ಮಾರ್ಕ್ ಜೊತೆ ಪವನ್ಗೆ ಮತ್ತೊಬ್ಬ ಮಗಳು ಇದ್ದಾಳಾ? ಸಿಂಗಾಪುರದಲ್ಲಿ ವಾಸ್ತವ್ಯ ಯಾಕೆ?
ತೆಲುಗು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕಿರಿಯ ಪುತ್ರ ಮಾರ್ಕ್ ಶಂಕರ್ ಅಗ್ನಿ ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಿಂಗಪೂರದಲ್ಲಿ ಓದುತ್ತಿರುವ 8 ವರ್ಷದ ಮಾರ್ಕ್ ಶಾಲೆಯ ಬೇಸಿಗೆ ಶಿಬಿರದಲ್ಲಿ ಭಾಗಿ ಆಗಿದ್ದ. ಈ ವೇಳೆ ಶಾಲಾ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಬ್ಬ ಮಗು ಅಸುನೀಗಿದೆ.
ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆತನ ತೋಳುಗಳು ಹಾಗೂ ಕಾಲಿಗೆ ಸುಟ್ಟ ಗಾಯಗಳಾಗಿದೆ. ಶ್ವಾಸಕೋಶದಲ್ಲಿ ಹೊಗೆ ಸೇರಿಕೊಂಡಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಬಗ್ಗೆ ಪವನ್ ಕಲ್ಯಾಣ್ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಗನನ್ನು ನೋಡಲು ಸಿಂಗಾಪುರಕ್ಕೆ ತೆರಳಿಸಿದ್ದಾರೆ. ಸಹೋದರ ಚಿರಂಜೀವಿ ಹಾಗೂ ಪತ್ನಿ ಸುರೇಖಾ ಕೂಡ ಸಿಂಗಾಪುರ ವಿಮಾನ ಏರಿದ್ದಾರೆ.

ಸಿಂಗಾಪುರ ಶಾಲೆಯಲ್ಲಿ ಮಾರ್ಕ್ ಶಂಕರ್ ಗಾಯಗೊಂಡ ಸುದ್ದಿ ಬರುವವರೆಗೂ ಪವನ್ ಕಲ್ಯಾಣ್ಗೆ ಮತ್ತೊಬ್ಬ ಮಗ ಇರುವ ವಿಚಾರ ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ. ಪವನ್ ಮದುವೆ ಹಾಗೂ ವೈಯಕ್ತಿಕ ವಿಚಾರ ಆಂಧ್ರ ರಾಜಕಾರಣದಲ್ಲಿ ಪದೇ ಪದೆ ಚರ್ಚೆಗೆ ಬಂದಿತ್ತು. ಪವನ್ ಕಲ್ಯಾಣ್ ಒಂದಲ್ಲ ಎರಡಲ್ಲ ಮೂರು ಮದುವೆ ಆಗಿದ್ದಾರೆ. ಮೂರು ಮದುವೆ ಆಗಿರುವವನು ಎಂದು ಎದುರಾಳಿ ಪಕ್ಷಗಳು ಪದೇ ಪದೆ ಅವರನ್ನು ಮೂದಲಿಸಿದ್ದರು.
ಅಂದಹಾಗೆ ಪವನ್ ಕಲ್ಯಾಣ್ ಹಾಗೂ ಮೂರನೇ ಮಡದಿ ಅನ್ನಾ ಲೆಜ್ನೆವಾ ಪುತ್ರ ಮಾರ್ಕ್ ಶಂಕರ್. ಆತನಿಗೆ ಈಗ 8 ವರ್ಷ ವಯಸ್ಸು. ಸಿಂಗಾಪುರದಲ್ಲೇ ಓದುತ್ತಿದ್ದಾನೆ. ರಷ್ಯಾದಲ್ಲಿ ಹುಟ್ಟಿ ಬೆಳೆದ ಅನ್ನಾ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದರು. 2011ರಲ್ಲಿ ಪವನ್ ಕಲ್ಯಾಣ್ ನಟನೆಯ 'ತೀನ್ ಮಾರ್' ಚಿತ್ರದಲ್ಲಿ ಅನ್ನಾ ಸಹ ನಟಿಸಿದ್ದರು. ಇದೇ ಸಮಯದಲ್ಲಿ ಶುರುವಾದ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಮದುವೆ ಆಗಿದ್ದರು.

