ಹಾಸ್ಯನಟ ವೇಣು ಮಾಧವ್ ಸಾವಿಗೆ ಕಾರಣವೇನು? ಪತ್ನಿ ಬಿಚ್ಚಿಟ್ಟ ಮಾಹಿತಿ
ಇತರೆ ಚಿತ್ರರಂಗಗಳಂತೆ ತೆಲುಗು ಚಿತ್ರರಂಗದಲ್ಲಿಯೂ ಕೆಲವು ಪ್ರತಿಭಾವಂತ ಹಾಸ್ಯನಟರಿದ್ದಾರೆ. ಅದರಲ್ಲಿಯೂ ಲಿಜೆಂಡ್ ಹಾಸ್ಯ ನಟ ಬ್ರಹ್ಮಾನಂದಂ ಅವರ ಹೊರತಾಗಿಯೂ ಹಲವು ಹಾಸ್ಯನಟರು ಅಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ ಹಾಸ್ಯ ಕಲಾವಿದರಲ್ಲಿ ವೇಣು ಮಾಧವ್ ಸಹ ಒಬ್ಬರಾಗಿದ್ದರು. ಕಡಿಮೆ ಅವಧಿಯಲ್ಲಿಯೇ ಸ್ಟಾರ್ ಹಾಸ್ಯನಟನಾಗಿ ಗುರುತಿಸಿಕೊಂಡಿದ್ದ ವೇಣು ಮಾಧವ್ ಅಷ್ಟೇ ಶೀಘ್ರವಾಗಿ ನಿಧನ ಹೊಂದಿಬಿಟ್ಟರು.
2019 ರಲ್ಲಿ ಹಠಾತ್ತನೆ ವೇಣುಮಾಧವ್ ನಿಧನ ಹೊಂದಿದರು. ಆಗಿನ್ನೂ ಅವರಿಗೆ 39 ವರ್ಷ ವಯಸ್ಸಾಗಿತ್ತು. ಸಾಕಷ್ಟು ಸಿನಿಮಾ ಅವಕಾಶಗಳು ಸಹ ಕೈಯಲ್ಲಿತ್ತು. ವೇಣು ಮಾಧವ್ ನಿಧನ ಹೊಂದಿದಾಗ ಅವರ ಬಗ್ಗೆ ಹಲವು ಸುದ್ದಿಗಳುಹರಿದಾಡಿದ್ದವು. ವೇಣು ಮಾಧವ್ಗೆ ಎಲ್ಲ ರೀತಿಯ ಕೆಟ್ಟ ಅಣ್ಯಾಸಗಳು ಇದ್ದವು ಅದೇ ಕಾರಣದಿಂದ ನಿಧನ ಹೊಂದಿದರು ಎನ್ನಲಾಯ್ತು. ಇದೀಗ ಅವರ ಪತ್ನಿಯೇ, ವೇಣು ಮಾಧವ್ ಸಾವಿಗೆ ಕಾರಣ ತಿಳಿಸಿದ್ದಾರೆ.
ವೇಣು ಮಾಧವ್ ನಿಧನದ ಎರಡಕ್ಕೂ ಹೆಚ್ಚು ವರ್ಷಗಳ ಬಳಿಕ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿರುವ ಅವರ ಕುಟುಂಬ ವೇಣು ಮಾಧವ್ ನಿಧನಕ್ಕೆ ನಿಜವಾದ ಕಾರಣ ಏನೆಂಬುದನ್ನು ಹೇಳಿದ್ದಾರೆ. ಜೊತೆಗೆ ವೇಣು ಮಾಧವ್ ನಿಧನದ ಸಂದರ್ಭ ಹಬ್ಬಿಸಲಾದ ಸುಳ್ಳು ಸುದ್ದಿಗಳೆಲ್ಲವೂ ಸುಳ್ಳೆಂದು ಹೇಳಿದ್ದಾರೆ.

ವೇಣು ಮಾಧವ್ ಸಾವಿಗೆ ಕಾರಣವೇನು?
''ವೇಣು ಮಾಧವ್ಗೆ ಕುಡಿತದ, ಧೂಮಪಾನದ ಚಟ ಇತ್ತು. ಹಾಗೆಂದು ಅದರಿಂದಲೇ ಅವರು ನಿಧನ ಹೊಂದಿದರು ಎಂಬುದು ಸುಳ್ಳು. ಕುಡಿತ, ಧೂಮಪಾನವನ್ನು ಅತಿಯಾಗಿ ಅವರು ಮಾಡುತ್ತಿರಲಿಲ್ಲ. ಅವರು ನಿಧನ ಹೊಂದಲು ಡೆಂಗ್ಯೂ ಕಾರಣವಾಯ್ತು. ಅವರಿಗೆ ಡೆಂಗ್ಯೂ ಆಗಿತ್ತು. ಆದರೆ ಆ ಸಮಯದಲ್ಲೂ ಅವರು ಕೆಲಸ, ಕುಟುಂಬ ಎಂದು ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಅವರಿಗೆ ಡೆಂಗ್ಯೂ ತೀವ್ರವಾಗಿ ಮರಣಕ್ಕೆ ಈಡಾದರು'' ಎಂದಿದ್ದಾರೆ.

