'ಎ' ಚಿತ್ರದಲ್ಲಿ ಓಡಿ ಹೋಗಿದ್ದ ಬಾಲಕ ಉಪ್ಪಿ ಎದುರು ಬಂದು ಶಾಕ್ ಕೊಟ್ಟಿದ್ದೇಗೆ?
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ತೆರೆಗೆ ಬಂದಿದೆ. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲಿ ಕೂಡ ಚಿತ್ರ ರಿಲೀಸ್ ಆಗಿದೆ. ಕನ್ನಡ ಬಿಟ್ಟರೆ ತೆಲುಗಿನಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. ಇತ್ತೀಚೆಗೆ ಚಿತ್ರದ ಪ್ರಚಾರಕ್ಕಾಗಿ ಉಪ್ಪಿ ಹೈದರಾಬಾದ್ನಲ್ಲಿ ಬೀಡು ಬಿಟ್ಟಿದ್ದರು.
ಹೈದರಾಬಾದ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ಮಾತ್ರವಲ್ಲ, ಕೆಲ ಸಂದರ್ಶನಗಳಲ್ಲಿ ಭಾಗಿ ಆಗಿದ್ದರು. ನಟ ರಾಣ ದಗ್ಗುಬಾಟಿ ಕೂಡ ಉಪೇಂದ್ರ ಹಾಗೂ ರೀಷ್ಮಾ ನಾಣಯ್ಯ ಸಂದರ್ಶನ ನಡೆಸಿದ್ದಾರೆ. ತೆಲುಗಿನ ಒಂದಷ್ಟು ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಜೊತೆಗೂ ಉಪ್ಪಿ ಮಾತನಾಡಿದ್ದರು. ಭಿನ್ನ ವಿಭಿನ್ನ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಈ ವೇಳೆ ಉಪೇಂದ್ರಗೆ ಒಂದು ಶಾಕ್ ಎದುರಾಗಿತ್ತು.

ಉಪ್ಪಿ ನಿರ್ದೇಶಿಸಿ ನಟಿಸಿದ ಚೊಚ್ಚಲ ಸಿನಿಮಾ 'ಎ'. ತಮ್ಮದೇ ವಿಭಿನ್ನ ಆಲೋಚನೆಗಳನ್ನು ಚಿತ್ರದಲ್ಲಿ ಅವರು ತೋರಿಸಿದ್ದರು. ಅದು ಕ್ಲಿಕ್ ಆಗಿತ್ತು. ಚಿತ್ರದಲ್ಲಿ ನಿರ್ದೇಶಕ ಸೂರ್ಯ ಆಗಿ ನಟಿಸಿದ್ದರು. ಆರಂಭದಲ್ಲೇ ಆತ ನಿರ್ದೇಶಿಸಿದ ಚಿತ್ರವನ್ನು ಕೆಲವರು ಚಿತ್ರಮಂದಿರದಲ್ಲಿ ನೋಡುವ ಸನ್ನಿವೇಶ ಇದೆ.
ಆ ಚಿತ್ರದಲ್ಲಿ ಸೂರ್ಯ ರಿಯಲ್ ಆಗಿ ನಡೆದಿದ್ದನ್ನು ಹಂಗಂಗೆ ಶೂಟ್ ಮಾಡಿ ತೋರಿಸಿದ್ದಾನೆ ಎಂದು ಒಂದು ಪಾತ್ರ ಹೇಳುತ್ತದೆ. ಆ ಸನ್ನಿವೇಶಗಳಲ್ಲಿ ಸೂರ್ಯ ಗಣೇಶನಿಗೆ ಗನ್ ತೋರಿಸುವುದು, ಬಳಿಕ ಗಣೇಶನನ್ನು ನೀರಿಗೆ ಹಾಕಿ ಐಯಾಮ್ ಗಾಡ್ ಗಾಡ್ ಈಸ್ ಗ್ರೇಟ್ ಎಂದು ಗನ್ ಹಿಡಿದು ಸುತ್ತಾಡುವ ಸನ್ನಿವೇಶ ಇದು. ಹೀಗೆ ಹೋಗುತ್ತಾ ಅನ್ಯಾಯ ಕಂಡರೆ ಉರಿದು ಬೀಳುತ್ತಾ ತಪ್ಪು ಮಾಡಿದವರನ್ನು ಶೂಟ್ ಮಾಡುವ ಸನ್ನಿವೇಶ ಇದೆ.
ಕುಡುಕ ಗಂಡನೊಬ್ಬ ಪತ್ನಿಯನ್ನು ಪೀಡಿಸುತ್ತಿರುತ್ತಾನೆ. ಆಗ ಸೂರ್ಯ ಅವರಿಬ್ಬರನ್ನು ನೋಡಿ ಶೂಟ್ ಮಾಡಿಬಿಡುತ್ತಾನೆ. ಬಳಿಕ ಅಳುತ್ತಾ ಕೂತ ಅವರ ಮಗನನ್ನು ನೋಡಿ "ಹೋಗು ಪ್ರಪಂಚ ದೊಡ್ಡದಾಗಿದೆ, ಆರಾಮಾಗಿ ಹೋಗಿ ಬದುಕೋ ಹೋಗು" ಎನ್ನುವ ಸೀನ್ ಇದೆ. ಆ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಆರೇಳು ವರ್ಷದ ಬಾಲಕ ಹೈದರಾಬಾದ್ನಲ್ಲಿ ಉಪೇಂದ್ರ ಎದುರು ಬಂದಿದ್ದಾನೆ.