ಪವನ್ ಕೈ ಹಿಡಿಯುವ ಮುನ್ನ ಅನ್ನಾ ಲೆಜ್ನೆವಾ ಬೇರೊಬ್ಬರನ್ನು ಮದುವೆಯಾಗಿ ಡಿವೋರ್ಸ್ ಪಡೆದಿದ್ದರು. ಪವನ್ ಕಲ್ಯಾಣ್ 1997ರಲ್ಲಿ ನಂದಿನಿ ಎಂಬಾಕೆಯನ್ನು ಮದುವೆ ಆಗಿದ್ದರು. ಆಕೆಗೆ ಡಿವೋರ್ಸ್ ಕೊಟ್ಟು ನಟಿ ರೇಣು ದೇಸಾಯಿ ಜೊತೆ 2009ರಲ್ಲಿ ಹಸೆಮಣೆ ಏರಿದ್ದರು. ದಂಪತಿಗೆ ಮಗ ಅಕಿರಾ ನಂದನ್ ಹಾಗೂ ಆದ್ಯಾ ಎಂಬ ಮಗಳು ಇದ್ದಾರೆ. ಇಬ್ಬರೂ ಲಿವ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದಾಗಲೇ ಅಕಿರಾ ಹುಟ್ಟಿದ್ದ. 2012ರಲ್ಲಿ ಕೆಲ ಭಿನ್ನಾಭಿಪ್ರಾಯಗಳಿಂದ ಪವನ್- ರೇಣು ಡಿವೋರ್ಸ್ ಪಡೆದು ದೂರಾಗಿದ್ದರು.
'ಬದ್ರಿ' ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ರೇಣು ದೇಸಾಯಿ ನಟಿಸಿದ್ದರು. ಬಳಿಕ 'ಜಾನಿ' ಚಿತ್ರದಲ್ಲೂ ಜೊತೆಯಾಗಿದ್ದರು. ಡಿವೋರ್ಸ್ ಬಳಿಕ ಪವನ್ ಕಲ್ಯಾಣ್ ಬಗ್ಗೆ ರೇಣು ಪರೋಕ್ಷವಾಗಿ ಅಸಮಾಧಾನ ಹೊರ ಹಾಕುತ್ತಲೇ ಇರುತ್ತಾರೆ. ಆದರೆ ಕಳೆದ ವರ್ಷ ಪವನ್ ಆಂಧ್ರದಲ್ಲಿ ಗೆದ್ದು ಡಿಸಿಎಂ ಪಟ್ಟಕ್ಕೇರಿದ್ದರು. ಆಗ ಪವನ್ ಹಾಗೂ 3ನೇ ಪತ್ನಿ ಅನ್ನಾ ಜೊತೆ ರೇಣು ದೇಸಾಯಿ ಪುತ್ರ ಅಕಿರಾ ನಂದನ್ ಕಾಣಿಸಿಕೊಂಡಿದ್ದ. ಪ್ರಧಾನಿ ಮೋದಿ ಅವರಿಗೂ ಪವನ್ ಮಗನನ್ನು ಪರಿಚಯಿಸಿದ್ದರು.
ಮೊದಲ ಪತಿಯಿಂದ ಅನ್ನಾಗೆ ಒಂದು ಹೆಣ್ಣು ಮಗು ಹುಟ್ಟಿತ್ತು. ಆ ಮಗುವಿಗೆ ಪೋಲೆನಾ ಅಂಜನಾ ಎಂದು ಹೆಸರಿಟ್ಟಿದ್ದು ಸದ್ಯ ಪವನ್-ಅನ್ನಾ ಜೊತೆಗಿದ್ದಾಳೆ. ಆಕೆಯನ್ನು ಕೂಡ ಸಿಂಗಾಪುರದಲ್ಲಿ ಓದಿಸುತ್ತಿದ್ದಾರೆ. ಮೂರು ಮದುವೆ ಆಗಿರುವ ಪವನ್ ಕಲ್ಯಾಣ್ಗೆ ನಾಲ್ಕು ಮಕ್ಕಳು ಇದ್ದಾರೆ. ಆಡಿಕೊಳ್ಳುವವರ ಬಾಯಿ ಮುಚ್ಚಿಸಲು ಪವನ್ ಕಲ್ಯಾಣ್ ತಮ್ಮ ತಮ್ಮ ಇಬ್ಬರು ಮಕ್ಕಳನ್ನು ವಿದೇಶದಲ್ಲಿ ಇರಿಸಿ ಬೆಳೆಸುತ್ತಿದ್ದಾರೆ ಎನ್ನುವವರು ಇದ್ದಾರೆ. ರಾಜಕಾರಣಿಗಳು ತಮ್ಮ ಮಕ್ಕಳನ್ನು ಯಾಕೆ ವಿದೇಶಗಳಲ್ಲಿ ಓದಿಸುತ್ತಾರೆ. ಭಾರತದಲ್ಲಿ ಒಳ್ಳೆ ಶಾಲೆಗಳು ಇಲ್ಲವೇ? ಇಲ್ಲಿ ಓದಿದರೆ ಏನಾಗುತ್ತದೆ? ಎಂದು ಕೆಲವರು ಕಾಮೆಂಟ್ ಮಾಡುತ್ತಿರುತ್ತಾರೆ.
