ಕೇಂದ್ರ ಸರ್ಕಾರದಿಂದ ನಟ ಚಿರಂಜೀವಿಗೆ ಅಪರೂಪದ ಗೌರವ: ಅಭಿಮಾನಿಗಳು, ಆಪ್ತರಿಂದ ಅಭಿನಂದನೆ
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರಿಗೆ 'ಇಂಡಿಯನ್ ಫಿಲ್ಮ್ ಪರ್ಸನಲಿಟಿ ಆಫ್ ದಿ ಇಯರ್ -2022' ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಗೋವಾದಲ್ಲಿ ನಡೆಯುತ್ತಿರುವ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ಚಿರಂಜೀವಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಭಾರತೀಯ ಚಿತ್ರರಂಗ 100 ವರ್ಷ ಪೂರೈಸಿದ ಸಂಭ್ರಮದಲ್ಲಿ 2013 ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 150ಕ್ಕೂ ಅಧಿಕ ಸಿನಿಮಾಗಳಲ್ಲಿ ಚಿರಂಜೀವಿ ನಟಿಸಿ ಗೆದ್ದಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂ, ಆಕ್ಟಿಂಗ್, ಡ್ಯಾನ್ಸ್ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಬಾಕ್ಸಾಫೀಸ್ ಶೇಕ್ ಮಾಡಿದ್ದಾರೆ.
ಟಾಲಿವುಡ್ನಲ್ಲಿ ಎನ್ಟಿಆರ್ ನಂತರ ಆ ಮಟ್ಟಿಗೆ ಸ್ಟಾರ್ಡಮ್ ಪಡೆದ ನಟ ಚಿರಂಜೀವಿ. 90ರ ದಶಕದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ನ ಮೀರಿಸಿ ನಂಬರ್ ವನ್ ಪಟ್ಟಕ್ಕೇರಿದ್ದರು. ತಮ್ಮ ಸಾಮಾಜಿಕ ಕಾರ್ಯಕ್ರಮಗಳಿಂದಲೂ ಚಿರು ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

ಪ್ರಶಸ್ತಿ ನೀಡಿದ್ದಕ್ಕೆ ಚಿರು ಧನ್ಯವಾದ
ಕೇಂದ್ರ ಸರ್ಕಾರದಿಂದ 'ಇಂಡಿಯನ್ ಫಿಲ್ಮ್ ಪರ್ಸನಲಿಟಿ ಆಫ್ ದಿ ಇಯರ್ -2022' ಪ್ರಶಸ್ತಿ ಘೋಷಣೆಯಾಗಿರುವ ಬಗ್ಗೆ ನಟ ಚಿರು ಪ್ರತಿಕ್ರಿಯೆ ನೀಡಿದ್ದಾರೆ. "ಈ ಗೌರವಕ್ಕೆ ಬಹಳ ಸಂತಸದಿಂದ ಬಹಳ ವಿನಮ್ರವಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ತಿಳಿಸುತ್ತಿದ್ದೇನೆ. ಅದೇ ರೀತಿ ಕೇಂದ್ರ ಮಾಹಿತಿ ಪ್ರಸಾರ ಶಾಖೆ ಸಚಿವರಾದ ಅನುರಾಗ್ ಠಾಕೂರ್ ಹಾಗೂ ಗೋವಾ ಫಿಲ್ಮ್ ಫೆಸ್ಟಿವಲ್ ತಂಡಕ್ಕೆ ಧನ್ಯವಾದ. ನಾನು ಈಗ ಈ ಮಟ್ಟದಲ್ಲಿ ಇರಲು ಅಭಿಮಾನಿಗಳೇ ಕಾರಣ. ಅವರಿಗೆ ನಾನು ಸದಾ ಋಣಿಯಾಗಿ ಇರುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಯಾರಿಗೆಲ್ಲಾ ಈ ಪ್ರಶಸ್ತಿ ಸಿಕ್ಕಿತ್ತು?
