ಟಾಲಿವುಡ್ ಸ್ಟಾರ್ ನಟನ ಚಿತ್ರದಲ್ಲಿ ವಸಿಷ್ಠ ಸಿಂಹ ವಿಲನ್!
ಪ್ಯಾನ್ ಇಂಡಿಯಾ ಟ್ರೆಂಡ್ ಹೆಚ್ಚಾಗುತ್ತಿದ್ದಂತೆ ಕನ್ನಡ ಕಲಾವಿದರು ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುವ ಸಂಪ್ರದಾಯ ಸಹ ಅಧಿಕವಾಗುತ್ತಿದೆ. ಸದ್ಯ ಕನ್ನಡದ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ ಗಡಿಯಾಚೆ ಹೆಚ್ಚು ಬೇಡಿಕೆ ಹೊಂದುತ್ತಿದ್ದಾರೆ. ಕನ್ನಡದ ಜೊತೆ ಜೊತೆಯಲ್ಲಿ ತೆಲುಗು ಇಂಡಸ್ಟ್ರಿಯಲ್ಲಿ ಸತತವಾಗಿ ಅವಕಾಶ ಪಡೆದುಕೊಳ್ಳುತ್ತಿದ್ದಾರೆ.
ನಾಯಕನಟನಾಗಿ ನಟಿಸಿರುವ ತೆಲುಗು ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ ವಸಿಷ್ಠ ಮತ್ತೆರಡು ತೆಲುಗು ಪ್ರಾಜೆಕ್ಟ್ ಸಹಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಎರಡು ಟಾಲಿವುಡ್ ಸಿನಿಮಾ ಮುಗಿಸಿರುವ ವಸಿಷ್ಠ ಈಗ ಮೂರನೇ ಚಿತ್ರ ಕೈಗೆತ್ತಿಕೊಂಡಿದ್ದು, ತೆಲುಗು ಸ್ಟಾರ್ ನಟನ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದೆ ಓದಿ....

ನಾರಪ್ಪ ಚಿತ್ರದಲ್ಲಿ ವಸಿಷ್ಠ ಸಿಂಹ
ತೆಲುಗು ನಟ ವೆಂಕಟೇಶ್ ದಗ್ಗುಬಾಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ನಾರಪ್ಪ' ಚಿತ್ರದಲ್ಲಿ ಕನ್ನಡದ ನಟ ವಸಿಷ್ಠ ಸಿಂಹ ಬಣ್ಣ ಹಚ್ಚಲಿದ್ದಾರೆ. ಚಿತ್ರದ ನೆಗಿಟಿವ್ ಪಾತ್ರದಲ್ಲಿ ವಸಿಷ್ಠ ಅಭಿನಯಿಸಲಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

'ಅಸುರನ್' ರೀಮೇಕ್
ವೆಂಕಟೇಶ್ ನಟಿಸುತ್ತಿರುವ ನಾರಪ್ಪ ಚಿತ್ರ ತಮಿಳಿನಲ್ಲಿ ಧನುಶ್ ಮಾಡಿದ್ದ ಅಸುರುನ್ ಚಿತ್ರದ ತೆಲುಗು ರೀಮೇಕ್. ಧನುಶ್ ಪಾತ್ರದಲ್ಲಿ ವೆಂಕಟೇಶ್ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಫಸ್ಟ್ ಲುಕ್ ಪೋಸ್ಟರ್, ಟೀಸರ್ ಬಿಡುಗಡೆಯಾಗಿದೆ. 2019ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಿದ್ದ ಅಸುರನ್ ಸಿನಿಮಾ ಬಹಳ ದೊಡ್ಡ ಮಟ್ಟದ ಹಿಟ್ ಆಗಿತ್ತು.

ಮೂರನೇ ತೆಲುಗು ಸಿನಿಮಾ
'ಓದೆಲ ರೈಲ್ವೇ ಸ್ಟೇಷನ್' ಎಂಬ ತೆಲುಗು ಚಿತ್ರದಲ್ಲಿ ವಸಿಷ್ಠ ಸಿಂಹ ನಾಯಕನಾಗಿ ನಟಿಸಿದ್ದಾರೆ. ಇದು ವಸಿಷ್ಠಗೆ ಮೊದಲ ಟಾಲಿವುಡ್ ಚಿತ್ರ. ಯುವ ನಿರ್ದೇಶಕ ಅಶೋಕ್ ತೇಜ ಆಕ್ಷನ್ ಕಟ್ ಹೇಳಿದ್ದಾರೆ. ಹೆಬಾ ಪಟೇಲ್ ಮತ್ತು ಪೂಜಿತಾ ಪೊನ್ನಡ ಇಬ್ಬರು ನಾಯಕಿಯರು. ಇದರ ಜೊತೆಗೆ ಇನ್ನು ಹೆಸರಿಡದ ಚಿತ್ರದಲ್ಲೂ ವಸಿಷ್ಠ ನಟಿಸಿದ್ದು ಅದು ಚಿತ್ರೀಕರಣ ಮುಗಿದಿದೆಯಂತೆ. ಈಗ ನಾರಪ್ಪ ಮೂರನೇ ಪ್ರಾಜೆಕ್ಟ್.

ತಮಿಳಿನಲ್ಲೂ ವಸಿಷ್ಠ ನಟನೆ!
ಕನ್ನಡ, ತೆಲುಗು ಬಳಿಕ ತಮಿಳಿನಲ್ಲೂ ವಸಿಷ್ಠ ಸಿಂಹ ಸಿನಿಮಾ ಮಾಡ್ತಿದ್ದಾರೆ. ತಮಿಳು ಪ್ರಾಜೆಕ್ಟ್ ಕುರಿತು ಮಾತುಕತೆ ಮುಗಿದಿದೆ. 2021ರ ಸೆಕೆಂಡ್ ಹಾಫ್ನಲ್ಲಿ ಶೂಟಿಂಗ್ ಶುರುವಾಗಬಹುದು. ಈ ನಡುವೆ ತೆಲುಗು ಹಾಗೂ ಕನ್ನಡದಲ್ಲಿ ಬಾಕಿ ಉಳಿದಿರುವ ಚಿತ್ರೀಕರಣ ಮಾಡಿ ಮುಗಿಸಲಿದ್ದಾರೆ ವಸಿಷ್ಠ.


Click it and Unblock the Notifications











