ಸೋಲಿನ ಸುಳಿಯಿಂದ ಹೊರ ಬರಲು ವಿಜಯ್ ದೇವರಕೊಂಡ ಕಸರತ್ತು ; ಹಳೆ ಫಾರ್ಮುಲಾ ಬೆನ್ನತ್ತಿದ್ದ ರೌಡಿ..!
ಸಾಲು ಸಾಲು ಸೋಲುಗಳಿಂದ ವಿಜಯ್ ದೇವರಕೊಂಡ ಹೈರಾಣಾಗಿದ್ದಾರಾ ..? ಈ ಪ್ರಶ್ನೆಗೆ ಹೌದು ಅನ್ನುವ ಉತ್ತರ ತೆಲುಗು ಉದ್ಯಮದಲ್ಲಿ ಕೇಳಿ ಬರುತ್ತೆ. ಇದಕ್ಕೆ ಪೂರಕವಾಗಿ ವಿಜಯ್ ದೇವರಕೊಂಡ ಪ್ರಯತ್ನ ಮತ್ತು ಪ್ರಯೋಗಗಳಿಂದ ವಿಮುಖರಾಗಿ ಮತ್ತದೇ ಸಿದ್ಧ ಸೂತ್ರಗಳಿಗೆ ಜೋತು ಬಿದ್ದಿದ್ದಾರೆ. ಎಲ್ಲರಂತೆ ಕಮರ್ಷಿಯಲ್ ಮಸಾಲಾ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಹೌದು, ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಘೋಷಣೆಯಾಗಿದೆ. ಕೈಗೆ ಮೆತ್ತಿಕೊಂಡ ರಕ್ತ ಮತ್ತು ಕತ್ತಿ ಇದರ ಜೊತೆಯಲ್ಲಿ ಖಡ್ಗ ನನ್ನದು.. ರಕ್ತ ನನ್ನದು.. ಯುದ್ಧ ನನ್ನದೇ..ಎಂಬ ಸಾಲು, ಇದೊಂದು ಪಕ್ಕ ಹೊಡಿ ಬಡಿ ಸಿನಿಮಾ ಅನ್ನುವ ಸುಳಿವನ್ನ ನೀಡಿದೆ.

ಅಂದ್ಹಾಗೇ ವಿಜಯ್ ದೇವರಕೊಂಡ ಅವರಿಗೆ ಅವರ ಅಭಿಮಾನಿಗಳು ಪ್ರೀತಿಯಿಂದ ರೌಡಿ ಎಂದೇ ಕರೆಯುತ್ತಾರೆ. ಆದರೆ.. ಅರ್ಜುನ್ ರೆಡ್ಡಿ, ಲೈಗರ್ ಹೊರತು ಪಡಿಸಿ ಇಲ್ಲಿಯವರೆಗೆ ವಿಜಯ್ ದೇವರಕೊಂಡ ಮಾಡಿಕೊಂಡ ಆಯ್ಕೆ ಈ ಬಿರುದಿಗೆ ತದ್ವಿರುದ್ಧವಾಗಿಯೇ. ಉದಾಹರಣೆಗೆ ಫ್ಯಾಮಿಲಿ ಸ್ಟಾರ್ ಮತ್ತು ಖುಷಿ. ಸೋಲಿಗೆ ಇದು ಕೂಡ ಕಾರಣಾನಾ..? ಗೊತ್ತಿಲ್ಲ. ಆದರೆ ಸದ್ಯಕ್ಕೆ ವಿಜಯ್ ದೇವರಕೊಂಡ ತಮ್ಮ ಬಿರುದಿಗೆ ಅನುಗುಣವಾಗಿ ಚಿತ್ರ ಮಾಡಲು ಮುಂದಾದಂತೆ ಇದೆ. ಇದಕ್ಕೆ ನಿನ್ನೆ ಅನೌನ್ಸ್ ಆದ ಸಿನಿಮಾ ಸಾಕ್ಷಿ

ದಿ ಫ್ಯಾಮಿಲಿ ಸ್ಟಾರ್ ಸೋತರು ಕೂಡ ದಿಲ್ ರಾಜು ಮತ್ತೊಮ್ಮೆ ವಿಜಯ್ ದೇವರಕೊಂಡ ಮೇಲೆ ಹಣ ಹೂಡಲು ಈ ಚಿತ್ರದ ಮೂಲಕ ಮುಂದೆ ಬಂದಿರುವುದು ಅನೇಕರ ಹುಬ್ಬನ್ನೇರಿಸಿದೆ. ರವಿಕಿರಣ್ ಕೋಲಾ ಈ ಚಿತ್ರವನ್ನ ನಿರ್ದೇಶಿಸಲಿದ್ದಾರೆ.
ಈ ಚಿತ್ರದ ಜೊತೆ ವಿಜಯ್ ದೇವರಕೊಂಡ ಕೈಯಲ್ಲಿ ಇನ್ನೆರಡು ಸಿನಿಮಾಗಳಿವೆ. ಅದರಲ್ಲಿ ಒಂದು ಚಿತ್ರವನ್ನ ಗೌತಮ್ ತಿನ್ನನೂರಿ ನಿರ್ದೇಶನ ಮಾಡ್ತಿದ್ದಾರೆ. ಪ್ರೇಮಲು ನಾಯಕಿ ಮಮಿತಾ ಬೈಜು ಈ ಚಿತ್ರದ ನಾಯಕಿ. ಶ್ಯಾಮ್ ಸಿಂಗ್ ರಾಯ್' ಚಿತ್ರದ ಡೈರೆಕ್ಟರ್ ರಾಹುಲ್ ಜೊತೆ ವಿಜಯ್ ದೇವರಕೊಂಡ ಸಿನಿಮಾ ಮಾಡಲಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ಸೋಲಿನ ಸುಳಿಯಲ್ಲಿ ಸಿಲುಕಿರುವ ವಿಜಯ್ ದೇವರಕೊಂಡ ಮೈ ಕೊಡವಿ ಎದ್ದು ನಿಲ್ಲುವ ಪ್ರಯತ್ನ ಮಾಡ್ತಿದ್ದಾರೆ. ಫ್ಯಾಮಿಲಿ ಇಮೇಜ್ ಪಕ್ಕಕ್ಕೆ ಇಟ್ಟು ತಮ್ಮ ರೌಡಿ ಇಮೇಜ್ ಗೆ ತಕ್ಕಂತೆ ಸಿನಿಮಾ ಮಾಡಲು ಹೊರಟಿದ್ದಾರೆ. ತಮ್ಮ ಈ ಪ್ರಯತ್ನದಲ್ಲಿ ವಿಜಯ್ ದೇವರಕೊಂಡ ಯಶಸ್ವಿಯಾಗ್ತಾರಾ, ಗೆದ್ದು ಬೀಗ್ತಾರಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ.


Click it and Unblock the Notifications











