'ಪುಷ್ಪ'-2 ಚಿತ್ರದಲ್ಲಿ ಅಲ್ಲು ಅರ್ಜುನ್ ಗುಟ್ಕಾ ಜಗಿಯುವುದು ಯಾಕೆ? ಸೀಕ್ರೆಟ್ ರಿವೀಲ್
ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸರಣಿ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಮೂಡಿ ಬಂದಿದ್ದ ಸೀಕ್ವೆಲ್ 1800 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಸಿನಿಮಾ ಬಿಡುಗಡೆ ವೇಳೆ ನಡೆದ ದುರಂತದಿಂದ ಚಿತ್ರ ಸುದ್ದಿ ಆಗಿತ್ತು.
ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆ ಕೊನೆಯುಸಿರೆಳೆದಿದ್ದರು. ಹಾಗಾಗಿ 'ಪುಷ್ಪ'- 2 ಸಕ್ಸಸ್ ಸಂಭ್ರಮಾರಣೆಯನ್ನು ಚಿತ್ರತಂಡ ಮೊಟುಕುಗೊಳಿಸಿತ್ತು. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ 'ಪುಷ್ಪ'- 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು.

ಪ್ರೀಮಿಯರ್ ಶೋಗಳಿಂದಲೇ 10 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ 'ಪುಷ್ಪ'- 2 ಸಿನಿಮಾ ಸಂಚಲನ ಸೃಷ್ಟಿಸಿತ್ತು. ನಾಲ್ಕೈದು ಪಟ್ಟು ಟಿಕೆಟ್ ದರ ಹೆಚ್ಚಿಸಿ ಸಿನಿಮಾ ಗಳಿಕೆ ಹೆಚ್ಚಾಗುವಂತೆ ಚಿತ್ರತಂಡ ನೋಡಿಕೊಂಡಿತ್ತು. ಮೂರು ವರ್ಷಗಳ ಹಿಂದೆ ಬಂದಿದ್ದ 'ಪುಷ್ಪ' ಸಿನಿಮಾ 350 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಸೀಕ್ವೆಲ್ 6 ಪಟ್ಟು ಹೆಚ್ಚು ಕೊಳ್ಳೆ ಹೊಡೆದಿದ್ದು ವಿಶೇಷ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಕೂಡ ಎಲ್ಲರ ನಿರೀಕ್ಷೆ ಮೀರಿ ಗೆದ್ದಿತ್ತು.
ಒಂದೇ ಚಿತ್ರದಲ್ಲಿ ಹೇಳಿಮುಗಿಸಬಹುದಾಗಿದ್ದ ಕಥೆಯನ್ನು ಸುಕುಮಾರ್ ಎರಡು ಚಿತ್ರಗಳಿಗೆ ಎಳೆಯುವ ಪ್ರಯತ್ನ ಮಾಡಿದ್ದರು. ಸದ್ಯ ಸರಣಿಯ 3ನೇ ಚಿತ್ರಕ್ಕೂ ತಯಾರಿ ನಡೀತಿದೆ. ಚಿತ್ರದಲ್ಲಿ ರಕ್ತಚಂದನ ಸ್ಮಗ್ಲರ್ ಪುಷ್ಪರಾಜ್ ಪಾತ್ರದಲ್ಲಿ ಸ್ಟೈಲಿಶ್ ಸ್ಟಾರ್ ಮಿಂಚಿದ್ದರು. ಆಕೆಯ ಪತ್ನಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದರೆ ಪೊಲೀಸ್ ಆಫೀಸರ್ ಭನ್ವರ್ ಸಿಂಗ್ ಶೇಖಾವತ್ ಆಗಿ ಫಹಾದ್ ಫಾಸಿಲ್ ಅಬ್ಬರಿಸಿದ್ದಾರೆ.
