ಈ ಬೇಸಿಗೆಯಲ್ಲಿ ತೆರೆಕಂಡು ಮಕಾಡೆ ಮಲಗಿದ ತೆಲುಗು ಚಿತ್ರಗಳು; ಗೆದ್ದಿದ್ದು ಅದೊಂದೇ ಚಿತ್ರ!
ಬೇಸಿಗೆ ಬಂತೆಂದರೆ ಸಿನಿಮಾ ಬಿಡುಗಡೆ ಸಂಖ್ಯೆಯಲ್ಲಿ ಇಳಿಕೆಯಾಗುವುದು ಕಾಮನ್. ಒಂದೆಡೆ ಬಿಸಿಲ ಬೇಗೆಯಿದ್ದರೆ ಮತ್ತೊಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಹಾವಳಿ. ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮನರಂಜನೆ ದೊಡ್ಡಮಟ್ಟದಲ್ಲಿ ಇರುವ ಕಾರಣ ಜನರು ಚಿತ್ರಮಂದಿರಗಳತ್ತ ಮುಖ ಮಾಡುವುದು ಕಷ್ಟ.
ಇನ್ನೂ ಕೆಲ ಚಿತ್ರತಂಡಗಳು ಐಪಿಎಲ್ ವೇಳೆ ಸಾಹಸ ಏಕೆ, ಟೂರ್ನಿ ಮುಗಿದ ಬಳಿಕ ಚಿತ್ರಮಂದಿರಗಳೆಡೆಗೆ ಬರೋಣ ಎಂದು ಸೈಲೆಂಟ್ ಆಗಿಬಿಡುತ್ತವೆ. ಆದರೆ ಕೆಲವೊಂದಷ್ಟು ಚಿತ್ರಗಳು ಮಾತ್ರ ಈ ಏಪ್ರಿಲ್ ಹಾಗೂ ಮೇ ಬೇಸಿಗೆ, ಐಪಿಎಲ್ನ ಕಾವನ್ನು ಲೆಕ್ಕಿಸದೇ ಚಿತ್ರಮಂದಿರಗಳಿಗೆ ಹೆಜ್ಜೆ ಇಟ್ಟವು.

ಹೀಗೆ ಸಾಹಸ ಮಾಡಿದ ಚಿತ್ರಗಳ ಪೈಕಿ ಬಹುತೇಕ ಚಿತ್ರಗಳು ಮಕಾಡೆ ಮಲಗಿದರೆ, ಇನ್ನೂ ಕೆಲ ಚಿತ್ರಗಳು ಹೇಳ ಹೆಸರಿಲ್ಲದಂತೆ ಸೋತು ಮಕಾಡೆ ಮಲಗಿದವು. ಅದರಲ್ಲಿಯೂ ತೆಲುಗಿನಲ್ಲಿ ತೆರೆಕಂಡ ಬಹುತೇಕ ಚಿತ್ರಗಳು ಸೋತು ಸುಣ್ಣವಾದವು. ಆದರೆ ಒಂದು ಚಿತ್ರ ಮಾತ್ರ ನೂರು ಕೋಟಿ ಕ್ಲಬ್ ಸೇರಿ ಬೇಸಿಗೆಯಲ್ಲಿ ಅಬ್ಬರಿಸಿತು. ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..
* ಶಾಕುಂತಲಂ: ಟಾಲಿವುಡ್ನ ಸ್ಟಾರ್ ನಟಿ ಸಮಂತಾ ಲಕ್ ಯಾಕೋ ಸರಿ ಇದ್ದಂತೆ ಕಾಣುತ್ತಿಲ್ಲ. ಆಕೆ ನಟಿಸಿದ ಚಿತ್ರಗಳು ಬಾಕ್ಸ್ ಆಫಿಸ್ನಲ್ಲಿ ಹೆಚ್ಚು ಅಬ್ಬರಿಸುತ್ತಿಲ್ಲ. ಏಪ್ರಿಲ್ 14ರಂದು ತೆರೆಕಂಡ ಶಾಕುಂತಲಂ ಚಿತ್ರದ ಕಥೆ ಕೂಡ ಇದೇ. 65 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ 20 ಕೋಟಿ ಗಳಿಕೆ ಮಾಡುವಷ್ಟರಲ್ಲಿ ಸುಸ್ತಾಗಿಬಿಟ್ಟಿತ್ತು. ನಿರ್ಮಾಪಕ ದಿಲ್ ರಾಜು ಕೆರಿಯರ್ನಲ್ಲಿ ಕಂಡ ಅತಿದೊಡ್ಡ ಸೋಲುಗಳ ಪಟ್ಟಿಗೆ ಈ ಚಿತ್ರ ಸೇರ್ಪಡೆಯಾಗಿದೆ.
* ರಾವಾಣಾಸುರ: ಕಳೆದ ವರ್ಷ ಧಮಾಕಾ ಚಿತ್ರದ ಮೂಲಕ ಬ್ಲಾಕ್ಬಸ್ಟರ್ ನೀಡಿದ್ದ ಮಾಸ್ ಮಹಾರಾಜಾ ರವಿತೇಜಾ ನಟನೆಯ ರಾವಾಣಾಸುರ ಬಾಕ್ಸ್ ಆಫೀಸ್ನಲ್ಲಿ ಕೆಟ್ಟ ಸೋಲನ್ನು ಕಂಡಿತು. 50 ಕೋಟಿ ಬಜೆಟ್ನಲ್ಲಿ ತಯಾರಾಗಿದ್ದ ಈ ಚಿತ್ರ 21 ಕೋಟಿ ಗಳಿಸಿತ್ತು. ಅದೇ ಹಳೇ ಮಸಾಲ ತೆಲುಗು ಚಿತ್ರವನ್ನು ತೆಲುಗು ಜನತೆ ಮತ್ತೊಮ್ಮೆ ಕೈಬಿಟ್ಟಿದ್ದರು.
