ಫ್ಯಾನ್ಸ್ ಪ್ರೀತಿಯಿಂದ ಕೊಟ್ಟ ಬಿರುದುಗಳನ್ನು ಬದಲಿಸಿಕೊಂಡ ಹೀರೋಗಳು; ದಿಢೀರ್ ನಿರ್ಧಾರಕ್ಕೆ ಕಾರಣವೇನು?
ಸ್ಟಾರ್ ನಟರಿಗೆ ಅಭಿಮಾನಿಗಳು ಬಿರುದುಗಳನ್ನು ಕೊಡೋದು ಹೊಸದೇನು ಅಲ್ಲ. ದಶಕಗಳಿಂದ ಇದು ನಡೆದು ಬಂದಿದೆ. ನಟರು ಹಿಟ್ ಸಿನಿಮಾಗಳನ್ನು ಕೊಟ್ಟು ಸ್ಟಾರ್ಡಮ್ ಹೆಚ್ಚಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಆ ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಪ್ರೀತಿಯಿಂದ ಬಿರುದುಗಳನ್ನು ಕೊಟ್ಟು ಜೈಕಾರ ಹಾಕುತ್ತಾರೆ.
ಡಾ. ರಾಜ್ಕುಮಾರ್, ಅಮಿತಾಬ್ ಬಚ್ಚನ್, ಚಿರಂಜೀವಿ, ರಜನಿಕಾಂತ್ ಹೀಗೆ ಸ್ಟಾರ್ ನಟರಿಗೆಲ್ಲಾ ಅಭಿಮಾನಿಗಳು ವಿಶೇಷ ಟೈಟಲ್ ಕೊಟ್ಟಿದ್ದಾರೆ. ನಟರು ಹೆಚ್ಚು ಹೆಚ್ಚು ಜನಪ್ರಿಯತೆ ಸಾಧಿಸಿದಂತೆ ಮತ್ತಷ್ಟು ಬಿರುದುಗಳು ಸೇರಿಕೊಳ್ಳುತ್ತವೆ. ಅಣ್ಣಾವ್ರಿಗೆ ಸಿಕ್ಕಷ್ಟು ಬಿರುದುಗಳು ಮತ್ಯಾವುದೇ ನಟನಿಗೆ ಸಿಗಲಿಲ್ಲ ಎನಿಸುತ್ತದೆ. ಟಾಲಿವುಡ್ನಲ್ಲಿ ಸಾಕಷ್ಟು ಜನ ಸ್ಟಾರ್ ನಟರಿದ್ದಾರೆ. ಒಬ್ಬೊಬ್ಬರನ್ನು ಅಭಿಮಾನಿಗಳು ಒಂದೊಂದು ರೀತಿ ಸಂಬೋಧಿಸುತ್ತಾರೆ.

ತೆಲುಗು ನಟರಾದ ರಾಮ್ಚರಣ್, ಜ್ಯೂ. ಎನ್ಟಿಆರ್ ಹಾಗೂ ಅಲ್ಲು ಅರ್ಜುನ್ಗೂ ಅಭಿಮಾನಿಗಳು ಒಂದು ಟ್ಯಾಗ್ ಸೇರಿಸಿ ಕರೆಯುತ್ತಿದ್ದಾರೆ. ದಶಕಗಳಿಂದ ಅದೇ ಹೆಸರಿನ ಜೊತೆಗೆ ಗುರ್ತಿಸಿಕೊಳ್ಳುತ್ತಿದ್ದ ಕಲಾವಿದರು ಇತ್ತೀಚಿನ ದಿನಗಳಲ್ಲಿ ತಮ್ಮ ಬಿದುರುಗಳನ್ನು ಬದಲಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಸ್ಟೈಲಿಶ್ ಸ್ಟಾರ್ ಎಂದೇ ಖ್ಯಾತರಾಗಿದ್ದರು. ಆದರೆ 'ಪುಷ್ಪ' ಚಿತ್ರದಿಂದ ಐಕಾನ್ ಸ್ಟಾರ್ ಎನ್ನುವ ಹೊಸ ಬಿರುದು ಅಭಿಮಾನಿಗಳ ಪ್ರೀತಿಯ ಬನ್ನಿಗೆ ಸಿಕ್ಕಿದೆ.
