Ramcharan: "ನಮ್ಮ ಸನಾತನ ಧರ್ಮವನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ": ರಾಮ್ಚರಣ್ ಟ್ವೀಟ್ ವೈರಲ್
ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎನ್ನುವ ನಟ, ರಾಜಕೀಯ ಮುಖಂಡ ಉದಯನಿಧಿ ಸ್ಟಾಲಿನ್ ಹೇಳಿಕೆ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಶನಿವಾರ ಚೆನ್ನೈನಲ್ಲಿ ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘವನ್ನು ಉದ್ದೇಶಿಸಿ ತಮ್ಮ ಭಾಷಣದಲ್ಲಿ ಮಾತನಾಡುತ್ತಾ, "ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು" ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಾಕಷ್ಟು ಜನ ಈ ಹೇಳಿಕೆಯನ್ನು ಟೀಕಿಸುತ್ತಿದ್ದಾರೆ. ಉದಯನಿಧಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಬಿಜೆಪಿ ನಾಯಕರು ಕೂಡ ಉದಯನಿಧಿ ವಿರುದ್ಧ ತಿರುಗಿಬಿದ್ದಿದ್ದಾರೆ. ಪಕ್ಷದ ವಕ್ತಾರರು ಈ ಹೇಳಿಕೆಯನ್ನು "ಜನಾಂಗೀಯ ಹತ್ಯೆಯ ಕರೆ" ಎಂದು ಕರೆದಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಸೇರಿದಂತೆ ಹಲವರು ಉದಯನಿಧಿ ಅವರ ಹೇಳಿಕೆಯನ್ನು ಟೀಕಿಸಿದ್ದರು.

ಹಿಂದೂಪರ ಸಂಘಟನೆಗಳು ಉದಯನಿಧಿ ಹೇಳಿಕೆ ಖಂಡಿಸಿ ದೂರು ದಾಖಲಿಸಲು ಮುಂದಾಗಿವೆ. ದೆಹಲಿಯಲ್ಲಿ ಈಗಾಗಲೇ ದೂರು ದಾಖಲಾಗಿದೆ. ಇದೆಲ್ಲದರ ನಡುವೆ ನಟ ರಾಮ್ಚರಣ್ ಮಾಡಿದ್ದ ಹಳೇ ಟ್ವೀಟ್ವೊಂದು ವೈರಲ್ ಆಗುತ್ತಿದೆ. 3 ವರ್ಷಗಳ ಹಿಂದೆ ತೆಲುಗು ನಟ ಈ ಟ್ವೀಟ್ ಮಾಡಿದ್ದರು. ತಮ್ಮ ತಾಯಿ ಸುರೇಖಾ ಮನೆ ಮುಂದೆ ಇರುವ ತುಳಸಿಕಟ್ಟೆಗೆ ಪೂಜೆ ಮಾಡುತ್ತಿರುವ ಫೋಟೊ ಹಂಚಿಕೊಂಡು "ನಮ್ಮ ಸನಾತನ ಧರ್ಮವನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ" ಎಂದು ಬರೆದುಕೊಂಡಿದ್ದರು. ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ಚರ್ಚೆ ಹುಟ್ಟಾಕುತ್ತಿದ್ದಂತೆ ರಾಮ್ಚರಣ್ ಮಾಡಿದ್ದ ಈ ಹಳೇ ಟ್ವೀಟ್ ವೈರಲ್ ಆಗುತ್ತಿದೆ.
ರಾಮ್ಚರಣ್ ಮಾಡಿದ್ದ ಹಳೇ ಟ್ವೀಟ್ನ ಕೆಲವರು ಈಗ ರೀ-ಟ್ವೀಟ್ ಮಾಡುತ್ತಿದ್ದಾರೆ. ಹಾಗಾಗಿ ದಿಢೀರನೆ ಆ ಟ್ವೀಟ್ ಸದ್ದು ಮಾಡ್ತಿದೆ.
"ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು. ಇದು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ.ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅವುಗಳನ್ನು ನಿರ್ಮೂಲನೆ ಮಾಡಬೇಕು. ಸೊಳ್ಳೆಗಳು, ಡೆಂಗ್ಯೂ ಜ್ವರ, ಮಲೇರಿಯಾ ಮತ್ತು ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು" ಎಂದು ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದರು.
ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡಿಸಿ ತಮಿಳುನಾಡು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ದೂರು ದಾಖಲಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಇದಕ್ಕೆ ಉದಯನಿಧಿ ಬಗ್ಗುತ್ತಿಲ್ಲ. "ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ನನ್ನ ವಿರುದ್ಧ ಎಂತಹ ಕೇಸ್ ಹಾಕಿದರೂ ಎದುರಿಸಲು ಸಿದ್ಧನಾಗಿದ್ದೇನೆ. ನಾನು ಸನಾತನ ಧರ್ಮವನ್ನು ಮಾತ್ರ ಟೀಕಿಸಿದ್ದೇನೆ. ಹಾಗೂ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದೇನೆ ಎಂದು ಪುನರುಚ್ಚರಿಸಿದ್ದೆನೆ. ಪ್ರತಿಪಕ್ಷ ಮೈತ್ರಿಕೂಟ ನೋಡಿ ಬಿಜೆಪಿ ಭಯಬೀಳುತ್ತಿದೆ. ಬಿಜೆಪಿ ಸುಳ್ಳುಸುದ್ದಿ ಹರಡುತ್ತಿದೆ. ಸುಖಾಸುಮ್ಮನೆ ರಾದ್ದಾಂತ ಮಾಡುತ್ತಿದ್ದಾರೆ" ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಉದಯನಿಧಿ ಸ್ಟಾಲಿನ್ ಸಾಕಷ್ಟು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ಆದವನ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಉದಯನಿಧಿ 'ಒರು ಕಾಲ್ ಒರು ಕನ್ನಡಿ' ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಿದರು. 'ಇದು ಕತ್ತಿರ್ವೇಲನ್ ಕಾದಲ್', 'ನನ್ಬೇಂಡಾ', 'ನಿಮಿರ್', 'ಸೈಕೋ' ಸೇರಿದಂತೆ ಒಂದಷ್ಟು ಸಿನಿಮಾಗಳನ್ನು ನಟಿಸಿದ್ದರು. 'ಮಾಮನ್ನನ್' ನಟಿಸಿದ ಕೊನೆಯ ಸಿನಿಮಾ. ಸಂಪೂರ್ಣವಾಗಿ ರಾಜಕೀಯರಂಗದಲ್ಲಿ ಗುರ್ತಿಸಿಕೊಳ್ಳುವ ಕಾರಣಕ್ಕೆ ಇನ್ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.


Click it and Unblock the Notifications











