ನಟಿಯರ ಮೈ ಮುಟ್ಟಿ ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಟ್ರೋಲ್
ಪುರುಷರು ಅನುಮತಿ ಇಲ್ಲದೇ ಮಹಿಳೆಯರ ಮೈಮುಟ್ಟುವುದು, ಅಸಭ್ಯವಾಗಿ ವರ್ತಿಸುವುದು ತಪ್ಪಾಗುತ್ತದೆ. ಆದರೆ ತೆಲುಗು ನಿರ್ದೇಶಕ ಕೆ. ರಾಘವೇಂದ್ರ ರಾವ್ ಪದೇ ಪದೆ ನಟಿಯರನ್ನು ಹೀಗೆ ಮುಟ್ಟುವುದು, ತಾಕುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಅವರನ್ನು ನಿರ್ದೇಶಕರು ಹೀಗೆ ಮಟ್ಟಿ ಮಾತನಾಡಿಸಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು. ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
100ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿ ಕೆ. ರಾಘವೇಂದ್ರ ರಾವ್ ಸಕ್ಸಸ್ ಕಂಡಿದ್ದಾರೆ. ಸೂಪರ್ ಸ್ಟಾರ್ಗಳ ಜೊತೆ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಆದರೆ ಇಂತಿಪ್ಪ ಫಿಲ್ಮ್ ಮೇಕರ್ ನಟಿಯರ ಜೊತೆ ಹೀಗೆ ವರ್ತಿಸುವುದು ಮತ್ತೊಮ್ಮೆ ಚರ್ಚೆ ಹುಟ್ಟಾಕ್ಕಿದೆ. ನಿನ್ನೆ(ಜೂನ್ 18) ವಿಕ್ಟರಿ ವೆಂಕಟೇಶ್ ಹಾಗೂ ಕಲ್ಯಾಣ್ ರಾಮ್ ನಟನೆಯ ಹೊಸ ಸಿನಿಮಾ ಸೆಟ್ಟೇರಿತು. ಮುಹೂರ್ತ ಸಮಾರಂಭಕ್ಕೆ ಕೆ. ರಾಘವೇಂದ್ರ ರಾವ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಚಿತ್ರದ ನಾಯಕಿಯರಾದ ಕೀರ್ತಿ ಸುರೇಶ್ ಹಾಗೂ ಕೃತಿ ಶೆಟ್ಟಿ ಅವರನ್ನು ಪದೇ ಪದೆ ಮುಟ್ಟಿದ್ದು ವೈರಲ್ ಆಗ್ತಿದೆ.

ಮೊದಲ ದೃಶ್ಯವನ್ನು ಕೆ. ರಾಘವೇಂದ್ರ ರಾವ್ ನಿರ್ದೇಶನ ಮಾಡುವಂತೆ ಚಿತ್ರತಂಡ ಕೇಳಿತ್ತು. ಅದರಿಂದ ತಮ್ಮದೇ ರೀತಿ ಆ ದೃಶ್ಯವನ್ನು ಹೇಗೆ ಮಾಡಬೇಕು ಎಂದು ಇಬ್ಬರು ನಟಿಯರು ಹಾಗೂ ನಟರಿಗೆ ಹೇಳಿಕೊಟ್ಟರು. ಈ ವೇಳೆ ಪದೇ ಪದೆ ಕೃತಿ ಶೆಟ್ಟಿ ಅವರನ್ನು ಹಿಡಿದು ಎಳೆಯುತ್ತಾ ಕಾಣಿಸಿಕೊಂಡಿದ್ದಾರೆ. ಅಲ್ಲಿದ್ದವರು ಯಾರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಈ ನಡುವೆ ಹಿಂದೆ ನಿಹಾರಿಕಾ ಜೊತೆ ಹಿರಿಯ ನಿರ್ದೇಶಕ ವರ್ತಿಸಿದ್ದ ವೀಡಿಯೋವನ್ನು ವೈರಲ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
ನಟಿಯರನ್ನು ಮುಟ್ಟದೇ ಈ ದೃಶ್ಯವನ್ನು ನಿರ್ದೇಶನ ಮಾಡಬಹುದಿತ್ತಲ್ಲ. ಯಾಕೆ ಪದೇ ಪದೆ ರಾಘವೇಂದ್ರ ರಾವ್ ಹೀಗೆ ಮಾಡ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ಎನ್ನುವ ಕಾರಣಕ್ಕೆ ನಟಿಯರು ಕೂಡ ಇದನ್ನೆಲ್ಲಾ ಒಪ್ಪಿಕೊಂಡು ಸುಮ್ಮನಿದ್ದಾರೆ. ಬೇರೆ ಯಾರಾದರೂ ಹೀಗೆ ಮಾಡಿದ್ರೆ ಸುಮ್ಮನಿರ್ತಿದ್ರಾ? ಎಂದು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. 'ಮನ ಶಂಕರವರಪ್ರಸಾದ್ಗಾರು' ಸಿನಿಮಾ ಬಳಿಕ ಅನಿಲ್ ರಾವಿಪುಡಿ ಹೊಸ ಸಿನಿಮಾ ಶುರು ಮಾಡಿದ್ದಾರೆ.