ಬಡ ಕುಟುಂಬದ ಪುಷ್ಪರಾಜ್ ಚಿಕ್ಕಂದಿನಿಂದ ಸಾಕಷ್ಟು ಅವಮಾನ ಎದುರಿಸಿ ಬೆಳೆದಾತ. ಬಳಿಕ ರಕ್ತಚಂದನ ಸ್ಮಗ್ಲರ್ ಆಗಿ ಗುರ್ತಿಸಿಕೊಳ್ಳುತ್ತಾನೆ. ತನ್ನ ಚಾಕಚಕ್ಯತೆಯಿಂದ ಶೇಷಾಚಲಂ ಅರಣ್ಯದಿಂದ ರಕ್ತಚಂದನ ಸಾಗಿಸುವ ಜಾಲದಲ್ಲಿ ಹೆಸರು ಮಾಡುತ್ತಾನೆ. ನೋಡ ನೋಡತ್ತಲೇ ಇಡೀ ಸಿಂಡಿಕೇಟ್ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ಈ ಹಾದಿಯಲ್ಲಿ ಎಸ್ಪಿ ಶೇಖಾವತ್ನನ್ನು ಎದುರಾಕಿಕೊಳ್ಳುತ್ತಾನೆ. ಅಲ್ಲಿಗೆ ಮೊದಲ ಭಾಗದ ಕಥೆ ಮುಗಿದಿತ್ತು.
ಒರಟ ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಲುಕ್ಕು, ಬಾಡಿ ಲಾಂಗ್ವೇಜ್, ಮಾತನಾಡುವ ಶೈಲಿ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಒಂದು ಭುಜವನ್ನು ಮೇಲೆತ್ತಿ ನಡೆಯುವ, ತಗ್ಗೋದೆ ಇಲ್ಲ ಎನ್ನುವ ಸ್ಟೈಲ್ ಉತ್ತರ ಭಾರತೀಯರಿಗೂ ಮೋಡಿ ಮಾಡಿತ್ತು. ಹಿಂದಿಗೆ ಡಬ್ ಆಗಿದ್ದ 'ಪುಷ್ಪ' ಸಿನಿಮಾ ಅಲ್ಲಿನ ಪ್ರೇಕ್ಷಕರಿಗೆ ಹತ್ತಿರವಾಗಿತ್ತು. ಬಳಿಕ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಿ ಹೆಚ್ಚು ಜನರನ್ನು ತಲುಪಿತ್ತು. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿತ್ತು.
'ಪುಷ್ಪ'-2ಗೆ ಉತ್ತರ ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ ಎನ್ನುವುದನ್ನು ಚಿತ್ರತಂಡ ಮನಗಂಡಿತ್ತು. ಅದೇ ಕಾರಣಕ್ಕೆ ಬೆಂಗಾಲಿ ಭಾಷೆಗೂ ಚಿತ್ರವನ್ನು ಡಬ್ ಮಾಡಲು ಪ್ರಯತ್ನ ಮಾಡಲಾಗಿತ್ತು. ಹಿಂದಿ ಬೆಲ್ಟ್ ಅನ್ನು ಟಾರ್ಗೆಟ್ ಮಾಡಿ ನಿರ್ದೇಶಕ ಸುಕುಮಾರ್ ನಾಯಕನ ಪಾತ್ರವನ್ನು ಮತ್ತಷ್ಟು ತಿದ್ದಿ ತೀಡಿದ್ದರು. ಮುಖ್ಯವಾಗಿ ಆತನ ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ಕಾಸ್ಟ್ಯೂಮ್ ಕಡೆ ಗಮನ ಹರಿಸಿದ್ದರು.
ಹೇಗಿದ್ದರೂ ದಕ್ಷಿಣದಲ್ಲಿ ಸೀಕ್ವೆಲ್ ಬಗ್ಗೆ ಹೈಪ್ ಇದೆ. ಉತ್ತರದಲ್ಲಿ ಕೂಡ ಚಿತ್ರ ಜನರಿಗೆ ಇಷ್ಟವಾಗಬೇಕು. ಅದಕ್ಕಾಗಿ ಅಲ್ಲಿನ ಪ್ಲೇವರ್ ಇರಬೇಕು ಎಂದು ನಿರ್ಧರಿಸಿದ್ದಾರೆ. ಆಗ ಹೊಳೆದಿದ್ದೆ ಪುಷ್ಪರಾಜ್ ಗುಟ್ಕಾ ಜಗಿಯುವ ಅಭ್ಯಾಸ. ಉತ್ತರ ಭಾರತದಲ್ಲಿ ಬಹುತೇಕರು ಗುಟ್ಕಾ ಜಗಿಯುತ್ತಾರೆ. ಮುಖ್ಯವಾಗಿ ಕೂಲಿ ಕಾರ್ಮಿಕರಿಗೆ ಈ ಅಭ್ಯಾಸ ಜಾಸ್ತಿ. ಅದನ್ನು ಎನ್ಕ್ಯಾಶ್ ಮಾಡಿಕೊಂಡರೆ ಪುಷ್ಪರಾಜ್ ಉತ್ತರದ ಪ್ರೇಕ್ಷಕನಿಗೆ ಮತ್ತಷ್ಟು ಹತ್ತಿರವಾಗುತ್ತಾನೆ ಎಂದು ಚಿತ್ರತಂಡ ನಿರ್ಧರಿಸಿ ಪಾತ್ರವನ್ನು ಡಿಸೈನ್ ಮಾಡಿದರು.