ಇನ್ನು ಪವನ್ ಕಲ್ಯಾಣ್ ಹಾಗೂ ಅನ್ನಾ ಲೆಜ್ನೆವಾ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರೂ ದೂರಾಗುತ್ತಾರೆ ಎನ್ನುವ ಗುಸುಗುಸು ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಕೊನಿದೇಲ ಕುಟುಂಬದ ಕೆಲ ಕಾರ್ಯಕ್ರಮಗಳಿಗೆ ಅನ್ನಾ ಗೈರಾಗಿದ್ದು ಇಂತಾದೊಂದು ವದಂತಿಗೆ ಪುಷ್ಠಿ ನೀಡಿತ್ತು. ಆದರೆ ಬಳಿಕ ಗಂಡ - ಹೆಂಡತಿ ಒಟ್ಟಿಗೆ ಕಾಣಿಸಿಕೊಂಡು ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದ್ದರು. ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲ, ಇತ್ತೀಚೆಗೆ ಪವನ್ ಕಲ್ಯಾಣ್ ಜೊತೆ ಸಾಕಷ್ಟು ಬಾರಿ ಅನ್ನಾ ಕಾಣಿಸಿಕೊಂಡಿದ್ದರು. ಪವನ್ ಚುನಾವಣೆಯಲ್ಲಿ ಗೆದ್ದಾಗ 3ನೇ ಪತ್ನಿ ಜೊತೆಗಿದ್ದರು.
ಕಳೆದ ವರ್ಷ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯ ಕಲಾ ವಿಭಾಗದಲ್ಲಿ ಅನ್ನಾ ಲೆಜ್ನೆವಾ ಸ್ನಾತಕೋತ್ತರ ಪದವಿ ಪಡೆದಿದ್ದರು. ಆಕೆ ಅಲ್ಲೇ ಓದುತ್ತಿದ್ದರಿಂದ ಇಬ್ಬರು ಮಕ್ಕಳನ್ನು ಕೂಡ ಜೊತೆ ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಆಗಾಗ್ಗೆ ಭಾರತಕ್ಕೆ ಬಂದು ಹೋಗುತ್ತಾರೆ. ಪವನ್ ಕಲ್ಯಾಣ್ ಸಹ ಸಿಂಗಾಪುರಕ್ಕೆ ಹೋಗಿ ಮಕ್ಕಳನ್ನು ನೋಡಿ ಬರುತ್ತಾರೆ. ಅಲ್ಲಿ ಹೋಟೆಲ್ ಚೈನ್ಸ್ ಉದ್ಯಮದಲ್ಲಿ ಅನ್ನಾ ತೊಡಗಿಸಿಕೊಂಡಿದ್ದಾರೆ, ಭಾರೀ ಆಸ್ತಿ ಸಂಪಾದಿಸಿದ್ದಾರೆ ಎನ್ನುವ ಗುಸುಗುಸು ಕೇಳಿಬರುತ್ತದೆ.
ರಷ್ಯಾ ಹಾಗೂ ಸಿಂಗಾಪುರದಲ್ಲಿ ಒಟ್ಟು 1800 ಕೋಟಿ ರೂ. ಆಸ್ತಿಯನ್ನು ಅನ್ನಾ ಹೊಂದಿದ್ದಾರೆ ಎನ್ನಲಾಗುತ್ತದೆ. ಅದೇ ಕಾರಣಕ್ಕೆ ಆಕೆ ಸಿಂಗಾಪುರದಲ್ಲಿ ಉಳಿದುಕೊಂಡಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆ ಆಗುತ್ತಿದೆ. ಅನ್ನಾ ರಷ್ಯಾ ಪೌರತ್ವ ಹೊಂದಿದ್ದಾರೆ. 2013ರಲ್ಲಿ ಹೈದರಾಬಾದ್ ಎರ್ರಗಡ್ಡಾದ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ರಷ್ಯಾದ ಪ್ರಜೆಯಾದ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾಗಿದ್ದರು. ಪವನ್ ಹಾಗೂ ಅನ್ನಾ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು.
