಸ್ಯ ಕಲಾವಿದರು ಹೀಗೆ ನಾಯಕ ನಟರಾಗಿ ಎಂಟ್ರಿ ಕೊಡುವಾಗ ಅವರಿಗೆ ನಾಯಕಿಯರ ಸಮಸ್ಯೆ ಕೂಡ ಎದುರಾಗುತ್ತದೆ. ಸ್ಟಾರ್ ನಟಿಯರು ಹಾಸ್ಯ ನಟರೊಟ್ಟಿಗೆ ನಾಯಕಿಯಾಗಿ ನಟಿಸೋಕೆ ಹಿಂದುಮುಂದು ನೋಡುತ್ತಾರೆ. ಯಾಕಂದರೆ ಇದರಿಂದ ತಮ್ಮ ಇಮೇಜ್ ಕಮ್ಮಿ ಆಗುತ್ತದೆ ಎಂದೇ ಭಾವಿಸುತ್ತಾರೆ. ಕನ್ನಡದಲ್ಲಿ ಹೀಗೆ ಹಾಸ್ಯ ನಟರು ಹೀರೊ ಆದಾಗ ಇದೇ ಸಮಸ್ಯೆ ಎದುರಿಸಿರುವುದನ್ನು ಹೇಳಿಕೊಂಡಿದ್ದಾರೆ.
ತೆಲುಗು ಹಾಸ್ಯ ನಟ ಸುನಿಲ್ ಕುಡ ಒಂದಷ್ಟು ಸಿನಿಮಾಗಳಲ್ಲಿ ಹೀರೊ ಆಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಆದರೆ ಬಳಿಕ ಅಷ್ಟಾಗಿ ಸಕ್ಸಸ್ ಕಾಣಲಿಲ್ಲ. ದಪ್ಪ ಇದ್ದ ಸುನೀಲ್ ತೂಕ ಇಳಿಸಿ ಸಿಕ್ಸ್ ಪ್ಯಾಕ್ ಮಾಡಿ ಕಸರತ್ತು ಸಾಕಷ್ಟು ಶ್ರಮಪಟ್ಟಿದ್ದರು. ಆದರೆ ದೊಡ್ಡಮಟ್ಟದಲ್ಲಿ ಸಕ್ಸಸ್ ಆಗಲಿಲ್ಲ. ಇದೀಗ ಮತ್ತೆ ಹಾಸ್ಯ ಕಲಾವಿದರಾಗಿ ಸಣ್ಣ ಪುಟ್ಟ ಪಾತ್ರ ಮಾಡುವಂತಾಗಿದೆ.
ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಸಕ್ಸಸ್ ಕಂಡಿದ್ದರು. ಸುನಿಲ್ 2006ರಲ್ಲಿ ಬಂದಿದ್ದ 'ಅಂದಾಲು ರಾಮುಡು' ಚಿತ್ರದ ಲೀಡ್ ರೋಲ್ ಮಿಂಚಿದ್ದರು. ರಾಜಮೌಳಿ 'ಈಗ' ಸಿನಿಮಾ ಸಕ್ಸಸ್ ಬಳಿಕ ಒಂದು ಸಣ್ಣ ಚಿತ್ರ ಮಾಡಲು ಬಯಸಿದ್ದರು. ಆಗ 'ಮರ್ಯಾದ ರಾಮಣ್ಣ' ಸಿನಿಮಾ ಮಾಡಿ ಪೂರ್ಣ ಪ್ರಮಾಣದಲ್ಲಿ ಸುನಿಲ್ ಅವರನ್ನು ಹೀರೊ ಆಗಿ ಮಾಡಿದ್ದರು.

