ತಮಿಳು ರೀಮೆಕ್ನಲ್ಲಿ ಮಾವ ಅಳಿಯ: ಪವನ್- ಸಾಯಿಧರಮ್ ಹೊಸ ಸಿನಿಮಾ ಶೂಟಿಂಗ್ ಶುರು
ಪವರ್ ಸ್ಟಾರ್ ಪವನ್ ಕಲ್ಯಾಣ್ ಸದ್ದಿಲ್ಲದೇ ಇನ್ನೊಂದು ಸಿನಿಮಾ ಪ್ರಾರಂಭಿಸಿದ್ದಾರೆ. ಈ ಬಾರಿ ಪವನ್ಗೆ ಮತ್ತೊಬ್ಬ ಮೆಗಾ ಫ್ಯಾಮಿಲಿ ಹೀರೋ ಸಾಥ್ ಕೊಡುತ್ತಿರುವುದು ವಿಶೇಷ. ಸರಳವಾಗಿ ಮುಹೂರ್ತ ನೆರವೇರಿಸಿ ಚಿತ್ರತಂಡ ಚಿತ್ರೀಕರಣ ಆರಂಭಿಸಿದೆ. ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ನಲ್ಲಿ ಇನ್ನು ಹೆಸರಿಡದ ಈ ಸಿನಿಮಾ ನಿರ್ಮಾಣವಾಗುತ್ತಿದೆ.
ಸಿನಿಮಾ ಮುಹೂರ್ತ ಸಮಾರಂಭದ ಫೋಟೊಗಳನ್ನು ಹಂಚಿಕೊಂಡು ಚಿತ್ರತಂಡವೇ ಈ ವಿಚಾರವನ್ನು ಘೋಷಿಸಿದೆ. ಮುಂದಿನ ಆಂಧ್ರ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪವನ್ ಕಲ್ಯಾಣ್ ಜನಸೇನಾ ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇದೀಗ ಪವರ್ ಸ್ಟಾರ್ ಮತ್ತೊಂದು ಸಿನಿಮಾ ಶುರು ಮಾಡಿರೋದು ಅಚ್ಚರಿ ಮೂಡಿಸಿದೆ. ತಮಿಳು ನಿರ್ದೇಶಕ ಸಮುದ್ರ ಖನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಪವನ್ ಜೊತೆ ಸಹೋದರಿ ಮಗ ಸಾಯಿ ಧರಮ್ ತೇಜ್ ಕೂಡ ತರೆ ಹಂಚಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ. ಮಾವ ಸೋದರಳಿಯ ಸಿನಿಮಾ ಸೆಟ್ನಲ್ಲಿರುವ ಫೋಟೊಗಳು ವೈರಲ್ ಆಗಿದೆ. 2 ವರ್ಷಗಳ ಹಿಂದೆ ತಮಿಳಿನಲ್ಲಿ ಬಂದಿದ್ದ 'ವಿನೋದಯ ಸಿತಂ' ಸಿನಿಮಾ ಹಿಟ್ ಆಗಿತ್ತು. ಸಮುದ್ರ ಖನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಲೀಡ್ ರೋಲ್ನಲ್ಲಿ ನಟಿಸಿದ್ದರು. ತಂಬಿ ರಾಮಯ್ಯ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
'ವಿನೋದಯ ಸಿತಂ' ಕಥೆಯನ್ನು ಸಮುದ್ರ ಖನಿ ಈಗ ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ತೇಜ್ಗೆ ಹೇಳಿ ಒಪ್ಪಿಸಿದ್ದಾರೆ. ಒಂದಷ್ಟು ಬದಲಾವಣೆಗಳ ಜೊತೆ ಚಿತ್ರವನ್ನು ತೆಲುಗಿನಲ್ಲೂ ಕಟ್ಟಿಕೊಡುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಕುತೂಹಲ ಮೂಡಿಸಿದೆ. 'ಹರಿಹರ ವೀರಮಲ್ಲು', 'ಉಸ್ತಾದ್ ಭಗತ್ ಸಿಂಗ್', 'ಓಜಿ' ಎನ್ನುವ 3 ಸಿನಿಮಾಗಳಲ್ಲಿ ಈಗಾಗಲೇ ಪವರ್ ಸ್ಟಾರ್ ನಟಿಸುತ್ತಿದ್ದಾರೆ. ಆ ಸಾಲಿಗೆ ಈ ಸಿನಿಮಾ ಕೂಡ ಸೇರಿಕೊಳ್ತಿದೆ.

ಸಮಯಕ್ಕೆ ರೂಪ ಇದ್ದರೆ ಹೇಗಿರುತ್ತೆ, ಎನ್ನುವ ಕಾನ್ಸೆಪ್ಟ್ನಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ಕಾರು ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ಸಮಯ 2ನೇ ಅವಕಾಶ ಕೊಡುತ್ತದೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದೇ ಸಿನಿಮಾ ಕಥೆ. ಸಮಯದ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಈ ಹಿಂದೆ 'ಗೋಪಾಲ ಗೋಪಾಲ' ಹೆಚ್ಚು ಕಮ್ಮಿ ಇಂಥದ್ದೇ ಪಾತ್ರದಲ್ಲಿ ಪವನ್ ನಟಿಸಿದ್ದರು. ಅಪಘಾತದಲ್ಲಿ ಸಾಯಿ ಧರಮ್ ತೇಜ್ ಗಂಭೀರವಾಗಿ ಗಾಯಗೊಂಡಿದ್ದರು. ಹಾಗಾಗಿ ಅದಕ್ಕೆ ಲಿಂಕ್ ಕೊಟ್ಟು ಈ ಸಿನಿಮಾ ಮಾಡುತ್ತಿರುವಂತೆ ಕಾಣುತ್ತಿದೆ.
ಪವನ್ ಕಲ್ಯಾಣ್ ಸಿನಿಮಾಗಳಿಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಆದರೆ ಪಾಲಿಟಿಕ್ಸ್ನಲ್ಲಿ ಬ್ಯುಸಿ ಆಗಿರುವ ಪವನ್, ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾರೆ. ಹಾಗಾಗಿ ಅವರ ಕಾಲ್ಶೀಟ್ ಸಿಗೋದು ಕಷ್ಟವಾಗಿದೆ. 'ವಿನೋದಯ ಸಿತಂ' ರೀಮೆಕ್ಗೆ ಒಂದು ತಿಂಗಳು ಕಾಲ್ಶೀಟ್ ಮಾತ್ರ ಕೊಟ್ಟದ್ದಾರೆ. ಅದಕ್ಕೆ ಬರೋಬ್ಬರಿ 50 ಕೋಟಿ ಸಂಭಾವನೆ ಪಡೀತಿದ್ದಾರೆ ಎನ್ನುವ ಟಾಕ್ ಇದೆ. ಇನ್ನು ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕಥೆ, ಸಂಭಾಷಣೆ ಸಿದ್ಧಪಡಿಸುತ್ತಿದ್ದಾರೆ.


Click it and Unblock the Notifications











