ಚಪ್ಪಲಿಯಲ್ಲಿ ತಲೆಗೆ ಹೊಡೆದುಕೊಂಡು ಕಣ್ಣೀರು ಹಾಕಿದ ವಸಿಷ್ಠ ಸಿಂಹ ಚಿತ್ರದ ನಿರ್ದೇಶಕ
ಕನ್ನಡ ಚಿತ್ರರಂಗದ ಅಳಿವು-ಉಳಿವು ಸೂಪರ್ ಸ್ಟಾರ್ಸ್ ಕೈಯಲ್ಲಿದೆ. ಆದರೆ ಅವರು ಕೈ ಕಟ್ಕೊಂಡು ಕುಳಿತುಕೊಂಡಿದ್ದಾರೆ. ಇನ್ನೂ ಹೊಸಬರದ್ದು ಕಥೆ ಅಲ್ಲ ಬದಲಿಗೆ ವ್ಯಥೆ. ಪ್ರೇಕ್ಷಕರ ಕೊರತೆಯಿಂದ ಹೊಸಬರ ಮುಖದಲ್ಲಿನ ಕಾಂತಿ ಕಡಿಮೆಯಾಗುತ್ತಿದೆ ಹೊರತು ಯಾವುದೇ ಕ್ರಾಂತಿ ಆಗ್ತಿಲ್ಲ. ಎಷ್ಟೇ ತಿಪ್ಪರಲಾಗ ಹಾಕಿದರೂ ಕನ್ನಡದ ಚಿತ್ರಗಳನ್ನ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಕೇವಲ ಅಲ್ಲೊಂದು.. ಇಲ್ಲೊಂದು..
ಚಿತ್ರಗಳು ಮಾತ್ರ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತಿವೆ. ಹಣವನ್ನು ಕೂಡ ದೋಚುತ್ತಿವೆ. ಮಿಕ್ಕಂತೆ ಬಹುತೇಕರ ಕಥೆ ಮತ್ತು ವ್ಯಥೆ ಒಂದೇ. ಈ ಸಮಸ್ಯೆ ಕೇವಲ ಕನ್ನಡ ಚಿತ್ರರಂಗದ್ದಲ್ಲ. ಪರಭಾಷೆಯಲ್ಲಿ ಕೂಡ ಈ ಸಮಸ್ಯೆ ಇದೆ. ಹಲವರನ್ನು ಈ ಸಮಸ್ಯೆ ಭಾದಿಸುತ್ತಿದೆ.

ಎಷ್ಟೇ ಉತ್ತಮವಾದ ಚಿತ್ರವನ್ನು ಮಾಡಿದರೂ ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಚಿತ್ರತಂಡಗಳು ವಿಫಲವಾಗುತ್ತಿವೆ. ಎಷ್ಟೇ ಪ್ರಚಾರ ಮಾಡಿದರೂ ಕೂಡ ಕೆಲ ಚಿತ್ರಗಳತ್ತ ಪ್ರೇಕ್ಷಕರು ತಿರುಗಿಯೂ ಕೂಡ ನೋಡದಂತಹ ವಾತಾವರಣ ನಿರ್ಮಾಣವಾಗಿದೆ. ಈ ಸೋಲು.. ಅವಮಾನ.. ಹತಾಶೆ.. ಸಹಜವಾಗಿ ಹಲವು ಚಿತ್ರತಂಡಗಳನ್ನು ಜರ್ಜರಿತಗೊಳಿಸುತ್ತಿವೆ. ಅದರಲ್ಲಿಯೂ ನಿರ್ದೇಶಕರ ಗೋಳು ಇಲ್ಲಿ ಕೇಳೋರು ಯಾರು ಇಲ್ಲ.
ಯಾಕೆಂದರೆ.. ಚಿತ್ರ ಸೋತರೂ ಕೂಡ ಆ ಚಿತ್ರದಲ್ಲಿನ ಕಲಾವಿದರಿಗೆ ಮತ್ತೆ ಅವಕಾಶಗಳು ಸಿಗುತ್ತವೆ. ಆದರೆ.. ನಿರ್ದೇಶಕರ ಕಥೆ ಹಾಗಲ್ಲ. ಒಂದು ಸೋಲು ಒಮ್ಮೊಮ್ಮೆ ಇವರ ವೃತ್ತಿ ಬದುಕನ್ನೇ ಸರ್ವನಾಶ ಮಾಡಿಬಿಡುತ್ತದೆ. ಹೀಗಾಗಿಯೇ ಹಲವು ನಿರ್ದೇಶಕರು ತಮ್ಮ ಚಿತ್ರದ ಬಿಡುಗಡೆಯ ಆಚೀಚೆ ವಿಲವಿಲ ಒದ್ದಾಡುತ್ತಾರೆ. ತಮ್ಮ ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿ ಸಿಗದೇ ಇದ್ದಾಗ ಕಣ್ಣೀರು ಹಾಕುತ್ತಾರೆ. ಉದಾಹರಣೆಗೆ ಮೋಹನ್ ಶ್ರೀವತ್ಸ.
