ಮದುವೆ ಬಗ್ಗೆ ವಿಜಯ್-ರಶ್ಮಿಕಾ ಮೌನ ಯಾಕೆ? ಆಮಂತ್ರಣ ಪತ್ರಿಕೆ ಲೀಕ್ ಬಗ್ಗೆ ವಿಜಯ್ ಟೀಂ ಪ್ರತಿಕ್ರಿಯೆ
ಟಾಲಿವುಡ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮದುವೆಗೆ ದಿನಗಣನೆ ಶುರುವಾಗಿದೆ. ರಾಜಸ್ಥಾನದ ಉದಯ್ಪುರ್ ಪ್ಯಾಲೇಸ್ನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ಆದರೆ ಈವರೆಗೆ ಮದುವೆ ಬಗ್ಗೆ ಯಾರೊಬ್ಬರು ಅಧಿಕೃತವಾಗಿ ಮಾತನಾಡಲಿಲ್ಲ. ಅಷ್ಟಕ್ಕೂ ಜೋಡಿ ಯಾಕೆ ಮದುವೆ ವಿಚಾರವನ್ನು ಸೀಕ್ರೆಟ್ ಆಗಿ ಇಡುವ ಪ್ರಯತ್ನ ಮಾಡ್ತಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಸೆಲೆಬ್ರೆಟಿಗಳ ಮದುವೆ ಅಂದರೆ ಅಭಿಮಾನಿಗಳಿಗೆ ಕುತೂಹಲ ಇದೇ ಇರುತ್ತದೆ. ವಿಜಯ್- ರಶ್ಮಿಕಾ ಮದುವೆ ಆಗಬೇಕು ಎನ್ನುವುದು ಕೆಲ ಅಭಿಮಾನಿಗಳ ಆಸೆ. ಇದೀಗ ಅದಕ್ಕೆ ಮುಹೂರ್ತ ಕೂಡಿ ಬಂದಿದೆ. ಫೆಬ್ರವರಿ 26ರಂದು ಉದಯ್ಪುರದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಬಳಿಕ ಹೈದರಾಬಾದ್ನಲ್ಲಿ ಮಾರ್ಚ್ 4ರಂದು ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿದೆ ಎಂದು ವರದಿಯಾಗಿದೆ. ಸದ್ಯ ಇಬ್ಬರ ಮದುವೆ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ತಮ್ಮ ಮದುವೆ ಬಗ್ಗೆ ಎಲ್ಲಾ ಮಾಹಿತಿಯನ್ನು ವೈರಲ್ ಮಾಡುತ್ತಿರುವ ಬಗ್ಗೆ ವಿಜಯ್ ದೇವರಕೊಂಡ ತಂಡದವರು ಪ್ರತಿಕ್ರಿಯಿಸಿದ್ದಾರೆ. ಹೀಗೆ ಎಲ್ಲಾ ಮಾಹಿತಿಯನ್ನು ಬಹಿರಂಗ ಪಡಿಸುವುದರಿಂದ ಮದುವೆಗೆ ಹಾಜರಾಗುವ ಅತಿಥಿಗಳಿಗೆ ಸಮಸ್ಯೆ ಆಗಬಹುದು. ತಾರೆಯರನ್ನು ನೋಡಲು ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಬಂದರೆ ಎಲ್ಲರನ್ನು ನಿಯಂತ್ರಿಸುವುದು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಮದುವೆ, ಬರುವ ಅತಿಥಿಗಳ ಬಗ್ಗೆ ರಹಸ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.
ವಿಜಯ್ ಹಾಗೂ ರಶ್ಮಿಕಾ ಮಾತ್ರವಲ್ಲ, ಈ ಹಿಂದೆ ಕೂಡ ಕೆಲ ಸೆಲೆಬ್ರೆಟಿಗಳು ಇದೇ ರೀತಿ ತಮ್ಮ ಮದುವೆ ವಿಚಾರದಲ್ಲಿ ಮೌನ ವಹಿಸಿದ್ದರು. ಮದುವೆ ಬಳಿಕ ಫೋಟೊ ಸಮೇತ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದರು. ಮದುವೆಗೂ ಮುನ್ನ ಅಧಿಕೃತವಾಗಿ ಈ ಬಗ್ಗೆ ಮಾತನಾಡಿರಲಿಲ್ಲ. ರಶ್ಮಿಕಾ, ವಿಜಯ್ ಕೂಡ ಅದನ್ನೇ ಅನುಸರಿಸುತ್ತಿದ್ದಾರೆ. ಕೆಲ ಸಂದರ್ಶನಗಳಲ್ಲಿ ಮದುವೆ ಬಗ್ಗೆ ರಶ್ಮಿಕಾಗೆ ನೇರ ಪ್ರಶ್ನೆ ಎದುರಾದರೂ ಸರಿಯಾಗಿ ಉತ್ತರಿಸಿರಲಿಲ್ಲ. ಮದುವೆ ಸಾಧ್ಯವಾದಷ್ಟು ವೈಯಕ್ತಿಕವಾಗಿ ಇರಬೇಕು ಎನ್ನುವ ಕಾರಣಕ್ಕೆ ಇಬ್ಬರೂ ಮೌನ ವಹಿಸಿದ್ದಾರೆ.
