12 years of Eega: 'ಈಗ' ವಿಲನ್ ಪಾತ್ರಕ್ಕೆ ಕಿಚ್ಚನನ್ನು ಆಯ್ಕೆ ಮಾಡಿಕೊಂಡಿದ್ಯಾಕೆ ರಾಜಮೌಳಿ?
ಎಸ್. ಎಸ್ ರಾಜಮೌಳಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ 'ಈಗ' ಸಿನಿಮಾ 12 ವರ್ಷ ಪೂರೈಸಿದೆ. ದಶಕದ ಹಿಂದೆ ಈ ಫ್ಯಾಂಟಸಿ ಆಕ್ಷನ್ ಸಿನಿಮಾ ಮಾಡಿದ ಚಮತ್ಕಾರ ಅಷ್ಟಿಷ್ಟಲ್ಲ. ಅವತ್ತಿನ ಕಾಲಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಿತ್ತು. ಕರ್ನಾಟಕದಲ್ಲಿ ಡಬ್ಬಿಂಗ್ಗೆ ಅವಕಾಶ ಇಲ್ಲದ ಕಾರಣ ಕನ್ನಡದಲ್ಲಿ ಸಿನಿಮಾ ತೆರೆಗೆ ಬಂದಿರಲಿಲ್ಲ.
'ಈಗ' ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ಅಬ್ಬರಿಸಿದ್ದರು. ದೊಡ್ಡ ಬ್ಯುಸಿನೆಸ್ಮನ್, ಸ್ತ್ರೀ ಪೀಡಕ ಸುದೀಪ್ (ಸುದೀಪ್) ಒಂದು ಎನ್ಜಿಓ ನಡೆಸುತ್ತಿರುವ ಯುವತಿ ಬಿಂದು ಮೋಹ ಪಾಶದಲ್ಲಿ ಸಿಲುಕುತ್ತಾನೆ. ಇದೇ ಕಾರಣಕ್ಕೆ ಆಕೆಯ ಹಿಂದೆ ಬಿದ್ದ ನಾನಿ ಎನ್ನುವ ಯುವಕನನ್ನು ಕೊಲ್ಲುತ್ತಾನೆ. ಆತನ ಆತ್ಮ ಒಂದು ನೊಣದಲ್ಲಿ ಸೇರಿಕೊಂಡು ಸುದೀಪ್ ವಿರುದ್ಧ ಸೇಡು ತೀರಿಸಿಕೊಳ್ಳುವುದೇ 'ಈಗ' ಚಿತ್ರದ ಒನ್ಲೈನ್ ಸ್ಟೋರಿ. ಕೇಳೋಕೆ ಬಹಳ ಸಿಂಪಲ್ ಎನಿಸುವ ಕಥೆಯನ್ನು ತೆರೆಗೆ ತರೋದು ಅಷ್ಟು ಸುಲಭವಾಗಿರಲಿಲ್ಲ.

ಒಂದು ಸಣ್ಣ ಯಕಶ್ಚಿತ್ ನೊಣ ಒಬ್ಬ ಶ್ರೀಮಂತ ಉದ್ಯಮಿಯ ಮೇಲೆ ಸೇಡು ತೀರಿಸಿಕೊಳ್ಳುವ ವಿಭಿನ್ನ ಕಥೆಯನ್ನು ಬಹಳ ರೋಚಕವಾಗಿ ಜಕ್ಕಣ್ಣ ಕಟ್ಟಿಕೊಟ್ಟಿದ್ದರು. 'ಬಾಹುಬಲಿ' ಸರಣಿಗಿಂತಲೂ ಮೌಳಿ ಕಟ್ಟಿಕೊಟ್ಟ ಅದ್ಭುತ ಸಿನಿಮಾ 'ಈಗ' ಎಂದರೆ ತಪ್ಪಾಗದು. ಅದನ್ನು ನಿರ್ದೇಶಕರು ಒಪ್ಪಿಕೊಳ್ಳುತ್ತಾರೆ. ಅಂದಹಾಗೆ 'ಈಗ' ಚಿತ್ರದ ನಿಜವಾದ ಹೀರೊ ಸುದೀಪ್. ಚಿತ್ರದಲ್ಲಿ ನಾನಿ ಕೂಡ 10 ನಿಮಿಷ ಕಾಣಿಸಿಕೊಳ್ಳುತ್ತಾರೆ. ಇನ್ನುಳಿದಂತೆ ಇಡೀ ಸಿನಿಮಾ ಸುದೀಪ್, ಸಮಂತಾ, ನೊಣ(ಗಾಫಿಕ್ಸ್) ಸುತ್ತಾ ಸುತ್ತುತ್ತದೆ. ಹೆಚ್ಚು ಸ್ಕ್ರೀನ್ಸ್ಪೇಸ್ ಸಿಕ್ಕಿದ್ದು ಕನ್ನಡದ ನಟನಿಗೆ.