ಹೌದು, ಅಸಲಿಗೆ ಪಕ್ಕದ ಆಂಧ್ರದಲ್ಲಿ ''ತ್ರಿಬಾಣಧಾರಿ ಬಾರ್ಬರಿಕ್'' ಎಂಬ ಚಿತ್ರ ಒಂದು ತೆರೆಗೆ ಬಂದಿದೆ. ಪೌರಾಣಿಕ ಮತ್ತು ಸಾಮಾಜಿಕ ಅಂಶಗಳು ಬೆರೆತಿರುವ ಈ ಚಿತ್ರದಲ್ಲಿ ನಮ್ಮ ಕನ್ನಡದ ಕಂಚಿನ ಕಂಠದ ನಾಯಕ ವಸಿಷ್ಠ ಸಿಂಹ ನಾಯಕನ ಪಾತ್ರವನ್ನು ನಿರ್ವಹಿಸಿದ್ಧಾರೆ.
ವಸಿಷ್ಠ ಸಿಂಹ ಜೊತೆ ಚಿತ್ರದಲ್ಲಿ ಬಾಹುಬಲಿಯ ಕಟ್ಟಪ್ಪ ಸತ್ಯ ರಾಜ್, ಸಂಚಿ ರೈ, ಸತ್ಯನ್ ರಾಜೇಶ್, ಕ್ರಾಂತಿ ಕಿರಣ್, ಮೊಟ್ಟ ರಾಜೇಂದ್ರ, ವಿಟಿವಿ ಗಣೇಶ್, ಉದಯಭಾನು ಮುಂತಾದವರು ಅಭಿನಯಿಸಿರುವ ಈ ಚಿತ್ರವನ್ನು ಮೋಹನ್ ಶ್ರೀವತ್ಸ ನಿರ್ದೇಶಿಸಿದ್ದಾರೆ.

ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ತಮ್ಮ ಈ ಚಿತ್ರದ ಮೇಲೆ ನಿರ್ದೇಶಕ ಮೋಹನ್ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದ್ದರು. ಬದುಕು ಮತ್ತೊಂದು ಮಗ್ಗಲಿನತ್ತ ಹೊರಳುತ್ತೆ ಎನ್ನುವ ವಿಶ್ವಾಸದಲ್ಲಿದ್ದರು. ಈ ವಿಶ್ವಾಸದಲ್ಲಿಯೇ ಚಿತ್ರ ಬಿಡುಗಡೆಗೆ ಮುನ್ನ ತಮ್ಮ ಚಿತ್ರದ ಕುರಿತು ತುಂಬಾ ಭರವಸೆಯ ಮಾತುಗಳನ್ನಾಡಿದ್ದರು ಮೋಹನ್ ಶ್ರೀವತ್ಸ.
ಆದರೆ ಮೋಹನ್ ಶ್ರೀವತ್ಸ ದೌರ್ಭಾಗ್ಯ ಚಿತ್ರ ತೆರೆಗೆ ಬಂದು 5 ದಿನಗಳಾದರೂ ಕೂಡ ಪ್ರೇಕ್ಷಕರು ಚಿತ್ರಮಂದಿರದ ಕಡೆ ಸುಳಿಯುತ್ತಿಲ್ಲ. ಹೀಗಾಗಿಯೇ ಇತ್ತೀಚೆಗೆ ರಿಯಾಲಿಟಿ ಚೆಕ್ ಮಾಡಲು ತಾವೇ ಚಿತ್ರಮಂದಿರಕ್ಕೆ ಹೋದಾಗ ಮೋಹನ್ ಶ್ರೀವತ್ಸ್ ಅವರಿಗೆ ಆಘಾತವಾಗಿದೆ. ಯಾಕೆಂದರೆ ಚಿತ್ರಮಂದಿರದಲ್ಲಿದ್ದಿದ್ದು ಕೇವಲ ಹತ್ತು ಜನ ಮಾತ್ರ.