ಬಾಯ್ತುಂಬ ಗುಟ್ಕಾ ಜಗಿಯುತ್ತಾ ಪುಷ್ಪರಾಜ್ ಮಾತನಾಡುವುದು, ಅದಕ್ಕಾಗಿಯೇ ಆತನ ಡೈಲಾಗ್ ಡೆಲಿವರಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲಾಯಿತು. ಇನ್ನು ಬಣ್ಣ ಬಣ್ಣದ ಹೂವಿನ ಚಿತ್ರಗಳಿರುವಂತ ಶರ್ಟು, ಪ್ಯಾಂಟ್ ಹೀಗೆ ಮೊದಲ ಭಾಗಕ್ಕಿಂತ ಎರಡನೇ ಭಾಗದಲ್ಲಿ ಅಲ್ಲು ಅರ್ಜುನ್ ಲುಕ್ ಸಂಪೂರ್ಣ ಬದಲಾಗಿತ್ತು. ಸುಕುಮಾರ್ ಐಡಿಯಾ ವರ್ಕ್ ಆಯಿತು, ಉತ್ತರ ಭಾರತೀಯರು ಚಿತ್ರವನ್ನು ಅಪ್ಪಿಕೊಂಡರು.
ಎರಡನೇ ಭಾಗದ ಬಹುತೇಕ ಕಥೆ ಪುಷ್ಪರಾಜ್ ಹಾಗೂ ಶೇಖಾವತ್ ನಡುವಿನ ಪೈಪೋಟಿಯಲ್ಲೇ ಸಾಗುತ್ತದೆ. ಒಬ್ಬರಿಗೊಬ್ಬರು ಏಟು ಎದಿರೇಟು ಕೊಡುವುದೇ ಕಥೆ. ಆದರೆ ಅದನ್ನು ಅಷ್ಟೇ ವಿಭಿನ್ನವಾಗಿ ಹೇಳಿ ಸುಕುಮಾರ್ ಗೆದ್ದಿದ್ದರು. ತನ್ನ ಪತ್ನಿ ಶ್ರೀವಲ್ಲಿಗೆ ಕೊಟ್ಟ ಮಾತು ನಡೆಸಿಕೊಳ್ಳಲು ಪುಷ್ಪರಾಜ್ ಏನೆಲ್ಲಾ ಮಾಡ್ತಾನೆ ಎನ್ನುವುದು ಹೈಲೆಟ್ ಆಗಿತ್ತು. ಇನ್ನು ಗಂಗಮ್ಮ ತಾಯಿ ಜಾತ್ರೆ ಎಪಿಸೋಡ್ನಲ್ಲಿ ಸೀರೆ ಉಟ್ಟು ಅಲ್ಲು ಅರ್ಜುನ್ ಹುಬ್ಬೇರಿಸಿದ್ದರು.
ಪುಷ್ಪ ಚಿತ್ರದಲ್ಲಿನ ನಾಯಕನ ಲುಕ್ಕು, ಬಾಡಿ ಲಾಂಗ್ವೇಜ್ ಸಿನಿಮಾ ನೋಡಿದವರ ಮೇಲೆ ಪರಿಣಾಮ ಬೀರಿದ್ದು ಸುಳ್ಳಲ್ಲ. 'ಪುಷ್ಪ' ಸಿನಿಮಾ ನೋಡಿ ನಮ್ಮ ಶಾಲೆಯ ಕೆಲ ಮಕ್ಕಳು ಪುಷ್ಪರಾಜ್ ರೀತಿ ಆಡುತ್ತಿದ್ದಾರೆ, ನಾವು ಎಷ್ಟೇ ಹೇಳಿದರೂ ಕೇಳುತ್ತಿಲ್ಲ, ಈಗ ಅದೇ ಸ್ಟೈಲ್, ಟ್ರೆಂಡ್ ಎನ್ನುತ್ತಿದ್ದಾರೆ ಎಂದು ಎಂದು ಇತ್ತೀಚೆಗೆ ತೆಲಂಗಾಣದ ಯೂಸುಫ್ಗುಡ ಹೈಸ್ಕೂಲ್ ಮುಖ್ಯ ಶಿಕ್ಷಕಿ ಬೇಸರ ವ್ಯಕ್ತಪಡಿಸಿದ್ದರು. ಅಷ್ಟರಮಟ್ಟಿಗೆ ಚಿತ್ರದ ಪಾತ್ರ ಪರಿಣಾಮ ಬೀರಿದೆ.
