Don't Miss!
- Lifestyle ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
- News Bihar Politics: ಬಿಜೆಪಿಗೆ ಕಳೆದ ಚುನಾವಣೆಯ ಭರ್ಜರಿ ಯಶಸ್ಸು ಈ ಬಾರಿ ಸಾಧ್ಯವಿಲ್ಲ ಬಿಡಿ!
- Sports ಕಮಿನ್ಸ್ ಟೆನ್ಷನ್ ಹೆಚ್ಚಿಸಿದ ಸ್ಟಾರ್ ಪ್ಲೇಯರ್ ನಿರ್ಧಾರ: ಎಸ್ಆರ್ಎಚ್ ತಂಡಕ್ಕೆ ಆರಂಭದಲ್ಲೇ ಪೆಟ್ಟು
- Technology ಬಹುನಿರೀಕ್ಷಿತ ರಿಯಲ್ಮಿ ನಾರ್ಜೋ 70 ಪ್ರೊ 5G ಲಾಂಚ್!..ಇಯರ್ಬಡ್ಸ್ ಉಚಿತ!
- Automobiles ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪರಾಷ್ಟ್ರಪತಿಗೆ ಚಿರು ಮನವಿ, 'ರಾಜಕೀಯ ಬಿಟ್ಟು ಒಳ್ಳೆಯದು ಮಾಡಿದೆ' ಎಂದ ವೆಂಕಯ್ಯ
''ನಾನು ಎಂದೋ ಹೇಳಿಬಿಟ್ಟಿದ್ದೇನೆ, ನಟ ಚಿರಂಜೀವಿ ತೆಲುಗು ಚಿತ್ರರಂಗದ ಮೂರನೇ ಕಟ್ಟಿದ್ದಂತೆ. ಮೊದಲೆರಡು ಕಣ್ಣುಗಳು ದಿವಂಗತ ಎನ್ಟಿಆರ್ ಹಾಗೂ ನಾಗೇಶ್ವರ ರಾವ್'' ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ಯೋಧ ಲೈಫ್ಲೈನ್ ಡಯೋಗ್ನೆಸ್ಟಿಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೆಂಕಯ್ಯ ನಾಯ್ಡು, ರಾಜಕೀಯೇತರವಾಗಿ ಹಲವು ವಿಷಯಗಳನ್ನು ಮಾತನಾಡಿದರು. ಅವಿಭಜಿತ ಆಂಧ್ರಪ್ರದೇಶದಲ್ಲಿ ಜನಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜಕೀಯ ಉನ್ನತ ಪದವಿಗಳು, ಪ್ರಸ್ತುತ ರಾಜಕೀಯದ ಬಗ್ಗೆ ತಮ್ಮದೇ ರೀತಿಯಲ್ಲಿ ವಿಮರ್ಶೆ ಮಾಡಿದರು. ಜೊತೆಗೆ ವೇದಿಕೆಯಲ್ಲಿ ಹಾಜರಿದ್ದ ಚಿರಂಜೀವಿ ಅವರ ಬಗ್ಗೆಯೂ ಕೆಲವು ಮಾತುಗಳನ್ನಾಡಿದರು.
ಮೊದಲು ಮಾತನಾಡಿದ ನಟ ಚಿರಂಜೀವಿ, ವೆಂಕಯ್ಯ ನಾಯ್ಡು ಅವರನ್ನು ಉದ್ದೇಶಿಸಿ, ''ನೀವು ಉಪರಾಷ್ಟ್ರಪತಿ ಆಗಿರುವುದು ತೆಲುಗು ಜನಗಳಿಗೆ ಹೆಮ್ಮೆಯ ವಿಷಯ. ಆದರೆ ನಿಮ್ಮನ್ನು ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಪದವಿಯಲ್ಲಿ ಕಾಣಲು ತೆಲುಗು ಪ್ರಜೆಗಳಾದ ನಾವು ಕಾತರದಿಂದ ಕಾಯುತ್ತಿದ್ದೇವೆ, ಒಂದೊಮ್ಮೆ ರಾಷ್ಟ್ರಪತಿ ಪದವಿ ನಿಮ್ಮನ್ನು ಅರಸಿ ಬಂದರೆ, ನಿಮ್ಮ ಒಳ್ಳೆಯ ತನದಿಂದಲೋ, ಅಥವಾ ನನಗೆ ಬೇಡ ಬೇರೆಯವರಿಗೆ ಕೊಡಿ ಎಂತಲೋ ಆ ಪದವಿಯನ್ನು ನಿರಾಕರಿಸಬೇಡಿ, ತೆಲುಗು ಜನಗಳಿಗೆ ಹೆಮ್ಮೆಯ ಭಾವ ನೀಡಲಾದರೂ ಆ ಪದವಿ ಸ್ವೀಕರಿಸಿ'' ಎಂದು ಮನವಿ ಮಾಡಿದರು.
