'ವಾರಣಾಸಿ' ಚಿತ್ರದ 30 ನಿಮಿಷಗಳ ಯುದ್ಧದ ಬಗ್ಗೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಾತು
ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಮುಂದಿನ ವರ್ಷ ಏಪ್ರಿಲ್ 7ರಂದು ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಚಿತ್ರದಲ್ಲಿ ಹೊಸ ಪ್ರಯೋಗ ಮಾಡಲು ಜಕ್ಕಣ್ಣ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ 'ರಾಮಾಯಣ' ಕಾವ್ಯದ ಎಪಿಸೋಡ್ ಅನ್ನು ತಮ್ಮ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.
'ವಾರಣಾಸಿ' ಬರೀ ಆಕ್ಷನ್ ಅಡ್ವೆಂಚರಸ್ ಸಿನಿಮಾ ಮಾತ್ರವಲ್ಲ, ಟೈಮ್ ಟ್ರಾವೆಲಿಂಗ್ ಸಿನಿಮಾ ಕೂಡ ಹೌದು. ತ್ರೇತಾಯುಗದಿಂದ ಕಲಿಯುಗದವರೆಗೆ ಸಿನಿಮಾ ಕಥೆ ಸಾಗಲಿದೆ. ಕಾಶಿಯಿಂದ ದೂರ ಆಫ್ರಿಕಾ ಹಾಗೂ ಅಂಟಾರ್ಟಿಕಾ ಖಂಡದವರೆಗೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗಲಿದ್ದಾರೆ. ಮಹೇಶ್ ಬಾಬು, ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಚಿತ್ರದಲ್ಲಿದ್ದಾರೆ. ಇನ್ನು ಸಾಕಷ್ಟು ಕಲಾವಿದರು ಈ ಸಿನಿಮಾ ಭಾಗವಾಗುತ್ತಿದ್ದಾರೆ.

ಚಿತ್ರದಲ್ಲಿ ಶ್ರೀರಾಮನ ಅವತಾರದಲ್ಲಿ ಕೂಡ ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ. 'ವಾರಣಾಸಿ' ರುದ್ರನ ಕಥೆಯನ್ನು 'ರಾಮಾಯಣ'ದ ರಾಮ ಹಾಗೂ ಕುಂಭಕರ್ಣನ ಯುದ್ಧದವರೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಭಾಗಿ ಆಗಿದ್ದರು. ಸಿನಿಮಾ ಮೇಕಿಂಗ್, ಕಥೆ- ಚಿತ್ರಕಥೆ ಬರೆಯುವ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. 'ವಾರಣಾಸಿ' ಚಿತ್ರದಲ್ಲಿ ರಾಮ ಹಾಗೂ ಕುಂಭಕರ್ಣರ ಯುದ್ಧದ ಸನ್ನಿವೇ 20 ನಿಮಿಷ ಇರಲಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
ರಾಜಮೌಳಿ ವಿಷನ್, ಟೇಕಿಂಗ್, ಮೇಕಿಂಗ್ ಬಗ್ಗೆ ಗೊತ್ತೇಯಿದೆ. ಮಹಾಭಾರತವನ್ನು ತೆರೆಗೆ ತರುವುದು ತಮ್ಮ ಕನಸು ಎಂದು ಹೇಳುತ್ತಾ ಬರ್ತಿದ್ದಾರೆ. ಅದಕ್ಕಾಗಿಯೇ 'ಮಗಧೀರ', 'ಯಮದೊಂಗ' ಹಾಗೂ 'ಬಾಹುಬಲಿ' ರೀತಿಯ ಕಾಸ್ಟ್ಯೂಮ್ ಡ್ರಾಮಾ ಸಿನಿಮಾಗಳನ್ನು ಮಾಡಿ ಕಲಿಯುತ್ತಿದ್ದೇನೆ ಎಂದು ಹೇಳ್ತಾ ಬರ್ತಿದ್ದಾರೆ. ಇದೀಗ 'ವಾರಣಾಸಿ' ಚಿತ್ರದಲ್ಲಿ ಕೂಡ ರಾಮಯಣದ ಒಂದು ಸನ್ನಿವೇಶವನ್ನು ಕಟ್ಟಿಕೊಡುತ್ತಿದ್ದಾರೆ. 1300 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ ಎಂದು ಹೇಳುತ್ತಿದ್ದಾರೆ.