'ಪುಷ್ಪ-2' ಹಿಂದಿ ಕಲೆಕ್ಷನ್
ಕಳೆದ ವರ್ಷ ಡಿಸೆಂಬರ್ 5ಕ್ಕೆ ವಿಶ್ವದಾದ್ಯಂತ 'ಪುಷ್ಪ-2' ಸಿನಿಮಾ ಬಿಡುಗಡೆ ಆಗಿತ್ತು. ಹಿಂದಿ ವರ್ಷನ್ ಬಹಳ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಿತ್ತು. ಸಾಕಷ್ಟು ಹಿಂದಿ ಸಿನಿಮಾಗಳ ದಾಖಲೆಯನ್ನು ಕೂಡ ಸಿನಿಮಾ ಮುರಿದಿತ್ತು. ಸಿನಿಮಾ ಒಟ್ಟು 1800 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದರಲ್ಲಿ ಹಿಂದಿ ವರ್ಷನ್ ಕೊಡುವೆ 800 ಕೋಟಿ ಎನ್ನುವುದು ವಿಶೇಷ. ಅಂದರೆ ಚಿತ್ರದ ಬಹಳ ದೊಡ್ಡ ಮೊತ್ತದ ಕಲೆಕ್ಷನ್ ಉತ್ತರ ಭಾರತದಿಂದಲೇ ಬಂದಿತ್ತು.
ಪುಷ್ಪ-3 ಯಾವಾಗ?
ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟು 'ಪುಷ್ಪ-3' ಸಿನಿಮಾ ಮಾಡುವುದಾಗಿ ಘೋಷಿಸಲಾಗಿದೆ. ಪಾರ್ಟ್-2 ನೋಡಿದವರು ಅಯ್ಯೋ ಇನ್ನು ಕಥೆ ಮುಗಿದಿಲ್ವಾ? ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಸುಖಾಸುಮ್ಮನೆ ಯಾಕೆ ಕಥೆ ಎಳೆಯುತ್ತೀರಾ ಎನ್ನುತ್ತಿದ್ದಾರೆ. ಆದರೂ ಕೂಡ ಸರಣಿಯನ್ನು ಮುಂದುವರೆಸಲು ಚಿತ್ರತಂಡ ಮುಂದಾಗಿದೆ. 2028ರಲ್ಲಿ 3ನೇ ಭಾಗ ಸಿನಿಮಾ ಬರುತ್ತದೆ ಎಂದು ಇತ್ತೀಚೆಗೆ ನಿರ್ಮಾಪಕರು ಹೇಳಿದ್ದಾರೆ. ಅಂದಹಾಗಿ ಇದು ವೆಬ್ಸೀರಿಸ್ ಮಾಡಲು ಮಾಡಿದ್ದ ಕಥೆ. ಅದನ್ನೇ ಸುಕುಮಾರ್ ಸಿನಿಮಾ ಮಾಡಿದ್ದರು. ಹಾಗಾಗಿ ವೆಬ್ ಸೀರಿಸ್ ರೀತಿ ಎಳೆಯುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಅಲ್ಲು ಅರ್ಜುನ್ ಮುಂದಿನ ಚಿತ್ರ
'ಪುಷ್ಪ'-2 ಬ್ಲಾಕ್ಬಸ್ಟರ್ ಸಕ್ಸಸ್ ಬಳಿಕ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಗೆ ಅಲ್ಲು ಅರ್ಜುನ್ ಬಳಿ ಉತ್ತರವಿಲ್ಲ. ಸಾಮಾನ್ಯವಾಗಿ ಸ್ಟಾರ್ ನಟರು ಒಂದು ಸಿನಿಮಾ ಮುಗಿಯುವ ಮುನ್ನ ಮತ್ತೊಂದು ಸಿನಿಮಾ ಲೈನಪ್ ಮಾಡಿಕೊಳ್ಳುತ್ತಾರೆ. ಆದರೆ ಸ್ಟೈಲಿಶ್ ಸ್ಟಾರ್ ಮುಂದಿನ ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.


Click it and Unblock the Notifications











