ಶ್ರೀಲೀಲಾನ ಟಾರ್ಗೆಟ್ ಮಾಡಿದ ಪ್ರಭಾಸ್ ಫ್ಯಾನ್ಸ್: ಅಷ್ಟಕ್ಕೂ ಏನಾಯ್ತು?
ಅದೃಷ್ಟ ಇಲ್ಲ ಅಂದ್ರೆ ಚಿತ್ರರಂಗದಲ್ಲಿ ಸಕ್ಸಸ್ ಸಿಗಲ್ಲ ಎನ್ನುವುದು ಹಳೇ ಮಾತು. ನಟಿಸಿದ ಎರಡ್ಮೂರು ಸಿನಿಮಾ ಸೋಲುತ್ತಿದ್ದಂತೆ ಕೆಲವರು ಐರೆನ್ ಲೆಗ್ ಎನ್ನುವ ಹಣೆಪಟ್ಟಿ ಕಟ್ಟಿಬಿಡುತ್ತಾರೆ. ಸದ್ಯ ನಟಿ ಶ್ರೀಲೀಲಾ ಪರಿಸ್ಥಿತಿ ಹೀಗೆ ಆಗಿದೆ. ದೊಡ್ಡ ದೊಡ್ಡ ಅವಕಾಶಗಳು ಸಿಕ್ಕರೂ ಯಾವುದೇ ಸಿನಿಮಾ ಹಿಟ್ ಆಗದೇ ಟಾಲಿವುಡ್ನಲ್ಲಿ ಶ್ರೀಲೀಲಾ ಕ್ರೇಜ್ ಕಮ್ಮಿ ಆಗ್ತಿದೆ.
'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಕೆಲವರಂತೂ ಆಕೆಯನ್ನು ತೆಲುಗು ನಟಿ ಎಂದುಕೊಂಡುಬಿಟ್ಟಿದ್ದಾರೆ. ಬಾಲಕೃಷ್ಣ, ರವಿತೇಜ, ಮಹೇಶ್ ಬಾಬು ರೀತಿಯ ಸೂಪರ್ ಸ್ಟಾರ್ಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಶ್ರೀಗೆ ಸಿಕ್ಕಿತ್ತು. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಸಂಕ್ರಾಂತಿಗೆ ಬಂದ 'ಗುಂಟೂರು ಖಾರಂ' ಸಹ ನಿರಾಸೆ ಮೂಡಿಸಿತ್ತು.

ಶ್ರೀಲೀಲಾ ಡ್ಯಾನ್ಸ್ ಬಗ್ಗೆ ಟಾಲಿವುಡ್ನಲ್ಲಿ ಎಲ್ಲರೂ ಮಾತನಾಡುತ್ತಾರೆ. ಆಕೆಗೆ ಸಮನಾಗಿ ಡ್ಯಾನ್ಸ್ ಮಾಡೋದು ಕಷ್ಟ ಎಂದು ಇತ್ತೀಚೆಗೆ ಮಹೇಶ್ ಬಾಬು ಸಹ ಹೇಳಿದ್ದರು. ಇನ್ನು 'ಗುಂಟೂರು ಖಾರಂ' ಬಳಿಕ ಕಿಸ್ ಬೆಡಗಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಪವನ್ ಕಲ್ಯಾಣ್ ಜೊತೆ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಆಕೆ ನಟಿಸಬೇಕಿದೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾ ತಡವಾಗುತ್ತಿದೆ. ಹಾಗಾಗಿ ಸದ್ಯಕ್ಕೆ ಶ್ರೀಲೀಲಾ ಕೈ ಖಾಲಿಯಾಗಿದೆ ಎನ್ನುವ ಚರ್ಚೆ ಶುರುವಾಗಿದೆ.
ಬಹಳ ಹಿಂದೆಯೇ ಪ್ರಭಾಸ್ ಜೋಡಿಯಾಗಿ ಶ್ರೀಲೀಲಾ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. 'ಸೀತಾರಾಮಂ' ಖ್ಯಾತಿಯ ಹನು ರಾಘವಪುಡಿ ಸದ್ಯ ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನಲಾಗ್ತಿದೆ. ಇದೇ ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ಪಕ್ಕ ಕಾಣಿಸಿಕೊಳ್ಳುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಸದ್ಯಕ್ಕೆ ಅಂತಹ ಯಾವುದೇ ಚರ್ಚೆ ಆಗಿಲ್ಲ ಎಂದು ಖುದ್ದು ನಿರ್ದೇಶಕರೇ ಹೇಳಿದ್ದರು. ಇದೀಗ ಮತ್ತೆ ಇದೇ ಸುದ್ದಿ ಚರ್ಚೆಗೆ ಬಂದಿದೆ.