ನವಿಲಿನ ಬೊಂಬೆ ಇರುವ ರಜತ ಪತಕ, 10 ಲಕ್ಷ ಹಣ ಹಾಗೂ ಧ್ರುವೀಕರಣ ಪತ್ರವನ್ನು ನೀಡುತ್ತಾರೆ. ಹಿಂದೆ ವಹೀದಾ ರೆಹಮಾನ್, ರಜನಿಕಾಂತ್, ಇಳಯರಾಜಾ, ಎಸ್.ಪಿ ಬಾಲಸುಬ್ರಮಣ್ಯಂ, ಹೇಮಾ ಮಾಲಿನಿ, ಅಮಿತಾಬ್ ಬಚ್ಚನ್, ಸಲೀಮ್ ಖಾನ್, ಬಿಶ್ವಜಿತ್ ಛಟರ್ಜಿ, ಪ್ರಸೂನ್ ಜೋಶಿ 'ಇಂಡಿಯನ್ ಫಿಲ್ಮ್ ಪರ್ಸನಲಿಟಿ ಆಫ್ ದಿ ಇಯರ್' ಪ್ರಶಸ್ತಿ ಸ್ವೀಕರಿಸಿದ್ದರು.

ಸಹೋದರ ಪವನ್ ಕಲ್ಯಾಣ್ ಸಂತಸ
"ತೆಲುಗು ಚಿತ್ರರಂಗದ ಶಿಖರ ಸಮಾನರಾದ ಅಣ್ಣನಿಗೆ 'ಇಂಡಿಯನ್ ಫಿಲ್ಮ್ ಪರ್ಸನಲಿಟಿ ಆಫ್ ದಿ ಇಯರ್ -2022' ಪ್ರಶಸ್ತಿ ಸಿಕ್ಕಿರುವುದು ಬಹಳ ಸಂತಸ ತಂದಿದೆ. ಗೋವಾದಲ್ಲಿ ನಡೆಯುತ್ತಿರುವ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತ ಸರ್ಕಾರ ಈ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಅಣ್ಣನ ಕೀರ್ತಿ ಕಿರೀಟಕ್ಕೆ ಮತ್ತೊಂದು ವಜ್ರ ಸೇರಿಕೊಂಡಂತಾಗಿದೆ. ಈ ಸಂತಸದ ಸಮಯದಲ್ಲಿ ನನ್ನ ಮಾರ್ಗದರ್ಶಿ ಅಣ್ಣನಿಗೆ ಹೃದಯಪೂರ್ವಕ ಅಭಿನಂದನೆ. 4 ದಶಕಗಳಿಗೂ ಮೀರಿದ ಅಣ್ಣನ ಸಿನಿಮಾ ಜೀವನ, ತನ್ನನ್ನು ತಾನು ಒಗ್ಗಿಸಿಕೊಂಡು ಪ್ರೇಕ್ಷಕರ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದು, ನನ್ನನ್ನು ಸೇರಿದಂತೆ ಸಾಕಷ್ಟು ಜನರಿಗೆ ಪ್ರೇರಣೆ. ಅಂತರಾಷ್ಟ್ರೀಯ ಚಲನಚಿತ್ರ ವೇದಿಕೆಯಲ್ಲಿ ಅಣ್ಣನಿಗೆ ಈ ಗೌರವ ಧಕ್ಕಿರುವುದು ಬಹಳ ಸಂತಸ ತಂದಿದೆ" ಎಂದು ಪವನ್ ಕಲ್ಯಾಣ್ ಟ್ವೀಟ್ ಮಾಡಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ಚಿರು ಬ್ಯುಸಿ
4 ದಶಕಗಳಿಂದ ಸ್ಟಾರ್ ನಟನಾಗಿ ಚಿರಂಜೀವಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ವಯಸ್ಸು 60 ದಾಟಿದರೂ ಯುವ ನಟರಿಗೆ ಪೈಪೋಟಿ ಕೊಡುತ್ತಿದ್ದಾರೆ. ನಡುವೆ 10 ವರ್ಷಗಳ ಕಾಲ ರಾಜಕೀಯರಂಗಕ್ಕೆ ಹೋಗಿದ್ದ ಚಿರು ಸಿನಿಮಾಗಳಿಂದ ದೂರಾಗಿದ್ದರು ಮತ್ತೆ ವಾಪಸ್ ಬಂದ ಚಿರು ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇತ್ತೀಚೆಗೆ ಚಿರು ನಟನೆಯ 'ಗಾಡ್ಫಾದರ್' ಸಿನಿಮಾ ರಿಲೀಸ್ ಆಗಿತ್ತು. 'ವಾಲ್ತೇರು ವೀರಯ್ಯ' ಎನ್ನುವ ಚಿತ್ರದಲ್ಲಿ ಮೆಗಾಸ್ಟಾರ್ ಈಗ ನಟಿಸ್ತಿದ್ದು, ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











