Vijay Deverakonda: "6 ಫ್ಲಾಪ್ ಕೊಟ್ಟವ್ರು 500 ಕೋಟಿ ಚಿತ್ರ ಕೊಡ್ತಾರೆ ನಾವು ಮುಚ್ಕೊಂಡು ನೋಡಬೇಕಷ್ಟೇ"
ಆಗಸ್ಟ್ ತಿಂಗಳ ಎರಡನೇ ವಾರ ತಮಿಳು ಹಾಗೂ ತೆಲುಗಿನ ಇಬ್ಬರು ದೊಡ್ಡ ಸೂಪರ್ ಸ್ಟಾರ್ಗಳ ಸಿನಿಮಾಗಳು ಬಿಡುಗಡೆಗೊಂಡವು. ಈ ಪೈಕಿ ಓರ್ವ ಸ್ಟಾರ್ ನಟನ ಚಿತ್ರ ಗೆದ್ದು ಬೀಗಿದರೆ, ಮತ್ತೋರ್ವ ಸ್ಟಾರ್ ನಟನ ಚಿತ್ರ ಹೀನಾಯವಾಗಿ ಸೋತಿದೆ. ಹೌದು, ಆಗಸ್ಟ್ 10ರ ಗುರುವಾರ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಚಿತ್ರ ಬಿಡುಗಡೆಗೊಂಡು ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೆ, ಆಗಸ್ಟ್ 11ರ ಶುಕ್ರವಾರ ಬಿಡುಗಡೆಗೊಂಡ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ನಟನೆಯ ಭೋಳ ಶಂಕರ್ ಹೀನಾಯವಾಗಿ ಸೋತಿದೆ.
ಜೈಲರ್ ಸಿನಿಮಾ 11 ದಿನಗಳ ಓಟವನ್ನು ಯಶಸ್ವಿಯಾಗಿ ಪೂರೈಸಿ ವಿಶ್ವದಾದ್ಯಂತ ಒಟ್ಟು 505.40 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದರೆ, ಜೈಲರ್ ಚಿತ್ರದ ಅಬ್ಬರದ ನಡುವೆಯೇ ತೆರೆಗೆ ಬಂದ ಚಿರಂಜೀವಿ ನಟನೆಯ ಭೋಳ ಶಂಕರ್ ಮಕಾಡೆ ಮಲಗಿದೆ. ಹೌದು, 2015ರಲ್ಲಿ ತೆರೆಗೆ ಬಂದಿದ್ದ ತಮಿಳಿನ ವೇದಾಲಂ ಚಿತ್ರದ ರಿಮೇಕ್ ಸಿನಿಮಾ ತೆಲುಗಿನ ಭೋಳ ಶಂಕರ್ ಹೊಸತನದ ಚಿತ್ರಗಳನ್ನು ಇಷ್ಟಪಡುವ ಸಿನಿ ರಸಿಕರಿಂದ ತಿರಸ್ಕರಿಸಲ್ಪಟ್ಟಿದೆ.

ಭೋಳ ಶಂಕರ್ ಚಿತ್ರವನ್ನು ಸಿನಿ ರಸಿಕರು ಕೈಬಿಟ್ಟಿದ್ದು, ಮೆಗಾಸ್ಟಾರ್ ಇದ್ದರೂ ಸಹ ಚಿತ್ರ ಮೊದಲ ದಿನವೇ ಹಲವೆಡೆ ಹೌಸ್ಫುಲ್ ಪ್ರದರ್ಶನ ಕಾಣಲಾಗದೇ ತೀವ್ರ ಹಿನ್ನಡೆ ಅನುಭವಿಸಿದೆ. ತೆಲುಗು ರಾಜ್ಯಗಳಲ್ಲಿಯೂ ಸಹ ಭೋಳ ಶಂಕರ್ ಮೊದಲ ದಿನವೇ ಹಲವೆಡೆ ಖಾಲಿ ಹೊಡೆದಿದ್ದು, ಅಂತಹ ಹಲವು ಕೇಂದ್ರಗಳಿಂದ ಭೋಳ ಶಂಕರ್ ಚಿತ್ರವನ್ನು ತೆರವುಗೊಳಿಸಿ ಅವುಗಳಲ್ಲಿ ಜೈಲರ್ ಚಿತ್ರವನ್ನು ಪ್ರದರ್ಶಿಸಲು ಚಿತ್ರಮಂದಿರದ ಮಾಲೀಕರು ಹಾಗೂ ವಿತರಕರು ತೀರ್ಮಾನಿಸಿದ್ದಾರೆ. ಈ ಮೂಲಕ ಭೋಳ ಶಂಕರ್ ತನ್ನದೇ ರಾಜ್ಯದಲ್ಲಿ ಎದ್ದಿರುವ ಜೈಲರ್ ಹವಾ ಮುಂದೆ ತೀವ್ರ ಹಿನ್ನಡೆ ಅನುಭವಿಸಿತ್ತು.
