ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಆ ಸಿನಿಮಾ ರೀಮೆಕಾ?
ಪವನ್ ಕಲ್ಯಾಣ್ ಅತ್ತ ರಾಜಕೀಯ ಇತ್ತ ಸಿನಿಮಾ ಎರಡನ್ನೂ ಸರಿದೂಗಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಆದರೆ ಸಾಕಷ್ಟು ನಿರ್ಮಾಪಕರು, ನಿರ್ದೇಶಕರು ಪವರ್ ಸ್ಟಾರ್ ಕಾಲ್ಶೀಟ್ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ. ಅರ್ಧಕ್ಕೆ ನಿಂತಿದ್ದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ.
ಮಾರ್ಚ್ 26ರಂದು ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರ್ತಿದೆ. ಚಿತ್ರದಲ್ಲಿ ಪವನ್ ಕಲ್ಯಾಣ್ ಜೋಡಿಯಾಗಿ ಕನ್ನಡ ನಟಿ ಶ್ರೀಲೀಲಾ ಮಿಂಚಿದ್ದಾರೆ. ಟೈಟಲ್ ರೋಲ್ನಲ್ಲಿ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ. ಹರೀಶ್ ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಪವನ್ ಹಾಗೂ ಹರೀಶ್ ಕಾಂಬಿನೇಷನ್ನಲ್ಲಿ ಬಂದಿದ್ದ 'ಗಬ್ಬರ್ ಸಿಂಗ್' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ನಿರ್ಮಾಣವಾಗಿದೆ. 5 ವರ್ಷಗಳ ಹಿಂದೆ ಸಿನಿಮಾ ಘೋಷಣೆ ಆಗಿತ್ತು. 3 ವರ್ಷಗಳ ಹಿಂದೆ ಫಸ್ಟ್ ಶೆಡ್ಯೂಲ್ ಶೂಟಿಂಗ್ ನಡೆದಿತ್ತು. ಬಳಿಕ ಆಂಧ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಸಿನಿಮಾ ಅರ್ಧಕ್ಕೆ ಬಿಟ್ಟಿದ್ದರು. ಪಕ್ಷ ಸಂಘಟಿಸಿ ಮೈತ್ರಿ ಕೂಟದಿಂದ ಗೆದ್ದು ಬೀಗಿದ್ದರು. ಆಂಧ್ರದ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ಹಾಗಾಗಿ ಸಿನಿಮಾ ಚಿತ್ರೀಕರಣ ತಡವಾಗಿತ್ತು.
ಚುನಾವಣೆಗೂ ಮುನ್ನ ಪವನ್ ನಟಿಸಿದ್ದ 3 ಸಿನಿಮಾಗಳು ಅರ್ಧಕ್ಕೆ ನಿಂತಿದ್ದವು. ಕಳೆದ ವರ್ಷ 'ಹರಿಹರವೀರಮಲ್ಲು' ಹಾಗೂ 'OG' ಚಿತ್ರಗಳನ್ನು ಪೂರ್ಣಗೊಳಿಸಿ ಬಿಡುಗಡೆ ಮಾಡಲಾಯಿತು. ಭರ್ಜರಿ ಓಪನಿಂಗ್ ಸಿಕ್ಕರೂ ಬಳಿಕ ಎರಡೂ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದ್ದವು. 'ಉಸ್ತಾದ್ ಭಗತ್ ಸಿಂಗ್' ಚಿತ್ರದ ಚಿತ್ರೀಕರಣ ಮುಗಿಸಿ ತೆರೆಗೆ ತರಲಾಗ್ತಿದೆ.
