117 ವಿಲ್ಲಾ, ವಿರೋಷ್ ಮದುವೆಗೆ ಸಾಕ್ಷಿಯಾಗಲಿದ್ದಾರೆ 100 ಜನ ; ರಶ್ಮಿಕಾ-ದೇವರಕೊಂಡ ಮದುವೆ-ಉದಯಪುರ ಭದ್ರಕೋಟೆ
ದೊಡ್ಡವರ ಹಾಗೂ ದುಡ್ಡಿದ್ದವರ ಕುಟುಂಬಗಳ ''ಮದುವೆ'' ಮತ್ತು ''ಮನೆ'' ಎರಡೂ ಈಗ ಗಂಟೆ ಗಟ್ಟಲೆ ''ಬ್ರೇಕಿಂಗ್ ನ್ಯೂಸ್'' ಆಗುವ ಕಾಲ ಇದು. ಉಳ್ಳವರು ಮಾಡುವ ಅದ್ಧೂರಿ ಮದುವೆಯ ಕಣ್ಣು ಕೋರೈಸುವಂತಹ ಆಚರಣೆಗಳು ಸದಾ ಸುದ್ದಿಯಾಗುತ್ತಲೇ ಇರುತ್ತಾವೆ. ಅದರಲ್ಲಿಯೂ ಚಿತ್ರರಂಗದವರ ಮದುವೆ ಅಂದರೆ ಜನಸಾಮಾನ್ಯರಲ್ಲಿ ಒಂದು ರೀತಿಯ ಕುತೂಹಲ ಮತ್ತು ಸೆಳೆತ ಇರುತ್ತೆ.
ಯಾಕೆಂದರೆ.. ಸೆಲೆಬ್ರಿಟಿಗಳ ಪಾಲಿಗೆ ಮದುವೆ ಕೇವಲ ಮದುವೆಯಲ್ಲ, ಅದೊಂದು ಪ್ರತಿಷ್ಠೆಯ ಸಂಕೇತ. ಅದ್ಧೂರಿತನಕ್ಕೆ ಅಲ್ಲಿ ಕೊರತೆ ಇರಲ್ಲ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಇದು ಡೆಸ್ಟಿನೇಶನ್ ವೆಡ್ಡಿಂಗ್ ಕಾಲ. ತಮ್ಮ ಇಷ್ಟದ ಸ್ಥಳದಲ್ಲಿ, ದೇಶದಲ್ಲಿ ಮದುವೆಯಾಗುವ ಕಾಲ. ಪ್ರಿಯಾಂಕ ಚೋಪ್ರಾ ಅವರಿಂದ ಹಿಡಿದು ದೀಪಿಕಾ ಪಡುಕೋಣೆಯವರೆಗೆ, ಅನುಷ್ಕಾ ಶರ್ಮಾ ಅವರಿಂದ ಹಿಡಿದು ಪರಿಣಿತಿ ಚೋಪ್ರಾವರೆಗೆ ಅನೇಕರು ಈ ಪರಿಕಲ್ಪನೆಯಡಿಯಲ್ಲಿಯೇ ಮದುವೆಯಾಗಿದ್ದಾರೆ.