ಹನು ರಾಘವಪುಡಿ ಮುಂದಿನ ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಶ್ರೀಲೀಲಾ ನಟಿಸುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಇಲ್ಲಿ ವಿಷಯ ಅದಲ್ಲ. ಶ್ರೀಲೀಲಾ ಆಯ್ಕೆ ಆಗುವ ಮುನ್ನವೇ ಆಕೆ ಬೇಡ ಎಂದು ಪ್ರಭಾಸ್ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ನಮ್ಮ ನೆಚ್ಚಿನ ನಟ ಪ್ರಭಾಸ್ ಜೊತೆ ಶ್ರೀಲೀಲಾ ನಟಿಸೋದು ಬೇಡ. ಆಕೆಯ ಯಾವುದೇ ಸಿನಿಮಾ ಹಿಟ್ ಆಗುತ್ತಿಲ್ಲ. ಇದರ ಪರಿಣಾಮ ಪ್ರಭಾಸ್ ಸಿನಿಮಾ ಮೇಲೂ ಆಗಬಹುದು. ಆಕೆಯನ್ನು ಮಾತ್ರ ಆಯ್ಕೆ ಮಾಡಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಪ್ರಭಾಸ್ ಫ್ಯಾನ್ಸ್ ಈ ರೀತಿ ಟ್ರೋಲ್ ಮಾಡುತ್ತಿರುವುದು ಇದೇ ಮೊದಲಲ್ಲ. 'ದಿ ರಾಜಾ ಸಾಬ್' ಸಿನಿಮಾ ಘೋಷಣೆ ಆಗಿದ್ದ ಸಮಯದಲ್ಲೂ ಇದೇ ರೀತಿ ಟಾರ್ಗೆಟ್ ಮಾಡಿದ್ದರು.
ನಿರ್ದೇಶಕ ಮಾರುತಿ ನಿರ್ದೇಶನದಲ್ಲಿ 'ದಿ ರಾಜಾ ಸಾಬ್' ಸಿನಿಮಾ ನಿರ್ಮಾಣ ಆಗುತ್ತಿದೆ. ಆದರೆ ಮಾರುತಿ ನಿರ್ದೇಶನದ ಹಿಂದಿನ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಿಲ್ಲ. ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದಾರೆ, ಇಂತಹ ಸಮಯದಲ್ಲಿ ಮಾರುತಿ ಸಣ್ಣ ಸಿನಿಮಾ ಮಾಡಲು ಮುಂದಾಗಿದ್ದಾರೆ, ಬರೀ ತೆಲುಗಿನಲ್ಲಿ ಈ ಸಿನಿಮಾ ಬರುತ್ತದೆ, 30-40 ಕೋಟಿ ಬಜೆಟ್ನಲ್ಲಿ ಸಿನಿಮಾ ಮಾಡುತ್ತಾರೆ, ನಮ್ಮ ಬಾಸ್ ರೇಂಜ್ ಬೇರೆ ಈಗ, ಹಾಗಾಗಿ ಮಾರುತಿ ಸಿನಿಮಾ ಬೇಡ ಎಂದು ಆಗ್ರಹಿಸಿದ್ದರು. ಈ ಸಿನಿಮಾ ನಾವು ನೋಡಲ್ಲ ಎಂದು ಟ್ರೆಂಡ್ ಮಾಡಿದ್ದರು.
ಅಭಿಮಾನಿಗಳ ಆಕ್ರೋಶದ ಬಳಿಕ ಸದ್ದಿಲ್ಲದೇ ಪ್ರಭಾಸ್ 'ದಿ ರಾಜಾ ಸಾಬ್' ಸಿನಿಮಾ ಆರಂಭಿಸಿದರು. ಯಾವುದೇ ವಿಚಾರ ಲೀಕ್ ಆಗದಂತೆ ಸೈಲೆಂಟ್ ಆಗಿ ಸಿನಿಮಾ ಚಿತ್ರೀಕರಣ ಮಾಡುತ್ತಾ ಬಂದಿದ್ದರು. ಇತ್ತೀಚೆಗೆ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಆಗಿತ್ತು.


Click it and Unblock the Notifications











