ತೆಲುಗಿನಲ್ಲಿ ಸಾಕಷ್ಟು ಕಲಾವಿದರು ಇದ್ರು 'ಪೆದ್ದಿ' ಗುರುವಿನ ಪಾತ್ರಕ್ಕೆ ಶಿವಣ್ಣನನ್ನು ಆಯ್ಕೆ ಮಾಡಿದ್ದೇಕೆ?
ಕನ್ನಡ ನಟ ಶಿವರಾಜ್ಕುಮಾರ್ ಈಗ ತೆಲುಗು, ತಮಿಳಿನಲ್ಲೂ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಸಾಕಷ್ಟು ಅವಕಾಶಗಳು ಅವರನ್ನು ಹುಡುಕಿ ಬರ್ತಿವೆ. ಪೋಷಕ ಪಾತ್ರಗಳಲ್ಲಿ ಮಾತ್ರವಲ್ಲ ಹೀರೊ ಆಗಿ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. 'ಪೆದ್ದಿ' ಚಿತ್ರದಲ್ಲಿ ಉಸ್ತಾದ್ ಆಗಿ ರಾಮ್ಚರಣ್ಗೆ ಕುಸ್ತಿ ಪಟ್ಟುಗಳನ್ನು ಹೇಳಿಕೊಟ್ಟಿದ್ದಾರೆ.
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಒಂದಷ್ಟು ನೆಗೆಟಿವ್ ಕಾಮೆಂಟ್ಸ್ ನಡುವೆಯೂ ಅಭಿಮಾನಿಗಳಿಗೆ ಇಷ್ಟವಾಗಿದೆ. ಜೂನ್ 4ರಂದು ಸಿನಿಮಾ ತೆರೆಗೆ ಬರಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈ ಹಿಂದೆ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡಿಗೆ ಶಿವಣ್ಣ ಹೆಜ್ಜೆ ಹಾಕಿದ್ದರು. ಇದೇ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆ ಬೆನ್ನಲ್ಲೇ 'ಪೆದ್ದಿ' ಚಿತ್ರಕ್ಕಾಗಿ ಲುಕ್ ಟೆಸ್ಟ್ ಮಾಡಲಾಗಿತ್ತು. ಆ ಬಳಿಕವೇ ಶಿವಣ್ಣ ಚಿತ್ರಕ್ಕಾಗಿ ನಟಿಸಿದ್ದರು. ಚಿತ್ರದಲ್ಲಿ 'ಪೆದ್ದಿ' ಗುರು ಗೌರ್ನಾಯ್ಡು ಪಾತ್ರದಲ್ಲಿ ಸೆಂಚುರಿ ಸ್ಟಾರ್ ಬಣ್ಣ ಹಚ್ಚಿದ್ದಾರೆ. ಟ್ರೈಲರ್ನ ಸಣ್ಣ ಝಲಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ಶಿವಣ್ಣನನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಎನ್ನುವ ಪ್ರಶ್ನೆಗೆ ನಿರ್ದೇಶಕ ಬುಚ್ಚಿಬಾಬು ಉತ್ತರಿಸಿದ್ದಾರೆ. 'ಜೈಲರ್'-2 ಚಿತ್ರದಲ್ಲಿ ನರಸಿಂಹ ಆಗಿ ಶಿವಣ್ಣ ಅಬ್ಬರಿಸಿದ್ದರು. ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡು ಕಮಾಲ್ ಮಾಡಿದ್ದರು. ಆ ಬಳಿಕ ಕಾಲಿವುಡ್, ಟಾಲಿವುಡ್ನಿಂದ ಸಾಕಷ್ಟು ಅವಕಾಶಗಳು ಬಂದಿತ್ತು. ಅದರಲ್ಲಿ 'ಪೆದ್ದಿ' ಕೂಡ ಒಂದು.
ಬುಚ್ಚಿಬಾಬು ಕಥೆ ಹೇಳಿದ ರೀತಿ ಬಹಳ ಇಷ್ಟವಾಯಿತು. ಈ ಪಾತ್ರ ಬಹಳ ಚೆನ್ನಾಗಿದೆ, ನಟಿಸಬೇಕು ಎನಿಸಿತು. ಹಾಗಾಗಿ ಒಪ್ಪಿಕೊಂಡೆ ಎಂದು ಶಿವಣ್ಣ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಚಿತ್ರದಲ್ಲಿ ಶಿವರಾಜ್ಕುಮಾರ್ ನಟಿಸಿರುವುದು ಚೆನ್ನಾಗಿದೆ. ಕಥೆಗೆ ಸೂಕ್ತವಾಗಿದೆ. ಆದರೆ ತೆಲುಗಿನಲ್ಲಿ ಸಾಕಷ್ಟು ಪೋಷಕ ಕಲಾವಿದರು, ಹಿರಿಯ ನಟರು ಇದ್ದಾರೆ. ಅವರನ್ನೆಲ್ಲಾ ಬಿಟ್ಟು ಶಿವಣ್ಣನ ಆಯ್ಕೆ ಯಾಕೆ? ಎನ್ನುವ ಪ್ರಶ್ನೆಗೆ ಬುಚ್ಚಿಬಾಬು ಉತ್ತರಿಸಿದ್ದಾರೆ. ತೆಲುಗು 360 ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ.