ಈ ಸಾಲಿಗೆ ಸೇರಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಂದು ( ಫೆಬ್ರವರಿ 23 ) ಉದಯಪುರಕ್ಕೆ ಬಂದಿಳಿದಿದ್ಧಾರೆ. ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.
ಎಲ್ಲಿ ನಡೆಯಲಿದೆ ವೈಭವೋಪೇತ ಮದುವೆ..?
''NDTV'' ವರದಿಯ ಪ್ರಕಾರ ರಾಜಸ್ಥಾನದ ಉದಯಪುರದಲ್ಲಿನ ಐಶಾರಾಮಿ ರೆಸಾರ್ಟ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವೈಭವದ ಮದುವೆಗೆ ಸಾಕ್ಷಿಯಾಗಲಿದೆ. ಉದಯಪುರದಿಮದ 25 ಕಿ.ಮೀ ದೂರದಲ್ಲಿರುವ ಐಟಿಸಿ ಮೆಮೆಂಟೋಸ್ನಲ್ಲಿ ವಿರೋಷ್ ಮದುವೆ ಸಮಾರಂಭ ನಡೆಯಲಿದ್ದು, ಸದ್ಯ ಉದಯಪುರದ ವಿಮಾನ ನಿಲ್ದಾಣದ ಸುತ್ತ ಮುತ್ತ ಭಾರೀ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ.
117 ವಿಲ್ಲಾ ಮತ್ತು 100 ಜನ ಅತಿಥಿಗಳು
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದುವೆ ನಡೆಯುವ ಸ್ಥಳದಲ್ಲಿ 117 ವಿಲ್ಲಾಗಳಿದ್ದು ಎಲ್ಲವನ್ನೂ ಇವರ ಮದುವೆಗೆ ಕಾಯ್ದಿರಿಸಲಾಗಿದೆ. ಇನ್ನೂ ಈ ರೆಸಾರ್ಟ್ನಲ್ಲಿ ಹೆಲಿಪ್ಯಾಡ್ ಕೂಡ ಇದ್ದು ಸುತ್ತ ಮುತ್ತ ಬೆಟ್ಟ ಮತ್ತು ಸರೋವರಗಳಿವೆ.
ಇನ್ನು ಎರಡು ಕಡೆಯ ಕುಟುಂಬದ ಸದಸ್ಯರು ಕೂಡ ಇಂದೇ (ಫೆಬ್ರವರಿ 23 ) ಬಂದಿಳಿದಿದ್ದು, ಸುಮಾರು 50 ಜನ ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಇನ್ನು ಚಿತ್ರರಂಗ ಮತ್ತು ರಾಜಕೀಯ ರಂಗದಿಂದ 50 ಜನರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಲಾಗಿದ್ದು, ಒಟ್ಟಾರೆ ನೂರು ಜನ ಮದುವೆಯಲ್ಲಿ ಭಾಗವಹಿಸಲಿದ್ದಾರೆ ಎಂದು NDTV ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಭಾಗಿಯಾಗಲಿದ್ದಾರಾ ಬಾಲಿವುಡ್, ಟಾಲಿವುಡ್ ಸ್ಟಾರ್ ಗಳು..?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಗೆ ಕೆಲವೇ ಕೆಲ ಅತ್ಯಾಪ್ತರನ್ನು ಕರೆಯಲಾಗಿದ್ದು, ಚಿತ್ರರಂಗದ ಸ್ಟಾರ್ ಗಳು ಗೈರಾಗುವ ಸಾಧ್ಯತೆ ಇದೆ. ತೆಲಂಗಾಣದ ಕೆಲ ರಾಜಕಾರಣಿಗಳು ಮತ್ತು ತೆಲುಗು ಚಿತ್ರರಂಗದ ಕೆಲ ನಿರ್ದೇಶಕರು ಈ ಖಾಸಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಸದ್ಯ ಉದಯಪುರದ ಸುತ್ತ ಮುತ್ತ ಕೇಳಿ ಬರುತ್ತಿದೆ.

ಹೈದರಾಬಾದ್ನಲ್ಲಿ ಆರತಕ್ಷತೆ
ಫೆಬ್ರವರಿ 26ರಂದು ಆತ್ಮೀಯರ ಸಮ್ಮುಖದಲ್ಲಿ ಸಪ್ತಪದಿ ತುಳಿಯಲಿರುವ ಈ ಜೋಡಿ, ಮಾರ್ಚ್ 4ರಂದು ಹೈದರಾಬಾದ್ನಲ್ಲಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಮಾರಂಭಕ್ಕೆ ಬಾಲಿವುಡ್, ಕಾಲಿವುಡ್, ಮತ್ತು ಟಾಲಿವುಡ್ನ ಹಲವು ದಿಗ್ಗಜರು, ತಾರೆಯರು ಆಗಮಿಸುವ ನಿರೀಕ್ಷೆ ಇದೆ. ನವ ಜೋಡಿಗೆ ಶುಭ ಕೋರುವ ಸಾಧ್ಯತೆ ಇದೆ.
ಕನ್ನಡ ಚಿತ್ರರಂಗಕ್ಕೆ ಇದೆಯಾ ಆಹ್ವಾನ..?
ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣ ಅವರ ವೃತ್ತಿ ಬದುಕಿಗೆ ಅಡಿಪಾಯ ಹಾಕಿದ್ದೇ ಕನ್ನಡ ಚಿತ್ರರಂಗ. ಈ ಹಿನ್ನೆಲೆ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗಕ್ಕೆ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿದ್ಧಾರಾ ಎನ್ನುವ ಕುತೂಹಲ ಸದ್ಯ ಹಲವರಲ್ಲಿದೆ. ಆದರೆ, ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದ ಸ್ಟಾರ್ ಗಳಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಿದಂತೆ ಇಲ್ಲ. ನೀಡಿದ್ದರೆ ಯಾರಿಗೆಲ್ಲಾ ನೀಡಿದ್ದಾರೆ..? ಯಾರೆಲ್ಲಾ ಭಾಗಿಯಾಗುತ್ತಾರೆ..? ಎನ್ನುವುದನ್ನು ಕಾದು ನೊಡಬೇಕಿದೆ.


Click it and Unblock the Notifications