ಅಂದಹಾಗೆ ಇಂತಾದೊಂದು ಅದ್ಭುತ ಪಾತ್ರಕ್ಕೆ ಸುದೀಪ್ ಆಯ್ಕೆ ಮಾಡಿಕೊಂಡಿದ್ದು ಕೆಲ ತೆಲುಗು ನಟರಿಗೂ ಅಸೂಯೆ ಹುಟ್ಟಿಸಿತ್ತು. ಆದರೆ ಆ ಪಾತ್ರಕ್ಕೆ ಸುದೀಪ್ ಮೊದಲ ಹಾಗೂ ಕೊನೆಯ ಆಯ್ಕೆ ಎಂದು ಖುದ್ದು ರಾಜಮೌಳಿ ಹೇಳಿದ್ದರು. ಕಣ್ಮುಂದೆ ನೊಣವೇ ಇಲ್ಲದೇ ಇದೆ ಎಂದು ಭಾವಿಸಿಕೊಂಡು ನಟಿಸುವುದು ಸವಾಲಿನ ಕೆಲಸವೇ ಸರಿ. ಅದೂ ಕೂಡ ನನ್ನ ಕಲ್ಪನೆಯ ನೊಣ, ಅದು ಹೀಗೆ ಮಾಡುತ್ತದೆ, ಹಾಗೆ ಮಾಡುತ್ತದೆ ಎಂದು ಊಹಿಸಿಕೊಂಡು, ಕಲ್ಪಿಸಿಕೊಂಡು ಸುದೀಪ್ ನಟಿಸಿದ್ದು ನಿಜಕ್ಕೂ ಗ್ರೇಟ್ ಎಂದು ಸ್ವತಃ ರಾಜಮೌಳಿ ಹೇಳಿದ್ದರು.

'ಈಗ' ಸಿನಿಮಾ 12 ವರ್ಷ ಪೂರೈಸಿರುವುದನ್ನು ಸುದೀಪ್ ನೆನಪಿಸಿಕೊಂಡಿದ್ದಾರೆ. ಅಂದಹಾಗೆ ಕಿಚ್ಚನಿಗೆ ಹೀರೊ ಆಗಿ ಬ್ರೇಕ್ ಕೊಟ್ಟ 'ಹುಚ್ಚ' ಚಿತ್ರಕ್ಕೆ ಇದೀಗ 23 ವರ್ಷ ತುಂಬಿದೆ. "ನನ್ನ ಜೀವನದ ಎರಡು ಅದ್ಭುತ ಕ್ಷಣಗಳು, ಒಂದೇ ದಿನಾಂಕದಂದು. 'ಹುಚ್ಚ' ನನ್ನನ್ನ ಹೀರೊ ಮಾಡಿದರೆ 'ಈಗ' ನನ್ನನ್ನು ಕಟ್ಟಿ ಬೆಳೆಸಿತು. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಎಂದೆಂದಿಗೂ ಕೃತಜ್ಞ" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
'ಈಗ' ಸಿನಿಮಾ ಬಿಡುಗಡೆ ಸಮಯದಲ್ಲೇ ಚಿತ್ರಕ್ಕೆ ಸುದೀಪ್ ಆಯ್ಕೆ ಯಾಕೆ ಎನ್ನುವ ಬಗ್ಗೆ ನಿರ್ದೇಶಕರು ಮಾತನಾಡಿದ್ದರು. "ಚಿತ್ರದಲ್ಲಿ ಸುದೀಪ್ ಸ್ತ್ರೀ ಪೀಡಕ ಎನ್ನುವುದು ಆ ಪಾತ್ರದ ಒಂದು ಸಣ್ಣ ವಿಚಾರ. ಆದರೆ ಅದಕ್ಕಿಂತ ಆ ಕ್ಯಾರೆಕ್ಟರ್ ರೇಂಜ್ ದೊಡ್ಡದು. ಚಿತ್ರದಲ್ಲಿ ಅಷ್ಟು ದೊಡ್ಡ ವಿಲನ್ ಆರಂಭದಲ್ಲೇ "ಪ್ರತಿಯೊಂದಕ್ಕೂ ಅಷ್ಟು ವೈಲೆನ್ಸ್ ಯಾಕೆ" ಎಂದು ಹೇಳುತ್ತಾನೆ". ಬಳಿಕ ಬಹಳ ವೈಲೆಂಟ್ ಆಗುತ್ತಾನೆ. ಕಾಮೆಡಿಯನ್, ರೊಮ್ಯಾಂಟಿಕ್ ಆಗಿ ಬದಲಾಗುತ್ತಾನೆ"
"ಬಹಳ ಬ್ಯಾಲೆನ್ಸ್ ಆಕ್ಟಿಂಗ್ ಅದು. ಜಾಸ್ತಿ ಆದರೆ ಓವರ್ ಆಕ್ಟಿಂಗ್ ಅನ್ನಿಸುತ್ತದೆ. ಕಮ್ಮಿ ಆದರೆ ಸಾಕಾಗಲ್ಲ. ಬಹಳ ಕಷ್ಟ ಅದು. 'ರಣ್' ಚಿತ್ರದಲ್ಲಿ ಸುದೀಪ್ ನಟನೆ ನೋಡಿ ಬಹಳ ಇಷ್ಟವಾಯಿತು. ಅಮಿತಾಬ್ ಎದುರು ಆ ರೀತಿ ನಟಿಸೋದು ಅಷ್ಟು ಸುಲಭವಲ್ಲ. ದೊಡ್ಡ ನಟ ಎನಿಸಿತು. 'ಈಗ' ಸಿನಿಮಾ ಶುರುವಾದಾಗ ಆ ಪಾತ್ರಕ್ಕೆ ಯಾರು ಎಂದಾಗ ಸುದೀಪ್ ಸೂಕ್ತ, ಆತ ನಟಿಸಿದರೆ ಚೆನ್ನಾಗಿರುತ್ತದೆ ಎಂದುಕೊಂಡೆವು. ಕೇಳಿದ ಕೂಡಲೇ ಒಪ್ಪಿಕೊಂಡರು. ಮೊದಲ, ಕೊನೆಯ ಆಯ್ಕೆ ಸುದೀಪ್ ಆಗಿದ್ದರು" ಎಂದು ರಾಜಮೌಳಿ ವಿವರಿಸಿದ್ದರು.
'ಈಗ' ಚಿತ್ರಕ್ಕೆ ಹಲವು ಪ್ರಶಸ್ತಿಗಳು ಸಿಕ್ಕಿತ್ತು. 60ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಚಿತ್ರದ ವಿಎಫ್ಎಕ್ಸ್ ಹಾಗೂ ಆ ವರ್ಷ ತೆಲುಗಿನ ಬೆಸ್ಟ್ ಸಿನಿಮಾ ಆಗಿ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ಆದರೆ ಸುದೀಪ್ ನಟನೆಗೆ ಪ್ರಶಸ್ತಿ ಸಿಗಲಿಲ್ಲ ಎಂದು ರಾಜಮೌಳಿ ಬೇಸರ ವ್ಯಕ್ತಪಡಿಸಿದ್ದರು.


Click it and Unblock the Notifications