* ಏಜೆಂಟ್: ಅಖಿಲ್ ಅಕ್ಕಿನೇನಿ ನಟನೆಯ ಏಜೆಂಟ್ ಈ ಬಾರಿಯ ಬೇಸಿಗೆಯಲ್ಲಿ ಸೋತ ಮತ್ತೊಂದು ತೆಲುಗು ಚಿತ್ರ. ಸ್ಪೈ ಆಕ್ಷನ್ ಚಿತ್ರವಾಗಿದ್ದ ಏಜೆಂಟ್ ಸ್ವತಃ ಚಿತ್ರತಂಡವೇ ಇನ್ನುಮುಂದೆ ಜೋಪಾನವಾಗಿ ಚಿತ್ರವನ್ನು ಮಾಡುತ್ತೇವೆ ಎಂದು ಪ್ರೇಕ್ಷಕರಲ್ಲಿ ಕ್ಷಮೆ ಯಾಚಿಸುವ ಮಟ್ಟಕ್ಕೆ ಸೋಲನ್ನು ಉಂಡಿತ್ತು.
* ರಾಮಬಾಣಂ: ಮೇ 5ರಂದು ತೆರೆಗೆ ಬಂದ ಗೋಪಿಚಂದ್ ಅಭಿನಯದ ರಾಮಬಾಣಂ ಸಹ ಹೀನಾಯವಾಗಿ ಸೋಲನ್ನು ಕಂಡಿತ್ತು. ಈ ಮೂಲಕ ಆರಡುಗುಲ ಬುಲೆಟ್, ಪಕ್ಕಾ ಕಮರ್ಷಿಯಲ್ ಬಳಿಕ ಗೋಪಿಚಂದ್ ಮತ್ತೊಂದು ಚಿತ್ರದಲ್ಲಿ ಸೋತು ಹ್ಯಾಟ್ರಿಕ್ ಸೋಲನ್ನು ಕಂಡರು.
* ಉಗ್ರಂ: ರಾಮಬಾಣಂ ತೆರೆಗೆ ಬಂದಿದ್ದ ದಿನವೇ ತೆರೆಗೆ ಬಂದಿದ್ದ ಮತ್ತೊಂದು ತೆಲುಗು ಚಿತ್ರ ಉಗ್ರಂ ಸಹ ಗೆಲುವು ಸಾಧಿಸುವಲ್ಲಿ ವಿಫಲವಾಗಿ ಸೋತಿತ್ತು. ನಾಂದಿ ಹಾಗೂ ಇಟ್ಲು ಮಾರೇದುಮಿಲ್ಲಿ ಪ್ರಜಾನೀಕಂ ಎಂಬ ಚಿತ್ರಗಳ ಮೂಲಕ ಗೆದ್ದಿದ್ದ ಅಲ್ಲಾರಿ ನರೇಶ್ ಈ ಬಾರಿ ಸ್ಕ್ರಿಪ್ಟ್ ವಿಷಯದಲ್ಲಿ ಗೆದ್ದರಾದರೂ ಫಲಿತಾಂಶದ ವಿಷಯದಲ್ಲಿ ಸೋತರು.
* ಕಸ್ಟಡಿ: ನಾಗಚೈತನ್ಯ ನಟನೆಯ ಕಸ್ಟಡಿ ಚಿತ್ರ ಸಹ ಈ ಬೇಸಿಗೆಯಲ್ಲಿ ಮಕಾಡೆ ಮಲಗಿದ ಚಿತ್ರಗಳಲ್ಲೊಂದು. ವೆಂಕಟ್ ಪ್ರಭು ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರ ತೆಲುಗು ಹಾಗೂ ತಮಿಳು ಎರಡು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. 45 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಕಸ್ಟಡಿ 10 ಕೋಟಿ ಕಲೆಹಾಕುವಷ್ಟರಲ್ಲಿ ಸುಸ್ತಾಗಿ ಹೋಗಿತ್ತು.
* ಗೆದ್ದದ್ದು ಒಂದೇ ಚಿತ್ರ: ಹೀಗೆ ಈ ಬಾರಿಯ ಬೇಸಿಗೆಯಲ್ಲಿ ಬಿಡುಗಡೆಗೊಂಡ ತೆಲುಗು ಚಿತ್ರಗಳೆಲ್ಲಾ ಮಕಾಡೆ ಮಲಗಿದರೆ ವಿರೂಪಾಕ್ಷ ಎಂಬ ಚಿತ್ರ ಮಾತ್ರ ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿತ್ತು. 103 ಕೋಟಿ ಗಳಿಸುವ ಮೂಲಕ ಈ ಬಾರಿಯ ಬೇಸಿಗೆಯಲ್ಲಿ ನೂರು ಕೋಟಿ ಗಳಿಸಿದ ಹಾಗೂ ಗೆದ್ದ ಏಕೈಕ ತೆಲುಗು ಚಿತ್ರ ಎನಿಸಿಕೊಂಡಿತು.


Click it and Unblock the Notifications











