ಪೋಸ್ಟರ್, ಸಾಂಗ್, ಟ್ರೈಲರ್ ಎಲ್ಲೆಲ್ಲೂ ಚಿಕುಬುಕು ಸದ್ದು; 'ಪೆದ್ದಿ' ಕಥೆಗೂ ರೈಲಿಗೂ ಇರುವ ನಂಟೇನು?
ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಬಾಕಿಯಿದೆ. ಐಪಿಎಲ್ ಮುಗಿಯುತ್ತಿದ್ದಂತೆ ತೆರೆಗಪ್ಪಳಿಸುವ ದೊಡ್ಡ ಸಿನಿಮಾ ಇದು. ಬುಚ್ಚಿಬಾಬು ನಿರ್ದೇಶನದ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಶಿವರಾಜ್ಕುಮಾರ್, ಜಗಪತಿ ಬಾಬು ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈಗಾಗಲೇ ಟೀಸರ್, ಸಾಂಗ್ಸ್, ಟ್ರೈಲರ್ ಬಿಡುಗಡೆ ಆಗಿ ಹಿಟ್ ಆಗಿದೆ.
ಚಿತ್ರದ ಹೊಸ ಪೋಸ್ಟರ್ ಗಮನ ಸೆಳೆಯುತ್ತಿದೆ. ಕುಸ್ತಿ ಪೈಲ್ವಾನ್ ಅವತಾರದಲ್ಲಿ ರಕ್ತಸಿಕ್ತ 'ಪೆದ್ದಿ' ನಿಂತರುವ ಚಿತ್ರವನ್ನು ಅದರಲ್ಲಿ ನೋಡಬಹುದು. ಜೊತೆಗೆ ರೈಲ್ವೆ ಟ್ರ್ಯಾಕ್ ಮೇಲೆ ಬ್ಯಾಗ್ ಹಿಡಿದು ನಿಂತ 'ಪದ್ದಿ' ಪುಟ್ಟ ಚಿತ್ರ ಕೂಡ ಇದೆ. ಮೊದಲಿನಿಂದಲೂ ಸಿನಿಮಾ ಸಾಂಗ್ಸ್, ಪೋಸ್ಟರ್, ಟ್ರೈಲರ್ನಲ್ಲಿ ರೈಲು, ಟ್ರ್ಯಾಕು ಹೈಲೆಟ್ ಮಾಡಲಾಗ್ತಿದೆ. ಚಿತ್ರದ ಕಥೆಗೂ ಇದಕ್ಕೂ ಏನಾದರೂ ಸಂಬಂಧ ಇದ್ಯಾ? ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಟ್ರೈಲರ್ ನೋಡಿದ ಮೇಲೆ ಆ ಚರ್ಚೆ ಮತ್ತಷ್ಟು ಹೆಚ್ಚಾಗಿತ್ತು. ಹೊಸ ಪೋಸ್ಟರ್ ಆ ಅನುಮಾನಕ್ಕೆ ಮತ್ತಷ್ಟು ಪುಷ್ಟಿಕೊಡುತ್ತಿದೆ.

ಚಿತ್ರದಲ್ಲಿ ರಾಮ್ಚರಣ್ ಹಳ್ಳಿಯ ರಗಡ್ ಹೈದ 'ಪೆದ್ದಿ'ಬಾಬು ಆಗಿ ನಟಿಸಿದ್ದಾರೆ. ಆತನ ಏಳುಬೀಳಿನ ಕಥೆ ಚಿತ್ರದಲ್ಲಿದೆ. ಆತ ಕ್ರಿಕೆಟ್ ಒಳ್ಳೆ ಕ್ರಿಕೆಟ್ ಆಟಗಾರ, ಅಷ್ಟೆ ಒಳ್ಳೆ ಕುಸ್ತಿಪಟು. ಇನ್ನು ರನ್ನಿಂಗ್ ಟ್ರ್ಯಾಕ್ನಲ್ಲಿ ನಿಂತ್ರೆ ವೇಗದ ಓಟಗಾರ. ದುಷ್ಟರನ್ನು ಎದುರಾಕಿಕೊಂಡು ಆತನ ಜೀವನ ಯಾವ ದಿಕ್ಕಿಗೆ ಸಾಗುತ್ತದೆ ಎನ್ನುವುದು ಸಿನಿಮಾ ಕಥೆ. ಆದರೆ ಆತ ತನ್ನ ಊರಿನ ಕಷ್ಟಕ್ಕಾಗಿ ದುಷ್ಟರ ವಿರುದ್ಧ ಹೋರಾಟಕ್ಕೆ ನಿಲ್ಲುತ್ತಾನೆ. ಅದಕ್ಕೆ ಕಾರಣ ರೈಲ್ವೆ ಟ್ರ್ಯಾಕ್ ಎಂದು ಹೇಳಲಾಗ್ತಿದೆ. ತನ್ನ ಹಳ್ಳಿಗೆ ರೈಲ್ವೆ ಟ್ರ್ಯಾಕ್ ತರಲು 'ಪೆದ್ದಿ'ಯ ಭಗೀರಥ ಪ್ರಯತ್ನವೇ ಸಿನಿಮಾ ಕಥೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗ್ತಿದೆ.
