ವಿಜಯ್ ಬಹುನಿರೀಕ್ಷಿತ ಚಿತ್ರ 'ವಾರಸುಡು' ಬಿಡುಗಡೆ ಮುಂದೂಡಿಕೆ; ಚಿರು, ಬಾಲಯ್ಯ ಕಾರಣ ಎಂದ ನಿರ್ಮಾಪಕ!
ಸಂಕ್ರಾಂತಿ ಹಬ್ಬ ಬಂತೆಂದರೆ ಸಾಕು ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರರಂಗಗಳಲ್ಲಿ ಸ್ಟಾರ್ ನಟರ ಹಲವಾರು ಚಿತ್ರಗಳು ಬಿಡುಗಡೆಗೊಂಡು ಪೈಪೋಟಿಗೆ ಬೀಳುತ್ತವೆ. ಹೌದು, ಈ ಎರಡೂ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಗಳು ಇರುವ ಕಾರಣ ಆ ದಿನಗಳಂದು ಚಿತ್ರಗಳನ್ನು ಬಿಡುಗಡೆಗೊಳಿಸಿದರೆ ದೊಡ್ಡ ಪ್ರಮಾಣದ ಗಳಿಕೆ ಮಾಡಬಹುದು ಎಂಬ ಕಾರಣದಿಂದ ನಿರ್ಮಾಪಕರು ಚಿತ್ರಗಳನ್ನು ತೆರೆಗೆ ತರಲು ಮುಗಿ ಬೀಳ್ತಾರೆ.
ಈ ಹಿಂದಿನಿಂದಲೂ ಸಹ ಸಂಕ್ರಾಂತಿ ಪ್ರಯುಕ್ತ ಸ್ಟಾರ್ ನಟರ ಚಿತ್ರಗಳು ಮುಖಾಮುಖಿಯಾಗುತ್ತಿದ್ದು, ಯಾವ ಚಿತ್ರ ಗೆದ್ದು ಸಂಕ್ರಾಂತಿ ವಿನ್ನರ್ ಎನಿಸಿಕೊಳ್ಳಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಲಿದೆ. ಇನ್ನು ಪ್ರತೀ ವರ್ಷದಂತೆ ಈ ವರ್ಷವೂ ಸಹ ಸಂಕ್ರಾಂತಿ ಪ್ರಯುಕ್ತ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ.
ತಮಿಳಿನ ಸ್ಟಾರ್ ನಟರಾದ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಜನವರಿ 11ರಂದು ಬಿಡುಗಡೆಗೊಂಡರೆ, ಜನವರಿ 12ರಂದು ಬಾಲಕೃಷ್ಣ ನಟನೆಯ ತೆಲುಗು ಚಿತ್ರ ವೀರಸಿಂಹ ರೆಡ್ಡಿ ಹಾಗೂ ಮೆಗಾಸ್ಟಾರ್ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಜನವರಿ 13ರಂದು ತೆರೆಗೆ ಬರಲಿವೆ. ಇನ್ನು ಪ್ಯಾನ್ ಇಂಡಿಯಾ ಮಾದರಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆದ ಕಾರಣ ಚಿತ್ರಗಳನ್ನು ಇತರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುವುದು ಕಾಮನ್ ಆಗಿಬಿಟ್ಟಿದೆ. ಅದರಂತೆ ತಮಿಳಿನ ವಾರಿಸು ಚಿತ್ರವನ್ನು 'ವಾರಸುಡು' ಎಂಬ ಶೀರ್ಷಿಕೆ ಅಡಿಯಲ್ಲಿ ಜನವರಿ 11ಕ್ಕೆ ಬಿಡುಗಡೆ ಮಾಡಲು ತೀರ್ಮಾನಿಸಿಲಾಗಿತ್ತು. ತೆಲುಗು ಮೂಲದ ನಿರ್ಮಾಪಕ ದಿಲ್ ರಾಜು ಅವರೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ತೆಲುಗು ರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದರು. ಆದರೆ ಈ ನಿರ್ಧಾರದಿಂದ ಇದೀಗ ದಿಲ್ ರಾಜು ಹಿಂದೆ ಸರಿದಿದ್ದಾರೆ.