ಶ್ರೀಲೀಲಾ, ರಾಶಿಕ ಖನ್ನಾ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇದು ತಮಿಳಿನ 'ತೇರಿ' ಸಿನಿಮಾ ರಿಮೇಕ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಈ ಬಗ್ಗೆ ನಿರ್ದೇಶಕ ಹರೀಶ್ ಶಂಕರ್ ಪ್ರತಿಕ್ರಿಯಿಸಿದ್ದಾರೆ. ನಮ್ಮ ಸಿನಿಮಾ ದೃಶ್ಯಗಳನ್ನು 'ತೇರಿ' ಚಿತ್ರದಲ್ಲಿ ಬಳಸಿದ್ದರು. ಹಾಗಿರುವಾಗ ನಾವು ಯಾಕೆ ಅವರ ಸಿನಿಮಾ ರೀಮೆಕ್ ಮಾಡೋಣ ಎಂದು ಪ್ರಶ್ನಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಹರೀಶ್ ಶಂಕರ್ "ರೀಮೆಕ್ ಸಿನಿಮಾ ಆಗಿದ್ರೆ, ನಾನೇ ಹೇಳಿಬಿಡ್ತೀನಿ. ಚಿತ್ರಕತೆ, ನಿರ್ದೇಶನ, ಸಂಭಾಷಣೆ ಹರೀಶ್ ಶಂಕರ್ ಎಂದು ಹಾಕಿಕೊಳ್ತೀನಿ. ರೀಮೆಕ್ ಮಾಡುವುದರಲ್ಲಿ ಬೇಸರವಿಲ್ಲ. 'ಗಬ್ಬರ್ ಸಿಂಗ್' ಸಿನಿಮಾ ಮಾಡುವಾಗ ಚಿತ್ರಕಥೆ, ಮಾರ್ಪಾಟು ಎಂದು ಹಾಕಿಕೊಂಡಿದ್ದೆ. ಒಂದು ವೇಳೆ 'ಉಸ್ತಾದ್ ಭಗತ್ ಸಿಂಗ್' ರೀಮೆಕ್ ಆಗಿದ್ರೆ ಕಥೆ, ಚಿತ್ರಕಥೆ, ನಿರ್ದೇಶನ ಅಂತ ಯಾಕೆ ಹಾಕ್ತಿದ್ದೆ" ಎಂದು ಪ್ರಶ್ನಿಸಿದ್ದಾರೆ.
ಪೊಲೀಸ್ ಆಫೀಸರ್ ಪಾತ್ರ. ಸಮಾಜದಲ್ಲಿ ನಡೆಯುವ ಅಕ್ರಮ, ಅನ್ಯಾಯದ ವಿರುದ್ಧ ಹೋರಾಡುತ್ತಾನೆ. 'ತೇರಿ', 'ಟೆಂಪರ್', 'ಗಬ್ಬರ್ ಸಿಂಗ್' ಎಲ್ಲದರಲ್ಲೂ ಸೇಮ್. ಅಂದಹಾಗೆ ನಮ್ಮ 'ಗಬ್ಬರ್ ಸಿಂಗ್' ಚಿತ್ರದ ಅಂತ್ಯಾಕ್ಷರಿ ಸನ್ನಿವೇಶದಿಂದ ಸ್ಫೂರ್ತಿ ಪಡೆದು 'ತೇರಿ' ಚಿತ್ರದಲ್ಲಿ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಸನ್ನಿವೇಶ ಮಾಡಿದ್ದಾರೆ. ಹಾಗಿದ್ಮೇಲೆ ನಮ್ಮ ಸಿನಿಮಾ ರೀಮೆಕ್ ಅಂದ್ರೆ ಹೇಗೆ? ಹರೀಶ್ ಶಂಕರ್ ಕೇಳಿದ್ದಾರೆ.
ಅಶುತೋಷ್ ರಾಣ, ಪಾರ್ತಿಬನ್, ರಾಜೀವ್ ಕನಕಾಲ, ಗೌತಮಿ, ಪೋಸಾನಿ ಕೃಷ್ಣಮುರಳಿ ಸೇರಿ ದೊಡ್ಡ ತಾರಾಗಣ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿದೆ. ಅಯ್ಯನಂಕ ಬೋಸ್ ಛಾಯಾಗ್ರಹಣ, ದೇವಿಶ್ರೀ ಪ್ರಸಾದ್ ಸಂಗೀತ ಈ ಚಿತ್ರಕ್ಕಿದೆ. ಸೂಪರ್ ಹಿಟ್ 'ಗಬ್ಬರ್ ಸಿಂಗ್' ಕಾಂಬಿನೇಷನ್ನಲ್ಲೇ ಈ ಸಿನಿಮಾ ಕೂಡ ಬರ್ತಿರೋದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.


Click it and Unblock the Notifications











