ನಟಿ ಸಾಯಿ ಪಲ್ಲವಿಗೆ ಮುತ್ತಿಟ್ಟ ಅಭಿಮಾನಿ; ವೀಡಿಯೊ ಫುಲ್ ವೈರಲ್
ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿಗೆ ದೊಡ್ಡ ಅಭಿಮಾನಿ ಬಳಗವಿದೆ. ಆಕೆಯ ನಟನೆಗೆ ಮಾರು ಹೋಗದವರಿಲ್ಲ. ಸದ್ಯ 'ತಂಡೇಲ್' ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮನಗೆದ್ದಿದ್ದಾರೆ. ನಾಗಚೈತನ್ಯ ನಾಯಕರಾಗಿ ನಟಿಸಿರುವ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ.
ವಿಭಿನ್ನ ಪಾತ್ರಗಳ ಮೂಲಕ ಸಾಯಿ ಪಲ್ಲವಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿ ಆಗಿದ್ದಾರೆ. ಇದೇ ಕಾರಣಕ್ಕೆ ಆಕೆಯನ್ನು ಬಹಳ ಟೀಕಿಸಲಾಗಿತ್ತು. ಅವರ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೇಳಿಬಂದಿತ್ತು. ಇತ್ತೀಚೆಗೆ ಸಾಯಿಪಲ್ಲವಿ ನಟಿಸಿದ ಕೆಲ ಸಿನಿಮಾಗಳ ಸೋಲಿಗೆ ಈ ವಿವಾದವೇ ಕಾರಣ ಎನ್ನಲಾಯಿತು. ಆದರೆ 'ಅಮರನ್' ಸಿನಿಮಾದಲ್ಲಿ ನಟಿಸಿ ಭರ್ಜರಿ ಕಂಬ್ಯಾಕ್ ಮಾಡಿದ್ದರು.
ತಮಿಳಿನ 'ಅಮರನ್' ಚಿತ್ರದಲ್ಲಿ ವೀರಯೋಧ ಮೇಜರ್ ಮುಕುಂದ್ ವರದರಾಜನ್ ಪತ್ನಿ ಇಂಧು ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 'ತಂಡೇಲ್' ಚಿತ್ರದಲ್ಲಿ ನಾಯಕ ರಾಜು ಪ್ರೇಯಸಿ ಸತ್ಯಾ ಪಾತ್ರದಲ್ಲಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಇದೆಲ್ಲದರ ನಡುವೆ ಮಹಿಳಾ ಅಭಿಮಾನಿಯೊಬ್ಬರು ಆಕೆಯ ಕೈಗೆ ಮುತ್ತಿಟ್ಟಿರುವ ವೀಡಿಯೋ ವೈರಲ್ ಆಗುತ್ತಿದೆ.

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಅಥವಾ ನಟಿಯನ್ನು ಭೇಟಿ ಮಾಡಬೇಕು. ಅವಕಾಶ ಸಿಕ್ಕರೆ ಆಟೋಗ್ರಾಫ್ ಪಡೆಯಬೇಕು ಎನ್ನುವ ಆಸೆ ಮೊದಲು ಇರ್ತಿತ್ತು. ಈಗ ಇಷ್ಟದ ನಟ, ನಟಿ ಕಂಡ ಕೂಡಲೇ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ. ಸಾಧ್ಯವಾದರೆ ಸೆಲ್ಫಿ ಕೂಡ ತೆಗೆದುಕೊಳ್ಳುತ್ತಾರೆ. ಆದರೆ ಅಪರೂಪಕ್ಕೆ ಕೆಲವರು ಹೀಗೆ ಮುತ್ತಿಡುವ ಧೈರ್ಯ ಮಾಡುತ್ತಾರೆ.
