"ಛಾನ್ಸ್ ಕೊಡಿಸಿದರೆ ನಂಗೇನು ಕೊಡ್ತೀಯಾ ಎಂದು ಕೇಳ್ತಾರೆ"; ಕನ್ನಡ ಕಿರುತೆರೆ ಬಗ್ಗೆ ಸೌಮ್ಯ ಅಸಮಾಧಾನ
ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗ ಎನ್ನುವ ಹೀನ ಸಂಸ್ಕೃತಿ ಇರುವ ಬಗ್ಗೆ ಸಾಕಷ್ಟು ನಟ, ನಟಿಯರು ಮಾತನಾಡಿದ್ದಾರೆ. ಕಿರುತೆರೆಯಲ್ಲಿ ಕೂಡ ಇಂತಹ ಕಹಿ ಅನುಭವ ಆಗಿದೆ ಎಂದು ನಟಿಯರು ಹೇಳಿರುವುದು ಇದೆ. ಇದೀಗ ಕನ್ನಡ ಕಿರುತೆರೆ ನಟಿ ಸೌಮ್ಯಾ ರಾವ್ ಈ ಬಗ್ಗೆ ಮಾತನಾಡಿದ್ದಾರೆ.
ನಿರೂಪಕಿಯಾಗಿ ಪರಿಚಿತರಾದ ಸೌಮ್ಯಾ ರಾವ್ ಬಳಿಕ ಕಿರುತೆರೆಗೆ ಬಂದವರು. ಸದ್ಯ ತೆಲುಗು ಕಿರುತೆರೆಯಲ್ಲಿ ಆಕೆ ಬಹಳ ಬ್ಯುಸಿ ಆಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಕಾಸ್ಟಿಂಗ್ ಕೌಚ್ ಹೀನ ಸಂಸ್ಕೃತಿ ಇದೆ ಎಂದು ಸೌಮ್ಯ ಹೇಳಿದ್ದಾರೆ. ಕೆಲವರು ಬಹಿರಂಗವಾಗಿಯೇ ನಿನಗೆ ಅವಕಾಶ ಕೊಡಿಸಿದರೆ ನನಗೆ ಏನು ಕೊಡ್ತೀಯಾ? ಎಂದು ಕೇಳಿದ್ದರು ಎಂದು ಹೇಳಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸೌಮ್ಯ ರಾವ್ ಮಾತನಾಡಿದ್ದಾರೆ.

ಕನ್ನಡದ ಕಿರುತೆರೆ ಕಲಾವಿದರು ಈಗ ತೆಲುಗು ಕಿರುತೆರೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ನಟ, ನಟಿಯರ ನಡುವೆ ತೆಲುಗು ಕಿರುತೆರೆಯ ನಿರೂಪಕಿಯಾಗಿ ಸೌಮ್ಯಾ ರಾವ್ ಗಮನ ಸೆಳೆದಿದ್ದಾರೆ. 'ಜಬರ್ದಸ್ತ್' ಎಂಬ ಕಾಮಿಡಿ ಶೋ ನಿರೂಪಕಿಯಾಗಿ ತೆಲುಗು ವೀಕ್ಷಕರ ಮನಗೆದ್ದಿದ್ದಾರೆ.
'ಮಹಾಪರ್ವ' ಧಾರಾವಾಹಿಯಲ್ಲಿ ಮೊದಲಿಗೆ ಸೌಮ್ಯ ಬಣ್ಣ ಹಚ್ಚಿದ್ದರು. ಒಂದೆರಡು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಸುದ್ದಿವಾಹಿನಿಯಲ್ಲಿ ವಾರ್ತಾ ವಾಚಕಿಯಾಗಿ ಸೌಮ್ಯ ತಮ್ಮ ಕರಿಯರ್ ಆರಂಭಿಸಿದರು. ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟರು. ನಾನು ಕನ್ನಡ ಕಿರುತೆರೆಗೆ ಬಂದಾಗ ಅಲ್ಲಿ ಕೆಲವರ ವರ್ತನೆ ನೋಡಿ ಯಾಕಾದರೂ ಬಂದೇ ಎನಿಸಿತ್ತು ಎಂದು ಹೇಳಿದ್ದಾರೆ.
ಬಹಿರಂಗವಾಗಿಯೇ ಕೆಲವರು ಕಾಂಪ್ರಮೈಸ್ ಮಾಡಿಕೊಳ್ಳುವಂತೆ ಕೇಳುತ್ತಿದ್ದರು. ಫೋನ್ ಮಾಡಿ ಈ ಬಗ್ಗೆ ಮಾತನಾಡುತ್ತಿದ್ದರು. ಇಡೀ ಇಂಡಸ್ಟ್ರಿ ಪೂರ್ತಿ ಹೇಗೆನಾ? ಎನಿಸುತ್ತಿತ್ತು ಸೌಮ್ಯಾ ರಾವ್ ಎಂದಿದ್ದಾರೆ. ಈಗ ಬಹಳ ಸುಲಭವಾಗಿ ಕೆಲವರಿಗೆ ಅವಕಾಶ ಸಿಗುತ್ತಿದೆ. ಆದರೆ ಆಗ ಪರಿಸ್ಥಿತಿ ಹೀಗೆ ಇರಲಿಲ್ಲ. ಮೊದಲಿಗೆ ಕನ್ನಡ ಧಾರಾವಾಹಿಯಲ್ಲಿ ಸಣ್ಣ ಪುಟ್ಟ ಪಾತ್ರಗಳು ಸಿಗುತ್ತಿತ್ತು. ಸಂಭಾವನೆ ಕೂಡ ಚೆನ್ನಾಗಿಲ್ಲ ಎಂದಿದ್ದಾರೆ.
