ಸೋಲಿನಿಂದ ಕಂಗೆಟ್ಟ ವಿಜಯ್ ದೇವರಕೊಂಡ ಹೊಸ ಸಿನಿಮಾ ಮುಹೂರ್ತ; ಕೀರ್ತಿ ಸುರೇಶ್ ನಾಯಕಿ
ತೆಲುಗು ನಟ ವಿಜಯ್ ದೇವರಕೊಂಡ ಅಭಿನಯದ ಹೊಸ ಸಿನಿಮಾ 'ರೌಡಿ ಜನಾರ್ಧನ್' ಸೆಟ್ಟೇರಿದೆ. ಹೈದರಾಬಾದ್ನಲ್ಲಿ ನಿನ್ನೆ(ಅಕ್ಟೋಬರ್ 11) ಮುಹೂರ್ತ ನೆರವೇರಿದ್ದು, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ನಿರ್ಮಾಪಕ ನಿರಂಜನ್ ರೆಡ್ಡಿ ಕ್ಯಾಮೆರಾ ಆನ್ ಮಾಡಿದ್ರೆ, ನಿರ್ದೇಶಕ ಹನು ರಾಘವಪುಡಿ ಮೊದಲ ದೃಶ್ಯವನ್ನು ನಿರ್ದೇಶಿಸಿದರು.
ಅದ್ಯಾಕೋ ವಿಜಯ್ ದೇವರಕೊಂಡ ಅದೃಷ್ಟ ಕೈಕೊಟ್ಟಂತೆ ಕಾಣುತ್ತಿದೆ. 'ಲೈಗರ್' ಸೋಲಿನ ಬಳಿಕ ಪದೇ ಪದೆ ಸೋಲು ಎದುರಾಗುತ್ತಿದೆ. ಒಂದೇ ಒಂದು ಗೆಲುವಿಗಾಗಿ ಪರಿತಪಿಸುವಂತಾಗಿದೆ. ಇತ್ತೀಚೆಗೆ ಬಂದಿದ್ದ 'ಕಿಂಗ್ಡಮ್' ಸಿನಿಮಾ ಕೂಡ ಮುಗ್ಗರಿಸಿತ್ತು. ಮೊನ್ನೆ ಮೊನ್ನೆ ರಶ್ಮಿಕಾ ಮಂದಣ್ನ ಜೊತೆ ವಿಜಯ್ ಮದುವೆ ಎಂಗೇಜ್ಮೆಂಟ್ ನಡೆದಿದೆ ಎನ್ನಲಾಗ್ತಿದೆ. ಅದರ ಬೆನ್ನಲ್ಲೇ ಹೊಸ ಸಿನಿಮಾ ಆರಂಭಿಸಿದ್ದಾರೆ.

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ರಾಜಾ ವಾರು ರಾಣಿ ಗಾರು' ಚಿತ್ರದ ಮೂಲಕ ಖ್ಯಾತಿ ಪಡೆದ ಪ್ರತಿಭಾನ್ವಿತ ನಿರ್ದೇಶಕ ರವಿಕಿರಣ್ ಕೋಲಾ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ 59 ನೇ ಚಿತ್ರ ಇದು.
ವಿಜಯ್ ದೇವರಕೊಂಡಗೆ ಜೋಡಿಯಾಗಿ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಕಳೆದ ವರ್ಷ ಕೀರ್ತಿ ಹಸೆಮಣೆ ಏರಿದ್ದರು. ಬಹುಕಾಲದ ಗೆಳೆಯನ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ ಕೊಂಚ ಗ್ಯಾಪ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಇದು ಗ್ರಾಮೀಣ ಹಿನ್ನೆಲೆಯಲ್ಲಿ ಮೂಡಿ ಬರುತ್ತಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ. ಈ ವಾರವೇ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.