ವಿಜಯ್, ರಶ್ಮಿಕಾ ಮದುವೆ ಬಗ್ಗೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮದುವೆ, ರಿಸೆಪ್ಷನ್ ಮಾಹಿತಿ ಬಹಿರಂಗಪಡಿಸುತ್ತಿದ್ದಾರೆ. ಇದರಿಂದ ಮದುವೆಗೆ ಬರುವ ಅತಿಥಿಗಳಿಗೆ ಸಮಸ್ಯೆ ಆಗಬಹುದು. ಅತಿಥಿಗಳ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹಾಕುವುದು ಸರಿಯಲ್ಲ. ಅಷ್ಟೇ ಅಲ್ಲ, ಅತಿಥಿಗಳು ಸಂಪರ್ಕಿಸಬೇಕಾದ ಫೋನ್ ನಂಬರ್ ಆಮಂತ್ರಣ ಪತ್ರಿಕೆಯಲ್ಲಿ ಹಾಕಿದ್ದರೆ, ಅದನ್ನು ವೈರಲ್ ಮಾಡಿದ್ದಾರೆ. ಮದುವೆ ವೈಯಕ್ತಿಕ, ಹಾಗಾಗಿ ಇಂತಹ ಸೂಕ್ಷ್ಮ ವಿಚಾರಗಳನ್ನು ವೈರಲ್ ಮಾಡಬೇಡಿ ಎಂದು ವಿಜಯ್ ದೇವರಕೊಂಡ ತಂಡ ಮನವಿ ಮಾಡಿದೆ.
ಇತ್ತೀಚೆಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ವಿಜಯ್ ತಮ್ಮ ಮದುವೆ ಆಮಂತ್ರಣ ನೀಡಿದ್ದರು. ಬಾಲಿವುಡ್ ಹಾಗೂ ಟಾಲಿವುಡ್ನ ಸಾಕಷ್ಟು ಗಣ್ಯರಿಗೆ ಮದುವೆ ಆಮಂತ್ರಣ ತಲುಪಿದೆ. ಉದ್ಯಮಿ ಮುಕೇಶ್ ಅಂಬಾನಿ ಕುಟುಂಬ ಸದಸ್ಯರು ಮದುವೆಗೆ ಸಾಕ್ಷಿ ಆಗುತ್ತಾರೆ ಎಂದು ಚರ್ಚೆ ನಡೀತಿದೆ.
ಉದಯ್ಪುರದಲ್ಲಿ ನಡೆಯುವ ಮದುವೆಗೆ ಸಮಾರಂಭದಲ್ಲಿ ಎರಡೂ ಕುಟುಂಬ ಸದಸ್ಯರು ಹಾಗೂ ಕೆಲವೇ ಸ್ನೇಹಿತರು ಮಾತ್ರ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ. ಆದರೆ ಹೈದರಾಬಾದ್ನಲ್ಲಿ ನಡೆಯುವ ರಿಸೆಪ್ಷನ್ ಪಾರ್ಟಿಗೆ ದೊಡ್ಡ ಸಂಖ್ಯೆಯಲ್ಲಿ ಸೆಲೆಬ್ರೆಟಿಗಳು ತೆರೆಳಲಿದ್ದಾರೆ. ಹೈದರಾಬಾದ್ ಬಂಜಾರ ಹಿಲ್ಸ್ನಲ್ಲಿರುವ ತಾಜ್ ಕೃಷ್ಣ ಹೋಟೆಲ್ನಲ್ಲಿ ರಿಸೆಪ್ಷನ್ ಕಾರ್ಯಕ್ರಮ ಆಯೋಜಿಸಲಾಗಿದೆ.
'ಗೀತಾಗೋವಿಂದಂ' ಚಿತ್ರದಲ್ಲಿ ರಶ್ಮಿಕಾ, ವಿಜಯ್ ಒಟ್ಟಿಗೆ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಶುರುವಾಗಿದ್ದ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ಈಗ ಮದುವೆ ಆಗಿ ಹೊಸಬಾಳಿಗೆ ಕಾಲಿಡಲು ಜೋಡಿ ಮುಂದಾಗಿದೆ. 'ಡಿಯರ್ ಕಾಮ್ರೇಡ್' ಎಂಬ ಮತ್ತೊಂದು ಚಿತ್ರದಲ್ಲಿ ಕೂಡ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಮದುವೆ ಬಳಿಕ 'ರಣಬಾಲಿ' ಎಂಬ ಮತ್ತೊಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.


Click it and Unblock the Notifications











