'ಪೆದ್ದಿ' ಚಿತ್ರಕ್ಕೆ ಮತ್ತೊಂದು ಶಾಕ್; ಅಟ್ರಾಸಿಟಿ ಕೇಸ್ ದಾಖಲಿಸುವಂತೆ ಆಗ್ರಹ
ತೆಲುಗಿನ 'ಪೆದ್ದಿ' ಸಿನಿಮಾ ಈಗ ಟಾಕ್ ಆಫ್ ದ ಟೌನ್ ಆಗಿದೆ. ಒಂದ್ಕಡೆ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಮತ್ತೊಂದು ಕಡೆ ವಿವಾದ ಹಾಗೂ ಟೀಕೆಗಳಿಂದ ಸಿನಿಮಾ ಸುದ್ದಿಯಲ್ಲಿದೆ. ಚಿತ್ರದಲ್ಲಿ ನಾಯಕಿ ಪಾತ್ರವನ್ನು ಚಿತ್ರಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗ್ತಿದೆ. ಇದರ ನಡುವೆ ಈಗ ಚಿತ್ರತಂಡ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸುವಂತೆ ಒತ್ತಡ ಶುರುವಾಗಿದೆ.
'ಪೆದ್ದಿ' ಚಿತ್ರದಲ್ಲಿ ಬುಡಕಟ್ಟು ಜನಾಂಗದವರಿಗೆ ಅವಮಾನ ಆಗುವಂತಹ ದೃಶ್ಯಗಳಿವೆ. ಅಷ್ಟೇ ಅಲ್ಲ ಕೆಲ ಪದಗಳ ಬಳಕೆ ಕೂಡ ಸರಿಯಿಲ್ಲ ಎಂದು ಕೆಲ ಬುಡಕಟ್ಟು ಜನಾಂಗದ ಗುಂಪುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಆಂಧ್ರದ ವಿಜಯನಗರಂ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ದೂರು ಸಲ್ಲಿಸಿದ್ದು, ಚಿತ್ರತಂಡ ಮತ್ತು ಸೆನ್ಸಾರ್ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸುವಂತೆ ಆಗ್ರಹಿಸಿದ್ದಾರೆ. ದೂರು ದಾಖಲಾದರೆ ಚಿತ್ರತಂಡಕ್ಕೆ ಸಂಕಷ್ಟ ತಪ್ಪಿದ್ದಲ್ಲ. ಚಿತ್ರದಲ್ಲಿ 20ಕ್ಕೂ ಹೆಚ್ಚು ಬಾರಿ ಬಳಸಿರುವ ಪದಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೆನ್ಸಾರ್ ಮಂಡಳಿ ಸಿನಿಮಾ ನೋಡುವಾಗ ಈ ವಿಚಾರ ಯಾಕೆ ಗಮನಿಸಲಿಲ್ಲ ಎಂದು ದೂರುದಾರರು ಪ್ರಶ್ನಿಸಿದ್ದಾರೆ. ಆಶ್ಲೀಲ ಪದ, ಧರ್ಮದ ವಿಚಾರಕ್ಕೆ ಸಂಬಂಧಿಸಿದ ಪದಗಳನ್ನು ತೆಗೆಯಲು ಸೆನ್ಸಾರ್ ಮಂಡಳಿ ಹೇಳುತ್ತದೆ. ಆದರೆ ಅಟ್ರಾಸಿಟಿ ಕೇಸ್ ದಾಖಲಿಸಲು ಅವಕಾಶ ಇರುವಂತಹ ಪದಗಳನ್ನು 'ಪೆದ್ದಿ' ಚಿತ್ರದಲ್ಲಿ ಬಳಸಿದ್ದಾರೆ. ಆದರೆ ಮಂಡಳಿ ಏನು ಮಾಡ್ತಿತ್ತು ಎಂದು ಕೇಳಿದ್ದಾರೆ. ಬುಡಕಟ್ಟು ಜನಾಂಗದ ಪ್ರತಿನಿಧಿಯಾಗಿ ರಾಮ್ಚರಣ್ ಚಿತ್ರದಲ್ಲಿ ನಟಿಸಿದ್ದಾರೆ. ಅವರ ಬಗ್ಗೆ ನಮಗೆ ಯಾವುದೇ ಆಕ್ಷೇಪ ಇಲ್ಲ. ಆದರೆ ಇಂತಹ ಡೈಲಾಗ್ಸ್ ಹೇಳಿಸಿವರು, ಸೆನ್ಸಾರ್ ಮಂಡಳಿ ಇದಕ್ಕೆ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇಷ್ಟು