ಜನಗಳ ಜೊತೆ ಬೆರೆಯಲು ಸಾಧ್ಯವಾಗುತ್ತಿಲ್ಲ: ವೆಂಕಯ್ಯ ನಾಯ್ಡು
ಬಳಿಕ ಮಾತನಾಡಿದ ವೆಂಕಯ್ಯ ನಾಯ್ಡು, ತಮ್ಮ ಎಂದಿನ ರಾಜಕೀಯ ಶೈಲಿ ಬಿಟ್ಟು ಆಪ್ತವಾಗಿ ಮಾತನಾಡುತ್ತಾ, ''ನನಗೆ ಈ ಪದವಿಗಳು ಬೇಡವಾಗಿಬಿಟ್ಟಿವೆ. ಇವುಗಳಿಂದ ನಾನು ಸ್ವೇಚ್ಛೆಯಿಂದ ಇರಲು ಸಾಧ್ಯವಾಗುತ್ತಿಲ್ಲ. ನಾನು ಅಂದುಕೊಂಡ ಕಡೆಗೆ ಹೋಗಲಾಗುತ್ತಿಲ್ಲ, ಜನಗಳನ್ನು ಭೇಟಿಯಾಗಲಾಗುತ್ತಿಲ್ಲ. ಹಾಗೆಂದು ಉಪರಾಷ್ಟ್ರಪತಿ ಪದವಿ ಕೆಟ್ಟದ್ದೆಂದು ನಾನು ಹೇಳುತ್ತಿಲ್ಲ ಆದರೆ ಈ ಪದವಿಗೆ ಕೆಲವು ನಿಯಮಗಳು, ಗಡಿಗಳಿವೆ, ಜನರ ಜೊತೆ ಬೆರೆತವರಿಗೆ, ಜನಗಳ ಜೊತೆ ಬೆಳೆದವರಿಗೆ ಅವು ಸರಿಹೊಂದುವುದಿಲ್ಲ'' ಎಂದರು.
ರಾಜಕೀಯ ಬಿಟ್ಟು ಒಳ್ಳೆಯದು ಮಾಡಿದೆ: ವೆಂಕಯ್ಯ ನಾಯ್ಡು
ಚಿರಂಜೀವಿ ಬಗ್ಗೆ ಮಾತನಾಡಿದ ವೆಂಕಯ್ಯ ನಾಯ್ಡು, ''ಚಿರಂಜೀವಿ ರಾಜಕೀಯ ಬಿಟ್ಟು ಬಹಳ ಒಳ್ಳೆಯ ಕೆಲಸ ಮಾಡಿದ. ರಾಜಕೀಯ ಬಿಟ್ಟು ಈಗ ತೆಲುಗು ಕಲಾತಾಯಿಯ ಸೇವೆಯಲ್ಲಿ ಮತ್ತೆ ತೊಡಗಿದ್ದಾನೆ. ಒಳ್ಳೆಯ ಕೆಲಸ ಮಾಡುತ್ತಿದ್ದಾನೆ. ಇದರಿಂದ ಅವನ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ'' ಎಂದರು. ಆಗ ಚಿರಂಜೀವಿ, ''ನಿಜವೇ ಸ್ವಾಮಿ'' ಎಂದು ನಗುತ್ತಾ ಹೇಳಿದರು. ಅದಕ್ಕೆ ಮರು ಉತ್ತರಿಸಿದ ಉಪರಾಷ್ಟ್ರಪತಿಗಳು, ''ನಿಜ ನಾನೇ ನೋಡುತ್ತಿದ್ದೀನಲ್ಲ, ಈಗಲೂ ಯುವಕನಂತೆ ಇದ್ದೀಯ'' ಎಂದರು.