ಭಾರೀ ಬೆಟ್ಟ, ಗುಡ್ಡಗಾಡಿನ ಒಂದು ಸಣ್ಣ ಹಳ್ಳಿ. ಅಲ್ಲಿನ ಜನ ಏನೇ ಬೇಕು ಅಂದ್ರು ನಡೆದುಕೊಂಡು ಹೋಗಿ ತರಬೇಕು. ಸರಿಯಾದ ರಸ್ತೆ ಕೂಡ ಇರಲ್ಲ. ಇನ್ನು ರೈಲಿನ ವ್ಯವಸ್ಥೆ ಕೂಡ ಕನಸಾಗಿರುತ್ತದೆ. ತನ್ನ ಊರಿಗೆ ರೈಲು ಬರಬೇಕು, ಜನರಿಗೆ ಇದರಿಂದ ಸಹಾಯವಾಗಬೇಕು ಎನ್ನುವ ಗುರಿಯೊಂದಿಗೆ 'ಪೆದ್ದಿ'ರಾಜು ಹೋರಾಟ ಶುರುವಾಗುತ್ತದೆ. ಈ ಹಾದಿಯಲ್ಲಿ ಆತ ಏನೆಲ್ಲಾ ಕಳೆದುಕೊಳ್ಳುತ್ತಾನೆ ಎನ್ನುವುದು ಸಿನಿಮಾ ಕಥೆ ಎಂದು ಕೆಲವರು ಊಹಿಸುತ್ತಿದ್ದಾರೆ. ಇದು ಎಷ್ಟು ನಿಜ ಎನ್ನುವುದು ಜೂನ್ 4ರಂದು ತೆರೆಮೇಲೆ ಗೊತ್ತಾಗಲಿದೆ.
'ಪೆದ್ದಿ' ತನ್ನ ಒಂದು ಕಾಲು ಕಳೆದುಕೊಂಡು ಕೊನೆಗೆ ಪ್ಯಾರಾ ಒಲಂಪಿಕ್ಸ್ನಲ್ಲಿ ಗೆದ್ದು ಕನಸು ನನಸು ಮಾಡಿಕೊಳ್ಳುತ್ತಾನೆ, ಇದೇ ಚಿತ್ರದ ದೊಡ್ಡ ಟ್ವಿಸ್ಟ್ ಎಂದು ಕೆಲವರು ಭಾವಿಸುತ್ತಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗೆ ಬರಲಿದೆ. ಟ್ರೈಲರ್ ಅಷ್ಟಾಗಿ ಪ್ರೇಕ್ಷಕರನ್ನು ರಂಜಿಸಲಿಲ್ಲ. ಹಾಗಾಗಿ ಇನ್ನೆರಡು ದಿನಗಳಲ್ಲಿ ಮತ್ತೊಂದು ಟ್ರೈಲರ್ ಬಿಡುಗಡೆ ಆಗುತ್ತದೆ ಎಂದು ಹೇಳಲಾಗ್ತಿದೆ.
ಈ ಸಿನಿಮಾ ಮೂಲಕ ಶಿವಣ್ಣ ಟಾಲಿವುಡ್ ಪ್ರವೇಶಿಸಿದ್ದಾರೆ. 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡೊಂದರಲ್ಲಿ ಹಿಂದೆ ಕಾಣಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. 'ಪೆದ್ದಿ'ರಾಜುಗೆ ಗುರುವಿನ ಪಾತ್ರದಲ್ಲಿ ಬಲ ತುಂಬಲು ಸಿದ್ಧರಾಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸೂಪರ್ ಹಿಟ್ 'ಉಪ್ಪೆನ' ಸಿನಿಮಾ ಬಳಿಕ ಬುಚ್ಚಿಬಾಬು ಈ ಚಿತ್ರ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ.


Click it and Unblock the Notifications