ಹೌದು ಸಂದರ್ಶನದಲ್ಲಿ ಮಾತನಾಡುವ ವೇಳೆ ಯುವಕನೊಬ್ಬ ಎದ್ದು ನಿಂತು "ಸರ್ 'ಎ' ಸಿನಿಮಾದಲ್ಲಿ ಓಡಿ ಹೋಗುವ ಆ ಹುಡುಗ ನಾನೇ" ಎಂದು ಹೇಳಿದ್ದಾರೆ. ಇದನ್ನು ಕೇಳಿ ಉಪ್ಪಿ ಶಾಕ್ ಆಗಿದ್ದಾರೆ. ಅವತ್ತು ಓಡಿದವನು ಇವತ್ತು ಇಲ್ಲಿ ಬಂದಿದ್ದೀರಾ? ಎಂದು ಉಪ್ಪಿ ಕಣ್ಣರಳಿಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ ಸದ್ಯ ಬಿಡುಗಡೆ ಆಗಿರುವ 'ಯುಐ' ಚಿತ್ರದಲ್ಲಿ ಕೂಡ ಇಂಥದ್ದೇ ಒಂದು ಸನ್ನಿವೇಶ ಇದೆ. ಮಕ್ಕಳನ್ನು ಹೇಗೆ ಬೆಳೆಸಬೇಕು? ಯಾವುದು ಸ್ವಾರ್ಥ? ಯಾವುದು ತಪ್ಪು? ಎಂದು ಕಲ್ಕಿ ಪಾಠ ಮಾಡುವ ದೃಶ್ಯ ಬರುತ್ತದೆ. ಅದರಲ್ಲಿ ಬಿಗ್ಬಾಸ್ ಹಂಸಾ ಮಗುವಿನ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಮಗುವಿಗೆ ತಪ್ಪು ತಪ್ಪಾಗಿ ಬುದ್ದಿ ಕಲಿಸುತ್ತಿದ್ದೀರಾ? ಎಂದು ತಂದೆ-ತಾಯಿ ಹಾಗೂ ಶಿಕ್ಷಕನಿಗೆ ಕಲ್ಕಿ ಶಿಕ್ಷೆ ಕೊಡಲು ಕರೆದೊಯ್ಯುತ್ತಾನೆ. ಬಳಿಕ ಉಳಿದ ಬಾಲಕನನ್ನು ನೋಡಿ ಹೋಗು ಪ್ರಪಂಚ ದೊಡ್ಡದಾಗಿ ಬದುಕಿಕೋ ಎಂದು ಹೇಳಿದ್ದಾಗ ಆತ ಓಡಿ ಹೋಗುವ ಸನ್ನಿವೇಶ 'ಎ' ಚಿತ್ರದ ಆ ದೃಶ್ಯವನ್ನೇ ನೆನಪಿಸುತ್ತದೆ.
ಸದ್ಯ ಉಪೇಂದ್ರ ಮುಂದೆ ಬಂದು ಶಾಕ್ ಕೊಟ್ಟ ಯುವಕ ನಿಜಕ್ಕೂ 'ಎ' ಚಿತ್ರದಲ್ಲಿ ನಟಿಸಿದ್ದ ಬಾಲಕನಾ? ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. ಕೆಲವರು ಇಲ್ಲಾ ಅವನು ಸುಮ್ಮನೆ ಹೇಳಿದ್ದಾನೆ ಅಷ್ಟೇ ಅಂದ್ರೆ ಮತ್ತೆ ಕೆಲವರು ಇದ್ದರೂ ಇರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ 'ಯುಐ' ಸಿನಿಮಾ ಅಭಿಮಾನಿಗಳ ಮನಗೆದ್ದಿದೆ. ಆದರೆ ಕೆಲವರಿಗೆ ಇಷ್ಟವಾಗುತ್ತಿಲ್ಲ. ಮಿಶ್ರಪ್ರತಿಕ್ರಿಯೆ ಸಿಗುತ್ತಿದೆ. ಕೆಲವರು ಅದ್ಭುತ ಎಂದು ಹೇಳಿದರೆ ಮತ್ತೆ ಕೆಲವರು ಚೆನ್ನಾಗಿಲ್ಲ ಎನ್ನುತ್ತಿದ್ದಾರೆ. ಹಾಗಾಗಿ ಮುಂದೆ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎಂದು ಕಾದುನೋಡಬೇಕಿದೆ.


Click it and Unblock the Notifications