ಇತ್ತೀಚೆಗೆ 'ತಂಡೇಲ್' ಸಿನಿಮಾ ಈವೆಂಟ್ವೊಂದರಲ್ಲಿ ಸಾಯಿ ಪಲ್ಲವಿ ವೇದಿಕೆ ಮುಂಭಾಗದ ಸೋಫಾದಲ್ಲಿ ಕೂತಿದ್ದರು. ಹೇಗೋ ಮಹಿಳಾ ಅಭಿಮಾನಿಯೊಬ್ಬರು ಆಕೆಯ ಬಳಿ ಬಂದು ಮಾತನಾಡಿಸಿದ್ದಾರೆ. ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಕೈ ಕುಲುಕಿ ಕೈಗೆ ಮುತ್ತಿಟ್ಟಿದ್ದಾರೆ. ಅಭಿಮಾನಿಯ ಪ್ರೀತಿಗೆ ಸಾಯಿ ಪಲ್ಲವಿ ನಕ್ಕು ಖುಷಿಪಟ್ಟಿದ್ದಾರೆ. ಬಹಳ ತಡವಾಗಿ ಈ ವೀಡಿಯೋ ವೈರಲ್ ಆಗುತ್ತಿದೆ. ವೀಡಿಯೋಗೆ 'ಕೋಟಿಗೊಬ್ಬ' ಚಿತ್ರದ ಬಿಜಿಎಂ ಮಿಕ್ಸ್ ಮಾಡಿ ನೆಟ್ಟಿಗರೊಬ್ಬರು ಶೇರ್ ಮಾಡಿದ್ದಾರೆ.
ಅಂದಹಾಗೆ 'ತಂಡೇಲ್' ಚಿತ್ರದ 'ಹೈಲೆಸ್ಸಾ ಹೈಲೆಸ್ಸಾ' ಸಾಂಗ್ ಸಖತ್ ಸದ್ದು ಮಾಡ್ತಿದೆ. ಸಾಯಿ ಪಲ್ಲವಿ ಡ್ಯಾನ್ಸ್ ವೈರಲ್ ಆಗ್ತಿದೆ. ಅದನ್ನು ನೋಡಿ ಸಾಕಷ್ಟು ಜನ ಡ್ಯಾನ್ಸ್ ರೀಲ್ಸ್ ಮಾಡುತ್ತಿದ್ದಾರೆ. ಕೆಲವರು ಬಹಳ ಸೊಗಸಾಗಿ ರೀಲ್ಸ್ ಮಾಡಿ ಮೆಚ್ಚುಗೆ ಗಳಿಸಿದರೆ ಮತ್ತೆ ಕೆಲವರು ಕೆಟ್ಟದಾಗಿ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಸಾಯಿ ಪಲ್ಲವಿ "ನನಗೆ ರಾಷ್ಟ್ರಪ್ರಶಸ್ತಿ ಪಡೆಯಬೇಕು ಎನ್ನುವ ಆಸೆ ಇದೆ. ಕಾರಣ ನನಗೆ 21 ವರ್ಷ ವಯಸ್ಸಿದ್ದಾಗ ನಮ್ಮ ತಾಯಿ ಒಂದು ಸೀರೆ ಕೊಟ್ಟರು. ಮದುವೆಗೆ ಅದೇ ಸೀರೆ ಉಟ್ಟುಕೊಳ್ಳಬೇಕು ಎಂದಿದ್ದರು. ಬಳಿಕ ನಾನು ಚಿತ್ರರಂಗಕ್ಕೆ ಬಂದೆ. 'ಪ್ರೇಮಂ' ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಒಂದಲ್ಲ ಒಂದು ದಿನ ಪ್ರತಿಷ್ಠಾತ್ಮಕ ಪ್ರಶಸ್ತಿ ಪಡೆಯುತ್ತೇನೆ ಎಂದುಕೊಂಡೆ" ಎಂದಿದ್ದಾರೆ.
ಮಾತು ಮುಂದುವರೆಸಿದ ಸಾಯಿ ಪಲ್ಲವಿ "ರಾಷ್ಟ್ರಪ್ರಶಸ್ತಿ ಸಿಕ್ಕರೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆ ಸೀರೆ ಉಟ್ಟುಕೊಂಡು ಹೋಗಬೇಕು ಎಂದು ನಿರ್ಧರಿಸಿದೆ. ಆ ಪ್ರಶಸ್ತಿ ಸಿಕ್ಕರೂ, ಸಿಗದಿದ್ದರೂ ಆ ಸೀರೆ ಉಡುವವರೆಗೂ ನನ್ನ ಮೇಲೆ ಒತ್ತಡ ಇದ್ದೇ ಇರುತ್ತದೆ" ಎಂದು ಸಾಯಿ ಪಲ್ಲವಿ ವಿವರಿಸಿದ್ದಾರೆ. 'ತಂಡೇಲ್' ಬಳಿಕ ಏಕ್ ದಿನ್ ಎಂಬ ಹಿಂದಿ ಚಿತ್ರದಲ್ಲಿ ಆಕೆ ನಟಿಸುತ್ತಿದ್ದಾರೆ. ಇನ್ನು 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಗೊತ್ತೇಯಿದೆ.


Click it and Unblock the Notifications