ಹೀಗೆ ತೆಲುಗು ಚಿತ್ರರಂಗವನ್ನು ಹಲವಾರು ವರ್ಷಗಳ ಕಾಲ ಆಳಿದ ಓರ್ವ ದಿಗ್ಗಜ ಸ್ಟಾರ್ ನಟನ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದ್ದು, ಈ ಸೋಲನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದರು ಹಾಗೂ ಚಿರಂಜೀವಿ ಚಿತ್ರ ಆಯ್ಕೆಯ ಕುರಿತು ಕೊಂಕು ನುಡಿದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮೆಗಾ ಫ್ಯಾನ್ಸ್ ಒಂದು ಚಿತ್ರ ಫ್ಲಾಪ್ ಆದ ಕೂಡಲೇ ದೊಡ್ಡ ಸ್ಟಾರ್ ನಟನ ಕುರಿತು ಈ ರೀತಿ ಮಾತನಾಡುವುದು ಸರಿಯಲ್ಲ, ನಮ್ಮ ನಟ ಎಂದೂ ಮುರಿಯಲಾಗದ ಹಲವಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ, ಅವರನ್ನು ಟ್ರೋಲ್ ಮಾಡುವ ಅರ್ಹತೆ ನಿಮಗಿಲ್ಲ ಎಂದು ಕಿಡಿಕಾರಿದ್ದರು.
ಇದೇ ವಿಷಯದ ಕುರಿತಾಗಿ ಇದೀಗ ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ ಸಹ ಮಾತನಾಡಿದ್ದು, ಚಿರಂಜೀವಿ ಅವರನ್ನು ಟ್ರೋಲ್ ಮಾಡುವವರಿಗೆ ರಜನಿಕಾಂತ್ ಅವರನ್ನು ಉದಾಹರಣೆಯಾಗಿ ನೀಡಿ ಚಾಟಿ ಬೀಸಿದ್ದಾರೆ. ಹೌದು, ತಮ್ಮ ಮುಂದಿನ ಸಿನಿಮಾ ಖುಷಿ ಪ್ರೆಸ್ಮೀಟ್ನಲ್ಲಿ ಮಾತನಾಡಿದ ವಿಜಯ್ ದೇವರಕೊಂಡ "ಅವರೆಲ್ಲಾ ಹಿಟ್ ಹಾಗೂ ಫ್ಲಾಪ್ ಅನ್ನೂ ಮೀರಿದಂತಹ ಸೂಪರ್ ಸ್ಟಾರ್ಗಳು. ರಜನಿ ಸರ್ ಅವರು ಸತತವಾಗಿ 6 ಫ್ಲಾಪ್ ಚಿತ್ರಗಳನ್ನು ನೀಡಬಹುದು, ಆದರೆ ಅವರು ಜೈಲರ್ ಚಿತ್ರ ಮಾಡಿ 500 ಕೋಟಿ ಕಲೆಕ್ಷನ್ ಮಾಡಿ ತೋರಿಸಿದ್ರು. ಅದನ್ನು ನಾವೆಲ್ಲಾ ಮುಚ್ಕೊಂಡು ನೋಡಬೇಕು. ಅದೇ ರೀತಿ ಚಿರಂಜೀವಿ ಸರ್ ಸಹ ಸತತ ಆರೇಳು ಫ್ಲಾಪ್ ಚಿತ್ರಗಳನ್ನು ಹೊಂದಬಹುದು, ಆದರೆ ಅವರು ಸರಿಯಾಗಿ ಯೋಚಿಸಿ ಚಿತ್ರ ಮಾಡಿದ್ರೆ, ಈ ಬಾರಿಯ ಸಂಕ್ರಾಂತಿ ರೀತಿ ಒಳ್ಳೆಯ ಕಲೆಕ್ಷನ್ ಮಾಡಿದ ಚಿತ್ರ ಕೊಡ್ತಾರೆ. ಸರಿಯಾದ ನಿರ್ದೇಶಕರು ಸಿಕ್ಕಿ, ಅವರ ಎನರ್ಜಿಯನ್ನು ಮ್ಯಾಚ್ ಮಾಡಿದ್ರೆ ಒಳ್ಳೆಯ ಚಿತ್ರ ಬರುತ್ತೆ" ಎಂದು ಹೇಳಿಕೆ ನೀಡಿದರು.
ಇನ್ನೂ ಮುಂದುವರಿದು ಮಾತನಾಡಿದ ವಿಜಯ್ ದೇವರಕೊಂಡ "ಚಿರು ಸರ್ ತೆಲುಗು ಚಿತ್ರರಂಗವನ್ನು ಬದಲಾಯಿಸಿದವರು. ಚಿರು ಸರ್ ಬಂದಾಗ ಒಂದು ರೀತಿಯ ನಟನೆ ಇತ್ತು, ಒಂದು ರೀತಿಯ ಡಾನ್ಸ್ ಇತ್ತು, ಒಂದು ರೀತಿಯ ಪ್ರದರ್ಶನವಿತ್ತು. ಇವೆಲ್ಲಾ ಬದಲಾದವು. ಈ ಬದಲಾವಣೆ ಸಾವಿರಾರು ಮಂದಿಯನ್ನು ಚಿತ್ರರಂಗಕ್ಕೆ ಕಾಲಿಟ್ಟು ನಟರಾಗಲು ಉತ್ತೇಜಿಸಿತು. ಇಂತಹ ನಟರನ್ನು ಗೆಲುವು, ಸೋಲುಗಳಿಂದ ಅಳೆಯಬಾರದು, ನನ್ನ ಪ್ರಕಾರ ಅವರು ಗೆಲುವು ಹಾಗೂ ಸೋಲುಗಳನ್ನು ಮೀರಿದವರು" ಎಂದು ಹೇಳಿದರು.


Click it and Unblock the Notifications