ದಿನ ಇಂತಹ ಪದಗಳನ್ನು ಬಳಸಲು ಜನ ಭಯ ಪಡುತ್ತಿದ್ದರು. ಆದರೆ 'ಪೆದ್ದಿ' ಸಿನಿಮಾದಲ್ಲಿ ಪದೇ ಪದೆ ಈ ಪದಗಳ ಬಳಕೆಯಾಗಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕೂಡ ಈ ಬಳಸುವಂತಾಗಿದೆ. ಅದಕ್ಕೆ ಕಾರಣ 'ಪೆದ್ದಿ' ಸಿನಿಮಾ. ಹಾಗಾಗಿ ಅಟ್ರಾಸಿಡಿ ಕೇಸ್ ದಾಖಲಿಸುವಂತೆ ಮನವಿ ಮಾಡಿರುವುದಾಗಿ ಬುಡಕಟ್ಟು ಜನಾಂಗಗಳ ಸಂಘದ ನಾಯಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಜಾನ್ವಿ ಕಪೂರ್ ಪಾತ್ರದ ವಿಚಾರಕ್ಕೆ ಕ್ಷಮೆ ಕೇಳಿ ಚಿತ್ರತಂಡ ಅಂತಹ ಅಸಭ್ಯ ದೃಶ್ಯಗಳನ್ನು ತೆಗೆದು ಹಾಕಿದೆ. ಸ್ವತಃ ನಿರ್ದೇಶಕ ಬುಚ್ಚಿಬಾಬು ತಪ್ಪು ತಿದ್ದಿಕೊಳ್ಳುವುದಾಗಿ ಹೇಳಿದ್ದಾರೆ. ಆದರೂ ಈ ವಿವಾದ ಇನ್ನು ಬಗೆಹರಿದಿಲ್ಲ. ಈ ನಡುವೆ ಅಟ್ರಾಸಿಟಿ ಕೇಸ್ ವಿಚಾರ ಸುದ್ದಿ ಆಗ್ತಿದೆ. ಇದೆಲ್ಲದರ ನಡುವೆ 'ಪೆದ್ದಿ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಮೊದಲ 5 ದಿನಕ್ಕೆ ಸಿನಿಮಾ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.
ಬುಚ್ಚಿಬಾಬು ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸ್ಪೋರ್ಟ್ಸ್ ಡ್ರಾಮಾ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಆಕೆಯ ಪಾತ್ರ ಪೋಷಣೆ, ಕೆಲ ದೃಶ್ಯಗಳಲ್ಲಿ ಆಕೆಯ ಮುಖದ ಬದಲು ಸೊಂಟ, ಎದೆಯನ್ನು ಫೋಕಸ್ ಮಾಡಿ ತೋರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಆಶಿಕಾ ರಂಗನಾಥ್ ಕೂಡ ಈ ವಿಚಾರದಲ್ಲಿ ಜಾನ್ವಿ ಬೆಂಬಲಕ್ಕೆ ನಿಂತಿದ್ದಾರೆ. ಇದೆಲ್ಲಾ ಫಿಲ್ಮ್ ಮೇಕರ್ಸ್ ತಪ್ಪು ಎಂದಿದ್ದಾರೆ.
ಶಿವರಾಜ್ಕುಮಾರ್ ಹಾಗೂ ಜಗಪತಿ ಬಾಬು ಕೂಡ 'ಪೆದ್ದಿ' ಚಿತ್ರದಲ್ಲಿ ನಟಿಸಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಚಿತ್ರತಂಡ ಖುಷಿಯಾಗಿದೆ. ನಿನ್ನೆ(ಜೂನ್ 8) ಸಕ್ಸಸ್ ಮೀಟ್ ಮಾಡಿ ಚಿತ್ರತಂಡ ಮಾತನಾಡಿದೆ. ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ನಟ ರಾಮ್ಚರಣ್, ಜಗಪತಿ ಬಾಬು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.


Click it and Unblock the Notifications