ಹುಟ್ಟೂರಿನಲ್ಲಿ ವಿಜಯ್-ರಶ್ಮಿಕಾ ಸತ್ಯನಾರಾಯಣ ಪೂಜೆ; ಊರಿನ ಜನರಿಗೆ ನಾನ್ ವೆಜ್ ಊಟ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ ಮುಂದುವರೆದಿದೆ. ಮದುವೆ ಬಳಿಕ ದಂಪತಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಇತ್ತೀಚಿಗೆ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿ ಬಂದಿದ್ದರು. ಮಾರ್ಚ್ 4ರಂದು ನಡೆಯುವ ರಿಸೆಪ್ಷನ್ ಪಾರ್ಟಿಗೆ ಅತಿಥಿಗಳನ್ನು ಆಹ್ವಾನಿಸುವ ಕೆಲಸ ಮುಂದುವರೆದಿದೆ. ಈ ನಡುವೆ ವಿಜಯ್ ದೇವರಕೊಂಡ ತನ್ನ ಹುಟ್ಟೂರಿಗೆ ಮಡದಿಯನ್ನು ಕರೆದುಕೊಂಡು ಹೋಗಿದ್ದಾರೆ.
ತೆಲಂಗಾಣದ ಮೆಹಬೂಬ್ ನಗರ್ ಜಿಲ್ಲೆಯ ಬಲ್ಮೂರ್ ಮಂಡಲದ ತುಮ್ಮನ್ಪೇಟೆಯಲ್ಲಿ ಇವತ್ತು(ಫೆಬ್ರವರಿ 2) ಸಂಭ್ರಮ ಮನೆ ಮಾಡಿತ್ತು. ಕಾರಣ ವಿಜಯ್ ದೇವರಕೊಂಡ ತಮ್ಮ ಮಡದಿ ರಶ್ಮಿಕಾರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಮದುವೆ ಬಳಿಕ ಇದೇ ಮೊದಲ ಬಾರಿಗೆ ವಿಜಯ್ ಹುಟ್ಟೂರಿಗೆ ತೆರಳಿದ್ದು ಬಂಧುಮಿತ್ರರು ಹಾಗೂ ಊರಿನ ಜನ ಸಂಭ್ರಮದಿಂದ ನವ ಜೋಡಿಯನ್ನು ಬರ ಮಾಡಿಕೊಂಡಿದ್ದಾರೆ. ಊರಿನಲ್ಲಿ ಹಬ್ಬದ ವಾತಾರವರಣ ಮನೆ ಮಾಡಿತ್ತು. ಮಂಗಳ ವಾದ್ಯಗಳ ಜೊತೆಗೆ ಜೋಡಿಯನ್ನು ಜನ ಬರಮಾಡಿಕೊಂಡರು.

ಮದುವೆ ಬಳಿಕ ಮಾಡುವ ಶಾಸ್ತ್ರ, ಪೂಜೆಗಳನ್ನು ದಂಪತಿ ನೆರವೇರಿಸಿದರು. ಮೊದಲಿಗೆ ತುಳಸಿ ಪೂಜೆ ನಡೀತು. ಬಳಿಕ ವೇದ ಪಂಡಿತರ ಮಂತ್ರ ಪಠಣದ ನಡುವೆ ವಿಜಯ್-ರಶ್ಮಿಕಾ ದಂಪತಿ ಸತ್ಯ ನಾರಾಯಣ ಸ್ವಾಮಿ ವ್ರತ ಪೂರೈಸಿದರು. ತಾರಾ ಜೋಡಿ ಊರಿಗೆ ಭೇಟಿ ನೀಡಿದ್ದ ಕಾರಣ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಅಚಂಪೇಟ್ ಡಿಎಸ್ಪಿ ಪಲ್ಲೆ ಶ್ರೀನಿವಾಸ್, ಸಿಐ ನಾಗರಾಜು ಹಾಗೂ ಬಲ್ಮೂರ್ ಎಸ್ಐ ರಾಜೇಂದರ್ ನೇತೃತ್ವದಲ್ಲಿ ಬಿಗಿ ಭದ್ರತೆ ಬದಗಿಸಲಾಗಿತ್ತು. ಇನ್ನು ಖಾಸಗಿ ಭದ್ರತಾ ಸಿಬ್ಬಂದಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಿದ್ದರು. ಪಾಸ್ ಹೊಂದಿದ್ದವರಿಗೆ ಮಾತ್ರ ಒಳಗೆ ಹೋಗಲು ಪ್ರವೇಶ ಸಿಕ್ಕಿತ್ತು.
