'ಲೈಗರ್' ಸೋತರೂ ಭರ್ಜರಿ ಸಿನಿಮಾ ಬಾಚಿಕೊಂಡ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಹೀನಾಯವಾಗಿ ಸೋಲುಂಡಿದೆ. ಸಿನಿಮಾದ ಮೇಲೆ ವಿಜಯ್ ದೇವರಕೊಂಡ ಭಾರಿ ನಿರೀಕ್ಷೆ ಇಟ್ಟಿದ್ದರು. ಈ ಸಿನಿಮಾ ತಮ್ಮ ಬಾಲಿವುಡ್ ಪ್ರವೇಶಕ್ಕೆ ಚಿಮ್ಮು ಹಲಗೆ ಆಗಲಿದೆ ಎಂದುಕೊಂಡಿದ್ದರು. ಆದರೆ ಎಲ್ಲ ಯೋಜನೆ ತಲೆಕೆಳಗಾಗಿದೆ.
'ಲೈಗರ್' ಸೋಲಿನಿಂದ ಹತಾಶರಾಗಿರುವ ನಿರ್ದೇಶಕ ಪುರಿ ಜಗನ್ನಾಥ್, ವಿಜಯ್ ಜೊತೆ ಮಾಡಬೇಕಿದ್ದ ಹೊಸ ಸಿನಿಮಾ 'ಜನ ಗಣ ಮನ' ಅನ್ನು ಸಹ ನಿಲ್ಲಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
'ಲೈಗರ್' ಭರ್ಜರಿಯಾಗಿ ಫ್ಲಾಪ್ ಏನೋ ಆಗಿದೆ ಆದರೆ ವಿಜಯ್ ದೇವರಕೊಂಡ ಸ್ಟಾರ್ಡಮ್ ಕಡಿಮೆ ಆಗಿಲ್ಲ. 'ಲೈಗರ್' ಸೋತರೂ ಸಹ ವಿಜಯ್ ದೇವರಕೊಂಡ ದೊಡ್ಡ ಪ್ರೊಡಕ್ಷನ್ ಬ್ಯಾನರ್ನಿಂದ ಹೊಸ ಸಿನಿಮಾದ ಆಫರ್ ಗಿಟ್ಟಿಸಿಕೊಂಡಿದ್ದಾರೆ.
ತೆಲುಗಿನ ಜನಪ್ರಿಯ ನಿರ್ಮಾಪಕ ದಿಲ್ ರಾಜು ತಮ್ಮ ಹೊಸ ಸಿನಿಮಾಕ್ಕೆ ವಿಜಯ್ ದೇವರಕೊಂಡ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಹಿಂದೆಯೇ ದಿಲ್ ರಾಜು, ವಿಜಯ್ ದೇವರಕೊಂಡಗೆ ಅಡ್ವಾನ್ಸ್ ನೀಡಿದ್ದರಂತೆ. ಇದೀಗ ವಿಜಯ್ರ ಸಿನಿಮಾಗಳು ಸತತವಾಗಿ ಸೋಲುತ್ತಿರುವ ಕಾರಣ ದಿಲ್ ರಾಜು, ವಿಜಯ್ಗೆ ಆಯ್ಕೆ ಮಾಡಿದ್ದ ಕತೆಯಲ್ಲಿ ಬದಲಾವಣೆ ತರಲು ಯೋಜಿಸಿದ್ದಾರೆ.
ಈ ಮುಂಚೆ ವಿಜಯ್ಗಾಗಿ ಆಕ್ಷನ್ ಸಿನಿಮಾ ಮಾಡಲು ಮುಂದಾಗಿದ್ದ ದಿಲ್ ರಾಜು ಇದೀಗ, ಕೌಟುಂಬಿಕ ಹಾಸ್ಯಪ್ರಧಾನ ಸಿನಿಮಾ ಮಾಡಲು ಮುಂದಾಗಿದ್ದಾರೆ. ವಿಜಯ್ಗೆ ಹೆಸರು, ಹಿಟ್ ತಂದುಕೊಟ್ಟಿದ್ದು, ಹಾಸ್ಯ ಪ್ರಧಾನ ಪ್ರೇಮ ಕತೆಗಳೇ ಆಗಿರುವ ಕಾರಣ ಮತ್ತೆ ಅದೇ ರೀತಿಯ ಸಿನಿಮಾಗಳನ್ನು ಮಾಡುವತ್ತ ಮನಸ್ಸು ಮಾಡಿದ್ದಾರೆ ದಿಲ್ ರಾಜು, ವಿಜಯ್ ದೇವರಕೊಂಡ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ವಿಜಯ್ರ ಹೊಸ ಸಿನಿಮಾ ನಿರ್ದೇಶನ ಮಾಡಲು ಇಂದ್ರಗಂಟಿ ಮೋಹನ್ ಕೃಷ್ಣ ಅವರನ್ನು ಆಯ್ಕೆ ಮಾಡಿದ್ದು, ಇಂದ್ರಗಂಟಿ ಮೂರು ಸ್ಟೋರಿ ಲೈನ್ಗಳನ್ನು ವಿಜಯ್ಗೆ ಹೇಳಿದ್ದಾರಂತೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿ ಚಿತ್ರಕತೆ ರಚಿಸಲು ಸೂಚಿಸಲಾಗಿದೆ. ಚಿತ್ರಕತೆ ರೆಡಿಯಾದ ಕೂಡಲೇ ಸಿನಿಮಾದ ಘೋಷಣೆ ಆಗಲಿದೆ. ಆ ವೇಳೆಗೆ ವಿಜಯ್ರ ಹೊಸ ಸಿನಿಮಾ 'ಖುಷಿ'ಯ ಚಿತ್ರೀಕರಣ ಸಹ ಅಂತ್ಯವಾಗಲಿದೆ. 'ಖುಷಿ' ಸಿನಿಮಾದಲ್ಲಿ ವಿಜಯ್ ಜೊತೆ ಸಮಂತಾ ನಟಿಸುತ್ತಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ-ಪೂಜಾ ಹೆಗ್ಡೆ ನಟಿಸಬೇಕಿದ್ದ 'ಜನ ಗಣ ಮನ' ಸಿನಿಮಾ ನಿಂತು ಹೋಗಿದ್ದು ಬಹುತೇಕ ಖಾತ್ರಿಯಾಗಿದೆ. 'ಲೈಗರ್' ಸೋಲಿನಿಂದಾಗಿ, 'ಜನ ಗಣ ಮನ' ಸಿನಿಮಾಕ್ಕೆ ಫೈನಾನ್ಸ್ ಮಾಡಬೇಕಿದ್ದ ಸಂಸ್ಥೆ ಹೆಜ್ಜೆ ಹಿಂದಿಟ್ಟಿದ್ದು, ಈಗ 'ಲೈಗರ್' ನಿಂದ ಆಗಿರುವ ನಷ್ಟದಿಂದಾಗಿ ಪುರಿ ಹಾಗೂ ಚಾರ್ಮಿ ಅವರುಗಳು ಸ್ವತಂತ್ರ್ಯವಾಗಿ 'ಜನ ಗಣ ಮನ' ಸಿನಿಮಾಕ್ಕೆ ಬಂಡವಾಳ ಹಾಕದಾಗಿದ್ದಾರೆ.


Click it and Unblock the Notifications