ಹೈದರಾಬಾದ್ನಲ್ಲಿ ಸಿನಿಮಾ ಮುಹೂರ್ತ ಸಮಾರಂಭ ನಡೀತು. ಮೊದಲ ದೃಶ್ಯಕ್ಕೆ ಅಲ್ಲು ಅರವಿಂದ್ ಕ್ಲಾಪ್ ಮಾಡಿದ್ದರು. ಆ ದೃಶ್ಯವನ್ನು ಕೆ. ರಾಘವೇಂದ್ರ ರಾವ್ ನಿರ್ದೇಶನ ಮಾಡಿದ್ರು. ಆ ಸಮಯದಲ್ಲಿ ಈ ರೀತಿ ಆಗಿದೆ. ಒಂದ್ಕಾಲದಲ್ಲಿ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟ ರಾಘವೇಂದ್ರ ರಾವ್ ಈಗ ವಿಶ್ರಾಂತಿ ಜೀವನ ಕಳೆಯುತ್ತಿದ್ದಾರೆ. ಕೊನೆಯದಾಗಿ 'ಪೆಳ್ಳಿ ಸಂದD' ಚಿತ್ರಕ್ಕೆ ಮಾರ್ಗದರ್ಶಕರಾಗಿ ಅವರು ಕೆಲಸ ಮಾಡಿದ್ದರು.
ಏಳೆಂಟು ತಿಂಗಳ ಹಿಂದೆ 'ಇರುವರು ಭಾಮಲ ಕೂಗಿಲಿಲೊ' ಸಿನಿಮಾ ಮುಹೂರ್ತ ಸಮಾರಂಭ ನಡೆದಿತ್ತು. ಅಂದು ನಿಹಾರಿಕಾ ಕೋನಿಡೇಲ ಜೊತೆ ರಾಘವೇಂದ್ರ ರಾವ್ ಇದೇ ರೀತಿ ವರ್ತಿಸಿದ್ದರು. ಆಕೆ ಕೂಡ ಇದಕ್ಕೆ ಬೇಸತ್ತು ವರ್ತಿಸಿದಂತೆ ಕಂಡುಬಂದಿತ್ತು. ಚಿಕ್ಕಂದಿನಿಂದ ನಿಹಾರಿಕಾ ಅವರನ್ನು ರಾಘವೇಂದ್ರ ರಾವ್ ಬಲ್ಲರು. ಆದರೂ ಹೀಗೆ ವರ್ತಿಸಿದ್ದು ಸರಿಯಲ್ಲ ಎಂದು ಕೆಲ ಮಹಿಳೆಯರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು. ತೆಲಂಗಾಣದ ಸಾಮಾಜಿಕ ಕಾರ್ಯಕರ್ತೆ ಕೃಷ್ಣ ಕುಮಾರಿ ಕೂಡ ಈ ಬಗ್ಗೆ ಸಂದರ್ಶನವೊಂದರಲ್ಲಿ ಅಸಮಾಧಾನ ಹೊರ ಹಾಕಿದ್ದರು.
ಹಿರಿಯರು ಎನಿಸಿಕೊಂಡವರು, ದೊಡ್ಡ ಸ್ಥಾನದಲ್ಲಿ ಇರುವವರು ಹೀಗೆ ವರ್ತಿಸುತ್ತಾರೆ. ಅವರ ಮನಸ್ಥಿತಿ ಬದಲಾಗಬೇಕು. ನೋ ಅಂದ್ರೆ ನೋ ಅಷ್ಟೆ. ಕಂಫರ್ಟಬಲ್ ಅಲ್ಲ ಅನ್ನಿಸಿದರೆ ಯಾರೊಟ್ಟಿಗೆ ಹೀಗೆ ವರ್ತಿಸುವುದು ಸರಿಯಲ್ಲ. ಚಿತ್ರರಂಗದಲ್ಲಿ ಇದು ಹೆಚ್ಚು. ಕೆಲಸ ಮಾಡುವ ಜಾಗಗಳಲ್ಲಿ ಮಹಿಳೆಯರ ಜೊತೆ ತಪ್ಪಾಗಿ ವರ್ತಿಸುವಂತಿಲ್ಲ ಎಂದು ಕಾನೂನು ಇದೆ. ಆದರೆ ಚಿತ್ರರಂಗದಲ್ಲಿ ಇದು ಅನ್ವಯಿಸುತ್ತಾ ಗೊತ್ತಿಲ್ಲ. ರಾಘವೇಂದ್ರ ರಾವ್ ಹಾಗೂ ನಿಹಾರಿಕಾ ಒಟ್ಟಿಗೆ ಸಿನಿಮಾ ಮಾಡ್ತಿಲ್ಲ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದು ಹಿರಿಯನ ಸ್ಥಾನದಲ್ಲಿ ನಿಂತು ಆಶೀರ್ವದಿಸಲು ಆಹ್ವಾನಿಸಿದ್ದಾರೆ. ಹಾಗಿರುವಾಗ ಇಂತಹ ವರ್ತನೆ ಸರಿಯಲ್ಲ ಎಂದು ಕೃಷ್ಣ ಕುಮಾರಿ ಬೇಸರ ವ್ಯಕ್ತಪಡಿಸಿದ್ದರು.


Click it and Unblock the Notifications