ಮೆಹಬೂಬ್ ನಗರದ ಅಚಂಪೇಟ್ ಕ್ಷೇತ್ರದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಊರಿನ ಹಿರಿಯರು ಹಾಗೂ ಅಭಿಮಾನಿಗಳು ಸಮಾರಂಭಕ್ಕೆ ಹಾಜರಾಗಿದ್ದರು. 450ಕ್ಕೂ ಹೆಚ್ಚು ಆಹ್ವಾನಿತರು ಅಲ್ಲಿ ಜಮಾಯಿಸಿದ್ದರು. ಇನ್ನು ಸುತ್ತಮುತ್ತಲ ಗ್ರಾಮಗಳಿಂದ ಸಾಕಷ್ಟು ಅಭಿಮಾನಿಗಳು ನವ ಜೋಡಿಯನ್ನು ನೋಡಲು ಆಗಮಿಸಿದ್ದರು. ಇತ್ತೀಚೆಗೆ ಹುಟ್ಟೂರಿನಲ್ಲಿ ಫಾರ್ಮ್ಹೌಸ್ ನಿರ್ಮಿಸಿರುವ ವಿಜಯ್ ಅಲ್ಲೇ ಊರಿನ ಜನರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಿಸಿದ್ದರು. ಎಲ್ಲರಿಗೂ ನಾನ್ ವೆಜ್ ಹಾಗೂ ವೆಜ್ ಊಟ ಹಾಕಿಸಿದ್ದಾರೆ.
ಫೆಬ್ರವರಿ 16ರಂದು ರಾಜಸ್ಥಾನದ ಉದಯ್ಪುರದಲ್ಲಿ ವಿಜಯ್- ರಶ್ಮಿಕಾ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಬಹಳ ಸಂಪ್ರದಾಯ ಬದ್ಧವಾಗಿ ಮದುವೆ ಶಾಸ್ತ್ರಗಳು ನಡೆದಿದ್ದವು. ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ರಶ್ಮಿಕಾ ಇನ್ಸ್ಟಾಗ್ರಾಮ್ ಪೋಸ್ಟ್ ದಾಖಲೆ ಮಟ್ಟದಲ್ಲಿ ಲೈಕ್ಸ್ ಗಿಟ್ಟಿಸಿಕೊಂಡಿದೆ. ಅಷ್ಟರಮಟ್ಟಿಗೆ ಮದುವೆ ಫೋಟೊಗಳು ವೈರಲ್ ಆಗಿದ್ದವು. ಬಳಿಕ ಹಿಂದೂ ಸಂಪ್ರದಾಯಗಳನ್ನು ಅನುಸರಿಸಿ ಜೋಡಿ ದೇವಸ್ಥಾನಗಳಿಗೆ ಭೇಟಿ ನೀಡಿತ್ತು. ಇದೀಗ ಹುಟ್ಟೂರಿನಲ್ಲಿ ಮದುವೆ ನಂತರದ ಶಾಸ್ತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಮದುವೆ ಹಿನ್ನೆಲೆಯಲ್ಲಿ ದೇಶಾದ್ಯಂತ ಅನ್ನದಾನ ಹಾಗೂ ಸಿಹಿ ಹಂಚಿ ವಿಜಯ್-ರಶ್ಮಿಕಾ ಜೋಡಿ ಗಮನ ಸೆಳೆದಿದೆ. ದೇಶದ ಹಲವು ಭಾಗಗಳಲ್ಲಿ ವಾಹನಗಳ ಮೂಲಕ ತೆರಳಿ ಸಿಹಿ ಹಂಚಲಾಗಿದೆ. ಅನ್ನದಾನಕ್ಕಾಗಿ ವಿವಿಧ ದೇವಸ್ಥಾನಗಳಿಗೆ ದೇಣಿಗೆಯನ್ನು ನೀಡಿದ್ದಾರೆ. ಆ ಮೂಲಕ ತಮ್ಮ ಮದುವೆಯನ್ನು ವಿಶೇಷವಾಗಿಸಿದೆ ವಿರೋಷ್ ಜೋಡಿ.
ಹೈದರಾಬಾಸ್ ಬಂಜಾರ ಹಿಲ್ಸ್ನಲ್ಲಿರುವ ತಾಜ್ ಕೃಷ್ಣ ಹೋಟೆಲ್ನಲ್ಲಿ ವಿಜಯ್-ರಶ್ಮಿಕಾ ಮದುವೆ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಫೆಬ್ರವರಿ 4ರಂದು ನಡೆಯುವ ಆರತಕ್ಷತೆಗೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಸಾಕಷ್ಟು ಮುಖಂಡರು ಸಾಕ್ಷಿ ಆಗಲಿದ್ದಾರೆ. ಬಿಗಿ ಭದ್ರತೆ ನಡುವೆ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿದೆ.


Click it and Unblock the Notifications