ಯಂಗ್ ಟೈಗರ್ ಅಂತ್ಲೇ ಜ್ಯೂ. ಎನ್ಟಿಆರ್ ಬಿರುದಾಂಕಿತರಾಗಿದ್ದರು. ಮೊನ್ನೆ ಮೊನ್ನೆವರೆಗೂ ಇದೇ ಯಂಗ್ ಟೈಗರ್ ಜ್ಯೂ. ಎನ್ಟಿಆರ್ ಎಂದು ಕರೆಯಲಾಗುತ್ತಿತ್ತು. ಸಿನಿಮಾ ಟೈಟಲ್ ಕಾರ್ಡ್ಗಳಲ್ಲಿ ಕೂಡ ಇದೇ ಹೆಸರು ಇರುತ್ತಿತ್ತು. ಸದ್ಯ 'ದೇವರ' ಚಿತ್ರದಲ್ಲಿ ತಾರಕ್ ನಟಿಸುತ್ತಿದ್ದಾರೆ. ಕೊರಟಾಲ ಶಿವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಪೋಸ್ಟರ್ಗಳಲ್ಲಿ ತಾರಕ್ಗೆ 'ಮ್ಯಾನ್ ಆಫ್ ಮಾಸಸ್' ಟ್ಯಾಗ್ ಕೊಟ್ಟಿದ್ದಾರೆ. ಇದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಅಲ್ಲು ಅರ್ಜುನ್, ತಾರಕ್ ಬಳಿಕ ಇದೀಗ ರಾಮ್ಚರಣ್ ಕೂಡ ಮೆಗಾಪವರ್ ಸ್ಟಾರ್ ಎನ್ನುವ ಟೈಟಲ್ ಕೈ ಬಿಟ್ಟಿದ್ದಾರೆ. ತಂದೆ ಚಿರಂಜೀವಿ ಮೆಗಾಸ್ಟಾರ್ ಎಂದು ಚಿಕ್ಕಪ್ಪ ಪವನ್ ಕಲ್ಯಾಣ್ ಪವರ್ ಸ್ಟಾರ್ ಎಂದು ತೆಲುಗು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದರು. ಹಾಗಾಗಿ ಚರಣ್ ಚಿತ್ರರಂಗಕ್ಕೆ ಬಂದಾಗ ಮೆಗಾಪವರ್ ಸ್ಟಾರ್ ಎನ್ನುವ ಬಿರುದನ್ನು ಕೊಡಲಾಗಿತ್ತು. ಆದರೆ ಇದೀಗ 'ಗ್ಲೋಬಲ್ ಸ್ಟಾರ್' ಎಂದು ಟ್ಯಾಗ್ ಬದಲಿಸಿಕೊಂಡಿದ್ದಾರೆ.
ರಾಮ್ಚರಣ್ ನಟನೆಯ 16ನೇ ಸಿನಿಮಾ ಮುಹೂರ್ತ ಇತ್ತೀಚಿಗೆ ನೆರವೇರಿತ್ತು. ಈ ಚಿತ್ರದಲ್ಲಿ ಜಾನ್ವಿ ಕಪೂರ್, ಶಿವಣ್ಣ ಕೂಡ ನಟಿಸುತ್ತಿದ್ದಾರೆ. ಬುಚ್ಚಿಬಾಬು ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಮುಹೂರ್ತ ಸಮಾರಂಭದಲ್ಲಿ ಸಿನಿಮಾ ಪೋಸ್ಟರ್ಗಳಲ್ಲಿ 'ಗ್ಲೋಬಲ್ ಸ್ಟಾರ್' ರಾಮ್ಚರಣ್ ಎಂದು ಬರೆಯಲಾಗಿದೆ. 'RRR' ಸಿನಿಮಾದಲ್ಲಿ ನಟಿಸಿ ಚರಣ್ ದೇಶ ವಿದೇಶಗಳಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು. ಹಾಗಾಗಿ ಚಿತ್ರತಂಡ ಅವರಿಗೆ ಹೊಸ ಬಿರುದು ನೀಡಿದೆ.
ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ಸೀತಾರಾಮ ರಾಜು ಆಗಿ ಚರಣ್, ಕೋಮುರಂ ಭೀಮ್ ಆಗಿ ಜ್ಯೂ. ಎನ್ಟಿಆರ್ ನಟಿಸಿದ್ದರು. ಚಿತ್ರದ ಹಾಡೊಂದಕ್ಕೆ ಆಸ್ಕರ್ ಪ್ರಶಸ್ತಿ ಗೌರವವೂ ಧಕ್ಕಿತ್ತು. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶಸ್ತಿ ಲಭಿಸಿತ್ತು. ಆ ಕಾರ್ಯಕ್ರಮಗಳಲ್ಲಿ ಚರಣ್ ಕಾಣಿಸಿಕೊಂಡು ವಿದೇಶಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಸದ್ಯ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಚಿತ್ರದಲ್ಲಿ ಚಿರು ತನಯ ನಟಿಸುತ್ತಿದ್ದಾರೆ. ಬಳಿಕ ಬುಚ್ಚಿಬಾಬು ನಿರ್ದೇಶನದ ಸಿನಿಮಾ ಬರಲಿದೆ.


Click it and Unblock the Notifications











