"ಅವತ್ತು ನಿಜಕ್ಕೂ ನಾನು ಮೆಗಾಸ್ಟಾರ್ ಚಿರಂಜೀವಿ ಮುಂದೆ ಸೋತುಬಿಟ್ಟೆ"; ಉಪೇಂದ್ರ
ನಟ, ನಿರ್ದೇಶಕ ಉಪೇಂದ್ರ ಪ್ರತಿಭೆ ಬಗ್ಗೆ ಹೊಸದಾಗಿ ಹೇಳುವುದು ಬೇಕಾಗಿಲ್ಲ. 90ರ ದಶಕದಲ್ಲೇ ಪ್ಯಾನ್ ಇಂಡಿಯಾ ರೇಂಜ್ ಸಿನಿಮಾಗಳನ್ನು ಮಾಡಿದ ಬುದ್ದಿವಂತ. ತಮ್ಮ ವಿಭಿನ್ನ ಆಲೋಚನೆಗಳನ್ನು ತೆರೆಗೆ ತಂದು ಗೆದ್ದ ದೃಶ್ಯ ಮಾಂತ್ರಿಕ. ಆದರೆ ಇವತ್ತಿಗೂ ಉಪ್ಪಿಗೆ ಅದೊಂದು ಕೊರಗು ಇದೆ.
ರಿಯಲ್ ಸ್ಟಾರ್ ಹೊಸ ಸಿನಿಮಾ 'ಯುಐ' ಈ ವಾರ ತೆರೆಗೆ ಬರ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಶುಕ್ರವಾರ ಬೆಳಗ್ಗೆ 6.30ರ ಶೋಗಳ ಟಿಕೆಟ್ ಸೋಲ್ಡೌಟ್ ಆಗಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲಿ ಕೂಡ ಸಿನಿಮಾ ತೆರೆಗೆ ಬರ್ತಿದೆ. ತೆಲಂಗಾಣ, ತಮಿಳುನಾಡಿನಲ್ಲಿ ಉಪೇಂದ್ರ 'ಯುಐ' ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.

ದೇಶ ವಿದೇಶಗಳಲ್ಲಿ ಏಕಕಾಲಕ್ಕೆ 'ಯುಐ' ಸಿನಿಮಾ ತೆರೆಗೆ ಬರ್ತಿದೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಎರಡು ಹಾಡುಗಳು ರಿಲೀಸ್ ಆಗಿ ಹಿಟ್ ಆಗಿದೆ. ಇತ್ತೀಚೆಗೆ ಬಂದ ವಾರ್ನರ್ ಟೀಸರ್ ಕೂಡ ಗಮನ ಸೆಳೆದಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
ತೆಲಂಗಾಣದಲ್ಲಿ ಉಪೇಂದ್ರ ಪ್ರಚಾರಕ್ಕೆ ತೆರಳಿದಾಗ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಹಳ ವರ್ಷಗಳ ಹಿಂದೆ ಉಪೇಂದ್ರ ಅವರ 'ಓಂ', 'ಎ' ಹಾಗೂ 'ಉಪೇಂದ್ರ' ಚಿತ್ರಗಳು ತೆಲುಗಿನಲ್ಲಿ ಸದ್ದು ಮಾಡಿತ್ತು. 'ಸೂಪರ್' ಕೂಡ ಅಲ್ಲಿನ ಪ್ರೇಕ್ಷಕರನ್ನು ರಂಜಿಸಿತ್ತು. ಹಾಗಾಗಿ ಸಹಜವಾಗಿಯೇ ಉಪ್ಪಿ ಸಿನಿಮಾಗಳ ಬಗ್ಗೆ ತೆಲುಗು ಪ್ರೇಕ್ಷಕರಿಗೆ ಕುತೂಹಲ ಇರುತ್ತದೆ. ಇನ್ನು ಬಹಳ ಹಿಂದೆ ಚಿರಂಜೀವಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಅವಕಾಶ ಕೂಡ ಉಪ್ಪಿಗೆ ಸಿಕ್ಕಿತ್ತು.