ಬದಲಿ ದಿನಾಂಕ ಘೋಷಣೆ
ಚಿತ್ರವನ್ನು ಮುಂದೂಡುತ್ತಿರುವುದರ ಕುರಿತು ಮಾತನಾಡಿದ ದಿಲ್ ರಾಜು ತಮಿಳಿನ ವಾರಿಸು ಚಿತ್ರದ ತೆಲುಗು ಡಬ್ ಚಿತ್ರವಾದ 'ವಾರಸುಡು' ಜನವರಿ 11ರಂದು ಬಿಡುಗಡೆಯಾಗುತ್ತಿಲ್ಲ, ಬದಲಾಗಿ ಜನವರಿ 14ರಂದು ತೆರೆಗೆ ಬರಲಿದೆ ಎಂದು ತಿಳಿಸಿದರು ಹಾಗೂ ಮೂಲ ತಮಿಳು ಚಿತ್ರ 'ವಾರಿಸು' ಮೊದಲು ನಿಶ್ಚಯಿಸಿದ ಹಾಗೆ ಜನವರಿ 11ರಂದೇ ಬಿಡುಗಡೆಯಾಗಲಿದೆ, ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದೂ ಸಹ ತಿಳಿಸಿದರು.

ಮುಂದೂಡಲು ಕಾರಣ ಬಾಲಯ್ಯ ಹಾಗೂ ಚಿರಂಜೀವಿ
ಇನ್ನು ವಾರಿಸು ಚಿತ್ರದ ತೆಲುಗು ಅವರತಣಿಕೆ ವಾರಸುಡು ಚಿತ್ರವನ್ನು ಮುಂದೂಡಲು ಕಾರಣ ಮೆಗಾಸ್ಟಾರ್ ಚಿರಂಜೀವಿ ಹಾಗೂ ನಂದಮೂರಿ ಬಾಲಕೃಷ್ಣ ಎಂದೂ ಸಹ ದಿಲ್ ರಾಜು ತಿಳಿಸಿದ್ದಾರೆ. ತೆಲುಗು ಸಿನಿ ರಸಿಕರು ಜನವರಿ 12ಕ್ಕೆ ತೆರೆಗೆ ಬರುವ ಬಾಲಯ್ಯ ನಟನೆಯ ವೀರಸಿಂಹ ರೆಡ್ಡಿ ಹಾಗೂ ಜನವರಿ 13ಕ್ಕೆ ತೆರೆಗೆ ಬರುವ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳನ್ನು ನೋಡಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ದಿಲ್ ರಾಜು ತಿಳಿಸಿದ್ದಾರೆ.

ಥಿಯೇಟರ್ ಕಸಿದುಕೊಂಡಿದ್ದ ದಿಲ್ ರಾಜು
ವಾರಸುಡು ಬಿಡುಗಡೆ ಕುರಿತಾಗಿ ದೊಡ್ಡ ಮಟ್ಟದ ವಿವಾದವೇ ಹುಟ್ಟುಕೊಂಡಿತ್ತು. ದೊಡ್ಡ ಹಬ್ಬಗಳ ಸಮಯದಲ್ಲಿ ತೆಲುಗು ರಾಜ್ಯಗಳಲ್ಲಿ ಮೂಲ ತೆಲುಗು ಚಿತ್ರಗಳಿಗೇ ಮೊದಲ ಆದ್ಯತೆ ನೀಡಬೇಕು, ಡಬಿಂಗ್ ಚಿತ್ರಗಳಿಗೆ ಹೆಚ್ಚು ಪ್ರಾಶಸ್ತ್ಯ ಬೇಡ ಎಂದು ತೆಲುಗು ನಿರ್ಮಾಪಕರ ಸಂಘ ತೀರ್ಮಾನಿಸಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಹೆಜ್ಜೆ ಇಟ್ಟಿದ್ದ ದಿಲ್ ರಾಜು ವಾರಸುಡು ಚಿತ್ರವನ್ನು ತೆಲುಗು ಚಿತ್ರಗಳ ಎದುರಿಗೆ ಮೂಲ ತೆಲುಗು ಚಿತ್ರಗಳಿಗಿಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದರು ಹಾಗೂ ಸ್ವತಃ ತಾನೇ ವಿತರಕನಾಗಿದ್ದ ಕಾರಣ ಚಿತ್ರಮಂದಿರಗಳನ್ನು ಕೂಡ ಕಸಿದುಕೊಂಡಿದ್ದರು. ಆದರೆ ಈಗ ತಮ್ಮ ಹೆಜ್ಜೆಯನ್ನು ದಿಲ್ ರಾಜು ಹಿಂದಿಟ್ಟಿದ್ದು ತೆಲುಗು ಚಿತ್ರಗಳು ಮೊದಲು ಬಿಡುಗಡೆಯಾಗಲು ಅನುವುಮಾಡಿಕೊಟ್ಟಿದ್ದಾರೆ.


Click it and Unblock the Notifications