'ಮಹಾನಟಿ' ಚಿತ್ರದಲ್ಲಿ ಕೀರ್ತಿ ಸುರೇಶ್ ಹಾಗೂ ವಿಜಯ್ ದೇವರಕೊಂಡ ನಟಿಸಿದ್ದರು. ಆದರೆ ಇಬ್ಬರಿಗೂ ದೃಶ್ಯಗಳು ಇರಲಿಲ್ಲ. ಈ ಬಾರಿ ನಾಯಕ-ನಾಯಕಿ ಆಗಿಯೇ ನಟಿಸುತ್ತಿರುವುದು ವಿಶೇಷ. ಕ್ಲೀನ್ ಶೇವ್ ಮಾಡಿ ಗಿರಿಜಾ ಮೀಸೆ ಬಿಟ್ಟು ವಿಜಯ್ ದೇವರಕೊಂಡ ಹೊಸ ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಲಂಗಾ ದಾವಣಿ ತೊಟ್ಟು ಕೀರ್ತಿ ಸುರೇಶ್ ಮಿರಿಮಿರಿ ಮಿಂಚಿದ್ದಾರೆ.
ಚಿತ್ರಕ್ಕೆ 'ರೌಡಿ ಜನಾರ್ಧನ್' ಎಂಬ ಟೈಟಲ್ ಫಿಕ್ಸ್ ಮಾಡಿದೆ ಚಿತ್ರತಂಡ. ವಿಜಯ್ ದೇವರಕೊಂಡ ರೌಡಿ ಹೆಸರಿನ ಕಾಸ್ಟ್ಯೂಮ್ ಬ್ರ್ಯಾಂಡ್ ಹೊಂದಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನನ್ನು ರೌಡಿ ಎಂದೇ ಕರೆಯುತ್ತಾರೆ. ಅದೇ ಹೆಸರಿನ ಸಿನಿಮಾದಲ್ಲಿ ಈಗ ವಿಜಯ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರು ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೆ ಈಡಾಗಿತ್ತು. ಆದರೆ ಯಾವುದೇ ಸಮಸ್ಯೆ ಆಗಿರಲಿಲ್ಲ.
ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆ ವಿಜಯ್ ದೇವರಕೊಂಡ ಪುಟ್ಟಪರ್ತಿಯಿಂದ ಹೈದರಾಬಾದ್ಗೆ ಪ್ರಯಾಣಿಸುವಾಗ ಈ ಘಟನೆ ನಡೆದಿತ್ತು. ಗದ್ವಾಲ್ ಜಿಲ್ಲೆಯ ಉಂಡವೆಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಬೇರೆ ಒಂದು ಕಾರಿಗೆ ವಿಜಯ್ ಪ್ರಯಾಣಿಸುತ್ತಿದ್ದ ಕಾರ್ ಡಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸರಲಿಲ್ಲ. ಕೂಡಲೇ ಮತ್ತೊಂದು ಕಾರ್ ಏರಿ ವಿಜಯ್ ಮನೆ ತಲುಪಿದ್ದರು.
ಪುಟ್ಟಪರ್ತಿ ಆಶ್ರಮದ ಶಾಲೆಯಲ್ಲೇ ವಿಜಯ್ ದೇವರಕೊಂಡ ಓದಿ ಬೆಳೆದವರು. ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಾರೆ. ಅಕ್ಟೋಬರ್ 6ರಂದು ಅದೇ ರೀತಿ ಅಲ್ಲಿಗೆ ಹೋಗಿ ಬಳಿಕ ಹೈದರಾಬಾದ್ಗೆ ವಾಪಸ್ ಆಗುತ್ತಿದ್ದರು. ಆಗ ಅಪಘಾತ ಸಂಭವಿಸಿತ್ತು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವಿಜಯ್ ಪ್ರತಿಕ್ರಿಯಿಸಿದ್ದರು. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಆರಾಮಾಗಿ ಇದ್ದೀನಿ ಎಂದಿದ್ದರು.


Click it and Unblock the Notifications











