ಪ್ರಭಾಸ್ ಯಾರೋ ಗೊತ್ತಿಲ್ಲ, ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದ್ದ ನಿತ್ಯಾ ಮೆನನ್
ಬಹುಭಾಷಾ ನಟಿ ನಿತ್ಯಾ ಮೆನನ್ ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಆಕೆ ನಟಿಸಿಲ್ಲ. ಆದರೆ ಆಕೆಯ ಕನ್ನಡ ಪ್ರೀತಿ ಎಲ್ಲರಿಗೂ ಅಚ್ಚುಮೆಚ್ಚು. ಇನ್ನು ಚಿತ್ರರಂಗ ಪ್ರವೇಶಿಸಿದ ಆರಂಭದಲ್ಲಿ ತೆಲುಗು ನಟ ಪ್ರಭಾಸ್ ಅಂದ್ರೆ ಯಾರು ಎಂದು ಗೊತ್ತಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿ ಸಂಕಷ್ಟಕ್ಕೆ ಸಿಲುಕಿದ್ದರು.
ಸಾಮಾನ್ಯವಾಗಿ ತಾರೆಯರು ಮಾಧ್ಯಮಗಳ ಸಂದರ್ಶನ, ಸುದ್ದಿಗೋಷ್ಠಿಗಳಲ್ಲಿ ಮಾತನಾಡುತ್ತಿರುತ್ತಾರೆ. ಅದೇ ರೀತಿ ತೆಲುಗುನಲ್ಲಿ ಮೊದಲನೇ ಸಿನಿಮಾ ಮಾಡಿ ಮುಗಿಸಿದ ಬಳಿಕ ಯಾವುದೋ ಸಂದರ್ಶನದಲ್ಲಿ ಪ್ರಶ್ನೆ ಎರುರಾಗಿತ್ತು. ಈ ವೇಳೆ 'ಪ್ರಭಾಸ್ ಅಂದ್ರೆ ಯಾರು' ಎನ್ನುವ ಅರ್ಥದಲ್ಲಿ ಆಕೆ ಪ್ರತಿಕ್ರಿಯಿಸಿದ್ದರು. ಇದು ಆಗ ಬಹಳ ವೈರಲ್ ಆಗಿತ್ತು. ಪ್ರಭಾಸ್ ಅಂದ್ರೆ ಯಾರು ಅನ್ನುವುದು ನಿನಗೆ ಗೊತ್ತಿಲ್ವಾ ಅಂತ ಕೆಲವರು ಟ್ರೋಲ್ ಮಾಡಿದ್ದರು.

ಬಹಳ ವರ್ಷಗಳ ಬಳಿಕ ABN ಆಂಧ್ರಜ್ಯೋತಿ ವಾಹಿನಿಯ 'ಓಪನ್ ಆರ್ಟ್ ವಿತ್' ಸಂದರ್ಶನದಲ್ಲಿ ನಿತ್ಯಾ ಮೆನನ್ ಈ ಬಗ್ಗೆ ಮಾತನಾಡಿದ್ದರು. "ಪ್ರಭಾಸ್ ಯಾರು ಎಂದು ಕೇಳಿದ್ದೆ. ಆಗ ತಾನೇ 'ಅಲಾ ಮೊದಲೈಂದಿ' ಚಿತ್ರದಲ್ಲಿ ನಟಿಸಿದ್ದೆ. ಮೊದಲೇ ಹೇಳಿದಂತೆ ನಾನು ಹೆಚ್ಚು ಸಿನಿಮಾಗಳನ್ನು ನೋಡುತ್ತಿರಲಿಲ್ಲ. ಕನ್ನಡ ಸಿನಿಮಾಗಳನ್ನು ಅಷ್ಟಾಗಿ ನೋಡಿರಲಿಲ್ಲ. ಇನ್ನು ತೆಲುಗಿನಲ್ಲಿ ಚಿರಂಜೀವಿ, ವೆಂಕಟೇಶ್ ರೀತಿಯ ಒಂದಿಬ್ಬರು ನಟರ ಹೆಸರು ಮಾತ್ರ ಗೊತ್ತಿತ್ತು. ಅದು ಬಿಟ್ಟು ಬೇರೆಯವರು ಗೊತ್ತಿರಲಿಲ್ಲ. ಸಂದರ್ಶನದಲ್ಲಿ ಮಾತನಾಡುತ್ತಾ ಪ್ರಭಾಸ್ ಹೆಸರು ಬಂದಾಗ ಯಾರು? ಎಂದು ಕೇಳಿದ್ದೆ. ಅದನ್ನೇ ದೊಡ್ಡ ರಾದ್ಧಾಂತ ಮಾಡಿಬಿಟ್ಟಿದ್ದರು. ಅದನ್ನು ಮರೆಯಲು ಸಾಧ್ಯವಿಲ್ಲ" ಎಂದು ನಿತ್ಯಾ ಹೇಳಿದ್ದರು.
ಬಾಲನಟಿಯಾಗಿ ನಿತ್ಯಾ ಚಿತ್ರರಂಗಕ್ಕೆ ಬಂದವರು. ಮುಂದೆ ರಾಷ್ಟ್ರ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಬೆಳೆದರು. ಕನ್ನಡದ '7ಓ ಕ್ಲಾಕ್' ಆಕೆ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ. ಬಳಿಕ ಮಲಯಾಳಂ ಸಿನಿಮಾದಲ್ಲಿ ಮಿಂಚಿದ್ದರು. 2011ರಲ್ಲಿ 'ಅಲಾ ಮೊದಲೈಂದಿ' ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ಮುಂದೆ ಹಲವು ತೆಲುಗು ಸಿನಿಮಾಗಳಲ್ಲಿ ಮಿಂಚಿದ್ದರು. ಅಲ್ಲು ಅರ್ಜುನ್ ಸೇರಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.
'ತಿರುಚಿತ್ರಾಂಬಲಂ' ಚಿತ್ರದ ನಟನೆಗಾಗಿ ನಿತ್ಯಾ ಮೆನನ್ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇತ್ತೀಚೆಗೆ 'ಕಾದಲಿಕ್ಕ ನೇರಮಿಲ್ಲೈ' ಎಂಬ ತಮಿಳು ಚಿತ್ರದಲ್ಲಿ ನಟಿಸಿದ್ದರು. 'ತಲೈವಾ ತಲೈವಿ' ಎಂಬ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಧನುಷ್ ನಿರ್ದೇಶಿಸಿ ನಟಿಸುತ್ತಿರುವ 'ಇಡ್ಲಿ ಕಡೈ' ಚಿತ್ರದಲ್ಲಿ ಕೂಡ ನಾಯಕಿಯಾಗಿ ಮಿಂಚಿದ್ದಾರೆ.


Click it and Unblock the Notifications