'ಮರ್ಯಾದ ರಾಮಣ್ಣ' ಚಿತ್ರದಲ್ಲಿ ನನ್ನೊಟ್ಟಿಗೆ ನಾಯಕಿಯರಾಗಿ ನಟಿಸಲು ಸ್ಟಾರ್ ನಟಿಯರು ಹಿಂದೇಟು ಹಾಕಿದ್ದರು ಎಂದು ಸುನಿಲ್ ಬೇಸರ ವ್ಯಕ್ತಪಡಿಸಿರುವ ವೀಡಿಯೋ ವೈರಲ್ ಆಗುತ್ತಿದೆ. ಬಹಳ ದಿನಗಳ ಹಿಂದೆ ಸುನಿಲ್ ಸಂದರ್ಶನವೊಂದರಲ್ಲಿ ಈ ವಿಚಾರ ಹಂಚಿಕೊಂಡಿದ್ದರು. ಆ ವೀಡಿಯೋ ಈಗ ಸಖತ್ ಸದ್ದು ಮಾಡುತ್ತಿದೆ. ಆ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ರಾಜಮೌಳಿ ಬೇರೆ ನಟಿಯರನ್ನು ಬೇಕು ಎಂದುಕೊಂಡಿದ್ದರು. ಅವರ್ಯಾರು ಒಪ್ಪದಿದ್ದಾಗ ಸಲೋನಿ ಅವರನ್ನು ಆಯ್ಕೆ ಮಾಡಲಾಯಿತು ಎಂದಿದ್ದಾರೆ.
"ನಾನು ಕಾಮಿಡಿಯನ್ ಆಗಿರುವುದರಿಂದ ಕೆಲವು ಹೀರೊಯಿನ್ಸ್ ನನ್ನ ಜೊತೆ ನಟಿಸಲು ಆಸಕ್ತಿ ತೋರಿಸಲಿಲ್ಲ. ಅದರಲ್ಲೂ ರಾಜಮೌಳಿ ಅಭಿನಯದ 'ಮರ್ಯಾದ ರಾಮಣ್ಣ' ಚಿತ್ರಕ್ಕೆ ನಾಯಕಿ ಸಮಸ್ಯೆ ಎದುರಾಗಿತ್ತು. ಈ ಚಿತ್ರಕ್ಕಾಗಿ ರಾಜಮೌಳಿ ಮೊದಲು ಅನುಷ್ಕಾ ಶೆಟ್ಟಿ ಅವರನ್ನು ಕೇಳಿದ್ದರು. ಅವರು ತಿರಸ್ಕರಿಸಿದ್ದರು. ಆ ನಂತರ ಆ ಪಾತ್ರಕ್ಕೆ ತ್ರಿಶಾ ಸೂಟ್ ಆಗುತ್ತಾರೆ ಎನಿಸಿ ಕೇಳಿದ್ದರು. ಆಕೆ ಕೂಡ ನಟಿಸಲ್ಲ ಎಂದುಬಿಟ್ಟರು"
"ಹೀಗೆ ಅವರಿಬ್ಬರು ಒಲ್ಲೆ ಎಂದ ಮೇಲೆ ಸಲೋನಿ ಆಯ್ಕೆ ಮಾಡಿಕೊಳ್ಳುವಂತಾಯಿತು. ಇನ್ನು ಸಾಕಷ್ಟು ಸ್ಟಾರ್ ನಟಿಯರು ಸುನಿಲ್ ಜೊತೆ ನಟಿಸೋಕೆ ಇಷ್ಟ ಎಂದು ಹೇಳುತ್ತಾರೆ. ಆದರೆ ಸಿನಿಮಾ ಶುರುವಾಗಿ ಕೇಳಿದಾಗ ಮಾತ್ರ ರಿಜೆಕ್ಟ್ ಮಾಡಿಬಿಡುತ್ತಾರೆ. ನನ್ನ ಜೊತೆ ನಟಿಸಲು ಹಲವರು ಇದೇ ರೀತಿ ಹಿಂದೇಟು ಹಾಕಿದ್ದಾರೆ ಎಂದು ಸುನಿಲ್ ಹೇಳಿಕೊಂಡಿದ್ದಾರೆ.


Click it and Unblock the Notifications