1996ರಲ್ಲಿ ಉಪೇಂದ್ರ ಸಿನಿಮಾ ಶೈಲಿ ನೋಡಿ ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಕತೆ ಮಾಡಲು ಹೇಳಿದ್ದರು. ಆಗ ರಿಯಲ್ ಸ್ಟಾರ್ ಹೇಳಿದ್ದ ಕತೆ ಓಕೆ ಆಗಿರಲಿಲ್ಲ. ಹಾಗಾಗಿ ಆ ಅವಕಾಶ ಮಿಸ್ ಆಗಿತ್ತು. ಇತ್ತೀಚೆಗೆ ತೆಲುಗು ಮಾಧ್ಯಮದವರು ಇದೇ ವಿಚಾರದ ಬಗ್ಗೆ ಕೇಳಿದಾಗ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ. ಅವರ ಮಾತುಗಳು ವೈರಲ್ ಆಗುತ್ತಿದೆ.
"ಅದು 30 ವರ್ಷಗಳ ಹಿಂದಿನ ಮಾತು. ಆಗ ಮೆಗಾಸ್ಟಾರ್ ಇಮೇಜ್ ಏನು ಎನ್ನುವುದು ಗೊತ್ತಿರಲಿಲ್ಲ ನನಗೆ. ಫ್ಯಾಮಿಲಿಗೆ ಯೂತ್ಸ್ಗೆ ಇಷ್ಟವಾಗಬೇಕು. ಡ್ಯಾನ್ಸ್, ಫೈಟ್ ಎಲ್ಲಾ ಇರುವ ಕಂಪ್ಲೀಟ್ ಪ್ಯಾಕೇಜ್ ಬೇಕು ಅಂತಹವರಿಗೆ ಕತೆ ಮಾಡಲು. ಅದು ಬಿಟ್ಟು ನಾನು ಯುಐ ರೀತಿಯ ಕತೆ ಹೇಳಿದರೆ ಆಗುತ್ತಾ? ಬಳಿಕ ಗೊತ್ತಾಯಿತು, ಈ ಕತೆ ನಾನೇ ಮಾಡ್ಕೋಬೇಕು, ಚಿರು ಸರ್ಗೆ ಅಲ್ಲ ಅಂತ. ನಿಜ ಹೇಳಬೇಕು ಅಂದ್ರೆ ಅವರಿಗೆ ಸಬ್ಜೆಕ್ಟ್ ಮಾಡೋಕೆ ಸಾಧ್ಯವಾಗದೇ ನಾನು ಆಗ ನಿಜಕ್ಕೂ ಸೋತುಬಿಟ್ಟೆ" ಎಂದು ಉಪೇಂದ್ರ ಹೇಳಿದ್ದಾರೆ.
ಅಂದಹಾಗೆ 1998ರಲ್ಲಿ ಉಪೇಂದ್ರ ನಿರ್ದೇಶನದ 'ಸ್ವಸ್ತಿಕ್' ಚಿತ್ರ ಬಂದಿತ್ತು. ರಾಘವೇಂದ್ರ ರಾಜ್ಕುಮಾರ್ ಹೀರೊ ಆಗಿ ನಟಿಸಿದ್ದ ಸಿನಿಮಾ ವಿಭಿನ್ನ ಪ್ರಯತ್ನ ಎಂದೇ ಹೇಳಬೇಕು. ಇದೇ ಕತೆಯನ್ನು ಮೊದಲು ಚಿರಂಜೀವಿ ಅವರಿಗೆ ಉಪ್ಪಿ ಹೇಳಿದ್ದರು. ಆದರೆ ಚಿರು ಇದು ತನ್ನ ಇಮೇಜ್ಗೆ ತಕ್ಕಂತೆ ಇಲ್ಲ ಎಂದು ನಯವಾಗಿಯೇ ನಿರಾಕರಿಸಿದ್ದರು.
ಬಳಿಕ ಉಪೇಂದ್ರ ಕನ್ನಡದಲ್ಲಿ ಹೀರೊ ಆಗಿಯೂ ಗೆದ್ದರು. ಆದರೂ ಚಿರಂಜೀವಿ ಭೇಟಿ ಆದಾಗಲೆಲ್ಲಾ ನಿಮ್ಮೊಟ್ಟಿಗೆ ನಿಮಗೆ ಸಿನಿಮಾ ಮಾಡಬೇಕು ಎಂದು ಹೇಳ್ತೀನಿ. ಅವ್ರು ನೀವು ಈಗ ಹೀರೊ ಆಗಿದ್ದೀರಾ? ಈಗ ನನಗೆ ಆಕ್ಷನ್ ಕಟ್ ಹೇಳ್ತೀರಾ? ಎನ್ನುತ್ತಿರುತ್ತಾರೆ ಎಂದು ಉಪೇಂದ್ರ ನೆನಪಿಸಿಕೊಂಡಿದ್ದಾರೆ.


Click it and Unblock the Notifications