ಆದರೂ ಕೂಡ ಧೃತಿಗೆಡದೇ ಪ್ರೇಕ್ಷಕರಲ್ಲಿ ಚಿತ್ರದ ಕುರಿತು ನಿರ್ದೇಶಕ ಮೋಹನ್ ಶ್ರೀವತ್ಸ ಸಾಮಾನ್ಯ ಪ್ರೇಕ್ಷಕರಂತೆ ವಿಮರ್ಶೆಯನ್ನು ಕೇಳಿದ್ದಾರೆ. ಆಗ ಅಲ್ಲಿದ್ದ ಪ್ರೇಕ್ಷಕರೆಲ್ಲ ಚಿತ್ರ ಚೆನ್ನಾಗಿದೆ ಎಂಬ ಮಾತುಗಳನ್ನಾಡಿದ್ದಾರೆ. ಇದರಿಂದ ಮೋಹನ್ ಶ್ರೀವತ್ಸ ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಚಿತ್ರ ಚೆನ್ನಾಗಿದ್ದರು ಕೂಡ ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ನೋವು ಹೆಚ್ಚಾಗಿದೆ.
ಹೀಗಾಗಿಯೇ ವಿಡಿಯೋ ಮೂಲಕ ತಮ್ಮ ನೋವು ಹಂಚಿಕೊಂಡಿರುವ ನಿರ್ದೇಶಕ ಮೋಹನ್ ಶ್ರೀವತ್ಸ ಚಿತ್ರ ಚೆನ್ನಾಗಿದ್ದರೂ ಕೂಡ ಜನ ಬರುತ್ತಿಲ್ಲ.ಯಾಕೆ ಎನ್ನುವುದು ನನಗೂ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ. ಸಿನಿಮಾ ನೋಡಿ ಇಷ್ಟವಾಗದೇ ಇದ್ದರೆ ನಮ್ಮದು ತಪ್ಪಿದೆ ಎಂದು ಒಪ್ಪಿಕೊಳ್ಳಬಹುದು ಆದರೆ ಯಾವ ಕಾರಣ ಇಲ್ಲದೆ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರದಿದ್ದರೆ ನನ್ನ ಸಿನಿಮಾ ಹೇಗಿದೆ ಎಂದು ನನಗೆ ಹೇಗೆ ಅರ್ಥವಾಗುತ್ತದೆ ಎಂದಿರುವ ಮೋಹನ್ ಶ್ರೀವತ್ಸ, ಆಂಧ್ರದವರ ಭಾಷಾಭಿಮಾನದ ಕುರಿತು ಪ್ರಶ್ನೆ ಮಾಡಿದ್ಧಾರೆ. ಮಲಯಾಳಂ ಸಿನಿಮಾಗಳನ್ನು ಮುಗಿ ಬಿದ್ದು ನೋಡುತ್ತೀರಾ ನಮ್ಮದೇ ಭಾಷೆಯ ಒಳ್ಳೆಯ ಸಿನಿಮಾ ನೀವು ಯಾಕೆ ನೋಡುವುದಿಲ್ಲ ಎಂದು ಮೋಹನ್ ಪ್ರಶ್ನಿಸಿದ್ದಾರೆ.
ಮುಂದುವರೆದು ನಾನು ಕೂಡ ಮಲಯಾಳಂ ಚಿತ್ರರಂಗಕ್ಕೆ ವಲಸೆ ಹೋಗುತ್ತೇನೆ ಎಂದು ಹೇಳುತ್ತಾ ನನ್ನ ಚಿತ್ರ ಜನರಿಗೆ ಇಷ್ಟವಾಗದಿದ್ದರೆ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳುತ್ತೇನೆ ಎಂದು ಈ ಹಿಂದೆ ಹೇಳಿದ್ದೇ ಅದರಂತೆ ಈಗ ಹಾಗೇ ಮಾಡುತ್ತೇನೆ ಎಂದು ಹೇಳಿ ತಮ್ಮ ಚಪ್ಪಲಿಯಲ್ಲಿ ತಾವೇ ಹೊಡೆದುಕೊಂಡಿದ್ದಾರೆ ನಿರ್ದೇಶಕ ಮೋಹನ್ ಶ್ರೀವತ್ಸ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Click it and Unblock the Notifications