ಈಗಾಗಲೇ ರಾಮಾಯಣ ಯುದ್ಧ ಸನ್ನಿವೇಶದ ದೃಶ್ಯಗಳನ್ನು ಜಕ್ಕಣ್ಣ ಸೆರೆ ಹಿಡಿದಿದ್ದಾರೆ. ರುದ್ರ ಹಾಗೂ ಶ್ರೀರಾಮನಾಗಿ ಎರಡು ಪಾತ್ರಗಳಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ. ಮಂದಾಕಿನಿಯಾಗಿ ಪ್ರಿಯಾಂಕಾ ಚೋಪ್ರಾ ಹಾಗೂ ಕುಂಭ ಆಗಿ ಪೃಥ್ವಿರಾಜ್ ಅಬ್ಬರಿಸಿದ್ದಾರೆ. ಇದು ಜನ್ಮ ಜನ್ಮಾಂತರಗಳ ಕಥೆ ಎನ್ನಲಾಗ್ತಿದೆ. ಹಾಗಾಗಿ ಶ್ರೀರಾಮ ಹಾಗೂ ಕುಂಭಕರ್ಣ ಇಬ್ಬರು ರುದ್ರ ಹಾಗೂ ಕುಂಭ ಆಗಿಯೂ ಕಾಣಿಸಿಕೊಂಡಿರುವ ಸಾಧ್ಯತೆಯಿದೆ.
ಪ್ರಕಾಶ್ ರಾಜ್ ಕೂಡ 'ವಾರಣಾಸಿ' ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶ್ರೀ ದುರ್ಗಾ ಆರ್ಟ್ಸ್ ಹಾಗೂ ಶೋಯಿಂಗ್ ಬ್ಯುಸಿನೆಸ್ ಬ್ಯಾನರ್ಗಳ ಅಡಿಯಲ್ಲಿ ಕೆ. ಎಲ್ ನಾರಾಯಣ ಹಾಗೂ ಎಸ್. ಎಸ್ ಕಾರ್ತಿಕೇಯ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪಿ. ಎಸ್ ವಿನೋಧ್ ಛಾಯಾಗ್ರಹಣ ಹಾಗೂ ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕಿದೆ. ಈ ಚಿತ್ರವನ್ನು ಕೂಡ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಐಮ್ಯಾಕ್ಸ್ ಸ್ಕ್ರೀನ್ಗಳಿಗಾಗಿ ಸಿನಿಮಾ ಚಿತ್ರೀಕರಣ ಮಾಡಲಾಗ್ತಿದೆ.
'ಆರ್ಆರ್ಆರ್' ಬಳಿಕ ಬಹಳ ಸಮಯ ತೆಗೆದುಕೊಂಡು 'ವಾರಣಾಸಿ' ಚಿತ್ರವನ್ನು ರಾಜಮೌಳಿ ಆರಂಭಿಸಿದ್ದರು. ವಿಜಯೇಂದ್ರ ಪ್ರಸಾದ್ ಜೊತೆಗೆ ಎಸ್. ಎಸ್ ಕಂಚಿ ಎಂಬುವವರು ಚಿತ್ರಕ್ಕೆ ಕಥೆ ಬರೆದಿದ್ದಾರೆ. ರಾಜಮೌಳಿ ಚಿತ್ರಕಥೆ ಸಿದ್ಧಪಡಿಸಿದ್ದು ದೇವ ಕಟ್ಟಾ ಸಂಭಾಷಣೆಯಿದೆ. ಹೈದರಾಬಾದ್ನಲ್ಲಿ ಸದ್ದಿಲ್ಲದೇ ಚಿತ್ರೀಕರಣ ಆರಂಭಿಸಿದ್ದ ರಾಜಮೌಳಿ ಬಳಿಕ ಒಡಿಶಾದಲ್ಲಿ 2ನೇ ಶೆಡ್ಯೂಲ್ ಮುಗಿಸಿದ್ದರು. ಸೆಟ್ನಿಂದ ಒಂದಷ್ಟು ಫೋಟೊ, ವೀಡಿಯೋ ಲೀಕ್ ಆಗಿ ವಿಚಾರ ಬಹಿರಂಗವಾಗಿತ್ತು.


Click it and Unblock the Notifications