'ವಕೀಲ್ ಸಾಬ್' ಚಿತ್ರತಂಡದ ಯೋಜನೆಗೆ ತಣ್ಣೀರು ಸುರಿದ ಹೈದರಾಬಾದ್ ಪೊಲೀಸ್!
ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಟ್ರೇಲರ್ ಬಿಡುಗಡೆ ಆಗಿದ್ದು ಬಹಳ ವೈರಲ್ ಆಗಿದೆ.
ಮೂರೂ ವರ್ಷಗಳ ಬಳಿಕ ಪವನ್ ಕಲ್ಯಾಣ್ ಅವರನ್ನು ದೊಡ್ಡ ಪರದೆಯ ಮೇಲೆ ನೋಡುವ ಖುಷಿಯಲ್ಲಿದ್ದಾರೆ ಅಭಿಮಾನಿಗಳು. ಪವನ್ ಅಭಿನಯದ ಕೊನೆಯ ಸಿನಿಮಾ ಬಿಡುಗಡೆ ಆಗಿದ್ದು 2018 ರ ಜನವರಿಯಲ್ಲಿ.
ಮೂರು ವರ್ಷಗಳ ಬಳಿಕ ಪವನ್ ಕಲ್ಯಾಣ್ಗೆ 'ಗ್ರ್ಯಾಂಡ್ ಎಂಟ್ರಿ' ಕೊಡುವ ಉಮೇದಿನಲ್ಲಿದ್ದ ಸಿನಿಮಾ ತಂಡ, ಅದ್ಧೂರಿ 'ಪ್ರೀ ರಿಲೀಸ್' ಕಾರ್ಯಕ್ರಮವನ್ನು ಯೋಜಿಸಿತ್ತು. ಹೈದರಾಬಾದ್ನಲ್ಲಿ ಸಾವಿರಾರು ಅಭಿಮಾನಿಗಳ ಮುಂದೆ ಕಾರ್ಯಕ್ರಮ ಮಾಡುವ ಯೋಜನೆ ಹಾಕಿತ್ತು. ಆದರೆ ಅದಕ್ಕೆ ತಡೆ ಬಿದ್ದಿದೆ.

ಅನುಮತಿ ನೀಡಿಲ್ಲ ಹೈದರಾಬಾದ್ ಪೊಲೀಸರು
'ವಕೀಲ್ ಸಾಬ್' ಸಿನಿಮಾ ತಂಡವು ಕಾರ್ಯಕ್ರಮ ಆಯೋಜಿಸಲು ಹೈದರಾಬಾದ್ ಪೊಲೀಸರು ಅನುಮತಿ ನೀಡಿಲ್ಲ. ಒಂದು ಸಾವಿರ ಜನರನ್ನು ಬೇಕಿದ್ದರೆ ಸೇರಿಸಿ, ಕೋವಿಡ್ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮ ಮಾಡಲು ಅಡ್ಡಿಯಿಲ್ಲ ಆದರೆ ಸಾವಿರಕ್ಕಿಂತಲೂ ಹೆಚ್ಚು ಜನರನ್ನು ಸೇರಿಸುವಂತಿಲ್ಲ ಎಂದಿದ್ದಾರೆ ಹೈದರಾಬಾದ್ ಪೊಲೀಸ್.

ಟ್ರೇಲರ್ ಬಿಡುಗಡೆಗೆ ಸಾಕಷ್ಟು ನೂಕಾಟ-ತಳ್ಳಾಟಗಳಾದವು
ಆದರೆ ಇದು ಸಾಧ್ಯವಾಗದ ಮಾತು. ಕೆಲವು ದಿನಗಳ ಹಿಂದೆ 'ವಕೀಲ್ ಸಾಬ್' ಟ್ರೇಲರ್ ಬಿಡುಗಡೆಗೆ ಸಾವಿರಾರು ಮಂದಿ ಅಭಿಮಾನಿಗಳು ಒಟ್ಟಿಗೆ ಸೇರಿ ಹಲ್-ಚಲ್ ಎಬ್ಬಿಸಿದ್ದರು. ಟ್ರೇಲರ್ಗಳನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿತ್ತು. ಹಲವು ಚಿತ್ರಮಂದಿರಗಳಲ್ಲಿ ನೂಕಾಟ-ತಳ್ಳಾಟ ಆಗಿ ಗಾಜುಗಳು ಒಡೆದು, ಪರದೆಗಳಿಗೆ ಹಾನಿಯಾದ ಘಟನೆಗಳು ನಡೆದವು.

ಯೋಜನೆ ಕೈಬಿಟ್ಟ ಚಿತ್ರತಂಡ
ಪವನ್ ಕಲ್ಯಾಣ್ ಕಾರ್ಯಕ್ರಮವೆಂದರೆ ಕಡಿಮೆಯೆಂದರೂ ಹತ್ತು ಸಾವಿರ ಜನ ಸೇರುತ್ತಾರೆ. ಹೀಗಿರುವಾಗ ಕೇವಲ 1000 ಮಂದಿಗೆ ಕಾರ್ಯಕ್ರಮವನ್ನು ಮೀಸಲು ಮಾಡುವುದು ಅಸಾಧ್ಯ ಎಂದೆಣಿಸಿದ ಚಿತ್ರತಂಡವು ಯೋಜಿತ ಪ್ರೀ ರಿಲೀಸ್ ಕಾರ್ಯಕ್ರಮವನ್ನು ರದ್ದು ಮಾಡಿದೆ.
Recommended Video

ಏಪ್ರಿಲ್ 9 ರಂದು ಸಿನಿಮಾ ಬಿಡುಗಡೆ
'ವಕೀಲ್ ಸಾಬ್' ಸಿನಿಮಾವು ಏಪ್ರಿಲ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹಿಂದಿಯ 'ಪಿಂಕ್' ಸಿನಿಮಾದ ರೀಮೇಕ್ ಆದ ಈ ಸಿನಿಮಾದಲ್ಲಿ ಪ್ರಕಾಶ್ ರೈ, ಅಂಜಲಿ, ನವಿತಾ ಥಾಮಸ್, ಅನನ್ಯಾ ನಾಗಲ್ಲ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಶ್ರುತಿ ಹಾಸನ್ ಸಹ ಇದ್ದಾರೆ. ಸಿನಿಮಾವನ್ನು ವೇಣು ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಬೋನಿ ಕಪೂರ್.


Click it and Unblock the Notifications