ಖಿನ್ನತೆಗೆ ಒಳಗಾಗಿದ್ದರು ವೇಣು ಮಾಧವ್: ಪತ್ನಿ ಶ್ರೀ ವಾಣಿ
''ಅಲ್ಲದೆ, ವೇಣು ಮಾಧವ್ ನಿಧನ ಹೊಂದುವ ಮೂರು ತಿಂಗಳು ಮುನ್ನ ಅವರ ಸಹೋದರ ನಿಧನ ಹೊಂದಿದ್ದರು. ಇದು ಅವರನ್ನು ಖಿನ್ನತೆಗೆ ದೂಡಿತ್ತು. ಅದರಿಂದ ಕುಡಿತ ತುಸು ಹೆಚ್ಚಾಗಿತ್ತಾದರೂ ಅವರಿಗೆ ಕುಡಿತಕ್ಕೆ ಸಂಬಂಧಿಸಿದ ಯಾವುದೇ ಖಾಯಿಲೆ ಇರಲಿಲ್ಲ. ಡೆಂಗ್ಯೂ ಬಂದಾಗಲೂ ಅವರು ಸರಿಯಾಗಿ ಊಟ ಮಾಡದೆ, ಅದಕ್ಕೆ ತಕ್ಕಂತೆ ಡಯೆಟ್ ಫಾಲೋ ಮಾಡದೆ ನಿರ್ಲಕ್ಷ್ಯ ತೋರಿದರು'' ಎಂದಿದ್ದಾರೆ ಅವರ ಪತ್ನಿ ಶ್ರೀ ವಾಣಿ.

ಬಹಳ ಅಪಪ್ರಚಾರ ಮಾಡಿದರು: ವೇಣು ಮಾಧವ್ ಪತ್ನಿ
ವೇಣು ಮಾಧವ್ ನಿಧನವಾದ ಸಮಯದಲ್ಲಿ ಅವರ ಬಗ್ಗೆ ಹಲವರು ಕೆಟ್ಟ ಸುದ್ದಿಗಳನ್ನು ಹರಡಿದರು. ವೇಣು ಮಾಧವ್ ಕೆಟ್ಟ ವ್ಯಕ್ತಿ ಎಂಬ ಅಭಿಪ್ರಾಯ ಬರುವಂತೆ ಮಾಡಿದರು. ಕುಡಿತದಿಂದ ಅವರು ಸತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿಯೂ ಪ್ರಚಾರ ಮಾಡಲಾಯ್ತು. ಅವರಿಗೆ ಗರ್ಲ್ಫ್ರೆಂಡ್ ಸಹವಾಸ ಇತ್ತು, ಅದೇ ಸಾವಿಗೆ ಕಾರಣ ಎಂದೂ ಸಹ ಕೆಲವರು ಪ್ರಚಾರ ಮಾಡಿದರು. ಇದರಿಂದಾಗಿ ನಮಗೆ ಸಿಗಬೇಕಾದ ಸಹಾಯ ಸಹ ಸಿಗಲಿಲ್ಲ. ಆದರೆ ವೇಣು ಮಾಧವ್ ಸಾವಿಗೆ ಅದ್ಯಾವುದೂ ಕಾರಣವಾಗಿರಲಿಲ್ಲ ಎಂದಿದ್ದಾರೆ ಶ್ರೀವಾಣಿ.

ವೇಣು ಮಾಧವ್ ಬಗ್ಗೆ ಮಕ್ಕಳ ಮಾತು
ವೇಣು ಮಾಧವ್ ಮಕ್ಕಳು ಸಹ ಸಂದರ್ಶನದಲ್ಲಿ ಭಾಗವಹಿಸಿದ್ದು, ''ನಮ್ಮ ತಂದೆಯವರು ನಮಗೆ ಒಳ್ಳೆಯ ಗೆಳೆಯರಂತೆ ಇದ್ದರು. ಅವರೊಬ್ಬ ಒಳ್ಳೆಯ ಕೌಟುಂಬಿಕ ವ್ಯಕ್ತಿ. ಸಿನಿಮಾಗಳಲ್ಲಿ ಸಾಕಷ್ಟು ಹಾಸ್ಯ ಮಾಡುತ್ತಿದ್ದ ಅವರು, ಮನೆಯಲ್ಲಿ ಇನ್ನೂ ಹೆಚ್ಚು ನಗಿಸುತ್ತಿದ್ದರು. ಅವರು ಎಂದೂ ನಮ್ಮನ್ನು ಹೊಡೆದಿದ್ದು, ಬೈದಿದ್ದು ನಮಗೆ ನೆನಪೇ ಇಲ್ಲ. ಹಾಗಾಗಿ ಈಗ ಅವರನ್ನು ನಾವು ಹೆಚ್ಚು ಮಿಸ್ ಮಾಡಿಕೊಳ್ಳುತ್ತೀವಿ. ಮುಂಚೆಯೂ ನಾವೆಲ್ಲೂ ನಾವು ವೇಣು ಮಾಧವ್ ಮಕ್ಕಳು ಎಂದು ಹೇಳಿ ಯಾವುದೇ ರಿಯಾಯಿತಿ ಪಡೆದುಕೊಂಡಿಲ್ಲ. ಮುಂದೆಯೂ ಹಾಗೆಯೇ ಇರುತ್ತೀವಿ'' ಎಂದಿದ್ದಾರೆ.


Click it and Unblock the Notifications