"ನಮ್ಮ ನಟರಿಗಿರುವ ಸ್ಟಾರ್ ಇಮೇಜ್ ನೋಡಿದ್ರೆ, ಪ್ರೇಕ್ಷಕರು ಸಿನಿಮಾ ಮೂಡ್ ಇಂದ ಹೊರಗೆ ಬಂದುಬಿಡುತ್ತಾರೆ ಅನಿಸಿತು. ಗೊತ್ತಿಲ್ಲದ ನಟ ಆಗಿದ್ದರೆ ಜನ ನೋಡುಗರು ಕಥೆ ಬಿಟ್ಟು ಹೊರಗಡೆ ಬರಲ್ಲ ಎನ್ನುವ ಕಾರಣಕ್ಕೆ ಶಿವರಾಜ್ಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡೆ. ಅದು ಬಿಟ್ಟು ಬೇರೇನು ಇಲ್ಲ. ಆ ಪಾತ್ರಕ್ಕಾಗಿ ಬೇರೆ ಯಾರನ್ನು ಕೇಳಲಿಲ್ಲ. ಶಿವಣ್ಣನೇ ಸೂಕ್ತ ಎಂದು ಅವರ ಬಳಿ ಹೋಗಿ ಕಥೆ ಹೇಳ್ದೆ. ಮೊದಲು ಅರ್ಧ ಗಂಟೆಯಲ್ಲಿ ಹೇಳಿ ಅಂದ್ರು. ಬಳಿಕ 3 ಗಂಟೆಯಲ್ಲಿ ನರೇಷನ್ ಕೊಟ್ಟೆ, ತೆಲುಗು ಚೆನ್ನಾಗಿ ಅರ್ಥ ಆಗುತ್ತೆ. ನನಗೂ ಚರಣ್ ಅಂದ್ರೆ ಇಷ್ಟ ಮಾಡ್ತೀನಿ ಅಂದ್ರು. ಕನ್ನಡದಲ್ಲಿ ಅವ್ರು ದೊಡ್ಡ ಸ್ಟಾರ್, ಆದರೂ ಪೋಷಕ ಪಾತ್ರ ಅಂದಾಗ ಒಪ್ಪಿಕೊಂಡ್ರು. ಇದು ಅವರ ಮೊದಲ ತೆಲುಗು ಸಿನಿಮಾ" ಎಂದು ಬುಚ್ಚಿಬಾಬು ಹೇಳಿದ್ದಾರೆ.
ಆರೋಗ್ಯ ಸಮಸ್ಯೆ ನಡುವೆಯೂ ಬಹಳ ಸಹಕರಿಸಿದರು. ಸೆಟ್ನಲ್ಲಿ ಕೂಡ ತಮ್ಮ ತಂದೆ ಬಗ್ಗೆ ಬಹಳ ಮಾತನಾಡುತ್ತಿದ್ದರು. ಡೈರೆಕ್ಟರ್ ಫ್ರೆಂಡ್ಲಿ ಅವ್ರು. ಒಮ್ಮೊಮ್ಮೆ ರೀಟೇಕ್ ಕೇಳೋದಾ ಅಂತ ಭಯವಾಗ್ತಿತ್ತು. ಅವ್ರು ಚೆನ್ನಾಗಿ ಮಾಡ್ತಿದ್ರು. ಬಳಿಕ ನಾನು ಏನೋ ಕೆಟ್ಟದಾಗಿ ಮಾಡಿ ತೋರಿಸ್ತಿದ್ದೆ. ಅದನ್ನು ಮಾಡಿ ಓಕೆನಾ ಅಂತಿದ್ರು.. ಸರ್, ಇದಕ್ಕಿಂತ ನೀವು ಮಾಡಿದ್ದೆ ಚೆನ್ನಾಗಿದೆ ಬಿಡಿ, ನಾನು ಹೇಳಿದ್ದು ಚೆನ್ನಾಗಿಲ್ಲ ಎನ್ನುತ್ತಿದ್ದೆ. ಬಹಳ ಸಹಕಾರ ನೀಡಿದ್ರು ಎಂದು ನಿರ್ದೇಶಕರು ಶಿವಣ್ಣನ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡಿದ್ದಾರೆ.


Click it and Unblock the Notifications