ಮೊದಲ ಪತ್ನಿ ನಂದಿನಿಗೆ ಡಿವೋರ್ಸ್ ಕೊಟ್ಟಾಗ ಪವನ್ ಕಲ್ಯಾಣ್ 5 ಕೋಟಿ ರೂ. ಜೀವನಾಂಶ ಕೊಟ್ಟು ಸೆಟ್ಲ್ಮೆಂಟ್ ಮಾಡಿಕೊಂಡಿದ್ದರು. ಜನಸೇನಾ ಪಕ್ಷ ಸ್ಥಾಪಿಸಿದ ಬಳಿಕ ಅನ್ನಾ ಜೊತೆ ಪವನ್ ಮದುವೆ ನಡೆದಿತ್ತು. ಹಾಗಾಗಿ ತಮ್ಮ ರಾಜಕೀಯ ಜೀವನದಲ್ಲಿ ಪದೇ ಪದೆ 3 ಮದುವೆಗಳ ವಿಚಾರ ಪ್ರಸ್ತಾಪವಾಗುತ್ತಿತ್ತು. ಇದೇ ಕಾರಣಕ್ಕೆ 3ನೇ ಪತ್ನಿ ಅನ್ನಾ ಹಾಗೂ ಮಕ್ಕಳನ್ನು ಜನಸೇನಾನಿ ವಿದೇಶದಲ್ಲಿ ಇರಿಸಿದ್ದಾರೆ ಎನ್ನುವ ವಾದ ಕೆಲವರದ್ದು.
3 ಮದುವೆಗಳ ಬಗ್ಗೆ ಟೀಕೆ ಹೆಚ್ಚಾದಾಗ ಬಹಿರಂಗವಾಗಿ ಎದುರಾಳಿಗಳಿಗೆ ಪವನ್ ಕಲ್ಯಾಣ್ ತಿರುಗೇಟು ನೀಡಿದ್ದರು. ಹೌದು ಏನೀಗ, 3 ಮದುವೆ ಆಗಿದ್ದೀನಿ. ಹಿಂದಿನ ಮದುವೆ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳಿತ್ತು, ಅದಕ್ಕೆ ಈ ನಿರ್ಧಾರಕ್ಕೆ ಬಂದೆ ಎಂದಿದ್ದರು.
ಶಾಲೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಮಾರ್ಕ್ ಶಂಕರ್ ಗಾಯಗೊಂಡಿರುವುದು ಮೆಗಾ ಫ್ಯಾಮಿಲಿಗೆ ಆತಂಕ ತಂದಿದೆ. ಆತ ಬೇಗ ಚೇತರಿಸಿಕೊಳ್ಳಲಿ ಎಂದು ಮೆಗಾ ಫ್ಯಾಮಿಲಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಚಿರು ದಂಪತಿ ಬಳಿಕ ರಾಮ್ಚರಣ್, ನಾಗಬಾಬು ಕೂಡ ಸಿಂಗಾಪುರಕ್ಕೆ ತೆರಳುವ ಸಾಧ್ಯತೆಯಿದೆ. ಪ್ರಧಾನಿ ಮೋದಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಕೂಡ ಪ್ರತಿಕ್ರಿಯಿಸಿ ಮಾರ್ಕ್ ಚೇತರಿಕೆಗೆ ಹಾರೈಸಿದ್ದಾರೆ.
ನಿನ್ನೆ(ಏಪ್ರಿಲ್ 9) ಅಲ್ಲು ಅರ್ಜುನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆದರೆ ಮೆಗಾ ಫ್ಯಾಮಿಲಿಯ ಯಾರೊಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಬನ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿಲ್ಲ. ಬೆಳಗ್ಗೆ ಮಾfಕ್ ಶಂಕರ್ ಗಾಯಗೊಂಡ ವಿಚಾರ ಗೊತ್ತಾಯಿತು. ಹಾಗಾಗಿ ಚಿರಂಜೀವಿ, ರಾಮ್ಚರಣ್ ಸೇರಿದಂತೆ ಯಾರೊಬ್ಬರು ಅಲ್ಲು ಅರ್ಜುನ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿಲ್ಲ ಎನ್ನಲಾಗ್ತಿದೆ.


Click it and Unblock the Notifications