ರಾಜಕೀಯ ಈಗ ಬಹಳ ಕೆಟ್ಟುಬಿಟ್ಟಿದೆ: ವೆಂಕಯ್ಯ
ಮುಂದುವರೆದು ಮಾತನಾಡುತ್ತಾ, ''ರಾಜಕೀಯ ಈಗ ಬಹಳ ಕೆಟ್ಟುಬಿಟ್ಟಿದೆ. ಮೊದಲಿನಂತೆ ಅದು ಪುಣ್ಯಕ್ಷೇತ್ರವಲ್ಲ. ಬಹಳ ಹೊಲಸಾಗಿಬಿಟ್ಟಿದೆ. ಈಗಿನ ರಾಜಕೀಯ ನಾಯಕರು ಆಡುವ ಮಾತುಗಳು, ನಡೆದುಕೊಳ್ಳುವ ರೀತಿ ಹೇಸಿಗೆ ಹುಟ್ಟಿಸುತ್ತವೆ. ನನಗೆ ಹೆಸರು ಹೇಳಲು ಇಷ್ಟವಿಲ್ಲ. ಹಾಗೆಂದು ಎಲ್ಲ ರಾಜಕಾರಣಿಗಳೂ ಕೆಟ್ಟವರೇ ಎಂದೇನೂ ಸಹ ಅಲ್ಲ. ಆದರೆ ಒಳ್ಳೆಯವನ್ನು ನಾವು ಆರಿಸಿ ತರಬೇಕು, ಪ್ರಜೆಗಳಿಂದ ಬಂದವರನ್ನು ನಾವು ಉನ್ನತ ದರ್ಜೆಗೆ ಏರಿಸಬೇಕು'' ಎಂದು ಮಾರ್ಮಿಕವಾಗಿ ಹೇಳಿದರು.
ರಾಜಕೀಯದಲ್ಲಿ ಆಸಕ್ತಿ ಕಡಿಮೆಯಾಗಿದೆ: ವೆಂಕಯ್ಯನಾಯ್ಡು
ರಾಷ್ಟ್ರಪತಿ ಹುದ್ದೆ ಸ್ವೀಕರಿಸಬೇಕೆಂಬ ಚಿರಂಜೀವಿಯ ಮನವಿಗೆ ಪ್ರತಿಕ್ರಿಯಿಸಿದ ವೆಂಕಯ್ಯ ನಾಯ್ಡು, ''ನನಗೆ ರಾಜಕೀಯದ ಮೇಲೆ ಆಸಕ್ತಿಯೇ ಕಡಿಮೆ ಆಗಿಬಿಟ್ಟಿದೆ. ಈಗ ಇನ್ನೂ ಐದು ವರ್ಷ ಪದವಿಯಲ್ಲಿರುವಂತೆ ಹೇಳಿದರೆ ನನಗೆ ಭಯವಾಗುತ್ತದೆ. ನನಗೆ ಸಾಕಾಗಿದೆ. ಜನಗಳ ಜೊತೆ ಬದುಕುವುದು ರೂಢಿಸಿಕೊಂಡು ಬಂದಿದ್ದೇನೆ. ಆದರೆ ಈಗ ಮತ್ತೆ ಐದು ವರ್ಷ ಜನಗಳಿಂದ ದೂರವಿರಬೇಕೆಂಬ ಆಲೋಚನೆಯೇ ಭಯಗೊಳಿಸುತ್ತಿದೆ'' ಎನ್ನುವ ಮೂಲಕ ತಾವು ರಾಷ್ಟ್ರಪತಿ ಹುದ್ದೆ ಸ್ವೀಕರಿಸುವುದಿಲ್ಲ ಎಂದರು.