ತೆಲುಗು ಬ್ಯಾನರ್ನಲ್ಲಿ ದರ್ಶನ್ ಸಿನಿಮಾ; ಎಲ್ಲಾ ಗೊಂದಲಕ್ಕೆ ಕೊನೆಗೂ ಸಿಕ್ತು ಸ್ಪಷ್ಟನೆ
ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುವ ಬಗ್ಗೆ ಚರ್ಚೆ ನಡೀತಿದೆ. ಇನ್ನು ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಮತ್ತೆ ಚಿತ್ರರಂಗದತ್ತ ಗಮನ ಹರಿಸಿದ್ದಾರೆ.
ಹೊಸಬರನ್ನು ಪ್ರೋತ್ಸಾಹಿಸುವ ಕಾಯಕ ಮುಂದುವರೆಸಿದ್ದಾರೆ. ಇತ್ತೀಚೆಗೆ 'ಬೇಗೂರು ಕಾಲೋನಿ' ಸಿನಿಮಾ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದರು. ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದರು. ಇನ್ನು ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬ. ಈ ಬಾರಿ ಮೈಸೂರಿನ ಫಾರ್ಮ್ಹೌಸ್ನಲ್ಲೇ ದರ್ಶನ್ ಸಂಭ್ರಮಾಚರಣೆ ಮಾಡುವ ಸಾಧ್ಯತೆಯಿದೆ. ಅವರ ಮುಂದಿನ ಸಿನಿಮಾಗಳ ಬಗ್ಗೆ ಅಪ್ಡೇಟ್ ಸಿಗುವ ಸಾಧ್ಯತೆಯಿದೆ.

'ಡೆವಿಲ್' ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಬೇಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಲಿದೆ. ಕಳೆದ ವರ್ಷ ಹುಟ್ಟುಹಬ್ಬಕ್ಕೆ ಈ ಚಿತ್ರದ ಸ್ಪೆಷಲ್ ಡೈಲಾಗ್ ಟೀಸರ್ ಬಿಡಲಾಗಿತ್ತು. ಆನಂತರ ತರುಣ್ ಸುಧೀರ್ ನಿರ್ದೇಶನದ 'ಸಿಂಧೂರ ಲಕ್ಷ್ಮಣ' ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ಮೀಡಿಯಾ ಹೌಸ್ ಬ್ಯಾನರ್ ಅಡಿಯಲ್ಲಿ ಶೈಲಾಜಾ ನಾಗ್ ಹಾಗೂ ಬಿ. ಸುರೇಶ ಈ ಚಿತ್ರ ನಿರ್ಮಿಸಲಿದ್ದಾರೆ.
ಈ ಮೂರು ಸಿನಿಮಾಗಳ ಹೊರತಾಗಿ ಕೆಲ ನಿರ್ಮಾಪಕರ ಬಳಿ ಅಡ್ವಾನ್ಸ್ ಪಡೆದು ದರ್ಶನ್ ಸಿನಿಮಾ ಮಾಡಲು ಒಪ್ಪಿದ್ದಾರೆ. ಆದರೆ ಕಾರಣಾಂತರಗಳಿಂದ ತಡವಾಗುತ್ತಲೇ ಇದೆ. ತೆಲುಗಿನ ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಸಂಸ್ಥೆಯ ಜೊತೆಗೂ ದರ್ಶನ್ ಒಂದು ಸಿನಿಮಾ ಮಾಡಲು ಚರ್ಚೆ ನಡೆದಿತ್ತು. 4 ವರ್ಷಗಳ ಹಿಂದೆಯೇ ಆ ಸಂಸ್ಥೆ ದರ್ಶನ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಪೋಸ್ಟ್ ಮಾಡಿತ್ತು. ಆಗ ಸಿನಿಮಾ ಮಾಡುವ ಸುಳಿವು ಸಿಕ್ಕಿತ್ತು.
ನಾಲ್ಕು ವರ್ಷಗಳಿಂದ ಆ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಟಾಲಿವುಡ್ ಪಿಆರ್ ವಂಶಿ ಕಾಕ ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದೊಡ್ಡ ದೊಡ್ಡ ಚಿತ್ರತಂಡಗಳಿಗೆ ವಂಶಿ ಪಿಆರ್ ಆಗಿ ಇದ್ದಾರೆ. ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಸಂಸ್ಥೆಗೂ ಪಿಆರ್ ಆಗಿದ್ದಾರೆ. ಈ ಸಂಸ್ಥೆ ತೆಲುಗಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸಿದೆ. ಇದೇ ಬ್ಯಾನರ್ನಲ್ಲಿ ದರ್ಶನ್ ಸಿನಿಮಾ ಮಾಡುವ ಬಗ್ಗೆ ಹಿಂದೆ ವಂಶಿ ಮಾಹಿತಿ ನೀಡಿದ್ದರು.
ಇತ್ತೀಚೆಗೆ ದರ್ಶನ್ ಅಭಿಮಾನಿ ಒಬ್ರು ಸಿನಿಮಾ ಬಗ್ಗೆ ಅಪ್ಡೇಟ್ ಕೇಳಿ ಟ್ವಿಟ್ಟರ್ನಲ್ಲಿ ವಂಶಿ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದರು. 4 ವರ್ಷ ಆಯ್ತು, ಸಿನಿಮಾ ಬರುತ್ತಾ, ಬರಲ್ವಾ? ಎಂದು ಕೇಳಿದ್ದಾರೆ. ಇದಕ್ಕೆ ರಿಪ್ಲೇ ಮಾಡಿ ವಂಶಿ "ಬರುತ್ತದೆ" ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಡೈರೆಕ್ಟರ್ ಯಾರು? ಯಾವಾಗ ಸಿನಿಮಾ ಶುರು? ಅಂತೆಲ್ಲಾ ಸಾಲು ಸಾಲು ಟ್ವೀಟ್ ಮಾಡಿ ಮಾಹಿತಿ ಕೇಳುತ್ತಿದ್ದಾರೆ.
ಈ ಹಿಂದೆ ತೆಲುಗು ನಿರ್ದೇಶಕ ಸುಕುಮಾರ್ ಬಂದು ದರ್ಶನ್ ಭೇಟಿ ಮಾಡಿದ್ದರು. ಆ ಫೋಟೊ ವೈರಲ್ ಆಗಿತ್ತು. ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಆದರೆ ಅಂತಹ ಯಾವುದೇ ಚರ್ಚೆ ಆಗಿಲ್ಲ ಎನ್ನುವ ಮಾಹಿತಿ ಸಿಕ್ಕಿತ್ತು. ಆದರೆ ಕೆಲವರು ಇವತ್ತಿಗೂ ದರ್ಶನ್- ಸುಕುಮಾರ್ ಕಾಂಬಿನೇಷನ್ನಲ್ಲಿ ಸಿನಿಮಾ ಬರುತ್ತದೆ ಎಂದು ಊಹಿಸಿಕೊಳ್ಳುತ್ತಿದ್ದಾರೆ.
ಫೆಬ್ರವರಿ 16ರಂದು ನಟ ದರ್ಶನ್ ಹುಟ್ಟುಹಬ್ಬ. ಆ ದಿನ ತೆಲುಗಿನ ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಬ್ಯಾನರ್ ಕಡೆಯಿಂದ ದರ್ಶನ್ ಜೊತೆ ಸಿನಿಮಾ ಮಾಡುವ ಬಗ್ಗೆ ಏನಾದರೂ ಅಪ್ಡೇಟ್ ಸಿಗುತ್ತಾ? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