ನನ್ನ ಜೊತೆ ಇಂಡಸ್ಟ್ರಿಗೆ ಬಂದವರು ಈಗ ದೊಡ್ಡ ದೊಡ್ಡ ಕಾರ್, ಫ್ಲಾಟ್ ಇದೆ ಎನ್ನುತ್ತಾರೆ. ಅಚ್ಚರಿ ಆಗುತ್ತದೆ. ನಮಗೆ ಶಾರ್ಟ್ ಕಟ್ ಬೇಡ. ತಡವಾದರೂ ಪರವಾಗಿಲ್ಲ ಎಂದಿದ್ದಾರೆ. ಮೀಟು ಎನ್ನುವುದನ್ನು ನಂಬೋದು ಕಷ್ಟ. ಕೆಲವರು ಆಗ ಎಲ್ಲಾ ಚೆನ್ನಾಗಿ ಸಹಕರಿಸಿ, ಈಗ ಮೀಟು ಅಂತಾರೆ, ಅದು ಯಾಕೆ ಅಂತ ಗೊತ್ತಿಲ್ಲ. ಕೆಲವರು ಹೆಂಗೆಗೋ ದುಡ್ಡು ಮಾಡಿಕೊಂಡಿದ್ದಾರೆ ಎಂದು ಸೌಮ್ಯಾ ವ್ಯಂಗ್ಯವಾಡಿದ್ದಾರೆ.
ನನಗೆ ಇಂಡಸ್ಟ್ರಿಯಲ್ಲಿ ಒಳ್ಳೆಯವರು ಯಾರು ಸಿಗಲೇಯಿಲ್ಲ. ಎಲ್ಲರೂ ಪ್ರತಿಫಲ ಬಯಸುವವರೇ ಸಿಕ್ಕಿದ್ದಾರೆ. ನಾನು ಅವಕಾಶ ಕೊಟ್ಟರೆ ನೀನು ನನಗೆ ಏನು ಕೊಡ್ತೀಯಾ? ಎಂದು ಕೇಳಿದವರು ಇದ್ದಾರೆ. ನಾನು ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದೆ. ಚಿತ್ರರಂಗ ಅಂತೂ ಇನ್ನು ಘೋರ. ಒಬ್ಬೊಬ್ಬ ಹೆಣ್ಣು ಮಗಳು ಗಾಂಧಿನಗರ ಮೆಟ್ಟಿಲು ಹತ್ತಲು ಸಾಧ್ಯವಿಲ್ಲ ಎಂದು ಸೌಮ್ಯ ಹೇಳಿದ್ದಾರೆ.
ಯಾವುದೋ ಒಂದು ಸಿನಿಮಾ ಅವಕಾಶದ ಕೇಳಲು ಹೋದಾಗ ಮೊದಲು ನೀನು ಲಿಪ್ ಕಿಸ್ ಸೀನ್ ಮಾಡ್ತಿಯಾ ಎಂದು ಕೇಳಿದ್ದರು. ನೀನು ಬಿಕಿನಿ ಹಾಕೋಕೆ ರೆಡಿನಾ? ನಿನ್ನ ಸೊಂಟದ ಸುತ್ತಳತೆ ಎಷ್ಟು? ಹೀಗೆ ಹಸಿ ಹಸಿಯಾಗಿ ಕೇಳಿದ್ದರು. ಬಿಕಿನಿ ಹಾಕಿದರೆ ಮಾತ್ರ ಹೀರೋಯಿನ್ನಾ? ಎಂದಿದ್ದಾರೆ. ಅದು ಯಾರು ಎಂದು ಹೆಸರು ಹೇಳುವುದು ಕಷ್ಟ ಅಂತ ಸೌಮ್ಯ ತಿಳಿಸಿದ್ದಾರೆ.
ನನಗೆ ತೆಲುಗು ಗಂಧ ಗಾಳಿ ಇರಲಿಲ್ಲ. ಆದರೆ ಧಾರಾವಾಹಿಯಲ್ಲಿ ನಟಿಸುವಾಗ ಭಾಷೆ ಕರೆಯಲು ಆರಂಭಿಸಿದೆ. ಅಲ್ಪ ಸ್ವಲ್ಪ ಕಲಿತ ಮೇಲೆ 'ಜಬರ್ದಸ್ತ್' ಶೋ ನಿರೂಪಣೆ ಅವಕಾಶ ಸಿಕ್ಕಿತು. ಈಗ ಅಲ್ಲಿ ಬಹಳ ಒಳ್ಳೆ ಕ್ರೇಜ್ ಇದೆ. ನಾನು ಎಲ್ಲೇ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಅಲ್ಲಿನ ಜನ ಪ್ರೀತಿಸ್ತಾರೆ. ಕನ್ನಡ ಜನರ ಬಗ್ಗೆ ನೆಗೆಟಿವ್ ಮಾತಾಡ್ತೀನಿ ಅಂತ ಕೆಲವರಿಗೆ ಅನ್ನಿಸಬಹುದು. ಆದರೆ ನಾನು ಅಲ್ಲಿ ಅನುಭವಿಸಿದ ನೋವು ಅಂಥಾದ್ದು ಎಂದು ಸೌಮ್ಯಾ ಹೇಳಿದ್ದಾರೆ.


Click it and Unblock the Notifications











